RSS Talks With IUML: ಬಿಜೆಪಿ ಚಿಹ್ನೆ ನಿಷೇಧ ಬಯಸಿದ ಮುಸ್ಲಿಂ ಲೀಗ್ ಜೊತೆ ಆರ್ಎಸ್ಎಸ್ ಮಾತುಕತೆ: ಇದು 'ರಕ್ತ ಸಂಬಂಧ' ಅನ್ವೇಷಣೆಯ ಕಥೆ
Mar 21, 2023 03:00 PM IST
ಸಾಂದರ್ಭಿಕ ಚಿತ್ರ
ಬಿಜೆಪಿ ಚಿಹ್ನೆಯನ್ನು ನಿಷೇಧಿಸುವಂತೆ ಕೋರಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜೊತೆ, ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಎಸ್) ಮಾತುಕತೆಗೆ ಮುಂದಾಗಿರುವುದು ದೇಶದ ಗಮನ ಸೆಳೆದಿದೆ. ಮುಸ್ಲಿಂ ಲೀಗ್ ಒಂದು ಕೋಮುವಾದಿ ಪಕ್ಷವಾಗಿದ್ದರೂ ಪ್ರಜಾಸತ್ತಾತ್ಮಕ ಸಂಘಟನೆಯಾಗಿದೆ ಎಂದು ಆರ್ಎಸ್ಎಸ್ ಪ್ರತಿಪಾದಿಸಿದೆ.
ಕೊಚ್ಚಿ: ಕಮಲ ಧಾರ್ಮಿಕ ಪಾವಿತ್ರ್ಯತೆ ಹೊಂದಿರುವ ಚಿಹ್ನೆಯಾಗಿದ್ದು, ಬಿಜೆಪಿ ಇದೇ ರಾಜಕೀಯ ಚಿಹ್ನೆಯನ್ನು ಹೊಂದಿರುರುವುದು ಅಸಾಂವಿಧಾನಿಕ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಆದರೆ ಬಿಜೆಪಿ ಚಿಹ್ನೆಯನ್ನು ನಿಷೇಧಿಸುವಂತೆ ಕೋರಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜೊತೆ, ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಎಸ್) ಮಾತುಕತೆಗೆ ಮುಂದಾಗಿರುವುದು ದೇಶದ ಗಮನ ಸೆಳೆದಿದೆ.
ಮುಸ್ಲಿಂ ಲೀಗ್ ಒಂದು ಕೋಮುವಾದಿ ಪಕ್ಷವಾಗಿದ್ದರೂ ಪ್ರಜಾಸತ್ತಾತ್ಮಕ ಸಂಘಟನೆಯಾಗಿದೆ. ಅದು ಇಸ್ಲಾಂ ಮೂಲಭೂತ ವಾದವನ್ನು ಬೆಂಬಲಿಸುವುದಿಲ್ಲಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಘಚಾಲಕ ಕೆ.ಕೆ.ಬಲರಾಮ್ ಮತ್ತು ಪ್ರಾಂತ ಕಾರ್ಯವಾಹ ಪಿ.ಎನ್.ಈಶ್ವರನ್ ಪ್ರತಿಪಾದಿಸಿದ್ದಾರೆ.
ಮಾರ್ಚ್ 12ರಿಂದ 14ರವರೆಗೆ ಹರಿಯಾಣದ ಪಾಣಿಪತ್ನಲ್ಲಿ ನಡೆದ ಅರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ದೇಶದ್ರೋಹಿ ಮತ್ತು ಉಗ್ರಗಾಮಿ ಸಿದ್ಧಾಂತವನ್ನು ಪ್ರತಿಪಾದಿಸದ ಸಂಘಟನೆಗಳ ಜೊತೆಗೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೆ.ಕೆ.ಬಲರಾಮ್ ಮತ್ತು ಪಿ.ಎನ್. ಈಶ್ವರನ್ ಸ್ಪಷ್ಟಪಡಿಸಿದ್ದಾರೆ.
''ಇಸ್ಲಾಮಿಕ್ ವಿದ್ವಾಂಸರ ನಿಯೋಗವೊಂದು ದೆಹಲಿಯಲ್ಲಿ ಆರ್ಎಸ್ಎಸ್ ನಾಯುಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ನಿಯೋಗದಲ್ಲಿ ಜಮಾತ್- ಎ-ಇಸ್ಲಾಮಿ ನಾಯಕರೊಬ್ಬರು ಕೂಡ ಉಪಸ್ಥಿರಿದ್ದರು. ಮೂಲಭೂತವಾದವನ್ನು ವಿರೋಧಿಸುವ ಮತ್ತು ರಾಷ್ಟ್ರೀಯವಾದವನ್ನು ಬೆಂಬಲಿಸುವ ಯಾವುದೇ ಸಂಘಟನೆ ಜೊತೆ ಮಾತುಕತೆ ನಡೆಸಲು ನಾವು ಮುಕ್ತರಾಗಿದ್ದೇವೆ. ಇತ್ತೀಚೆಗಷ್ಟೇ ನಾವು ಮುಸ್ಲಿಂ ಲೀಗ್ನ ಹಾಲಿ ಶಾಸಕ ಸೇರಿದಂತೆ ಕೆಲವು ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದೇವೆ..'' ಎಂದು ಈಶ್ವರನ್ ಮಾಹಿತಿ ನೀಡಿದ್ಧಾರೆ.
''ಜಮಾತ್-ಎ-ಇಸ್ಲಾಮಿ ಮತ್ತು ಮುಸ್ಲಿಂ ಲೀಗ್ ರಾಜಕೀಯ ನಿಲುವುಗಳು ಭಿನ್ನವಾಗಿವೆ. ಅಲ್ಲದೇ ಇವುಗಳ ರಾಜಕೀಯ ಸಿದ್ಧಾಂತವು ನಮ್ಮ ಸಿದ್ಧಾಂತದೊಂದಿಗೆ ಹೊಂದಿಕೆಯಾಗುವುದಿಲ್ಲ. ಆದಾಗ್ಯೂ ನಾವು ಐಯುಎಂಎಲ್ ಜತೆ ಮಾತುಕತೆ ನಡೆಸಲು ನಾವು ಮುಕ್ತರಾಗಿದ್ದೇವೆ. ಏಕೆಂದರೆ ಮುಸ್ಲಿಂ ಲೀಗ್ ಕೋಮುವಾದಿ ಪಕ್ಷವಾಗಿದ್ದರೂ, ಮೂಲಭೂತವಾದವನ್ನು ಆ ಪಕ್ಷ ಎಂದಿಗೂ ಬೆಂಬಲಿಸಿಲ್ಲ. ಈ ಪಕ್ಷದೊಂದಿಗೆ ಮಾತುಕತೆ ನಡೆಸಲು ಇದೊಂದು ಕಾರಣ ಸಾಕು ಎಂದು ಈಶ್ವರನ್ ಅಭಿಪ್ರಾಯಪಟ್ಟಿದ್ದಾರೆ.
ಒಂದೊಮ್ಮೆ ಜಮಾತ್ ಇ ಇಸ್ಲಾಮಿ ಕೂಡ ತನ್ನ ನೀತಿಧಿಯಲ್ಲಿ ಬದಲಾವಣೆ ಮಾಡಿಕೊಂಡರೆ, ನಾವು ಅದರೊಂದಿಗೂ ಮಾತುಕತೆ ನಡೆಸಲು ಸಿದ್ಧ. ಈ ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಮೂರು ಕಾರ್ಯಕ್ರಮಗಳಲ್ಲಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾಗವಹಿಸಿದ್ದರು..'' ಎಂದು ಈಶ್ವರನ್ ಹೇಳಿದ್ದಾರೆ.
''ಭಾರತದ ಕ್ರೈಸ್ತ ಸಮುದಾಯದೊಂದಿಗೂ ನಾವು ಸೌಹಾರ್ದಯುತ ಚರ್ಚೆಗಳಿಗೆ ನಾಂದಿ ಹಾಡಿದ್ದೇವೆ. ಕ್ರೈಸ್ತ ಸಮುದಾಯವು ಆರ್ಎಸ್ಎಸ್ ಬಗ್ಗೆ ಹೊಂದಿರುವ ಸಂಶಯವನ್ನು ಹೋಗಲಾಡಿಸುವಲ್ಲಿ ನಾವು ಬಹುತೇಕ ಯಶಸ್ವಿಯಾಗಿದ್ದೇವೆ. ಭಾರತೀಯ ಕ್ರೈಸ್ತ ಸಮುದಾಯ ಆರ್ಎಸ್ಎಸ್ ಬಗ್ಗೆ ಭಯಭೀತವಾಗಿದೆ ಎಂಬುದು ಸುಳ್ಳು..'' ಎಂದು ಕೆ.ಕೆ. ಬಲರಾಮ್ ಇದೇ ವೇಳೆ ಪ್ರತಿಪಾದಿಸಿದ್ದಾರೆ.
''ನಾವು ರಾಜ್ಯ ಮಟ್ಟದಲ್ಲಿ ಕ್ರೈಸ್ತ ಸಮುದಾಯದೊಂದಿಗೆ ಚರ್ಚೆ ಮಾಡುತ್ತಿದ್ದೇವೆ. ಕ್ರಿಶ್ಚಿಯನ್ ಸಮುದಾಯ ಕೂಡ ಈ ಚರ್ಚೆಗೆ ಸ್ವಾಗತ ಕೋರಿದೆ. ಈ ಕಾರಣಕ್ಕೆ ನಾವು ಇತ್ತೀಚೆಗೆ ಅನೇಕ ಬಿಷಪ್ಗಳೊಂದಿಗೆ ಸಂವಾದ ನಡೆಸಿದ್ದೇವೆ..'' ಎಂದು ಬಲರಾಮ್ ಮಾಹಿತಿ ನೀಡಿದ್ದಾರೆ.
ತಮ್ಮದು ಜಾತ್ಯತೀತ ಸಂಘಟನೆಯಾಗಿದ್ದು ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳೂ ಜಾತ್ಯತೀತವಾಗಿದೆ ಎಂದು ಆಲ್ ಇಂಡಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಅಲ್ಲದೇ ಕೇರಳದಲ್ಲಿ ಕಳೆದ ಏಳು ದಶಕಗಳಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಮುಸ್ಲಿಮೇತರ ಸಮುದಾಯದ ಅನೇಕ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ ಎಂದೂ ಮುಸ್ಲಿಂ ಲೀಗ್ ತನ್ನ ಅಫಿಡವಿಟ್ನಲ್ಲಿ ಪ್ರತಿಪಾದಿಸಿದೆ.
ರಾಜಕೀಯ ಪಕ್ಷಗಳು ತಮ್ಮ ಧ್ವಜ ಮತ್ತು ಹೆಸರಿನಲ್ಲಿ ಧಾರ್ಮಿಕ ಚಿಹ್ನೆ ಮತ್ತು ಹೆಸರು ಬಳಸುವುದನ್ನು ನಿಷೇಧಿಸಬೇಕು ಎಂದು ಕೋರಿ ಮುಸ್ಲಿಂ ಲೀಗ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಭಾಗ