RSS Meet: ವಾರ್ಷಿಕ ಸಭೆಯಲ್ಲಿ ಜಾತಿ ವ್ಯವಸ್ಥೆ ಕುರಿತ ದೇಶೀಯ ಹಾಗೂ ಜಾಗತಿಕ ನಿರೂಪಣೆಗೆ ಒತ್ತು ನೀಡಲಿರುವ ಆರ್ಎಸ್ಎಸ್
Mar 05, 2023 07:05 AM IST
ಸಾಂದರ್ಭಿಕ ಚಿತ್ರ
- ಮಾರ್ಚ್ 12 ರಿಂದ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ಪ್ರತಿನಿಧಿ ಸಭೆಯಲ್ಲಿ, ರಾಮಚರಿತಮಾನಸಗಳಂತಹ ಮಹಾಕಾವ್ಯಗಳಲ್ಲಿ ಅಡಕವಾಗಿರುವ ಜಾತಿ ವ್ಯವಸ್ಥೆ ಕುರಿತಾದ ದೇಶೀಯ ಮತ್ತು ಜಾಗತಿಕ ನಿರೂಪಣೆಗಳನ್ನು ಕುರಿತು ಚರ್ಚಿಸುವ ಸಾಧ್ಯತೆಯಿದೆ. ಜಾತಿ ತಾರತಮ್ಯವನ್ನು ಹೋಗಲಾಡಿಸುವ ಸಂಘದ ಪ್ರಯತ್ನಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗಿದೆ.
ನವದೆಹಲಿ: ಮಾರ್ಚ್ 12 ರಿಂದ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ಪ್ರತಿನಿಧಿ ಸಭೆಯಲ್ಲಿ, ರಾಮಚರಿತಮಾನಸಗಳಂತಹ ಮಹಾಕಾವ್ಯಗಳಲ್ಲಿ ಅಡಕವಾಗಿರುವ ಜಾತಿ ವ್ಯವಸ್ಥೆ ಕುರಿತಾದ ದೇಶೀಯ ಮತ್ತು ಜಾಗತಿಕ ನಿರೂಪಣೆಗಳನ್ನು ಕುರಿತು ಚರ್ಚಿಸುವ ಸಾಧ್ಯತೆಯಿದೆ. ಮೂರು ದಿನಗಳವರೆಗೆ ನಡೆಯುವ ಈ ವಾರ್ಷಿಕ ಸಭೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘ ಪರಿವಾರದ ಹಿರಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಅಮೆರಿಕದ ಸಿಯಾಟಲ್ನಲ್ಲಿ ಜಾತಿ ತಾರತಮ್ಯವನ್ನು ಕಾನೂನುಬಾಹಿರಗೊಳಿಸಲಾಗಿದೆ. ಭಾರತದಲ್ಲಿಯೂ ಕೂಡ ಇದೇ ರೀತಿಯ ಚರ್ಚೆಗಳು ಆರಂಭವಾಗಿದ್ದು, ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು, ರಾಮಚರಿತಮಾನಸದಲ್ಲಿ ದಲಿತರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಇದು ರಾಮಾಯಣವನ್ನು ಆಧರಿಸಿದ ಮತ್ತು 16ನೇ ಶತಮಾನದ ಭಕ್ತರಿಂದ ರಚಿಸಲ್ಪಟ್ಟ ಮಹಾಕಾವ್ಯವಾಗಿದೆ.
ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಪ್ರಕಾರ, ಮಾರ್ಚ್ 12-14 ರಿಂದ ಪಾಣಿಪತ್ ಜಿಲ್ಲೆಯ ಸಮಲ್ಖಾದಲ್ಲಿ ಆರ್ಎಸ್ಎಸ್ ಪ್ರತಿನಿಧಿ ಸಭೆ ನಡೆಯಲಿದೆ. 2022-23ರಲ್ಲಿ ಕೈಗೆತ್ತಿಕೊಂಡ ಸಂಸ್ಥೆಯ ಚಟುವಟಿಕೆಗಳು ಮತ್ತು ಕಾರ್ಯಗಳನ್ನು ಪರಿಶೀಲಿಸುವುದಲ್ಲದೆ, ಮುಂಬರುವ ವರ್ಷದ ಸಂಘದ ಕಾರ್ಯಗಳ ಮಾರ್ಗಸೂಚಿಯನ್ನು ಸಭೆಯು ಚರ್ಚಿಸುತ್ತದೆ. ಸಂಸ್ಥೆಯಲ್ಲಿನ ನಿರ್ಣಾಯಕ ನೇಮಕಾತಿಗಳನ್ನು ಸಹ ಸಭೆಯಲ್ಲಿ ಮಾಡಲಾಗುತ್ತದೆ. 2025ರಲ್ಲಿ ಆರ್ಎಸ್ಎಸ್ನ 100ನೇ ಸಂಸ್ಥಾಪನಾ ವಾರ್ಷಿಕೋತ್ಸವ ಆಚರಣೆಯ ಬಗ್ಗೆಯೂ ಈ ಸಭೆ ಚರ್ಚೆ ನಡೆಸಲಿದೆ.
2025ರ ವೇಳೆಗೆ ಪ್ರತಿ ಮಂಡಲದಲ್ಲಿ ಕನಿಷ್ಠ ಒಂದು ಶಾಖಾವನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರುವ ಆರ್ಎಸ್ಎಸ್, ಇದಕ್ಕಾಗಿ ಸೂಕ್ತ ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ. ಜಾತಿ ವ್ಯವಸ್ಥೆಯು ಹಿಂದೂ ಸಮಾಜದ ಐಕ್ಯತೆಗೆ ಪ್ರಮುಖ ಸವಾಲಾಗಿದ್ದು, ತಾರತಮ್ಯದ ಕಾರಣಕ್ಕೆ ಕೆಳವರ್ಗದ ಜನರು ಅನ್ಯ ಧರ್ಮಗಳತ್ತ ಮುಖ ಮಾಡುತ್ತಿರುವುದನ್ನು ತಡೆಯುವುದು ಆರ್ಎಸ್ಎಸ್ನ ಉದ್ದೇಶವಾಗಿದೆ ಎನ್ನಲಾಗಿದೆ.
ಮೌರ್ಯ ಮತ್ತು ಇತರ ಹಿಂದುಳಿದ ವರ್ಗಗಳ ಗುಂಪುಗಳು, ರಾಮಚರಿತಮಾನಸಗಳಲ್ಲಿನ ಕೆಲವು ಶ್ಲೋಕಗಳು ಜಾತಿಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಿಸುತ್ತವೆ ಎಂದು ದೂರಿವೆ. ಈ ಕಾರಣಕ್ಕೆ ಈ ಮಹಾಕಾವ್ಯವನ್ನು ಸರ್ಕಾರವು ನಿಷೇಧಿಸಬೇಕು ಎಂದು ಈ ಸಮುದಾಯದ ನಾಯಕರು ಒತ್ತಾಯಿಸಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಲ್ಲಿ ಜಾತಿ ಆಧಾರಿತ ತಾರತಮ್ಯದ ಗಂಭೀರತೆಯನ್ನು ದಾಖಲಿಸಲು, ಈಕ್ವಾಲಿಟಿ ಲ್ಯಾಬ್ಸ್ನಂತಹ ಅನೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಕೆಲವರು ಈ ಪ್ರಯತ್ನಗಳನ್ನು ವಿರೋಧಿಸಿದ್ದು, ಇದು ಸಮುದಾಯದಲ್ಲಿ ಆಳವಾದ ವಿಭಜನೆಗೆ ಕಾರಣವಾಗುತ್ತದೆ ಎಂದು ಅಸಮಧಾನ ಹೊರಹಾಕಿದ್ದಾರೆ.
ಜಾತಿ ಆಧಾರಿತ ತಾರತಮ್ಯದ ಸವಾಲನ್ನು ಎದುರಿಸಲು, ಅಂತಹ ಆಚರಣೆಗಳ ವಿರುದ್ಧ ಧ್ವನಿ ಎತ್ತಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಭಾರತದ ಹಳ್ಳಿಗಳನ್ನು ಅಸ್ಪೃಶ್ಯತೆಯಿಂದ ಮುಕ್ತಗೊಳಿಸಲು, 'ಪ್ರಭಾತ್ ಗ್ರಾಮ್ ಮಿಲನ್' ಎಂಬ ಗ್ರಾಮೀಣ ಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಇದು ಕಳೆದ ವಾರಾಂತ್ಯದಲ್ಲಿ ರಾಜಸ್ಥಾನದ ಚಿತ್ತೋರ್ನ ಡುಂಗರ್ಪುರದಲ್ಲಿ ನಡೆದ ಸಭೆಯೊಂದಿಗೆ ಪ್ರಾರಂಭವಾಯಿತು.
ಸಾಮಾಜಿಕ ಸಮಾನತೆಗೆ ಒತ್ತು ನೀಡುವ ಈ ಬೃಹತ್ ಗ್ರಾಮಾಂತರ ಕಾರ್ಯಕ್ರಮವು, ಸಾಮೂಹಿಕ ಪ್ರಯತ್ನದಿಂದ ಜಾತಿ ಆಧಾರಿತ ವ್ಯತ್ಯಾಸಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದೆ. ಸದ್ಯ ದೇಶದಲ್ಲಿ ಸಂಘದಿಂದ ಗುರುತಿಸಲ್ಪಟ್ಟಿರುವ 400 ಪ್ರಭಾತ್ ಗ್ರಾಮಗಳಿವೆ. ಈ ಗ್ರಾಮಗಳು ದೇಶದ ಇತರ ಗ್ರಾಮಗಳಿಗೂ ಮಾದರಿಯಾಗಲಿದೆ. ಸಂಘವು ನೂರಾರು "ಉದಯ್" (ಸೂರ್ಯೋದಯ) ಹಳ್ಳಿಗಳನ್ನು ಸಹ ಹೊಂದಿದ್ದು, ಅಲ್ಲಿ ಅಂತಹ ಪ್ರಯತ್ನಗಳನ್ನು ತ್ವರಿತಗೊಳಿಸಲಾಗಿದೆ ಎಂದು ಆರ್ಎಸ್ಎಸ್ ಮೂಲಗಳು ಖಚಿತಪಡಿಸಿವೆ.
ಸಂಘಟನೆಯ ನಾಯಕತ್ವವು ಈಗಾಗಲೇ ಹಿಂದೂ ಧರ್ಮದರ್ಶಿಗಳಿಗೆ ತಮ್ಮ ಭಕ್ತರೊಂದಿಗೆ ಜಾತಿಯ ಅನಿಷ್ಟದ ಬಗ್ಗೆ ಮಾತನಾಡಲು ವಿನಂತಿಸಿದೆ. "ಪ್ರತಿ ಯುಗಕ್ಕೂ ಒಂದು ನಿರ್ದಿಷ್ಟ ಸಂಹಿತೆ ಇರುತ್ತದೆ. ಮನುಸ್ಮೃತಿಯನ್ನು ಹಲವು ದಶಕಗಳ ಹಿಂದೆ ಬರೆಯಲಾಗಿದೆ. ಪ್ರಾಚೀನ ಗ್ರಂಥಗಳನ್ನು ಇಂದಿನ ಮೌಲ್ಯಗಳಿಂದ ನಾವು ನೋಡಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಮಗೆ ಮಾರ್ಗದರ್ಶನ ನೀಡುವಂತೆ ದಾರ್ಶನಿಕರು ವಿನಂತಿಸಿದ್ದಾರೆ.." ಎಂದು ಸಂಘದ ಪ್ರಮುಖ ನಾಯಕರೊಬ್ಬರು ಹೇಳಿದ್ದಾರೆ.
ವಿಭಾಗ