logo
ಕನ್ನಡ ಸುದ್ದಿ  /  Nation And-world  /  Modi Govrnment Neve Make Policies To Please People Unlike Those In Past Says Amit Shah

Amit Shah: ಜನರನ್ನು ಮೆಚ್ಚಿಸಲು ಅಲ್ಲ, ಅವರ ಒಳಿತಿಗಾಗಿ ಯೋಜನೆ ರೂಪಿಸುವುದು ನಮ್ಮ ಆದ್ಯತೆ: ಅಮಿತ್‌ ಶಾ

HT Kannada Desk HT Kannada

Jan 18, 2023 02:31 PM IST

ಅಮಿತ್‌ ಶಾ (ಸಂಗ್ರಹ ಚಿತ್ರ)

    • ಕೇವಲ ಜನರನ್ನು ಮೆಚ್ಚಿಸಲು ಯೋಜನೆಗಳನ್ನು ರೂಪಿಸುವುದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿಯಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾರ್ಮಿಕವಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರಗಳು ಮೇಲ್ನೋಟಕ್ಕೆ ಕಠಿಣ ಎಂದು ತೋರಿದರೂ, ಅದು ಅಂತಿಮವಾಗಿ ಜನರಿಗೆ ನೆರವಾಗುವ ಯೋಜನೆಗಳೇ ಆಗಿರುತ್ತವೆ ಎಂದು ಅಮಿತ್‌ ಶಾ ಹೇಳಿದ್ದಾರೆ.
ಅಮಿತ್‌ ಶಾ (ಸಂಗ್ರಹ ಚಿತ್ರ)
ಅಮಿತ್‌ ಶಾ (ಸಂಗ್ರಹ ಚಿತ್ರ) (ANI)

ನವದೆಹಲಿ: ಕೇವಲ ಜನರನ್ನು ಮೆಚ್ಚಿಸಲು ಯೋಜನೆಗಳನ್ನು ರೂಪಿಸುವುದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿಯಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾರ್ಮಿಕವಾಗಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Tik Tok Star Murder: ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಭೀಕರ ಹತ್ಯೆ, ಕಾರಣವೇನು

Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ರಸ್ತೆ ಮೇಲೆ ಕಾಣಸಿಕ್ತು ತಲೆಕೆಳಗಾದ ಕಾರು, ಅಪಘಾತವಾಗಿಲ್ಲ, ಪಲ್ಟಿಯಾಗಿಲ್ಲ, ಕುತೂಹಲ ಕೆರಳಿಸಿದೆ ಈ ವೈರಲ್ ವಿಡಿಯೋ

ನಾವು ಜನರನ್ನು ಮೆಚ್ಚಿಸಲು ಯಾವುದೇ ಯೋಜನೆಗಳನ್ನು ಜಾರಿಗೆ ತರುವುದಿಲ್ಲ. ಆದರೆ ನಮ್ಮ ಯೋಜನೆಗಳು ಜನರ ಒಳಿತಿಗಾಗಿ ಇರುತ್ತವೆ. ಕೇಂದ್ರ ಸರ್ಕಾರದ ನಿರ್ಧಾರಗಳು ಮೇಲ್ನೋಟಕ್ಕೆ ಕಠಿಣ ಎಂದು ತೋರಿದರೂ, ಅದು ಅಂತಿಮವಾಗಿ ಜನರಿಗೆ ನೆರವಾಗುವ ಯೋಜನೆಗಳೇ ಆಗಿರುತ್ತವೆ ಎಂದು ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಸರ್ಕಾರಗಳು ತಮ್ಮ ವೋಟ್‌ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು, ವಾಸ್ತವಕ್ಕೆ ದೂರವಾದ ಯೋಜನೆಗಳನ್ನು ಘೋಷಿಸುತ್ತಿದ್ದವು. ಅಲ್ಲದೇ ಈ ಯೋಜನೆಗಳು ಯಾವುದೇ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿರಲಿಲ್ಲ. ಆದರೆ ಮೋದಿ ಸರ್ಕಾರ ವಾಸ್ತವಕ್ಕೆ ಹತ್ತಿರವಾದ ಮತ್ತು ಜನರ ಜೀವನಮಟ್ಟವನ್ನ ಸುಧಾರಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತದೆ ಎಂದು ಅಮಿತ್‌ ಶಾ ನುಡಿದರು.

ಕೇಂದ್ರದ ನೀತಿ ನಿರೂಪಣಾ ತತ್ವಗಳು ಜನರ ಒಳತಿಗಾಗಿ ಇವೆಯೇ ಹೊರತು ಅವರನ್ನು ಮೆಚ್ಚಿಸಲು ಅಲ್ಲ. ಕೇವಲ ಮತಗಳಿಕೆಗಾಗಿ ನಾವು ಜನರಿಗೆ ಮೋಸ ಮಾಡಲು ಸಿದ್ಧರಿಲ್ಲ. ಜನರ ಒಳಿತಿಗಾಗಿ ನಾವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ನಮಗೆ ಅಧಿಕಾರ ಕಳೆದುಕೊಳ್ಳುವ ಭಯ ಇಲ್ಲ ಎಂದು ಅಮಿತ್‌ ಶಾ ಮಾರ್ಮಿಕವಾಗಿ ಹೇಳಿದರು.

ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಮೇಲೆ ಈ ದೇಶದಲ್ಲಿ ದೊಡ್ಡ ಬದಲಾವಣೆಯಾಗಿದೆ. ಮೊದಲು ವೋಟ್ ಬ್ಯಾಂಕ್‌ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಲಾಗುತ್ತಿತ್ತು. ಆದರೆ ಈಗ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ದೇಶದ ಜನತೆ ಕೂಡ ಈ ಸತ್ಯವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ಅಮಿತ್‌ ಶಾ ಅಭಿಪ್ರಾಯಪಟ್ಟರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ನೇರ ಲಾಭ ವರ್ಗಾವಣೆ ಸೇರಿದಂತೆ ಸರ್ಕಾರದ ಕೆಲವು ನಿರ್ಣಯಗಳನ್ನು ಉಲ್ಲೇಖಿಸಿದ ಗೃಹ ಸಚಿವರು, ಈ ನಿರ್ಧಾರಗಳಿಗೆ ಎಷ್ಟೇ ವಿರೋಧ ವ್ಯಕ್ತವಾದರೂ, ಜನರ ಅನುಕೂಲಕ್ಕಾಗಿ ಇವುಗಳನ್ನು ಜಾರಿಗೆ ತರಲಾಯಿತು. ನಾವು ಜಿಎಸ್‌ಟಿ ಜಾರಿಗೆ ತರುವ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿದೆವು. ನಮ್ಮ ಈ ದೃಢ ನಿರ್ಧಾರ ಕೆಲವರಿಗೆ ಹೊಟ್ಟೆಯುರಿಗೆ ಕಾರಣವಾಯಿತು ಎಂದು ಅಮಿತ್‌ ಶಾ ಪರೋಕ್ಷವಾಗಿ ವಿಪಕ್ಷಗಳ ಬಗ್ಗೆ ವ್ಯಂಗ್ಯವಾಡಿದರು.

ನೀತಿಗಳನ್ನು ರೂಪಿಸುವಾಗ ನಾವು ಎಂದಿಗೂ ವೋಟ್ ಬ್ಯಾಂಕ್ ಬಗ್ಗೆ ಯೋಚಿಸಿಲ್ಲ. ಆದರೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮೋದಿ ಸರ್ಕಾರವು ಆಡಳಿತದ ವಿಧಾನವನ್ನು 'ನಿಯಮ ಆಧಾರಿತ ಕಲಿಕೆ'ಯಿಂದ 'ಪಾತ್ರ ಆಧಾರಿತ ಕಲಿಕೆ'ಗೆ ಬದಲಾಯಿಸಿದೆ. ಇದು ನಮ್ಮ ಸರ್ಕಾರದ ಕಾರ್ಯವೈಖರಿಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಅಮಿತ್‌ ಶಾ ಹೇಳಿದರು.

ಮೋದಿ ಸರ್ಕಾರವು ನೀತಿಗಳ ಪ್ರಮಾಣ ಮತ್ತು ಗಾತ್ರವನ್ನು ಬದಲಾಯಿಸಿದೆ. ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ, ನಮ್ಮ ಆಡಳಿತವು ಕ್ರಮಾನುಗತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಂದು ಹಂತವು ವಿಭಿನ್ನ ಸವಾಲುಗಳನ್ನು ಹೊಂದಿದ್ದು, ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ನಾವು ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವ ನುಡಿದರು.

ಯಾವುದೇ ಸರ್ಕಾರದ ಒಳ್ಳೆಯ ಅಂಶಗಳನ್ನು ವೈಯಕ್ತಿಕ ಸಿದ್ಧಾಂತವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಒಪ್ಪಿಕೊಳ್ಳುವುದು ನಿಷ್ಪಕ್ಷಪಾತ ಪತ್ರಿಕೋದ್ಯಮದ ಲಕ್ಷಣ. ಪತ್ರಕರ್ತ ಮುಕ್ತ ಮನಸ್ಸಿನಿಂದ ಫಲಿತಾಂಶಗಳನ್ನು ಸ್ವೀಕರಿಸದಿದ್ದರೆ, ಆತ ಕೇವಲ ತನ್ನನ್ನು ಮಾತ್ರವಲ್ಲದೇ ಇಡೀ ಸಮಾಜವನ್ನು ಗೊಂದಲದಲ್ಲಿ ಮುಳುಗಿಸುತ್ತಾನೆ ಎಂದು ಅಮಿತ್‌ ಶಾ ಇದೇ ವೇಳೆ ಸೂಚ್ಯವಾಗಿ ನುಡಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು