PM Security in India: ಭಾರತದ ಪ್ರಧಾನಮಂತ್ರಿಯ ಭದ್ರತೆ ಹೇಗಿರುತ್ತದೆ, ನರೇಂದ್ರ ಮೋದಿ ಬೆಂಗಾವಲು ಪಡೆ ಎಸ್ಪಿಜಿ, ಬ್ಲೂಬುಕ್ ವಿವರ
May 07, 2023 02:15 PM IST
PM Security in India: ಭಾರತದ ಪ್ರಧಾನಮಂತ್ರಿಯ ಭದ್ರತೆ ಹೇಗಿರುತ್ತದೆ, ನರೇಂದ್ರ ಮೋದಿ ಬೆಂಗಾವಲು ಪಡೆ ಎಸ್ಪಿಜಿ, ಬ್ಲೂಬುಕ್ ವಿವರ
- Prime Minister Security in India: ಬೆಂಗಳೂರು ರೋಡ್ಶೋ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ, ಸಾವಿರಾರು ಪೊಲೀಸರ ನಿಯೋಜನೆ, ಅದರಿಂದ ಉಂಟಾದ ಸಂಚಾರ ತೊಂದರೆಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿ ಭಾರತದ ಪ್ರಧಾನಿಯ ಭದ್ರತಾ ವ್ಯವಸ್ಥೆ, ಬೆಂಗಾವಲು ಪಡೆಯ ವಿಶೇಷ ಸೇರಿದಂತೆ ಹಲವು ಅಂಶಗಳನ್ನು ತಿಳಿದುಕೊಳ್ಳೋಣ.
ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರು ರೋಡ್ಶೋ ಸಂದರ್ಭದಲ್ಲಿ ಟ್ರಾಫಿಕ್ನಲ್ಲಿ ಸಿಲುಕಿದ ಪ್ರಯಾಣಿಕರು ಹಿಡಿಶಾಪ ಹಾಕುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಪ್ರಧಾನಿಗೆ ಇಷ್ಟು ಸಾವಿರ ಪೊಲೀಸರು, ವಿಶೇಷ ಪಡೆ ಏಕೆ ಬೇಕು ಎಂಬ ಪ್ರಶ್ನೆಯನ್ನೂ ಕೇಳುವವರಿದ್ದಾರೆ. ಬೆಂಗಳೂರು ರೋಡ್ಶೋ ಸಂದರ್ಭದಲ್ಲಿ ಪ್ರಧಾನಿಗೆ ನೀಡುವ ಭದ್ರತೆಯನ್ನು ಪರಿಶೀಲಿಸಲೆಂದೇ ವಿವಿಧ ದೇಶಗಳ ಪೊಲೀಸರು ತರಬೇತಿ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು ಎನ್ನುವ ಸಂಗತಿ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಬೆಂಗಳೂರು ರೋಡ್ಶೋ ಸಂದರ್ಭದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಭಾರತದ ಪ್ರಧಾನಿಗೆ ನೀಡುವ ಭದ್ರತೆಗಾಗಿ ಪ್ರತಿನಿತ್ಯ ಕಡಿಮೆಯೆಂದರೂ 1.17 ಕೋಟಿ ರೂಪಾಯಿ ಖರ್ಚಾಗುತ್ತದೆ. ಈ ಲೇಖನದಲ್ಲಿ ಭಾರತದಲ್ಲಿ ಪ್ರಧಾನಮಂತ್ರಿಗೆ ನೀಡುವ ಭದ್ರತೆಯ ಕುರಿತು ತಿಳಿದುಕೊಳ್ಳೋಣ.
ನಾಲ್ಕು ಪರಿಧಿಯಲ್ಲಿ ಸುರಕ್ಷತೆ
ಪ್ರಧಾನ ಮಂತ್ರಿಯನ್ನು ಎಸ್ಪಿಜಿ ಕಮಾಂಡೊಗಳು ಸುತ್ತುವರೆದಿರುತ್ತಾರೆ. ಇದು ಮೊದಲ ಪರಿಧಿಯಲ್ಲಿರುವ ಪ್ರಧಾನಮಂತ್ರಿಗಳ ಭದ್ರತೆಯಾಗಿದೆ. ಎರಡನೇ ಹಂತದಲ್ಲಿ ಪ್ರಧಾನಮಂತ್ರಿಯವರ ವೈಯಕ್ತಿಕ ಭದ್ರತಾ ಗಾರ್ಡ್ಗಳು ಇರುತ್ತಾರೆ. ಇವರು ಎಸ್ಪಿಜಿ ಕಮಾಂಡೊಗಳಷ್ಟೇ ತರಬೇತಿ ಮತ್ತು ಕೌಶಲ ಹೊಂದಿರುತ್ತಾರೆ. ಮೂರನೇ ಹಂತದಲ್ಲಿ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್ಜಿ) ಇರುತ್ತಾರೆ. ನಾಲ್ಕನೇ ಪರಿಧಿಯಲ್ಲಿ ಅರೆ ಭದ್ರತಾ ಪಡೆ ಸಿಬ್ಬಂದಿಗಳು ಮತ್ತು ಪೊಲೀಸ್ ಆಫೀಸರ್ಗಳು ಇರುತ್ತಾರೆ. ಈ ನಾಲ್ಕು ಪರಿಧಿ ಮಾತ್ರವಲ್ಲದೆ ಐದನೇ ಪರಿಧಿಯ ಭದ್ರತೆಯನ್ನು ಸ್ನಿಫರ್ ಡಾಗ್ಗಳು ನೋಡಿಕೊಳ್ಳುತ್ತವೆ.
ಬ್ಲೂ ಬುಕ್ ಬಗ್ಗೆ ಗೊತ್ತೆ?
ಪ್ರಧಾನಮಂತ್ರಿ ಎನ್ನುವುದು ದೇಶದ ಪ್ರಮುಖ ಹುದ್ದೆ. ಪ್ರಧಾನಿಯ ಭದ್ರತೆ ಅತ್ಯಧಿಕ ಕಾಳಜಿಯ ಮತ್ತು ಆದ್ಯತೆಯ ವಿಷಯವಾಗಿದೆ. ಭಾರತದಲ್ಲಿ ಪ್ರಧಾನಮಂತ್ರಿಯ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುವುದು ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ಪಿಜಿ).
"ಬ್ಲೂಬುಕ್" ಎಂಬ ಕೈಪಿಡಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ರೂಪಿಸಿರುವ ಪ್ರೋಟೋಕಾಲ್ಗಳು ಮತ್ತು ಮಾನದಂಡಗಳ ಆಧಾರದ ಮೇಲೆ ಎಸ್ಪಿಜಿ ಕಾರ್ಯನಿರ್ವಹಿಸುತ್ತದೆ. ಒಂದು ರಾಜ್ಯಕ್ಕೆ ಪ್ರಧಾನ ಮಂತ್ರಿ ಭೇಟಿ ನೀಡುವ ಮೊದಲು ಆಯಾ ರಾಜ್ಯದ ಭದ್ರತಾ ಪಡೆಗಳು ಮತ್ತು ಇಂಟಲಿಜೆನ್ಸ್ ಬ್ಯೂರೋದ ಅಧಿಕಾರಿಗಳೊಂದಿಗೆ ಭದ್ರತೆಯ ಕುರಿತು ಚರ್ಚಿಸುತ್ತದೆ. ಪ್ರಧಾನಿ ಭೇಟಿಗೆ ಮೂರು ದಿನಗಳ ಮೊದಲು ಇದನ್ನು ಮಾಡಲಾಗುತ್ತದೆ. ಇವರು ನೀಡುವ ಅಡ್ವಾನ್ಸ್ ಸೆಕ್ಯುರಿಟಿ ಲಿಯಾಷನ್(ಎಎಸ್ಎಲ್) ವರದಿ ಆಧಾರದಲ್ಲಿ ಮುಂದಿನ ಪ್ರಯಾಣ ಯೋಜನೆ ಮಾಡಲಾಗುತ್ತದೆ.
ಪ್ರಧಾನಮಂತ್ರಿಯವರ ಪ್ರಯಾಣ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬೇಕಾದ ದಾರಿ, ಭದ್ರತಾ ವಿಶ್ಲೇಷಣೆ, ಅಪಾಯದ ಅಂಶಗಳು ಇತ್ಯಾದಿಗಳನ್ನು ಎಎಸ್ಎಲ್ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಅರೇಂಜ್ಮೆಂಟ್ಗಳನ್ನು ಮಾಡಲಾಗುತ್ತದೆ. ಭದ್ರತಾ ವಿಷಯಗಳು ಮಾತ್ರವಲ್ಲದೆ ವಾತಾವರಣ/ಹವಾಮಾನದ ಅಂಶಗಳನ್ನು ಪರಿಗಣಿಸಲಾಗುತ್ತದೆ. ಅಗ್ನಿ ಸುರಕ್ಷತೆ, ವಾತಾವರಣ ಮತ್ತು ಇತರೆ ಅಪಾಯಗಳ ಕುರಿತೂ ಎಸ್ಪಿಜಿ ಪರೀಕ್ಷಿಸುತ್ತದೆ. ಎಲ್ಲಾದರೂ ಪ್ರಧಾನಿ ದೋಣಿ ಅಥವಾ ಹಡಗಿನಲ್ಲಿ ಪ್ರಯಾಣಿಸಬೇಕಿದ್ದರೆ ಆ ಹಡಗು/ ಬೋಟ್ ಪ್ರಯಾಣಕ್ಕೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ರಾಜ್ಯ ಪೊಲೀಸರಿಂದ ಸುರಕ್ಷತೆ
ಪ್ರಧಾನ ಮಂತ್ರಿ ರಾಜ್ಯವೊಂದಕ್ಕೆ ಆಗಮಿಸುವಾಗ ಆಯಾ ರಾಜ್ಯದ ಪೊಲೀಸರಿಂದ ಭದ್ರತಾ ತಪಾಸಣೆ ನಡೆಯುತ್ತದೆ. ಪೊಲೀಸರು ಖಾಕಿ ಡ್ರೆಸ್ ಮಾತ್ರವಲ್ಲದೆ ಮಪ್ತಿಯಲ್ಲಿದ್ದುಕೊಂಡು ಸುರಕ್ಷತೆ ಪರಿಶೀಲಿಸುತ್ತಾರೆ. ರಾಜ್ಯ ಪೊಲೀಸರು ಪ್ರಯಾಣಕ್ಕೆ ಸುರಕ್ಷತೆ ಖಾತ್ರಿಪಡಿಸಿ ಅನುಮತಿ ನೀಡುವವರೆಗೆ ಪ್ರಯಾಣ ಕೈಗೊಳ್ಳಲು ಎಸ್ಪಿಜಿ ಅನುಮತಿ ನೀಡುವುದಿಲ್ಲ.
ಎಸ್ಪಿಜಿಯಿಂದ ಭದ್ರತೆ
ಪ್ರಧಾನಮಂತ್ರಿಗೆ ನಾಲ್ಕು ಪರಿದಿಯಲ್ಲಿ ಎಸ್ಪಿಜಿ ಕಮಾಂಡೊಗಳು ಭದ್ರತೆ ನೀಡುತ್ತಾರೆ. ಬುಲೆಟ್ ಪ್ರೂಫ್ ಕಾರುಗಳೊಂದಿಗೆ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಪ್ರಧಾನಿಗೆ ರಕ್ಷಣೆ ನೀಡಲಾಗುತ್ತದೆ. ಒಂಬತ್ತು ಹೈಪ್ರೊಫೈಲ್ ವಾಹನಗಳು, ಅಂಬ್ಯುಲೆನ್ಸ್, ಒಂದು ಜಾಮರ್ ಕಾರು ಪ್ರಧಾನಿ ಪ್ರಯಾಣದ ಸಮಯದಲ್ಲಿ ಜತೆಗಿರುತ್ತವೆ. ನೋಡಲು ಚಾಕೋಲೇಟ್ ಬಾಯ್ಗಳಂತೆ ಕಾಣಿಸುವ ಈ ಎಸ್ಪಿಜಿ ಕಮಾಂಡರ್ಗಳು ಅತ್ಯುತ್ತಮ ತರಬೇತಿ ಪಡೆದವರಾಗಿರುತ್ತಾರೆ. ಈ ಹಿಂದೆ ಯಾವುದಾದರೂ ಭದ್ರತಾ ಪಡೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಎಸ್ಪಿಜಿ ಪಡೆಗೆ ನಿಯೋಜನೆ ಮಾಡಲಾಗಿರುತ್ತದೆ. ಕತ್ತಲಲ್ಲಿ ಕಾಣಿಸುವಂತಹ ಕನ್ನಡಕ, ಬುಲೆಟ್ ಪ್ರೂಫ್ ಉಡುಗೆ ಧರಿಸಿರುತ್ತಾರೆ. ಬಿಎಂಡಬ್ಲ್ಯು, ರೇಂಜ್ ರೋವರ್ಸ್ನಂತಹ ಕಾರುಗಳನ್ನು ಹೊಂದಿರುತ್ತಾರೆ.
ಎಸ್ಪಿಜಿ ಇತಿಹಾಸ
ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ 34 ವರ್ಷ ಇಂತಹ ಪಡೆಯು ಇರಲಿಲ್ಲ. ದೆಹಲಿ ಪೊಲೀಸರೇ ಪ್ರಧಾನ ಮಂತ್ರಿಗೆ ರಕ್ಷಣೆ ನೀಡುತ್ತಿದ್ದರು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಗೃಹ ಸಚಿವಾಲಯವು ವಿವಿಐಪಿಗಳು ಮತ್ತು ವಿವಿಪಿಗಳಿಗೆ ವಿಶೇಷ ಭದ್ರತೆ ನೀಡಲು ಮುಂದಾಯಿತು. 1981ರಲ್ಲಿ ಸ್ಪೆಷಲ್ ಟಾಸ್ಕ್ ಪೋರ್ಸ್ ಆರಂಭಿಸಲಾಯಿತು. 1985ರ ಮಾರ್ಚ್ 30ರಂದು ಇದನ್ನು ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಎಂದು ಮರುನಾಮಕರಣ ಮಾಡಲಾಯಿತು. ಪ್ರಧಾನಮಂತ್ರಿಯನ್ನು ದೇಶ-ವಿದೇಶದಲ್ಲಿ ಎಲ್ಲಾ ಸಮಯದಲ್ಲಿ ರಕ್ಷಿಸುವುವುದ ಈ ಪಡೆಯ ಪ್ರಮುಖ ಜವಾಬ್ದಾರಿಯಾಗಿದೆ.