CM Mohan Yadav: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಮೋಹನ್ ಯಾದವ್ ಯಾರು? ರಾಜಕೀಯ ಹಿನ್ನೆಲೆ ಹೀಗಿದೆ
Dec 11, 2023 05:56 PM IST
ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೋಹನ್ ಯಾದವ್ ಅವರನ್ನು ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಭೋಪಾಲ್ನಲ್ಲಿ ಅಭಿನಂದಿಸಿದ್ದಾರೆ.
ಹಿಂದುಳಿದ ವರ್ಗದ ನಾಯಕ ಮೋಹನ್ ಯಾದವ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇವರು ಯಾರು, ರಾಜಕೀಯ ಹಿನ್ನೆಲೆಯ ಹೇಗಿದೆ ಅನ್ನೋದರ ಮಾಹಿತಿ ಇಲ್ಲಿದೆ.
ಭೋಪಾಲ್: ಮಧ್ಯಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ (Mohan Yadav) ಆಯ್ಕೆಯಾಗಿದ್ದಾರೆ. ಇಂದು (ಡಿಸೆಂಬರ್ 11, ಸೋಮವಾರ) ನಡೆದ ನೂತನ ಬಿಜೆಪಿ ಶಾಸಕರ ಸಭೆಯಲ್ಲಿ ಉಜ್ಜಯಿನಿ ದಕ್ಷಿಣ ಕ್ಷೇತ್ರದ ಶಾಸಕ ಯಾದವ್ ಅವರನ್ನು ಬಿಎಲ್ಪಿ ನಾಯಕನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದರೊಂದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿ ಮೋಹನ್ ಯಾದವ್ ಅವರು ಆಯ್ಕೆಯಾಗಿದ್ದಾರೆ.
ಮೋಹನ್ ಯಾದವ್ ಯಾರು? ಶಿಕ್ಷಣ, ರಾಜಕೀಯ ಹಿನ್ನೆಲೆಯ ಹೇಗಿದೆ ಅನ್ನೋದನ್ನ ನೋಡೋಣ. ಮೋಹನ್ ಯಾದವ್ ಅವರು 1965ರಲ್ಲಿ ಉಜ್ಜಯಿನಿಯಲ್ಲಿ ಜನಿಸಿದ್ದಾರೆ. ಇವರ ತಂದೆ ಹೆಸರು ಪೂನಂಚಂದ್ ಹಾಗೂ ತಾಯಿಯ ಹೆಸರು ಸೀಮಾ ಯಾದವ್. ಇವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾಳೆ. ಮೋಹನ್ ಅವರು ಬಿಎಸ್ಸಿ, ಎಲ್ಎಲ್ಬಿ, ಎಂಎ, ಎಂಬಿಎ ಹಾಗೂ ಪಿಎಚ್ಡಿ ಸೇರಿದಂತೆ ಹಲವು ಪದವಿಗಳನ್ನು ಪಡೆದಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ
ಇನ್ನ ಇವರ ರಾಜಕೀಯ ವಿಚಾರಕ್ಕೆ ಬರುವುದಾದರೆ 2013ರಲ್ಲಿ ಉಜ್ಜಯಿನಿ ಜಿಲ್ಲೆಯ ಉಜ್ಜಯಿನಿ ದಕ್ಷಿಣ ವಿಧಾನಸಭೆ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವಿನ ಪತಾಕೆ ಹಾರಿಸುತ್ತಾರೆ. 2018 ಹಾಗೂ 2023ರಲ್ಲೂ ಇದೇ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಈ ಭಾರಿಯ ಚುನಾವಣೆಯಲ್ಲಿ 13,000 ಮತಗಳ ಅಂತರದಿಂದ ಗೆದ್ದು ಬಂದಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರ ಸಚಿವ ಸಂಪುಟದಲ್ಲಿ ಉತನ್ನ ಶಿಕ್ಷಣ ಸಚಿವರಾಗಿ ಮೋಹನ್ ಯಾದವ್ ಸೇವೆ ಸಲ್ಲಿಸಿದ್ದಾರೆ.
2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 166 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಡಿಸೆಂಬರ್ 3 ರಂದು ಮತ ಎಣಿಕೆ ನಡೆದಿತ್ತು. ಫಲಿತಾಂಶ ಪ್ರಕಟವಾದ ಒಂದು ವಾರದ ಬಳಿಕ ಬಿಜೆಪಿ ಹೈಕಮಾಂಡ್ 166 ಬಿಜೆಪಿ ನೂತನ ಶಾಸಕರ ಸಭೆಯನ್ನು ನಡೆಸಿ ಮುಖ್ಯಮಂತ್ರಿಯನ್ನು ಅವರನ್ನು ಆಯ್ಕೆ ಮಾಡಿದೆ. ಹಿಂದಿನ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮಂಡಸೌರ್ನಿಂದ ಎರಡು ಭಾರಿ ಆಯ್ಕೆಯಾಗಿದ್ದ ಜಗದೀಶ್ ದೇವದಾ ಹಾಗೂ ಸಾರ್ವಜನಿಕ ಸಂಪರ್ಕ ಸಚಿವರಾಗಿದ್ದ ರಾಜೇಂದ್ರ ಶುಕ್ಲಾ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಹಿಂದುಳಿದ ವರ್ಗಗಳ ನಾಯಕ ಮೋಹನ್ ಯಾದವ್
ಕೇಂದ್ರ ಸರ್ಕಾರದ ಮಾಜಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಧ್ಯಪ್ರದೇಶ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಸಿಎಂ ಮೋಹನ್ ಯಾದವ್ ಅವರು ಕ್ಲೀನ್ ಇಮೇಜ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲ ಇವರಿಗಿದೆ. ಮಧ್ಯಪ್ರದೇಶ ಕುಸ್ತಿ ಸಂಘಗಳಲ್ಲೂ ಇವರು ಸಕ್ರಿಯರಾಗಿದ್ದಾರೆ. ಯಾದವ್ ಅವರಿಗೆ ಹಿಂದುಳಿದ ವರ್ಗದಿಂದ ಬಂದವರು. ಮಧ್ಯಪ್ರದೇಶದಲ್ಲಿ ಅರ್ಧದಷ್ಟು ಮತದಾರರನ್ನು ಹೊಂದಿರುವ ಒಬಿಸಿ ಸಮುದಾಯವನ್ನು ಒಲೈಸಿಕೊಳ್ಳಲು ಬಿಜೆಪಿ ಮೋಹನ್ ಯಾದವ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.