Jairam Ramesh: 'ಮೋದಿಗಿಂತ ನಾನೇ ಹೆಚ್ಚು ಮಾಸ್ಕ್ ಧರಿಸಿದ್ದು, ಅವರ ಮಾಸ್ಕ್ ಏನಿದ್ರೂ ಟಿವಿಗೆ ಮಾತ್ರ'
Dec 23, 2022 06:29 PM IST
ಜೈರಾಮ್ ರಮೇಶ್ - ಪ್ರಧಾನಿ ಮೋದಿ
- ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ನಿಯಮಗಳ ಕುರಿತು ಬಿಜೆಪಿ-ಕಾಂಗ್ರೆಸ್ ಜಗಳದ ನಡುವೆ, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಗಿಂತ ಹೆಚ್ಚು ಸಮಯ ನಾನು ಮಾಸ್ಕ್ ಧರಿಸಿದ್ದೇನೆ. ಅವರ ಮಾಸ್ಕ್ ಏನಿದ್ರೂ ಟಿವಿಗೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ.
ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ನಿಯಮಗಳ ಕುರಿತು ಬಿಜೆಪಿ-ಕಾಂಗ್ರೆಸ್ ಜಗಳದ ನಡುವೆ, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಗಿಂತ ಹೆಚ್ಚು ಸಮಯ ನಾನು ಮಾಸ್ಕ್ ಧರಿಸಿದ್ದೇನೆ. ಅವರ ಮಾಸ್ಕ್ ಏನಿದ್ರೂ ಟಿವಿಗೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈರಾಮ್ ರಮೇಶ್, "ನಾನು ಇಂದು ಬೆಳಗ್ಗೆಯಿಂದಲೂ ಮಾಸ್ಕ್ ಧರಿಸಿದ್ದೇನೆ, ನನ್ನ ಬಳಿ ಮಾಸ್ಕ್ ಇರುವುದರಿಂದ ನಾನು ಅದನ್ನು ಧರಿಸಿದ್ದೇನೆ. ನಮ್ಮ ಬಳಿ 250-300 ಮಾಸ್ಕ್ಗಳು ಇಲ್ಲ. ನಾಳೆಯಿಂದ ಎಲ್ಲರೂ ಮಾಸ್ಕ್ ಧರಿಸುತ್ತಾರೆ" ಎಂದು
ಚೀನಾದಲ್ಲಿ ಹಠಾತ್ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ವೇಳೆ ಪ್ರಧಾನಿ ಮೋದಿ ಮತ್ತು ಇತರ ಹಲವು ಸಂಸದರು ಮಾಸ್ಕ್ ಧರಿಸಿರುವುದು ಕಂಡುಬಂದಿದೆ.
"ವೈಜ್ಞಾನಿಕ ಮತ್ತು ವೈದ್ಯಕೀಯ ಸಲಹೆಯ ಆಧಾರದ ಮೇಲೆ ಏಕರೂಪವಾಗಿ ಜಾರಿಗೊಳಿಸಲಾದ ಯಾವುದೇ ಪ್ರೋಟೋಕಾಲ್ ಅನ್ನು ಕಾಂಗ್ರೆಸ್ ಪಕ್ಷವು ಅನುಸರಿಸುತ್ತದೆ. ನಾವು ಯಾವಾಗಲೂ ಅದನ್ನು ಅನುಸರಿಸಿದ್ದೇವೆ. ಮಹಾಭಾರತ ಯುದ್ಧದಂತೆ 18 ದಿನಗಳಲ್ಲಿ ಕೋವಿಡ್ ಪರಿಸ್ಥಿತಿಯನ್ನು ಗೆಲ್ಲುತ್ತೇವೆ ಎಂಬ ಪರಿಹಾರವನ್ನು ನೀಡಿದ ಪಕ್ಷ ನಮ್ಮದಲ್ಲ" ಎಂದು ಟಾಂಗ್ ನೀಡಿದರು.
“18 ದಿನಗಳಲ್ಲಿ ನಾವು ಕೋವಿಡ್ ಯುದ್ಧವನ್ನು ಗೆಲ್ಲುತ್ತೇವೆ ಎಂದು ಹೇಳಿದ ಒಬ್ಬ ಮಹನೀಯರಿದ್ದರು. ಮನೆಗಳಿಗೆ ಬಾಲ್ಕನಿಗಳಿಗೆ ಹೋಗಿ ಜಾಗಟೆ ಮೂಲಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತೀಯರಿಗೆ ಸಲಹೆ ನೀಡಿದ ಒಬ್ಬ ಮಹನೀಯರಿದ್ದರು. ಇವು ಕೋವಿಡ್ಗೆ ನೀಡಿದ ಪರಿಹಾರಗಳು, ನಿಮಗೆ ನೆನಪಿದೆಯಾ, ” ಎಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಬಿಜೆಪಿ ನಾಟಕ ಆಡುತ್ತಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿಯೂ ಕೋವಿಡ್ ಉಲ್ಬಣವಾಗುವ ಸಾಧ್ಯತೆ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಕೋವಿಡ್ -19 ಪ್ರೋಟೋಕಾಲ್ಗಳನ್ನು ಅನುಸರಿಸಲು ಕೋರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಭಾರತ್ ಜೋಡೋ ಯಾತ್ರೆಯನ್ನು ದೇಶದ ಹೆಚ್ಚಿನ ಹಿತದೃಷ್ಟಿಯಿಂದ ರದ್ದುಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, "ನಮ್ಮ ಭಾರತ್ ಜೋಡೋ ಯಾತ್ರೆ ಕಾಶ್ಮೀರದ ವರೆಗೆ ಹೋಗೇಹೋಗುತ್ತದೆ. ಯಾತ್ರೆ ನಿಲ್ಲಿಸಲು ಬಿಜೆಪಿ ಹೊಸ ಪ್ಲಾನ್ ಮಾಡಿದೆ. ಕೋವಿಡ್ ಬರುತ್ತಿದೆ ಯಾತ್ರೆ ನಿಲ್ಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ಇವೆಲ್ಲವೂ ಈ ಯಾತ್ರೆಯನ್ನು ನಿಲ್ಲಿಸಲು ಅವರ ಐಡಿಯಾ ಆಗಿದೆ. ಅವರು ಭಾರತದ ಸತ್ಯದ ಬಗ್ಗೆ ಹೆದರುತ್ತಾರೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, "ಚೀನಾದಲ್ಲಿ ಉಲ್ಬಣವಾಗಿರುವ ಓಮಿಕ್ರಾನ್ ಉಪತಳಿಯ 4 ಪ್ರಕರಣಗಳು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ಗುಜರಾತ್ ಮತ್ತು ಒಡಿಶಾದಲ್ಲಿ ವರದಿಯಾಗಿದೆ. ಆರೋಗ್ಯ ಸಚಿವರು ನಿನ್ನೆ ರಾಹುಲ್ ಗಾಂಧಿಗೆ ಪತ್ರ ಬರೆಯುತ್ತಾರೆ. ಪ್ರಧಾನಿ ಇಂದು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ದೆಹಲಿಗೆ ಪ್ರವೇಶಿಸಲಿದೆ. ಈಗ ನೀವು ಕಾಲಗಣನೆಯನ್ನು ಅರ್ಥ ಮಾಡಿಕೊಳ್ಳಿ" ಎಂದು ವ್ಯಂಗ್ಯವಾಡಿದ್ದಾರೆ.
ಚೀನಾ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಬ್ರೆಜಿಲ್ನಲ್ಲಿ ಕೊರೊನಾ ರೂಪಾಂತರ ಒಮಿಕ್ರಾನ್ನ ಬಿಎಫ್ 7 (BF.7) ಉಪತಳಿ ವ್ಯಾಪಕವಾಗಿ ಹರಡುತ್ತಿದ್ದು, ಭಾರತದಲ್ಲಿಯೂ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್ನಲ್ಲಿ ಎರಡು ಹಾಗೂ ಒಡಿಶಾದಲ್ಲಿ 2 ಕೇಸ್ಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ಉನ್ನತ ಮಟ್ಟದ ಸಭೆ ನಡೆದಿದೆ.
ಕೋವಿಡ್ ಇನ್ನೂ ಮುಗಿದಿಲ್ಲ ಎಂದಿರುವ ಪಿಎಂ ಮೋದಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೆಗೆದುಕೊಳ್ಳಲಾಗುತ್ತಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕಿಕ್ಕಿರಿದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು, ದುರ್ಬಲ ಮತ್ತು ವಯಸ್ಸಾದ ಜನರು 'ಮುನ್ನೆಚ್ಚರಿಕೆ ಡೋಸ್'ಗಳನ್ನು ಪಡೆಯಲು ಮನವಿ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ಗಳು, ವೆಂಟಿಲೇಟರ್, ಉಪಕರಣಗಳು, ಮಾನವ ಸಂಪನ್ಮೂಲ, ಬೆಡ್ಗಳು, ಔಷಧಿಗಳು ಸೇರಿದಂತೆ ಕೋವಿಡ್ ಪರಿಸ್ಥಿತಿ ಎದುರಿಸಲು ಬೇಕಾದ ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದ್ದಾರೆ