Ram Mandir: ಸೀತೆಯ ತವರೂರು ನೇಪಾಳದಿಂದ ಅಯೋಧ್ಯೆ ರಾಮಮಂದಿರಕ್ಕೆ ಬರುತ್ತಿದೆ ಬಳುವಳಿ; 1,100 ಬುಟ್ಟಿಗಳಲ್ಲಿದೆ ವಿಶೇಷ ಉಡುಗೊರೆ
Jan 05, 2024 09:32 AM IST
ಅಯೋಧ್ಯೆಯ ರಾಮಮಂದಿರ
- Ayodhya Ram Mandir: ಸೀತೆಯ ತವರೂರು ನೇಪಾಳದಿಂದ ಅಯೋಧ್ಯೆ ರಾಮಮಂದಿರಕ್ಕೆ ವಿಶೇಷ ಉಡುಗೊರೆಗಳನ್ನು ಕಳುಹಿಸಿ ಕೊಡಲಾಗುತ್ತಿದೆ. ಅದೂ ಕೂಡ ಬಳುವಳಿ ರೂಪದಲ್ಲಿ. ಬರೋಬ್ಬರಿ 1,100 ಬುಟ್ಟಿಗಳಲ್ಲಿ ಉಡುಗೊರೆಗಳನ್ನು ಹೊತ್ತ 500 ಜನರ ಮೆರವಣಿಗೆಯು ನೇಪಾಳದ ಜನಕಪುರದಿಂದ ಅಯೋಧ್ಯೆಗೆ ಆಗಮಿಸಲಿದೆ.
ಜನವರಿ 22 ರಂದು ರಾಮ ಮಂದಿರದ ಉದ್ಘಾಟನೆಗೆ ಅಯೋಧ್ಯೆ ಸಜ್ಜಾಗಿದೆ. ಸೀತೆಯ ತವರೂರು ನೇಪಾಳದಿಂದ ಅಯೋಧ್ಯೆ ರಾಮಮಂದಿರಕ್ಕೆ ವಿಶೇಷ ಉಡುಗೊರೆಗಳನ್ನು ಕಳುಹಿಸಿ ಕೊಡಲಾಗುತ್ತಿದೆ. ಅದೂ ಕೂಡ ಬಳುವಳಿ ರೂಪದಲ್ಲಿ. ಬರೋಬ್ಬರಿ 1,100 ಬುಟ್ಟಿಗಳಲ್ಲಿ ಉಡುಗೊರೆಗಳನ್ನು ಹೊತ್ತ 500 ಜನರ ಮೆರವಣಿಗೆಯು ನೇಪಾಳದ ಜನಕಪುರದಿಂದ ಅಯೋಧ್ಯೆಗೆ ಆಗಮಿಸಲಿದೆ.
ಹಿಂದೂ ಸಂಪ್ರದಾಯದಲ್ಲಿ ಮದುವೆಯ ವೇಳೆ ವಧುವಿನ ಕುಟುಂಬದವರು ಬಳುವಳಿಯಾಗಿ ವರನ ಮನೆಗೆ ಒಂದಿಷ್ಟು ವಸ್ತುಗಳನ್ನು ನೀಡುತ್ತಾರೆ. ವಧುವನ್ನು ವರನ ಮನೆಗೆ ಕಳುಹಿಸಿ ಕೊಡುವಾಗ ಬಳುವಳಿ ನೀಡಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ವಧು ಕಡೆಯವರೇ ಆ ವಸ್ತುಗಳನ್ನು ಹೊತ್ತು ಬಂದು ವರನ ಮನೆ ತಲುಪಿಸುತ್ತಾರೆ. ಈ ಆಧುನಿಕ ಯುಗದಲ್ಲಿ ಈ ಸಂಪ್ರದಾಯ ಕೆಲವೆಡೆ ಇಲ್ಲವಾದರೂ ಹಲವೆಡೆ ಇನ್ನೂ ಇದೆ. ರಾಜ-ಮಹಾರಾಜರ ಕಾಲದಲ್ಲೂ ಈ ಸಂಪ್ರದಾಯವಿತ್ತು.
ಹೀಗಾಗಿ ಭಗವಾನ್ ರಾಮನ ಮದುವೆಯ ಉಡುಗೊರೆಯಾಗಿ ಸೀತೆಯ ತವರೂರಾದ ನೇಪಾಳದ ಜನಕ್ಪುರದಿಂದ ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಅಯೋಧ್ಯೆ ರಾಮಮಂದಿರಕ್ಕೆ ಬಳುವಳಿನೀಡಲಾಗುತ್ತಿದೆ. ಜನವರಿ 4 ರಂದು ಜನಕ್ಪುರದ ಜಾನಕಿ ಮಂದಿರದಿಂದ ಉಡುಗೊರೆಗಳನ್ನು ಹೊತ್ತ 500 ಜನರ ಮೆರವಣಿಗೆ ಪ್ರಾರಂಭವಾಗಲಿದ್ದು, ಎರಡು ದಿನಗಳ ನಂತರ ಜನವರಿ 6 ರಂದು ಅಯೋಧ್ಯೆಗೆ ಆಗಮಿಸುವ ನಿರೀಕ್ಷೆಯಿದೆ.
ನೇಪಾಳದಿಂದ ಬರುತ್ತಿರುವ 1,100 ಬುಟ್ಟಿಗಲ್ಲಿ ಆಭರಣಗಳು, ಚಿನ್ನ ಮತ್ತು ಬೆಳ್ಳಿ ವಸ್ತುಗಳು, ಡ್ರೈ ಫ್ರೂಟ್ಸ್, ಪಾತ್ರೆಗಳು, ಬಟ್ಟೆ, ಸೌಂದರ್ಯವರ್ಧಕಗಳು ಮತ್ತು ಅಕ್ಕಿ ಹಾಗೂ ಇತರ ಧಾನ್ಯಗಳು ಇರಲಿದೆ. ಅಯೋಧ್ಯೆ ಸ್ಥಳೀಯ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸುವ ಜನರಿಗೆ ವಸತಿ ವ್ಯವಸ್ಥೆ ಮಾಡಿದ್ದಾರೆ.
ಜನಕಪುರ ಮತ್ತು ಅಯೋಧ್ಯೆ ನಡುವೆ 458 ಕಿ.ಮೀ. ಅಂತರವಿದೆ. ಸುಮಾರು 30 ಕಾರುಗಳು ಮತ್ತು ಐದು ಬಸ್ಗಳನ್ನು ಒಳಗೊಂಡಿರುವ ಮೆರವಣಿಗೆಯು ಉಡುಗೊರೆಗಳನ್ನು ಸಾಗಿಸುತ್ತದೆ. ಜನವರಿ 6 ರಂದು ಬೆಳಿಗ್ಗೆ 8 ಗಂಟೆಗೆ ರಾಮಮಂದಿರದ ಟ್ರಸ್ಟಿಗಳಿಗೆ ಈ ವಿಶೇಷ ಉಡುಗೊರೆಗಳನ್ನು ನೀಡಲು ಯೋಜಿಸಲಾಗಿದೆ.