ಆರ್ಟಿಕಲ್ 370 ರದ್ದು ಆದೇಶ ಮಾನ್ಯವಾಗಿದ್ದು ಭರವಸೆಯ ದಾರಿದೀಪ ಎಂದ ಪ್ರಧಾನಿ ಮೋದಿ; ನಿರಾಸೆ ಅಂತ ಒಮರ್ ಅಬ್ದುಲ್ಲಾ ಬೇಸರ
Dec 11, 2023 03:02 PM IST
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಪ್ರಧಾನಿ ಮೋದಿ, ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದು ಮಾಡಿದ್ದ ಕೇಂದ್ರದ ಆದೇಶವನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಬಗ್ಗೆ ಪ್ರಧಾನಿ ಮೋದಿ, ಒಮರ್ ಸೇರಿ ಹಲವರು ಪ್ರತಿಕ್ರಿಯಿಸಿದ್ದಾರೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ಜಮ್ಮು-ಕಾಶ್ಮೀರಕ್ಕೆ (Jammu And Kashmir) ವಿಶೇಷ ಅಧಿಕಾರ ನೀಡಿದ್ದ ಆರ್ಟಿಕಲ್ 370 (Article 370) ಯನ್ನು ರದ್ದು ಮಾಡಿತ್ತು. ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಿದ್ದರು. ಇವತ್ತು (ಡಿಸೆಂಬರ್ 11, ಸೋಮವಾರ) ಭಾರತದ ಸರ್ವೋಚ್ಛ ನ್ಯಾಯಾಲಯ ಕೇಂದ್ರ ಸರ್ಕಾರದ ನಿರ್ಧಾರವನ್ನು ಮಾನ್ಯ ಮಾಡಿದ್ದು, ಸಂವಿಧಾನದ ಪ್ರಕಾರ ಆರ್ಟಿಕಲ್ 370 ರದ್ದು ಮಾಡಿರುವುದು ಸರಿ ಎಂದು ಹೇಳಿದೆ.
ಇದೇ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. 370ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿರುವುದು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ನ್ಯಾಯಾಲದ ತೀರ್ಪು ಜಮ್ಮು ಮತ್ತು ಕಾಶ್ಮೀರ, ಲಡಾಖ್ನಲ್ಲಿರುವ ನಮ್ಮ ಸಹೋದರಿಯರು ಮತ್ತು ಸಹೋದರರಿಗೆ ಭರವಸೆ, ಪ್ರಗತಿ ಹಾಗೂ ಐಕ್ಯತೆಯ ಪ್ರತಿಧ್ವನಿಸುವ ಘೋಷಣೆಯಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ನಮೋ ಪೋಸ್ಟ್ ಮಾಡಿದ್ದಾರೆ. ಕೋರ್ಟ್ ತನ್ನ ಆಳವಾದ ಬುದ್ಧಿವಂತಿಕೆಯಲ್ಲಿ, ಭಾರತೀಯರಾದ ನಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವ ಏಕತೆಯ ಸಾರವನ್ನು ಬಲಪಡಿಸಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ನಿರಾಸೆಯಾಗಿದೆ ಆದರೆ ಹತಾಶೆಗೊಂಡಿಲ್ಲ-ಒಮರ್
ಜಮ್ಮು-ಕಾಶ್ಮೀರದ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿ, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ನಿರಾಸೆಯಾಗಿದೆ. ಆದರೆ ಹತಾಶೆಗೊಂಡಿಲ್ಲ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಒಮರ್ ಅಬ್ದುಲ್ಲಾ, ಇಲ್ಲಿಗೆ ಬರಲು ಬಿಜೆಪಿಗೆ ದಶಕಗಳೇ ಬೇಕಾಯಿತು. ನಾವು ದೀರ್ಘಾವಧಿಗೆ ಸಿದ್ಧರಾಗಿದ್ದೇವೆ. ಹೋರಾಟಗಳು ಮುಂದುವರೆಯಲಿವೆ ಎಂದಿದ್ದಾರೆ. ಜಮ್ಮು-ಕಾಶ್ಮೀರದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಅವರು ಸುಪ್ರೀಂ ಕೋರ್ಟ್ನ ತೀರ್ಪು ದುಃಖಕರ ಮತ್ತು ದುರದೃಷ್ಟಕರ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಜನರು ಇದರಿಂದ ಸಂತೋಷವಾಗಿಲ್ಲ. ಆದರೂ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕ, ಜಮ್ಮು-ಕಾಶ್ಮೀರದ ಹಿಂದಿ ಮಹಾರಾಜ ಹರಿ ಸಿಂಗ್ ಅವರ ಪುತ್ರ ಕರಣ್ ಸಿಂಗ್ ಕೋರ್ಟ್ ಆದೇಶವನ್ನು ಸ್ವಾಗಸಿದ್ದಾರೆ. ಇದೀಗ ಅನಗತ್ಯವಾಗಿ ಗೋಡೆಗೆ ತಲೆಯನ್ನು ಹೊಡೆಯುವುದರಲ್ಲಿ ಅರ್ಥವಿಲ್ಲ ಎಂದು ಆರ್ಟಿಕಲ್ ರದ್ದು ಮಾಡಿರುವುದನ್ನು ವಿರೋಧಿಸುವವರಿಗೆ ಸಲಹೆ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಚುನಾವಣೆಗಳು ನಡೆಯಬೇಕುಕ. ಜನರು ತಮ್ಮ ಚುನಾವಣಾ ಪ್ರತಿನಿಧಿಗಳಿಂದ ವಂಚಿತರಾಗಲು ಸಾಧ್ಯವಿಲ್ಲ. ರಾಜತ್ವವನ್ನು ತಕ್ಷಣವೇ ಮರುಸ್ಥಾಪಿಸಬೇಕು ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ತಿಳಿಸಿದ್ದಾರೆ.
ಇಂದು (ಡಿಸೆಂಬರ್ 11, ಸೋಮವಾರ) ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪಿನಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಎತ್ತಹಿಡಿದಿದೆ. ಅಲ್ಲದೆ, ಸಂವಿಧಾನದ 370ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿದ್ದು, ಅದನ್ನು ಹಿಂತೆಗೆದುಕೊಳ್ಳುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ ಎಂದು ಹೇಳಿದೆ. 2024ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕೋರ್ಟ್ ನಿರ್ದೇಶ ನೀಡಿದೆ.