Jan Aakrosh Yatra: ಮೋದಿ ಸರ್ಕಾರದ ಕೋವಿಡ್ ನಿಯಮಕ್ಕೆ ಸ್ವಪಕ್ಷದಿಂದಲೇ ಸಿಗದ ಬೆಂಬಲ.. ಯಾತ್ರೆ ನಿಲ್ಲಿಸಲ್ಲ ಎಂದ ರಾಜಸ್ಥಾನ ಬಿಜೆಪಿ
Dec 23, 2022 03:30 PM IST
'ಜನ ಆಕ್ರೋಶ ಯಾತ್ರೆ'
- ಮೋದಿ ಸರ್ಕಾರದ ಕೋವಿಡ್ ವಿರುದ್ಧದ ಹೋರಾಟಕ್ಕೆ ಸ್ವಪಕ್ಷದಿಂದಲೇ ಬೆಂಬಲ ಸಿಗುತ್ತಿಲ್ಲ. 'ಜನ ಆಕ್ರೋಶ ಯಾತ್ರೆ'ಯನ್ನು ರದ್ದುಗೊಳಿಸುವುದಿಲ್ಲ ಎಂದು ರಾಜಸ್ಥಾನ ಬಿಜೆಪಿ ಹೇಳಿದೆ.
ರಾಜಸ್ಥಾನ: ಕೋವಿಡ್ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದ ಸರ್ಕಾರ ದೊಡ್ಡ ದೊಡ್ಡ ಸಭೆಗಳನ್ನು, ಯಾತ್ರೆಗಳನ್ನು ನಡೆಸಲು ನಿರ್ಬಂಧ ಹೇರುತ್ತಿದೆ. ಆದರೆ ಮೋದಿ ಸರ್ಕಾರದ ಕೋವಿಡ್ ವಿರುದ್ಧದ ಹೋರಾಟಕ್ಕೆ ಸ್ವಪಕ್ಷದಿಂದಲೇ ಬೆಂಬಲ ಸಿಗುತ್ತಿಲ್ಲ. 'ಜನ ಆಕ್ರೋಶ ಯಾತ್ರೆ'ಯನ್ನು ರದ್ದುಗೊಳಿಸುವುದಿಲ್ಲ ಎಂದು ರಾಜಸ್ಥಾನ ಬಿಜೆಪಿ ಹೇಳಿದೆ.
ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ 'ಜನ ಆಕ್ರೋಶ ಯಾತ್ರೆ'ಯನ್ನು ನಡೆಸುತ್ತಿದೆ. ಆದರೆ ಕೋವಿಡ್ ಉಲ್ಬಣಿಸಬಹುದಾದ ಕಾರಣ ಕೇಂದ್ರ ಆರೋಗ್ಯ ಇಲಾಖೆಯು ಯಾತ್ರೆಗಳನ್ನು ನಡೆಸದಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಇದಕ್ಕೆ ರಾಜಸ್ಥಾನ ಬಿಜೆಪಿಯೂ ಮೊದಲು ಸಮ್ಮತಿ ನೀಡಿತ್ತು. “ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಬಿಜೆಪಿಗೆ ರಾಜಕೀಯಕ್ಕಿಂತ ಜನರು, ಅವರ ಆರೋಗ್ಯ, ಅವರ ಸುರಕ್ಷತೆ ಮುಖ್ಯ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಹೀಗೆ ಅರುಣ್ ಸಿಂಗ್ ತಿಳಿಸಿದ ಕೆಲವೇ ಹೊತ್ತಿನಲ್ಲಿ ರಾಜಸ್ಥಾನ ಬಿಜೆಪಿ ಯೂಟರ್ನ್ ಹೊಡೆದಿದೆ. ಭಾರತೀಯ ಜನತಾ ಪಾರ್ಟಿ ತನ್ನ 'ಜನ ಆಕ್ರೋಶ ಯಾತ್ರೆ'ಯನ್ನು ಮುಂದುವರೆಸಲಿದೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ. ಅಲ್ಲದೇ ರಾಜ್ಯ ಬಿಜೆಪಿಯು ಕೋವಿಡ್ ನಿಯಮಗಳನ್ನು ಅನುಸರಿಸಿ ಪುನಃ ಯಾತ್ರೆವ ಪ್ರಾರಂಭಿಸಿದೆ. ಜನ ಆಕ್ರೋಶ ಯಾತ್ರೆಗೆ ಸಂಬಂಧಿಸಿದಂತೆ ಕೆಲ ಗೊಂದಲಗಳಾಗಿತ್ತು. ಅದನ್ನು ಈಗ ಸರಿಪಡಿಸಲಾಗಿದೆ. ಜನ ಆಕ್ರೋಶ ಯಾತ್ರೆ ರದ್ದತಿಯನ್ನು ಹಿಂತೆಗೆದುಕೊಳ್ಳಲಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ
ಬಿಜೆಪಿ ವಿರುದ್ಧ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ. ಇತ್ತ ರಾಜ್ಯದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸುತ್ತಿದ್ದಂತೆಯೇ ಡಿಸೆಂಬರ್ 1 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು 'ಜನ ಆಕ್ರೋಶ ಯಾತ್ರೆ'ಯನ್ನು ಪ್ರಾರಂಭಿಸಿದ್ದರು.
ಚೀನಾ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಬ್ರೆಜಿಲ್ನಲ್ಲಿ ಕೊರೊನಾ ರೂಪಾಂತರ ಒಮಿಕ್ರಾನ್ನ ಬಿಎಫ್ 7 (BF.7) ಉಪತಳಿ ವ್ಯಾಪಕವಾಗಿ ಹರಡುತ್ತಿದ್ದು, ಭಾರತದಲ್ಲಿಯೂ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್ನಲ್ಲಿ ಎರಡು ಹಾಗೂ ಒಡಿಶಾದಲ್ಲಿ 2 ಕೇಸ್ಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ಉನ್ನತ ಮಟ್ಟದ ಸಭೆ ಕೂಡ ನಡೆದಿದೆ.
ಭಾರತದಲ್ಲಿಯೂ ಕೋವಿಡ್ ಉಲ್ಬಣವಾಗುವ ಸಾಧ್ಯತೆ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಕೋವಿಡ್ -19 ಪ್ರೋಟೋಕಾಲ್ಗಳನ್ನು ಅನುಸರಿಸಲು ಕೋರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಭಾರತ್ ಜೋಡೋ ಯಾತ್ರೆಯನ್ನು ದೇಶದ ಹೆಚ್ಚಿನ ಹಿತದೃಷ್ಟಿಯಿಂದ ರದ್ದುಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, "ನಮ್ಮ ಭಾರತ್ ಜೋಡೋ ಯಾತ್ರೆ ಕಾಶ್ಮೀರದ ವರೆಗೆ ಹೋಗೇಹೋಗುತ್ತದೆ. ಯಾತ್ರೆ ನಿಲ್ಲಿಸಲು ಬಿಜೆಪಿ ಹೊಸ ಪ್ಲಾನ್ ಮಾಡಿದೆ. ಕೋವಿಡ್ ಬರುತ್ತಿದೆ ಯಾತ್ರೆ ನಿಲ್ಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ಇವೆಲ್ಲವೂ ಈ ಯಾತ್ರೆಯನ್ನು ನಿಲ್ಲಿಸಲು ಅವರ ಐಡಿಯಾ ಆಗಿದೆ. ಅವರು ಭಾರತದ ಸತ್ಯದ ಬಗ್ಗೆ ಹೆದರುತ್ತಾರೆ" ಎಂದು ಹೇಳಿದ್ದಾರೆ.
ರಾಹುಲ್ ಹೇಳಿಕೆಗೆ ತಿರುಗೇಟು ನೀಡಿರುವ ಮನ್ಸುಖ್ ಮಾಂಡವಿಯಾ, “ಇದು ರಾಜಕೀಯವಲ್ಲ. ನಾನು ಆರೋಗ್ಯ ಸಚಿವ ಮತ್ತು ಇದನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ. ಕೋವಿಡ್ -19 ನಿಯಮಗಳನ್ನು ಅನುಸರಿಸುವ ಅವಶ್ಯಕತೆಯ ಪ್ರಗತಿಯನ್ನು ನಾನು ಯಾವಾಗಲೂ ಪಾಲಿಸುತ್ತೇನೆ. ಮೂವರು ಸಂಸದರು ಈ ಬಗ್ಗೆ ನನಗೆ ಪತ್ರ ಬರೆದಿದ್ದಾರೆ. ಭಾರತ್ ಜೊಡೊ ಯಾತ್ರೆಯಲ್ಲಿ ಭಾಗವಹಿಸಿದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಕೋವಿಡ್ ತಗುಲಿದೆ ”ಎಂದು ಹೇಳಿದ್ದಾರೆ.