Vande Bharat: ದೆಹಲಿ- ವಾರಣಾಸಿ ವಂದೇ ಭಾರತ್ ರೈಲಿನಲ್ಲಿ ಹಳಸಿದ ಊಟ: ಟ್ವೀಟ್ಗೆ ಸ್ಪಂದಿಸಿ 25 ಸಾವಿರ ರೂ ದಂಡ ವಿಧಿಸಿದ ರೈಲ್ವೆ
Jan 11, 2024 09:13 PM IST
ವಂದೇ ಭಾರತ್ ರೈಲಿನಲ್ಲಿ ನೀಡಿದ್ದ ಕಳಪೆ ಆಹಾರ.
- Vande Bharat Food ದೆಹಲಿಯಿಂದ ವಾರಣಾಸಿ ಕಡೆಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಎಚ್ಚೆತ್ತುಕೊಂಡು ಗುತ್ತಿಗೆದಾರರಿಗೆ ದಂಡ ವಿಧಿಸಿ ರೈಲಿನಲ್ಲಿ ಗುಣಮಟ್ಟದ ಆಹಾರ ನೀಡುವಂತೆ ತಾಕೀತು ಮಾಡಿದೆ.
ದೆಹಲಿ: ವಂದೇ ಭಾರತ್ ರೈಲಿನಲ್ಲಿ ಹಳಸಿದ ಹಾಗೂ ಕಳಪೆ ಆಹಾರ ವಿತರಿಸಿದ ಗಂಭೀರ ಆರೋಪ ಮೊದಲ ಬಾರಿಗೆ ಕೇಳಿ ಬಂದಿದೆ. ದೆಹಲಿಯಿಂದ ವಾರಣಾಸಿಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ವಾಸನೆ ಬರುತ್ತಿದ್ದ ಆಹಾರದ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿದ ಪ್ರಯಾಣಿಕರು ಊಟದ ಸ್ಥಿತಿಗತಿಯನ್ನು ತೆರೆದಿಟ್ಟಿದ್ದರು. ಕೂಡಲೇ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು, ವಂದೇ ಭಾರತ್ ರೈಲಿನ ಆಹಾರದ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಸಂಸ್ಥೆಗೆ 25 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೇ ಇದೇ ರೀತಿಯ ಆಹಾರವನ್ನು ನೀಡುವ ದೂರು ಕೇಳಿ ಬಂದರೆ ಮುಂದೆ ಗುತ್ತಿಗೆ ಕೂಡ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ.
ದೂರಿನಲ್ಲಿ ಏನಿದೆ
ಆಕಾಶ್ ಕೇಶರಿ ಎಂಬುವವರು ದೆಹಲಿಯಿಂದ ವಾರಣಾಸಿಗೆ ( ರೈಲು ವಾಡಿ ಸಂಖ್ಯೆ22416) ವಂದೇ ಭಾರತ್ ರೈಲಿನಲ್ಲಿ ಹೊರಟಿದ್ದರು. ಮಧ್ಯಾಹ್ನ ಆಗುತ್ತಲೇ ಊಟವನ್ನು ರೈಲಿನಲ್ಲಿಯೇ ಒದಗಿಸಲಾಗಿತ್ತು. ಆದರೆ ಊಟದ ಗುಣಮಟ್ಟ ಚೆನ್ನಾಗಿರಲಲ್ಲ. ವಾಸನೆ ಬರುತ್ತಿತ್ತು. ನಾಲ್ಕೈದು ಮಂದಿಗೆ ಇದೇ ಅನುಭವವಾಗಿತ್ತು. ಈ ಕುರಿತು ಊಟ ನೀಡಿದವರಿಗೆ ಮಾಹಿತಿ ಕೊಟ್ಟರೆ ಅವರಿಂದ ಸ್ಪಂದನೆ ಸಿಕ್ಕಿರಲಿಲ್ಲ. ಕೊಟ್ಟಿರುವ ಊಟ ಮಾಡಿ. ಇಲ್ಲದೇ ಇದ್ದರೆ ಬಿಡಿ ಎನ್ನುವ ರೀತಿ ಅವರು ವರ್ತಿಸಿದ್ದರು.
ಊಟದ ತಟ್ಟೆಗಳು ಹಾಗೂ ಬಾಕ್ಸ್ಗಳ ವಿಡಿಯೋ ಮಾಡಿಕೊಂಡಿದ್ದ ಆಕಾಶ್ ಅದನ್ನು ಎಕ್ಸ್ ಮೂಲಕ ಸಾಮಾಜಿಕ ತಾಣಗಳಲ್ಲಿ ಹಾಕಿದ್ದರು. ಭಾರತೀಯ ರೈಲ್ವೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ವಂದೇ ಭಾರತ್ ರೈಲು ಅಕೌಂಟ್ಗೆ ಟ್ಯಾಗ್ ಮಾಡಿದ್ದರು.
ನನಗೆ ನೀಡಿರುವ ಊಟ ವಾಸನೆ ಬರುತ್ತಿದೆ. ಇದು ಅತ್ಯಂತ ಕೆಟ್ಟ ಊಟ. ಗುಣಮಟ್ಟವಂತೂ ಚೆನ್ನಾಗಿಲ್ಲ. ನನಗೆ ನನ್ನ ಊಟದ ಹಣವನ್ನು ವಾಪಾಸ್ ಮಾಡಿ. ಇಂತಹ ಗುತ್ತಿಗೆದಾರರಿಂದಲೇ ವಂದೇ ಭಾರತ್ ರೈಲಿನ ಹೆಸರು ಹಾಳಾಗುತ್ತಿದೆ ಎಂದು ಆಕಾಶ್ ಆಕ್ರೋಶ ಹೊರ ಹಾಕಿದ್ದರು.
ಎಚ್ಚೆತ್ತ ಐಆರ್ಸಿಟಿಸಿ( IRCTC)
ಇದನ್ನು ಗಮನಿಸಿದ ಭಾರತೀಯ ರೈಲ್ವೆಯ ಐಆರ್ಸಿಟಿಸಿ( IRCTC) ಎಚ್ಚೆತ್ತುಕೊಂಡು ಈ ಕುರಿತು ವಿಚಾರಣೆಗೆ ಸೂಚನೆ ನೀಡಿತ್ತು. ಇದು ನಿಜ ಎನ್ನುವುದು ತಿಳಿಯುತ್ತಿದ್ದಂತೆ ಆಹಾರದ ಗುತ್ತಿಗೆ ಪಡೆದವರಿಗೆ 25 ಸಾವಿರ ರೂ ದಂಡ ವಿಧಿಸಿತ್ತು. ನಿಮಗೆ ಆಗಿರುವ ತೊಂದರೆಗೆ ಕ್ಷಮೆ ಯಾಚಿಸುತ್ತೇವೆ. ಇಡೀ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈಗಾಗಲೇ ದಂಡ ವಿಧಿಸಿ ನೊಟೀಸ್ ಕೂಡ ಜಾರಿ ಮಾಡಲಾಗಿದೆ. ಇದೇ ರೀತಿಯ ಘಟನೆ ಮರುಕಳಿಸಿದರೆ, ದೂರು ಕೇಳಿ ಬಂದರೆ ಗುತ್ತಿಗೆ ರದ್ದುಪಡಿಸುವ ಸೂಚನೆಯನ್ನೂ ನೀಡಲಾಗಿದೆ. ಅಲ್ಲದೇ ಎಲ್ಲಾ ವಂದೇ ಭಾರತ್ ರೈಲಿನ ಆಹಾರದ ಗುಣಮಟವನ್ನು ನಿಯಮಿತವಾಗಿ ಪರಿಶೀಲಿಸಲು ವಿಭಾಗದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಆಹಾರದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸೇವೆಯನ್ನು ಬಲಪಡಿಸಲಾಗುವುದು ಎಂದು ಐಆರ್ಸಿಟಿಸಿ ಹೇಳಿತ್ತು.
ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರತಿಕ್ರಿಯೆಯೇ ಬಂದಿದೆ. ಹಲವರು ರಾಜಧಾನಿ ಸೇರಿದಂತೆ ಹಲವು ರೈಲುಗಳಲ್ಲಿ ತಮಗೆ ಆಗಿರುವ ಆಹಾರದ ಅನುಭವ ಹಂಚಿಕೊಂಡಿದ್ದಾರೆ. ಹೆಚ್ಚು ದುಡ್ಡು ಕೊಟ್ಟು ರೈಲ್ವೆ ಆಹಾರದ ಸೇವೆ ಬಳಸುವವರಿಗೆ ಗುಣಮಟ್ಟದ ಆಹಾರ ಸಿಗುವ ಖಾತರಿಯನ್ನು ರೈಲ್ವೆ ಅಧಿಕಾರಿಗಳು ನೀಡಬೇಕು ಎಂದು ಹಲವು ಪ್ರಯಾಣಿಕರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ಧಾರೆ.