ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ಗೆ ಭಾರತರತ್ನ; ಮರಣೋತ್ತರ ಪ್ರಶಸ್ತಿ ಘೋಷಿಸಿದ ರಾಷ್ಟ್ರಪತಿ
Jan 23, 2024 09:49 PM IST
ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರೀಗ ಭಾರತರತ್ನ.
- Bharat Ratna ಸಮಾಜವಾದಿ ನಾಯಕ, ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರಿಗೆ ಭಾರತ ರತ್ನ ಘೋಷಿಸಲಾಗಿದೆ.
ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತದಲ್ಲಿ ಸಮಾಜವಾದಿ ಆಂದೋಲನದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಅದಕ್ಕೊಂದು ದಿಕ್ಕು ತೋರಿದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಘೋಷಣೆ ಮಾಡಿದ್ದಾರೆ.
1924ರ ಜ. 24ರಂದು ಜನಿಸಿದ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವ ವರ್ಷವಿದು. ಅವರ ಜನುಮ ದಿನದ ಒಂದು ದಿನ ಮೊದಲೇ ಈ ಪ್ರಶಸ್ತಿಯನ್ನು ಘೋಷಣೆ ಮಾಡಿರುವುದು ವಿಶೇಷ. ಅವರು ನಿಧನರಾಗಿ 36 ವರ್ಷಗಳಾಗಿವೆ. 1988ರ ಫೆ. 17ರಂದು ಅವರು ನಿಧನರಾಗಿದ್ದು. ಈಗಲೂ ತಮ್ಮ ವಿಚಾರ, ಸಮಾಜಪರ ಆಡಳಿತದ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ.
ಕರ್ಪೂರಿ ಠಾಕೂರ್ ಅವರು ಬಿಹಾರದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. 1970ರಿಂದ 1971ರ ಮೊದಲ ಅವಧಿ, ಆನಂತರ 1977ರಿಂದ 1979ರವರೆಗೆ ಸಿಎಂ ಆಗಿದ್ದರು.ಬಿಹಾರದಲ್ಲಿ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಜನತಾಪಕ್ಷ ಅಧಿಕಾರಕ್ಕೆ ಬರುವಲ್ಲಿ ಕರ್ಪೂರಿ ಠಾಕೂರ್ ಅವರ ಶ್ರಮ ಅಧಿಕವಾಗಿತ್ತು.
ಹಿಂದುಳಿದ ವರ್ಗಗಳ ಏಳಿಗೆಗೆ ತಮ್ಮ ಬದುಕು ಮುಡಿಪು ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಾಗ ಅದನ್ನು ಮಾಡಿ ತೋರಿಸಿದವರು ಕರ್ಪೂರಿ ಠಾಕೂರ್ ಅವರು. ಬಿಹಾರದಲ್ಲಿ ಮುಂಗೇರಿಲಾಲ್ ಸಮಿತಿ ವರದಿಯನ್ನು ಜಾರಿಗೊಳಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಿದ್ದವರು ಠಾಕೂರ್. ಅದು ಉದ್ಯೋಗದಲ್ಲಿ ಹಿಂದುಳಿದವರು ಅವಕಾಶ ಪಡೆಯಲು ಸಹಕಾರಿಯಾಯಿತು. ಸ್ವಾತಂತ್ರ್ಯ ಪೂರ್ವದಲ್ಲೂ ಹಲವಾರು ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದರು. ಭಾರತ ಬಿಟ್ಟು ತೊಲಗಿ ಚಳಿವಳಿಯಲ್ಲಂತೂ ಠಾಕೂರ್ ಅವರು ಸಕ್ರಿಯವಾಗಿದ್ದರು. ಇದಕ್ಕಾಗಿ ಹಲವು ಬಾರಿ ಸೆರೆ ವಾಸವನ್ನೂ ಅನುಭವಿಸಿದ್ದರು.
ವಿಭಾಗ