Hurun India Philanthropy List 2022: ದಿನಕ್ಕೆ 3 ಕೋಟಿ ದಾನ ನೀಡುವ ಶಿವನಾಡರ್ ಬಗ್ಗೆ ಗೊತ್ತೆ, ಈ ಕರ್ಣನ ಮುಂದೆ ಮಂಕಾದ ಅಜೀಂ ಪ್ರೇಮ್ಜಿ
Oct 21, 2022 06:06 AM IST
Hurun India Philanthropy List 2022: ದಿನಕ್ಕೆ ಮೂರು ಕೋಟಿ ರೂ. ದಾನ ನೀಡುವ ಶಿವನಾಡರ್
- ಭಾರತದ ದಾನಿ ಉದ್ಯಮಿಗಳಲ್ಲಿ ಈ ಹಿಂದೆ ಅಜೀಂ ಪ್ರೇಮ್ಜಿ ಹೆಸರು ಹೆಚ್ಚು ಪ್ರಚಲಿತದಲ್ಲಿತ್ತು. ತಮ್ಮ ಆದಾಯದ ಬಹುಭಾಗವನ್ನು ಅವರು ದಾನ ನೀಡುತ್ತಿದ್ದರು. ಆದರೆ, ಈ ವರ್ಷ ಅವರ ಸ್ಥಾನವನ್ನು ಬೇರೊಬ್ಬರು ಉದ್ಯಮಿ ಆಕ್ರಮಿಸಿಕೊಂಡಿದ್ದಾರೆ. ಸಮಾಜಕ್ಕೆ ದಾನ ನೀಡುವ ವಿಷಯದಲ್ಲಿಯೂ ಸ್ಪರ್ಧೆ ಏರ್ಪಟ್ಟಿರುವುದು ನಿಜಕ್ಕೂ ಖುಷಿಯ ವಿಚಾರ ಎನ್ನಬಹುದು.
ನವದೆಹಲಿ: ಕೆಲವು ಶ್ರೀಮಂತರು ತಮ್ಮ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಡುತ್ತಾರೆ. ಜಗತ್ತಿನ ಪ್ರಮುಖ ಕೋಟ್ಯಾಧಿಪತಿಗಳೆಲ್ಲ ತಮ್ಮ ಆದಾಯದ ಬಹುಭಾಗವನ್ನು ಸಮಾಜಕ್ಕೆ ದಾನ ನೀಡುತ್ತಾರೆ. ಇನ್ನು ಕೆಲವು ಉದ್ಯಮಿಗಳು ಸಮಾಜಕ್ಕೆ ತೃಣಮಾತ್ರ ದಾನ ನೀಡಲು ಹಿಂಜರಿಯುತ್ತಾರೆ.
ಭಾರತದ ದಾನಿ ಉದ್ಯಮಿಗಳಲ್ಲಿ ಈ ಹಿಂದೆ ಅಜೀಂ ಪ್ರೇಮ್ಜಿ ಹೆಸರು ಹೆಚ್ಚು ಪ್ರಚಲಿತದಲ್ಲಿತ್ತು. ತಮ್ಮ ಆದಾಯದ ಬಹುಭಾಗವನ್ನು ಅವರು ದಾನ ನೀಡುತ್ತಿದ್ದರು. ಆದರೆ, ಈ ವರ್ಷ ಅವರ ಸ್ಥಾನವನ್ನು ಬೇರೊಬ್ಬರು ಉದ್ಯಮಿ ಆಕ್ರಮಿಸಿಕೊಂಡಿದ್ದಾರೆ. ಸಮಾಜಕ್ಕೆ ದಾನ ನೀಡುವ ವಿಷಯದಲ್ಲಿಯೂ ಸ್ಪರ್ಧೆ ಏರ್ಪಟ್ಟಿರುವುದು ನಿಜಕ್ಕೂ ಖುಷಿಯ ವಿಚಾರ ಎನ್ನಬಹುದು.
"ಎಚ್ಸಿಎಲ್ ಸಂಸ್ಥಾಪಕ ಶಿವ ನಾಡಾರ್ ವಾರ್ಷಿಕ 1,161 ಕೋಟಿ ರೂ. ದಾನ ಮಾಡುವ ಮೂಲಕ ದೇಶದ ಅತ್ಯಂತ ಉದಾರಿ ಉದ್ಯಮಿಯಾಗಿದ್ದಾರೆ" ಎಂದು ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2022 ತಿಳಿಸಿದೆ. 77 ವರ್ಷದ ನಾಡಾರ್ ಪ್ರತಿದಿನ ರೂ. 3 ಕೋಟಿ ದಾನ ಮಾಡುವ ಮೂಲಕ ದೇಶದ ಅತ್ಯಂತ ಉದಾರಿ ಬಿರುದಿಗೆ ಪಾತ್ರರಾಗಿದ್ದಾರೆ.
ದಾನದಲ್ಲಿ ಅಜೀಂ ಪ್ರೇಮ್ಜಿಗೆ ಎರಡನೇ ಸ್ಥಾನ
ಭಾರತದ ಉದಾರಿ ದಾನಿ ಉದ್ಯಮಿಗಳಲ್ಲಿ ಇಲ್ಲಿಯವರೆಗೆ ಅಜೀಂ ಪ್ರೇಮ್ಜಿಗೆ ಅಗ್ರ ಸ್ಥಾನವಿತ್ತು. ಆದರೆ, ಈ ಬಾರಿ ಅವರು ಶಿವ ನಾಡರ್ನಿಂದಾಗಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿಪ್ರೋ ಸಂಸ್ಥೆಯ ಅಜಿಂ ಪ್ರೇಮ್ ಜಿ ವಾರ್ಷಿಕವಾಗಿ ರೂ. 484 ಕೋಟಿ ದಾನ ನೀಡುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದೆರಡು ವರ್ಷ ಅವರು ಅಗ್ರಸ್ಥಾನದಲ್ಲಿದ್ದರು.
ಅದಾನಿಗೆ ಎಷ್ಟನೇ ಸ್ಥಾನ?
ದೇಶದ ಪ್ರಮುಖ ಶ್ರೀಮಂತರೂ ದಾನ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ದೇಶದ ಅತ್ಯಂತ ಶ್ರೀಮಂತ ಗೌತಮ್ ಅದಾನಿ ರೂ. 190 ಕೋಟಿ ದೇಣಿಗೆ ನೀಡುವ ಮೂಲಕ ಪಟ್ಟಿಯಲ್ಲಿ ಏಳನೇ ಸ್ಛಾನದಲ್ಲಿದ್ದಾರೆ.
ಉಳಿದ ಪ್ರಮುಖ ದಾನಿ ಉದ್ಯಮಿಗಳು ಯಾರು?
ಎ ಎಂ ನಾಯಕ್ (80) 142 ಕೋಟಿ ದಾನ ನೀಡುವ ಮೂಲಕ ದೇಶದ ಅತ್ಯಂತ ಉದಾರಿ ವೃತ್ತಿಪರ ಮ್ಯಾನೇಜರ್ ಎಂದು ವರದಿ ಹೇಳಿದೆ. ಇವರು ಲಾರ್ಸೆನ್ ಅಂಡ್ ಟೂಬ್ರೊದ ಗ್ರೂಪ್ ಚೇರ್ಮನ್ ಆಗಿದ್ದಾರೆ. ಝೆರೋಧಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ತಮ್ಮ ದೇಣಿಗೆಯನ್ನು ಶೇ. 100 ರಿಂದ ಶೇ. 300ಕ್ಕೆ ಹೆಚ್ಚಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮೈಂಡ್ಟ್ರೀಯ ಸಹ-ಸಂಸ್ಥಾಪಕರಾದ ಸುಬ್ರೊಟೊ ಬಾಗ್ಚಿ ಮತ್ತು ಎನ್ಎಸ್ ಪಾರ್ಥಸಾರಥಿ ಅವರು ತಲಾ 213 ಕೋಟಿ ರೂ. ದೇಣಿಗೆಯೊಂದಿಗೆ ಎಡೆಲ್ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2022 ರ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ. ಕ್ವೆಸ್ ಕಾರ್ಪ್ ಅಧ್ಯಕ್ಷ ಅಜಿತ್ ಐಸಾಕ್ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ 105 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದ್ದಾರೆ.
ಇನ್ಫೋಸಿಸ್ ನ ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ಎಸ್ ಡಿ ಶಿಬುಲಾಲ್ ಅವರು ಕ್ರಮವಾಗಿ 159 ಕೋಟಿ ರೂ., 90 ಕೋಟಿ ಮತ್ತು 35 ಕೋಟಿ ರೂ. ದಾನ ಮಾಡುವ ಮೂಲಕ 9, 16 ಮತ್ತು 28ನೇ ಸ್ಥಾನದಲ್ಲಿದ್ದಾರೆ. ಹೀಗೆ, ದೇಶದ ಪ್ರಮುಖ ಉದ್ಯಮಿಗಳು ತಮ್ಮ ಆದಾಯದ ಒಂದು ಪಾಲನ್ನು ಸಮಾಜಕ್ಕೆ ಮೀಸಲಿಟ್ಟು ಆದರ್ಶ ಮೆರೆಯುತ್ತಿದ್ದಾರೆ.
ವಿಭಾಗ