Gopal Kanda: ಗಗನ ಸಖಿ ಆತ್ಮಹತ್ಯೆ ಪ್ರಕರಣ; ಖುಲಾಸೆಗೊಂಡ ಹರಿಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ಮತ್ತು ಗೀತಿಕಾ ಶರ್ಮಾ ಯಾರು, ಏನಿದು ಕೇಸ್
Jul 25, 2023 08:43 PM IST
ಹರಿಯಾಣ ಶಾಸಕ ಗೋಪಾಲ್ ಗೋಯೆಲ್ ಕಾಂಡ, ಗಗನಸಖಿ ಗೀತಿಕಾ ಶರ್ಮಾ
Gopal Kanda: ದಶಕದ ಹಿಂದೆ ದೇಶದ ಗಮನಸೆಳೆದಿದ್ದ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರ್ಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡಾ ಮತ್ತು ಅವರ ಸಹಾಯಕ ಅರುಣಾ ಚಡ್ಡಾ ದೋಷ ಮುಕ್ತರಾಗಿದ್ದಾರೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಈ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಿದೆ.
ನವದೆಹಲಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹರ್ಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡಾ ಮತ್ತು ಅವರ ಸಹಾಯಕ ಅರುಣಾ ಚಡ್ಡಾ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.
ಪ್ರಾಸಿಕ್ಯೂಷನ್ "ಎಲ್ಲ ಸಮಂಜಸವಾದ ಅನುಮಾನಗಳನ್ನು ಮೀರಿ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ" ಎಂದು ಕೋರ್ಟ್ ಹೇಳಿತು.
ಗೋಪಾಲ್ ಗೋಯಲ್ ಕಾಂಡಾ, ಪ್ರಭಾವಿ ರಾಜಕಾರಣಿ ಮತ್ತು ಉದ್ಯಮಿ. ಹರಿಯಾಣ ಲೋಕಹಿತ್ ಪಕ್ಷದ ನಾಯಕ ಮತ್ತು ಹರಿಯಾಣದ ಸಿರ್ಸಾ ವಿಧಾನಸಭಾ ಕ್ಷೇತ್ರದ ಶಾಸಕ.
ಏನಿದು 2012ರ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣ
- ಗೀತಿಕಾ ಶರ್ಮಾ ಅವರು ಗೋಪಾಲ್ ಕಾಂಡ ಅವರ ವಿಮಾನಯಾನ ಸಂಸ್ಥೆ ಎಂಡಿಎಲ್ಆರ್ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ನಂತರ ಕಾಂಡಾ ಅವರ ಗುರ್ಗಾಂವ್ನಲ್ಲಿರುವ ಕಾರ್ಪೊರೇಟ್ ಕಚೇರಿಯ ನಿರ್ದೇಶಕರಾಗಿ ನೇಮಕಗೊಂಡರು.
- ಗೀತಿಕಾ ಶರ್ಮಾ ಅವರು 2012ರ ಆಗಸ್ಟ್ 5 ರಂದು, ವಾಯುವ್ಯ ದೆಹಲಿಯಲ್ಲಿರುವ ತನ್ನ ತಂದೆಯ ಅಶೋಕ್ ವಿಹಾರ್ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡರು.
- ಗೀತಿಕಾ ಶರ್ಮಾ ತನ್ನ ಎರಡು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಗೋಪಾಲ್ ಗೋಯೆಲ್ ಕಾಂಡಾ ಮತ್ತು ಆತನ ಉದ್ಯೋಗಿ ಅರುಣಾ ಚಡ್ಡಾ ಅವರ ಕಿರುಕುಳದಿಂದ ತನ್ನ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ಆರೋಪಿಸಿದ್ದರು.
- ಗೋಪಾಲ್ ಗೋಯೆಲ್ ಕಾಂಡಾ ಅವರನ್ನು 306 (ಆತ್ಮಹತ್ಯೆಗೆ ಪ್ರಚೋದನೆ), 506 (ಅಪರಾಧ ಬೆದರಿಕೆ), 201 (ಸಾಕ್ಷ್ಯ ನಾಶ), 120ಬಿ (ಕ್ರಿಮಿನಲ್ ಪಿತೂರಿ), 466 (ನಕಲಿ) ಸೇರಿದಂತೆ ವಿವಿಧ ಸೆಕ್ಷನ್ಗಳ ಆರೋಪಗಳ ಆಧಾರದಲ್ಲಿ ದೆಹಲಿ ಪೊಲೀಸರು 2012ರ ಆಗಸ್ಟ್ 8 ರಂದು ಬಂಧಿಸಿದ್ದರು. ಅವರ ವಿರುದ್ಧ ಅತ್ಯಾಚಾರ (376) ಮತ್ತು 377 (ಅಸ್ವಾಭಾವಿಕ ಲೈಂಗಿಕತೆ) ಆರೋಪಗಳನ್ನು ಸಹ ದಾಖಲಿಸಲಾಯಿತು, ಆದರೆ ಅವುಗಳನ್ನು ದೆಹಲಿ ಹೈಕೋರ್ಟ್ ನಂತರ ಕೈಬಿಡಲಾಯಿತು. ಪ್ರಕರಣದ ದಾಖಲಾದ ನಂತರ, ಹರಿಯಾಣದ ಹಿಂದಿನ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಗೋಪಾಲ್ ಕಾಂಡಾ ರಾಜೀನಾಮೆ ನೀಡಬೇಕಾಯಿತು. ಅವರು ನಗರ ಸಂಸ್ಥೆಗಳು, ಉದ್ಯಮ ಮತ್ತು ವಾಣಿಜ್ಯ ಖಾತೆಗಳ ಸಚಿವರೂ ಆಗಿದ್ದರು.
- ಗೀತಿಕಾ ಶರ್ಮಾ ಅವರ ಮರಣದ ಆರು ತಿಂಗಳ ನಂತರ, ಅವರ ತಾಯಿ ಅನುರಾಧಾ ಶರ್ಮಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಅನುರಾಧ ಶರ್ಮಾ ಹಣಕಾಸು ಸಚಿವಾಲಯದಲ್ಲಿ ಅಕೌಂಟೆಂಟ್ ಆಗಿ ನಿವೃತ್ತರಾಗಿದ್ದರು. ಗೋಪಾಲ್ ಗೋಯೆಲ್ ಕಾಂಡಾ ಅವರ ಕಿರುಕುಳದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅನುರಾಧಾ ಕೂಡ ಡೆತ್ನೋಟ್ನಲ್ಲಿ ಆರೋಪಿಸಿದ್ದರು.
ಗೋಪಾಲ್ ಕಾಂಡ ಯಾರು?
ಗೋಪಾಲ್ ಗೋಯೆಲ್ ಕಾಂಡಾ ಅವರು ಹರಿಯಾಣ ವಿಧಾನಸಭೆಯ ಸದಸ್ಯ. ಹರಿಯಾಣ ಲೋಕಹಿತ ಪಕ್ಷದ ನಾಯಕ. 2014ರ ಮೇ ತಿಂಗಳಲ್ಲಿ ಸಹೋದರ ಗೋವಿಂದ ಕಾಂಡಾ ಜತೆಗೂಡಿ ಈ ಪಕ್ಷವನ್ನು ಅವರು ಸ್ಥಾಪಿಸಿದ್ದರು. ಆರಂಭದಲ್ಲಿ ಹರಿಯಾಣದಲ್ಲಿ ಹೊಸ ಸರ್ಕಾರವನ್ನು ರಚಿಸಲು ಬಿಜೆಪಿಗೆ ಸಹಾಯ ಮಾಡುವ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತು. 2019ರ ರಾಜ್ಯ ಅಸೆಂಬ್ಲಿ ಚುನಾವಣೆಯ ನಂತರ ಅವರ ಪಕ್ಷವು ಬಿಜೆಪಿಯನ್ನು ಬೆಂಬಲಿಸಿತು.
ಗೋಪಾಲ್ ಕಾಂಡಾ ಅವರು 90 ರ ದಶಕದಲ್ಲಿ, ಸಣ್ಣ ಮೊತ್ತ ಹೂಡಿಕೆ ಮಾಡಿ ರೇಡಿಯೋ ರಿಪೇರಿ ಅಂಗಡಿ ಶುರುಮಾಡಿದ್ದರು. ನಂತರ ಅವರು ಮತ್ತು ಅವರ ಸಹೋದರ ಶೂ ವ್ಯಾಪಾರ ಶುರು ಮಾಡಿದರು. ಸಿರ್ಸಾದಲ್ಲಿ ಅಂಗಡಿಯನ್ನು ತೆರೆದರು. ಬಳಿಕ ದೊಡ್ಡ ಹೂಡಿಕೆ ಮಾಡಿ ಶೂ ತಯಾರಿಕಾ ಕಂಪನಿ ಶುರುಮಾಡಿದರು.
ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದ ಗೋಪಾಲ್ ಕಾಂಡಾ ಮೊದಲು ಕಾಂಗ್ರೆಸ್ ಪಕ್ಷದ ಹರಿಯಾಣದ ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್ ಅವರನ್ನು ಸಂಪರ್ಕಿಸಿದರು. ಆದರೆ ಬನ್ಸಿ ಲಾಲ್ ಅವರ ಸರ್ಕಾರವು ಪತನವಾದ ಬಳಿಕ ಕಾಂಡಾ ಅವರ ಚೌತಾಲರ ಕಡೆಗೆ ತಿರುಗಿತು. ಹರಿಯಾಣ ಕೇಡರ್ನ ಹಿರಿಯ ಐಎಎಸ್ ಅಧಿಕಾರಿಯೊಂದಿಗಿನ ಸ್ನೇಹವು ಅವರ ವ್ಯವಹಾರವನ್ನು ವಿಸ್ತರಿಸಲು ಸಹಾಯ ಮಾಡಿತು. ಸಿರ್ಸಾದಿಂದ, ಕಾಂಡಾ ತನ್ನ ನೆಲೆಯನ್ನು ಗುರುಗ್ರಾಮಕ್ಕೆ ಬದಲಾಯಿಸಿದರು. ರಿಯಲ್ ಎಸ್ಟೇಟ್ ವ್ಯವಹಾರವನ್ನು ಪ್ರಾರಂಭಿಸಿದರು. 2007ರಲ್ಲಿ ಎಂಡಿಎಲ್ಆರ್ ಎಂಬ ವಿಮಾನಯಾನ ಕಂಪನಿಯನ್ನೂ ಶುರುಮಾಡಿದರು. ರಾಜಕೀಯದಲ್ಲೂ ಉತ್ತುಂಗಕ್ಕೆ ಏರಿದಾಗಲೇ, ಗಗನ ಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿ ಮಹಾಪತನ ಕಂಡರು.