India Rain: ಒಡಿಶಾ ಸೇರಿ ಉತ್ತರ ಭಾರತದಲ್ಲಿ ಭಾರಿ ಮಳೆಯ ಮುನ್ಸೂಚನೆ; ತೆಲಂಗಾಣದಲ್ಲಿ ರೆಡ್ ಅಲರ್ಟ್, ಮುಳುಗಿದ ಮುಂಬೈ
Jul 26, 2023 08:08 AM IST
ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 944 ಮಿಲಿ ಮೀಟರ್ ಮಳೆಯಾಗಿದೆ. ಸಂಪೂರ್ಣ ಜಲಾವೃತಗೊಂಡಿದ್ದ ಪ್ರದೇಶದಿಂದ ವ್ಯಕ್ತಿಯೊಬ್ಬ ಹೊರಬರಲು ಹರಸಾಹಸ ಪಟ್ಟಿದ್ದಾನೆ. (HT)
ತೆಲಂಗಾಣ, ಆಂಧ್ರ ಮತ್ತು ಒಡಿಶಾದ ಕರಾವಳಿ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೆಲಂಗಾಣದಲ್ಲಿ ಜುಲೈ 26, 27 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದೆಹಲಿ: ಭಾರತದ ಹಲವು ರಾಜ್ಯಗಳಲ್ಲಿ ಮಳೆ ಚುರುಕುಗೊಂಡಿದ್ದು (India Rain), ಕಳೆದೆರಡು ದಿನಗಳಲ್ಲಿ ಭಾರಿ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ನೆರೆಯ ತೆಲಂಗಾಣದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ (Telangana Rain).
ಇಂದಿನಿಂದ (ಜುಲೈ 26, ಬುಧವಾರ) ಮೂರು ದಿನಗಳ ಕಾಲ ತೆಲಂಗಾಣದಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲಿ ಸರ್ಕಾರ ಶಾಲಾ-ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ ಮಾಡಿದೆ. ಈ ಸಂಬಂಧ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಆದೇಶವನ್ನೂ ಹೊರಡಿಸಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಅಧಿಕಾರಿಗಳ ಜೊತೆ ಸಭೆ ಹಾಗೂ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಸೂಚನೆ ಮೇರೆಗೆ ಜುಲೈ 26 (ಬುಧವಾರ) ಹಾಗೂ ಜುಲೈ 27 (ಗುರುವಾರ) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ರೆಡ್ಡಿ ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ನಿನ್ನೆ (ಜುಲೈ 25, ಮಂಗಳವಾರ) ಬೆಳಗ್ಗೆವರೆಗೆ ದಾಖಲಾಗಿರುವ ಮಾಹಿತಿ ಪ್ರಕಾರ, ನಿಜಾಮಾಬಾದ್ ಜಿಲ್ಲೆಯ ವಿಲ್ಪುರದಲ್ಲಿ ಗರಿಷ್ಠ 464 ಮಿಲಿ ಮೀಟರ್ ದಾಖಲೆಯ ಮಳೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದೆ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹೈದರಾಬಾದ್ ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಅತಿ ಹೆಚ್ಚು ಮಳೆ ಬೀಳುವ ಸಂಭವ ಇರುವ ಐದು ಕೆಂಪು ವಲಯಗಳನ್ನು ಗುರುತಿಸಲಾಗಿದೆ. ನಿಜಾಮಾಬಾದ್ ಜಿಲ್ಲೆಯಲ್ಲಿ ಬರುವ ಪರ್ಕಿಟ್, ವೈಲ್ಪುರ್, ಭೀಮಗಲ್, ಕೋನಸಮಂದರ್ ಹಾಗೂ ಜಕ್ರನಪಲ್ಲಿ ಪ್ರಮುಖವಾಗಿವೆ. ಸೋಮವಾರ ರಾತ್ರಿ ಪರ್ಕಿಟ್ನಲ್ಲಿ 323.3 ಮಿಲಿ ಮೀಟರ್, ಭೀಮಗಲ್ನಲ್ಲಿ 264.8 ಮಿಮೀ, ಕೋನಸಮಂದರ್ನಲ್ಲಿ 227 ಮಿಮೀ, ಜಕ್ರನಪಲ್ಲಿಯಲ್ಲಿ 222.3 ಮಿಮೀ ಮಳೆ ದಾಖಲಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಅತಿವೃಷ್ಟಿಯಿಂದ ಬೆಳೆ, ಮನೆಗಳು ಹಾಗೂ ರಸ್ತೆಗಳಿಗೆ ಹಾನಿಯಾಗಿದೆ.
ಮಹಾರಾಷ್ಟ್ರದಲ್ಲಿ (Maharashtra Rain) ಭಾರಿ ಮಳೆಯ ಮುನ್ಸೂಚನೆ ಇದ್ದು, ಭೂಕುಸಿತದಿಂದ ಸುದ್ದಿಯಾಗಿದ್ದ ರಾಯಗಢದಲ್ಲಿ ಇಂದು (ಜುಲೈ 26, ಬುಧವಾರ) ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದೇಶದ ವಾಣಿಜ್ಯ ನಗರಿಯಾಗಿರುವ ಮುಂಬೈ ಅಕ್ಷರಶಃ ಜಲಾವೃತವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ರಸ್ತೆಗಳಲ್ಲಿ ನೀರು ಹರಿಯುತ್ತಿರುವುದು ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ.
ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯ (Delhi) ಹಲವು ಪ್ರದೇಶದಲ್ಲಿ ಇವತ್ತು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನೂರಾರು ವಾಹನಗಳು ಜಲಾವೃತವಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಿಂಡನ್ ನದಿಯ ನೀರಿನ ಮಟ್ಟ ಏರಿಕೆಯಿಂದಾಗಿ ಇಕೋ-ಟೆಕ್ ಪ್ರದೇಶ ಜಲಾವೃತವಾಗಿದೆ.
ಇತ್ತ ನೆರೆಯ ಆಂಧ್ರ ಪ್ರದೇಶದಲ್ಲೂ ವರುಣ ಅಬ್ಬರಿಸುತ್ತಿದ್ದು, ಮುಂದಿನ ಎರಡು ದಿನಕಾಲ ಇಲ್ಲಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಆಂಧ್ರ ಕರಾವಳಿ, ರಾಯಸೀಮ ಸೇರಿದಂತೆ 18 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಒಡಿಶಾದ ದಕ್ಷಿಣ ಭಾಗದಲ್ಲಿರುವ ಕರಾವಳಿಯಲ್ಲಿ ಇಂದು (ಜುಲೈ 26, ಬುಧವಾರ) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರದ ಸಂಜೆ ಬುಲೆಟಿನಲ್ಲಿ ಮಾಹಿತಿ ನೀಡಿದೆ.