Gajabandhu programme: ಒಡಿಶಾದ ಗಜಬಂಧು ಕಾರ್ಯಕ್ರಮಕ್ಕೆ ಬೆಂಗಳೂರಿನ ಎನ್ಜಿಒ ಜತೆಗೆ ಒಪ್ಪಂದ; ಈ ರೇಡಿಯೋ ಕಾಲರ್ ಸ್ಕೀಮ್ನ ವಿವರ
Jul 19, 2023 07:00 AM IST
ಒಡಿಶಾದಲ್ಲಿ ಗಜಬಂಧು ಕಾರ್ಯಕ್ರಮ (ಸಾಂಕೇತಿಕ ಚಿತ್ರ)
Gajabandhu programme: ಮನುಷ್ಯ ಮತ್ತು ಆನೆಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಮುಂದಾಗಿದೆ. ಗಜಬಂಧು ಕಾರ್ಯಕ್ರಮವನ್ನು ಇದಕ್ಕಾಗಿ ರೂಪಿಸಿದ್ದು, ಬೆಂಗಳೂರಿನ ಎನ್ಜಿಒ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಕಾರ್ಯಯೋಜನೆಯ ವಿವರ ಹೀಗಿದೆ.
ಭುವನೇಶ್ವರ: ಮಾನವ-ಆನೆ ಸಂಘರ್ಷದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಒಡಿಶಾ ಸರ್ಕಾರವು ಆನೆಗಳಿಗೆ ರೇಡಿಯೊ ಕಾಲರ್ಗಳನ್ನು ಟ್ಯಾಗ್ ಮಾಡುವುದು ಸೇರಿ ಬಹು-ಉಪಯೋಗಿ ತಂತ್ರವನ್ನು ಅಳವಡಿಸಿಕೊಳ್ಳಲು ಯೋಜಿಸಿದೆ.
ಒಡಿಶಾ ರಾಜ್ಯ ಸರ್ಕಾರದ ‘ಗಜಬಂಧು’ ಕಾರ್ಯಕ್ರಮದಲ್ಲಿ ಆನೆಗಳಿಗೆ ರೇಡಿಯೊ ಕಾಲರ್ಗಳನ್ನು ಅಳವಡಿಸಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಸ್ಕೆ ಪೊಪ್ಲಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಗಜಬಂಧು ವಿಶೇಷ
ಪ್ರತಿ ಗ್ರಾಮದಿಂದ ಐದು ಜನರನ್ನು ಸ್ವಯಂ ಸೇವಕರ ನೇಮಕ ಮಾಡಲಾಗುತ್ತದೆ. ಅವರು ಆನೆಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಾರೆ. ಈವರೆಗೆ 1,200 ಗ್ರಾಮಗಳನ್ನು ಗಜಬಂಧು ಕಾರ್ಯಕ್ರಮದಡಿ ತರಲಾಗಿದ್ದು, ಇನ್ನೂ 2 ಸಾವಿರ ಗ್ರಾಮಗಳನ್ನು ಶೀಘ್ರದಲ್ಲೇ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಪೊಪ್ಲಿ ತಿಳಿಸಿದರು. .
ಬೆಂಗಳೂರಿನ ಎಎನ್ಸಿಎಫ್ ಜತೆಗೆ ಒಪ್ಪಂದ
ರೇಡಿಯೋ ಕಾಲರ್ ಯೋಜನೆಗಾಗಿ ಬೆಂಗಳೂರಿನ ಏಷ್ಯನ್ ನೇಚರ್ ಕನ್ಸರ್ವೇಶನ್ ಫೌಂಡೇಶನ್ನ ಏಷ್ಯನ್ ನೇಚರ್ ಕನ್ಸರ್ವೇಶನ್ ಫೌಂಡೇಶನ್ನೊಂದಿಗೆ ರಾಜ್ಯದ ಅರಣ್ಯ ಇಲಾಖೆ ಒಪ್ಪಂದ ಮಾಡಿಕೊಂಡಿರುವುದರ ಕಡೆಗೆ ಗಮನಸೆಳೆದ ಅವರು, ಮೂರು ಆನೆಗಳಿಗೆ ಪ್ರಾಯೋಗಿಕ ಆಧಾರದ ಮೇಲೆ ರೇಡಿಯೊ ಕಾಲರ್ನೊಂದಿಗೆ ಟ್ಯಾಗ್ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ, ತಮಿಳುನಾಡಿನಂತಹ ಕೆಲವು ರಾಜ್ಯಗಳಲ್ಲಿ ಈಗಾಗಲೇ ರೇಡಿಯೋ ಕಾಲರ್ ಯೋಜನೆ ಜಾರಿಯಾಗಿದೆ. ಆನೆಗಳಲ್ಲಿ ಅಳವಡಿಸಿರುವ ರೇಡಿಯೋ ಕಾಲರ್ನ ಸಂಕೇತಗಳಿಂದ ಅವುಗಳ ಚಲನವಲನವನ್ನು ಪತ್ತೆ ಮಾಡಬಹುದು. ಆನೆ ಹಿಂಡು ಜನ ವಸತಿಗೆ ಅಡ್ಡಿ ಪಡಿಸುವುದನ್ನು ತಡೆಯಲು ಅರಣ್ಯಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಲು ಇದು ಸಹಕಾರಿಯಾಗಲಿದ್ದು, ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಪೊಪ್ಲಿ ಹೇಳಿದರು.
ಜನರನ್ನು ಎಚ್ಚರಿಸಲು ಕೆಂಪು ದೀಪ, ಸೈರನ್ ಬಳಕೆ
ಜನರು ತಮ್ಮ ಪ್ರದೇಶಗಳಲ್ಲಿ ಆನೆಗಳ ಚಲನವಲನದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಮುನ್ನೆಚ್ಚರಿಕೆ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಜನವಸತಿ ಪ್ರದೇಶದಲ್ಲಿ ಆನೆಗಳಿರುವ ಬಗ್ಗೆ ಜನರಿಗೆ ತಿಳಿಸಲು ಕೆಂಪು ದೀಪ ಹಾಗೂ ಸೈರನ್ ಅಳವಡಿಸಲಾಗುತ್ತದೆ ಎಂದು ಪೊಪ್ಲಿ ವಿವರಿಸಿದರು.
ಮಾನವ-ಆನೆ ಸಂಘರ್ಷಕ್ಕೆ ಹೆಚ್ಚು ಒಳಗಾಗುವ ಅಂಗುಲ್ ಜಿಲ್ಲೆಯ ಬಂಟಲ್ನಲ್ಲಿ ಸೌರ ವಿದ್ಯುತ್ ಬೇಲಿಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಈಗಾಗಲೇ 43 ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಪೊಪ್ಲಿ ಹೇಳಿದರು.