Kedarnath Landslide: ಕೇದಾರನಾಥ ಯಾತ್ರಾ ಮಾರ್ಗ ಗೌರಿಕುಂಡ್ನಲ್ಲಿ ಭೂಕುಸಿತದ ಬಳಿಕ 12ಕ್ಕೂ ಜನ ನಾಪತ್ತೆ
Aug 04, 2023 04:19 PM IST
ಗೌರಿಕುಂಡ್ ಬಳಿ ಭೂಕುಸಿತ ಘಟನೆಯ ನಂತರ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
Kedarnath Landslide: ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಯಾತ್ರೆ ಮಾರ್ಗದ ಗೌರಿಕುಂಡ್ ಬಳಿ ಭೂಕುಸಿತ ಸಂಭವಿಸಿದ್ದು, 12ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಕೆಲವು ಅಂಗಡಿಗಳು ಕೊಚ್ಚಿ ಹೋಗಿವೆ.
ನವದೆಹಲಿ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಯಾತ್ರೆ ಮಾರ್ಗದ ಗೌರಿಕುಂಡ್ ಬಳಿ ಭೂಕುಸಿತದಿಂದಾಗಿ ಮಂದಾಕಿನಿ ನದಿಯಲ್ಲಿ ಮೂರು ಅಂಗಡಿಗಳು ಕೊಚ್ಚಿಹೋಗಿ ಕನಿಷ್ಠ ಒಂದು ಡಜನ್ ಜನರು ನಾಪತ್ತೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ದಾಟ್ ಪುಲಿಯಾ ಎಂಬಲ್ಲಿ ಈ ದುರಂತ ನಡೆದಿದೆ.
ಗೌರಿ ಕುಂಡ್ ಬಳಿ ಭೂಕುಸಿತದಿಂದಾಗಿ ಮೂರು ಅಂಗಡಿಗಳು ನದಿಯಲ್ಲಿ ಕೊಚ್ಚಿಹೋದ ನಂತರ ಕನಿಷ್ಠ ಹನ್ನೆರಡು ಜನರು ನಾಪತ್ತೆಯಾಗಿದ್ದಾರೆ. ಈ ರೀತಿ ನಾಪತ್ತೆಯಾದವರು ಅಂಗಡಿಕಾರರು ಮತ್ತು ಯಾತ್ರಿಕರಲ್ಲ ಎಂದು ನಂಬಲಾಗಿದೆ ಎಂದು ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ (ಡಿಡಿಎಂಒ) ನಂದನ್ ಸಿಂಗ್ ರಾಜ್ವರ್ ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಸಿಬ್ಬಂದಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.
ನಾಪತ್ತೆಯಾದವರ ಪಟ್ಟಿ ಪ್ರಕಟಿಸಿದ ರುದ್ರಪ್ರಯಾಗ ಜಿಲ್ಲಾಡಳಿತ
ರುದ್ರಪ್ರಯಾಗ ಜಿಲ್ಲಾಡಳಿತವು ಏಳು ಮಂದಿ ನೇಪಾಳಿ ಕುಟುಂಬ ಸೇರಿದಂತೆ ನಾಪತ್ತೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವರನ್ನು ಆಶು (23), ಪ್ರಿಯಾಂಶು ಚಮೋಲಿ (18), ರಣಬೀರ್ ಸಿಂಗ್ (28), ವಿನೋದ್ (26), ಮುಲಾಯಂ (26), ಮತ್ತು ನೇಪಾಳಿ ಕುಟುಂಬದ ಏಳು ಸದಸ್ಯರು - ಅಮರ್ ಬೋಹ್ರಾ (29), ಪತ್ನಿ ಅನಿತಾ ಬೋಹ್ರಾ (26) ಮತ್ತು ಅವರ ಐದು ಪುಟಾಣಿ ಮಕ್ಕಳು ಎಂದು ಗುರುತಿಸಲಾಗಿದೆ.
ನಿರಂತರ ಮಳೆ ಮತ್ತು ಬಂಡೆಗಳ ಕುಸಿತದ ಕಾರಣ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು ಎಂದು ಎಸ್ಡಿಆರ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
"ಶುಕ್ರವಾರ ಬೆಳಗ್ಗೆ, ನಾಪತ್ತೆಯಾದ ವ್ಯಕ್ತಿಗಳನ್ನು ಹುಡುಕಲು ನಾವು ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದೇವೆ. ಒಂದು ತಂಡವು ಭೂಕುಸಿತದ ಸ್ಥಳದಿಂದ 2 ಕಿ.ಮೀ. ಕೆಳಗಿರುವ ಕುಂಡ್ ಬ್ಯಾರೇಜ್ನಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ" ಎಂದು ಎಸ್ಡಿಆರ್ಎಫ್ ಮಾಧ್ಯಮ ಉಸ್ತುವಾರಿ ಲಲಿತಾ ನೇಗಿ ಹೇಳಿದರು.
ಉತ್ತರಾಖಂಡದಲ್ಲಿ ನಾಲ್ಕು ದಿನ ಹಳದಿ ಅಲರ್ಟ್
ಡೆಹ್ರಾಡೂನ್ನಲ್ಲಿರುವ ಭಾರತೀಯ ಹವಾಮಾನ ಇಲಾಖೆಯು ಉತ್ತರಾಖಂಡದ ಎಲ್ಲ 13 ಜಿಲ್ಲೆಗಳಿಗೆ ಮುಂದಿನ ನಾಲ್ಕು ದಿನಗಳವರೆಗೆ ಹಳದಿ ಎಚ್ಚರಿಕೆಯನ್ನು ನೀಡಿದೆ.
ಮಳೆಗಾಲದ ಮಧ್ಯೆ, ಮಳೆ ಸಂಬಂಧಿತ ಘಟನೆಗಳ ಭಯದಿಂದ ಕೇದಾರನಾಥ ದೇಗುಲಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.