Cheetah death: ಮೋದಿ ಕನಸಿನ ಕುನ್ಹೋ ವನ್ಯಧಾಮ ಯೋಜನೆಯಲ್ಲಿ 10ನೇ ಚೀತಾ ಸಾವು, ಕಾರಣವಾದರೂ ಏನು?
Jan 17, 2024 08:00 AM IST
ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಮೃತಪಟ್ಟಿದೆ.( ಪ್ರಾತಿನಿಧಿಕ ಚಿತ್ರ)
- Kunho cheetah ಬಹು ನಿರೀಕ್ಷೆಯೊಂದಿಗೆ ಆರಂಭಗೊಂಡಿರುವ ಮಧ್ಯಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾವೊಂದು ಮೃತಪಟ್ಟಿದೆ. ಇದು ಮೃತಪಟ್ಟ ಹತ್ತನೇ ಚೀತಾ.
ಭೋಪಾಲ್: ಎರಡು ವರ್ಷದ ಹಿಂದೆ ಮಧ್ಯಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿ ಆರಂಭಗೊಂಡ ಚೀತಾ ಪುನರುತ್ಥಾನ ಯೋಜನೆಯಲ್ಲಿ ಏರಿಳಿತಗಳು ನಿಲ್ಲುತ್ತಿಲ್ಲ. ವಾರದ ಹಿಂದೆಯಷ್ಟೇ ಚೀತಾವೊಂದು ಮೂರು ಮರಿ ಹಾಕಿದ್ದ ಸಂಭ್ರಮ ಮಾಸುವ ಮುನ್ನವೇ ಈಗ ಚೀತಾವೊಂದು ಮೃತಪಟ್ಟಿದೆ. ಈವರೆಗೂ 10 ಚೀತಾಗಳು ಈ ಯೋಜನೆಯಡಿ ಮೃತಪಟ್ಟಂತಾಗಿದೆ. ಇದರಲ್ಲಿ ಏಳು ದೊಡ್ಡ ಹಾಗೂ ಮೂರು ಮರಿಗಳು ಸೇರಿವೆ ಎಂದು ಸಿಂಹ ಯೋಜನೆ ಅಡಿ ಚೀತಾ ಪುನರುತ್ಥಾನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಶೌರ್ಯ ಎಂಬ ಹೆಸರಿನ ಚೀತಾ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದೆ. ಎರಡು ಮೂರು ದಿನದಿಂದ ಆರೋಗ್ಯದಿಂದ ಇದ್ದ ಚೀತಾ ಏಕಾಏಕಿ ಮೃತಪಟ್ಟಿರುವುದು ಕಂಡು ಬಂದಿದೆ.
ನಮೀಬಿಯಾದಿಂದ ತಂದಿದ್ದ ಶೌರ್ಯ ಎಂಬ ಹೆಸರಿನ ಚೀತಾ ಮಧ್ಯಾಹ್ನ 3:17ಕ್ಕೆ ಮೃತಪಟ್ಟಿದೆ. ಬೆಳಿಗ್ಗೆಯಿಂದಲೇ ಚೀತಾ ಆರೋಗ್ಯದಲ್ಲಿ ಏರಿಳಿತವಿತ್ತು. ಚಿಕಿತ್ಸೆ ನೀಡಿದರೂ ಸ್ಪಂದಿಸದೇ ಮೃತಪಟ್ಟಿದೆ ಎಂದು ಸಿಂಹ ಯೋಜನೆ ನಿರ್ದೇಶಕ ಎಸ್ಪಿ ಯಾದವ್ ತಿಳಿಸಿದ್ದಾರೆ.
ಚೀತಾ ನಿಶಕ್ತಿಯಿಂದ ಬಳಲುತ್ತಿತ್ತು. ಚಿಕಿತ್ಸೆ ನೀಡಲೆಂದೇ ಸಿಬ್ಬಂದಿ ಅರವಳಿಕೆ ನೀಡಿದ್ದರು. ಆನಂತರ ಔಷಧ ನೀಡಲಾಗಿತ್ತು. ಆದರೂ ಚೇತರಿಸಿಕೊಳ್ಳಲಿಲ್ಲ. ಚೀತಾ ಸಾವಿನ ಕಾರಣ ನಿಖರವಾಗಿ ತಿಳಿದಿಲ್ಲ. ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಬಹುದು ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ 2ರಂದು ಚೀತಾವೊಂದು ಮೃತಪಟ್ಟಿತ್ತು. ಅದಕ್ಕೂ ಮೊದಲು ಇನ್ನೊಂದು ಚೀತಾ ಜೀವ ಬಿಟ್ಟಿತ್ತು. ಈ ಎರಡೂ ಚೀತಾಗಳ ಸಾವಿಗೆ ಇಲ್ಲಿನ ಮಾನ್ಸೂನ್ ಹವಾಮಾನ ಕಾರಣವಿರಬಹುದು ಎಂದು ತಿಳಿಸಲಾಗಿತ್ತು. ಇದಕ್ಕೂ ಮೊದಲು ಮರಿಗಳೂ ಕೂಡ ಇಲ್ಲಿಯೇ ಜನಿಸಿ ಮೃತಪಟ್ಟಿದ್ದವು.
ಏಳು ದಶಕದ ಹಿಂದೆಯೇ ಭಾರತದಲ್ಲಿ ಅವನತಿ ಹಂತಕ್ಕೆ ಹೋಗಿದ್ದ ಚೀತಾಗಳ ಪುನರುತ್ಥಾನ ಯೋಜನೆ ಹಿಂದಿನ ಯುಪಿಎ ಸರ್ಕಾರದ ಕಾಲದಲ್ಲಿಯೇ ಅರಂಭಗೊಂಡಿತ್ತು. ಮೋದಿ ಪ್ರಧಾನಿ ಯಾದ ಬಳಿಕ ಇದಕ್ಕೆ ವೇಗ ನೀಡಿ ಮಧ್ಯಪ್ರದೇಶ ಕುನ್ಹಾ ರಾಷ್ಟ್ರೀಯ ಉದ್ಯಾನದಲ್ಲಿಯೇ ಇವುಗಳನ್ನು ಸಂರಕ್ಷಿಸಲು ನಿರ್ಧರಿಸಲಾಗಿತ್ತು. ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಇವುಗಳನ್ನು ತರಲಾಗಿತ್ತು. ಕಳೆದ ವಾರ ಹೆಚ್ಚಿನ ಚೀತಾಗಳು ಮೃತಪಟ್ಟಿದ್ದರಿಂದ ಕೆಲವರು ಸುಪ್ರೀಂಕೋರ್ಟ್ ಮೆಟ್ಟಲು ಕೂಡ ಏರಿದ್ದರು.ಆದರೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರಿಂಕೋರ್ಟ್ ಹೇಳಿತ್ತು.