Bihar Politics: ನಿತೀಶ್ಕುಮಾರ್ ಮತ್ತೆ ಬಿಜೆಪಿ ತೆಕ್ಕೆಗೆ, ಬಿಹಾರ ಸಿಎಂ ಆಗಿ 8ನೇ ಪ್ರಮಾಣವಚನಕ್ಕೆ ಸಿದ್ದತೆ?
Jan 26, 2024 04:55 PM IST
ಬಿಹಾರದಲ್ಲಿ ಮತ್ತೆ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸೂಚನೆಗಳು ಕಾಣುತ್ತಿವೆ.
- ಬಿಹಾರದಲ್ಲಿ ಮತ್ತೆ ರಾಜಕಾರಣದ ಬದಲಾವಣೆ ಲೆಕ್ಕಾಚಾರ ನಡೆದಿದೆ. ಹಾಲಿ ಸಿಎಂ ನಿತೀಶ್ಕುಮಾರ್ ಇಂಡಿಯಾ ಮೈತ್ರಿಕೂಟದಿಂದ ಹೊರ ಬಂದು ಎನ್ಡಿಎ ಸೇರುವ ಲಕ್ಷಣಗಳು ಕಾಣುತ್ತಿದ್ದು, ದಿನದೊಳಗೆ ನಿಚ್ಚಳ ರಾಜಕೀಯ ಚಿತ್ರಣ ಸಿಗಲಿದೆ.
ಪಾಟ್ನಾ: ಭಾರತದ ರಾಜಕಾರಣದಲ್ಲಿ ತಮ್ಮ ದಿಢೀರ್ ನಿರ್ಧಾರಗಳ ಮೂಲಕವೇ ಗಮನ ಸೆಳೆಯುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಂದು ಸುತ್ತಿನ ರಾಜಕೀಯ ಬೆಳವಣಿಗೆಗಳಿಗೆ ದಾರಿ ಮಾಡಿಕೊಡುವುದು ನಿಚ್ಚಳವಾಗಿದೆ. ಇಂಡಿಯಾ ಮೈತ್ರಿಕೂಟದೊಂದಿಗೆ ಮುನಿಸಿಕೊಂಡಿರುವ ನಿತೀಶ್ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಎನ್ಡಿಎ ತೆಕ್ಕೆಗೆ ಹೋಗುವ ಸಾಧ್ಯತೆಗಳಿವೆ. ಈ ಬಾರಿ ಬಿಜೆಪಿ ಬೆಂಬಲದೊಂದಿಗೆ ಸಿಎಂ ಆಗಬಹುದು. ಭಾನುವಾರ ಇಲ್ಲವೇ ಸೋಮವಾರದಂದು ಪ್ರಮಾಣ ವಚನ ಸ್ವೀಕರಿಸಬಹುದು ಎನ್ನಲಾಗುತ್ತಿದೆ.
ಶುಕ್ರವಾರ ಸಂಜೆ ಬಿಹಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರೊಂದಿಗಿನ ಚಹಾ ಕೂಟದಲ್ಲಿ ನಿತೀಶ್ ಕುಮಾರ್ ಭಾಗಿಯಾದರು. ಆದರೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮಾತ್ರ ಬಂದಿರಲಿಲ್ಲ.
ಈ ವೇಳೆ ಅಡ್ಡಗೋಡೆ ಮೇಲೆ ದೀಪ ಇಟ್ಟ ರೀತಿ ಮಾತನಾಡಿದ ನಿತೀಶ್, ನಾವಿನ್ನೂ ಮಹಾಘಟಬಂಧನದಲ್ಲೇ ಇದ್ದೇವೆ. ಆದರೆ ಕಾಂಗ್ರೆಸ್ ಸೀಟು ಹಂಚಿಕೆ ವಿಚಾರದಲ್ಲಿ ತನ್ನ ಸ್ಪಷ್ಟ ನಿಲುವನ್ನು ತಾಳಬೇಕು ಎಂದು ಹೇಳಿದರು.
ಬಿಜೆಪಿಯೊಂದಿಗೆ ಮಾತುಕತೆ
ನಿತೀಶ್ಕುಮಾರ್ ಅವರು ಎರಡು ದಿನದಿಂದ ಬಿಜೆಪಿ ವರಿಷ್ಠರ ಸಂಪರ್ಕದಲ್ಲಿದ್ದಾರೆ. ಖುದ್ದು ಗೃಹ ಸಚಿವ ಅಮಿತ್ ಶಾ ಜತೆಗೆ ಮಾತುಕತೆ ನಡೆಸಿದ್ದು, ತಾವು ಮುಖ್ಯಮಂತ್ರಿಯಾದರೆ ಬಿಜೆಪಿಗೆ ಎರಡು ಉಪಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಬಿಜೆಪಿಗೂ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಲಿದ್ದು, ಲೋಕಸಭೆ ಚುನಾವಣೆಗೂ ಸೀಟುಗಳ ಹಂಚಿಕೆಯ ಮಾತುಕತೆಯನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಹಾಗೂ ಸಂಯುಕ್ತ ದಳ ಪ್ರತ್ಯೇಕ ಸಭೆಗಳನ್ನು ಕರೆದಿದ್ದು, ಶನಿವಾರ ಸಂಸದರು, ಶಾಸಕರ ಸಭೆಗಳು ನಡೆದು ಮುಂದಿನ ತೀರ್ಮಾನದ ಕುರಿತು ಅಂತಿಮಗೊಳಿಸಬಹುದು. ಸಂಯುಕ್ತ ಜನತಾದಳದಲ್ಲೂ ಬಿಜೆಪಿ ಜತೆ ಸೇರುತ್ತಿರುವ ಬಗ್ಗೆಯೂ ಭಿನ್ನ ಅಭಿಪ್ರಾಯಗಳಿದ್ದು, ಈ ಬಗ್ಗೆ ಪ್ರಮುಖರೊಂದಿಗೆ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ.
ಲಾಲು ಪುತ್ರಿ ಹೇಳಿಕೆ ತಂದ ಪೇಚು
ಮೂರೂವರೆ ವರ್ಷದ ಹಿಂದೆ ಬಿಜೆಪಿಯೊಂದಿಗೆ ಸೇರಿಯೇ ವಿಧಾನಸಭೆ ಚುನಾವಣೆ ಎದುರಿಸಿದ್ದ ನಿತೀಶ್ಕುಮಾರ್ ಎರಡು ವರ್ಷದೊಳಗೆ ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡಿದ್ದರು. ಮಹಾಘಟಬಂಧನ್ ಜತೆಗೆ ಸೇರಿ ತಾವು ಸಿಎಂ ಆದರೆ ಆರ್ಜೆಡಿಯ ತೇಜಸ್ವಿ ಯಾದವ್ ಡಿಸಿಎಂ ಆಗಿದ್ದರು. ಎರಡು ವರ್ಷದಿಂದ ಎಲ್ಲರೂ ಸಹಜವಾಗಿಯೇ ನಡೆದಿತ್ತು. ಲೋಕಸಭೆ ಚುನಾವಣೆ ಸೀಟು ಹಂಚಿಕೆ, ತಮ್ಮನ್ನು ಇಂಡಿಯಾ ಸಂಚಾಲಕರನ್ನಾಗಿಸುವ ಕುರಿತು ತಮ್ಮದೇ ಅಭಿಪ್ರಾಯ ಹೊಂದಿದ್ದರು. ಈ ವಿಚಾರವಾಗಿ ಬೇಸರ ಕೂಡ ಆಗಿದ್ದರು. ಇದೇ ವೇಳೆ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ನೀಡಿದ ಹೇಳಿಕೆ ತಮ್ಮನ್ನೇ ಗುರಿಯಾಗಿಸಿಕೊಂಡಿದ್ದು ಎನ್ನುವುದು ನಿತೀಶ್ ಆಕ್ರೋಶದ ಮೂಲ.ಸೈದ್ದಾಂತಿಕವಾಗಿ ಗೊತ್ತು ಗುರಿ ಇಲ್ಲದವರು ಸಮಾಜವಾದಿ ನಾಯಕ ಎಂದು ಹೇಳಿಕೊಳ್ಳುತ್ತಾರೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿ ನಂತರ ರೋಹಿಣಿ ತೆಗೆದು ಹಾಕಿದ್ದರು. ಇದು ನಿತೀಶ್ ಮೈತ್ರಿಯಿಂದಲೇ ಹೊರ ಬರುವಂತೆ ಮಾಡಿದೆ ಎನ್ನಲಾಗುತ್ತಿದೆ.
ದಾಖಲೆಯ ಎಂಟು ಬಾರಿ ಸಿಎಂ
ಈ ಬಾರಿ ಬಿಜೆಪಿ ಜತೆಗೆ ಸೇರಿ ಮತ್ತೆ ನಿತೀಶ್ಕುಮಾರ್ ಸಿಎಂ ಆದರೆ ಒಟ್ಟು ಎಂಟು ಬಾರಿ ಮುಖ್ಯಮಂತ್ರಿಯಾದ ದಾಖಲೆಯನ್ನು ಬರೆಯಲಿದ್ದಾರೆ. ಬಿಹಾರದಲ್ಲಿ ಈಗಾಗಲೇ ಅತಿ ಹೆಚ್ಚು ಅವಧಿ ಸಿಎಂ ಆಗಿದ್ದ ದಾಖಲೆಯೂ ನಿತೀಶ್ಕುಮಾರ್ ಅವರದ್ದು. ಈವರೆಗೂ 17 ವರ್ಷ 151 ದಿನದ ಅವಧಿಗೆ ನಿತೀಶ್ ಬಿಹಾರ ಸಿಎಂ ಆಗಿದ್ದಾರೆ. ಎಂಟನೇ ಬಾರಿಯೂ ಯಾರು ಸಿಎಂ ಆದ ಉದಾಹರಣೆಗಳಿಲ್ಲ.
ಮೂರು ಬಾರಿ ಮೈತ್ರಿ ಬದಲಾವಣೆ
ಬಿಜೆಪಿಯೊಂದಿಗೆ ನಿತೀಶ್ಕುಮಾರ್ ಸ್ನೇಹ ಹಾಗೂ ವಿರಸ ನಿರಂತರವಾಗಿದೆ. ವಾಜಪೇಯಿ ಹಾಗೂ ಅಡ್ವಾಣಿ ಅವರ ಕಾಲದಲ್ಲಿಯೇ ಬಿಜೆಪಿಯೊಂದಿಗೆ ಇದ್ದು ಕೇಂದ್ರದಲ್ಲೂ ಮಂತ್ರಿಯಾಗಿದ್ದರು ನಿತೀಶ್ಕುಮಾರ್ . ಆನಂತರ ಮೋದಿ- ಅಮಿತ್ ಶಾ ಅವರ ತೆಕ್ಕೆಗೆ ಬಿಜೆಪಿ ಹೋಗುತ್ತಿದ್ದಂತೆ ಬಿಜೆಪಿಯಿಂದ ದೂರವಾಗಿದ್ದರು. ಇದಾದ ಮೂರೇ ವರ್ಷದಲ್ಲಿ ಮತ್ತೆ ಬಿಜೆಪಿ ಸೇರಿದ್ದರು. ಮತ್ತೊಮ್ಮೆ ಬಿಜೆಪಿ ತೊರೆದರು. ಮಹಾಘಟಬಂಧನ್ ಸೇರಿದ್ದ ನಿತೀಶ್ ಈಗ ಮತ್ತೆ ಬಿಜೆಪಿ ಜತೆ ಸೇರುತ್ತಿದ್ದಾರೆ.