Telangana Mahalakshmi: ತೆಲಂಗಾಣದಲ್ಲೂ ಜಾರಿಗೆ ಬಂತು ಮಹಿಳೆಯರ ಉಚಿತ ಬಸ್ ಪ್ರಯಾಣ ಸೇವೆ: ಮಹಾಲಕ್ಷ್ಮಿ ಯೋಜನೆ ಇಂದಿನಿಂದ ಜಾರಿ
Dec 09, 2023 09:45 AM IST
ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಮಹಾಲಕ್ಷ್ಮಿ ಯೋಜನೆ ಶನಿವಾರದಿಂದ ಆರಂಭಗೊಂಡಿದೆ.
- Telangana Guarantee ತೆಲಂಗಾಣ ವಿಧಾನಸಭೆ ಚುನಾವಣೆ( Telangana Assembly Elections) ವೇಳೆ ಅಲ್ಲಿನ ಕಾಂಗ್ರೆಸ್( Congress) ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬರುತ್ತಲೇ ಜಾರಿಗೆ ತಂದಿದ್ದು, ಮೊದಲನೇ ಗ್ಯಾರಂಟಿಯಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ ಶನಿವಾರದಿಂದ ಆರಂಭಗೊಂಡಿದೆ.
ಹೈದ್ರಾಬಾದ್: ಕರ್ನಾಟಕದ ಮಾದರಿಯಲ್ಲಿಯೇ ತೆಲಂಗಾಣ ರಾಜ್ಯದಲ್ಲೂ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ಸೇವೆ ಇಂದಿನಿಂದ ಆರಂಭಗೊಂಡಿದೆ.
ಮಹಾಲಕ್ಷ್ಮಿ ಎನ್ನುವ ಯೋಜನೆಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಗುರುವಾರವೇ ಚಾಲನೆ ನೀಡಿದ್ದು, ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ಮಂಗಳಮುಖಿಯರು ಇದರ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಕುರಿತು ತೆಲಂಗಾಣ ಸಾರಿಗೆ ಇಲಾಖೆಯು ಅಧಿಕೃತ ಆದೇಶವನ್ನು ಗುರುವಾರ ಸಂಜೆಯೇ ಹೊರಡಿಸಿದ್ದು, ಶನಿವಾರದಿಂದ ಈ ಸೇವೆಯನ್ನು ಬಳಸಬಹುದಾಗಿದೆ.
ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ ಆರು ಸೌಲಭ್ಯಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಕಳೆದ ವಾರ ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಚುನಾವಣೆ ವೇಳೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳ ಜಾರಿಗೆ ತೆಲಂಗಾಣ ರಾಜ್ಯ ಸರ್ಕಾರ ಮುಂದಾಗಿದ್ದು, ಮೊದಲನೆಯ ಯೋಜನೆ ಜಾರಿಗೆ ತಂದಿದೆ.
ಕರ್ನಾಟಕದಲ್ಲೂ ಏಳು ತಿಂಗಳ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ತಾನು ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಮೊದಲನೇ ಗ್ಯಾರಂಟಿಯಾಗಿ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಆರಂಭಿಸಿತ್ತು. ಏಳು ತಿಂಗಳಲ್ಲಿ 100 ಕೋಟಿ ಟ್ರಿಪ್ ಕೈಗೊಳ್ಳಲಾಗಿದ್ದು. ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆದಿದ್ದಾರೆ.
ಮಹಾಲಕ್ಷ್ಮಿ ಯೋಜನೆ ಪ್ರಕಾರ ತೆಲಂಗಾಣ ರಾಜ್ಯದ ಗಡಿವರೆಗೂ ಉಚಿತವಾಗಿ ಬಾಲಕಿಯರು, ಮಹಿಳೆಯರು ಹಾಗೂ ಮಂಗಳಮುಖಿಯರು ಪಲ್ಲೆವೆಲುಗು ಸಾಮಾನ್ಯ ಬಸ್ ಹಾಗೂ ವೇಗದೂತದಲ್ಲಿ ಸಂಚರಿಸಲು ಅವಕಾಶ ನೀಡಲಾಗದೆ. ತೆಲಂಗಾಣ ರಾಜ್ಯದವರು ಮಾತ್ರ ಇದನ್ನು ಬಳಸಿಕೊಳ್ಳಲು ಅವಕಾಶವಿದೆ. ಬಾಲಕಿಯರು ಹಾಗೂ ಮಹಿಳೆಯರು, ಮಂಗಳಮುಖಿಯರು ಉಚಿತವಾಗಿ ಸಂಚರಿಸಿದ ಬಸ್ ಪ್ರಯಾಣ ದರವನ್ನು ತೆಲಂಗಾಣ ರಾಜ್ಯ ಸರ್ಕಾರವು ಟಿಎಸ್ಆರ್ಟಿಸಿ ನಿಗಮಗಳಿಗೆ ತುಂಬಿಕೊಡಲಿದೆ.
ಈ ಯೋಜನೆಯಡಿ ಬಳಕೆಗೆ ಪ್ರತ್ಯೇಕ ಸಾಫ್ಟ್ವೇರ್ ಆಧರಿತ ಸ್ಮಾರ್ಟ್ ಕಾರ್ಡ್ ಸಿದ್ದಪಡಿಸಲಾಗುತ್ತಿದ್ದು, ಇದರಿಂದ ಬಳಕೆ ಸುಲಭವಾಗಲಿದೆ. ಸದ್ಯದಲ್ಲ್ ಸಾಫ್ಟ್ ವೇರ್ ಹಾಗೂ ಕಾರ್ಡ್ ಸಿದ್ದವಾಗಲಿದೆ ಎಂದು ತಿಳಿಸಲಾಗಿದೆ.
ಮಹಾಲಕ್ಷ್ಮಿ ಯೋಜನೆಯಡಿ ಗೃಹಿಣಿಯರಿಗೆ ಮಾಸಿಕ 2500 ರೂ. ನೆರವು ನೀಡುವ ಘೋಷಣೆಯನ್ನೂ ಗ್ಯಾರಂಟಿಯಡಿ ತೆಲಂಗಾಣದಲ್ಲಿ ಘೋಷಿಸಲಾಗಿದ್ದು, ಅದು ಸದ್ಯವೇ ಜಾರಿಗೆ ಬರುವ ಸಾಧ್ಯತೆಯಿದೆ.