Kashmiri Pandits: ವೇತನವಿಲ್ಲದ 284 ದಿನಗಳು, ಪಿಎಂ ಪ್ಯಾಕೇಜ್ ಪಡೆದ ಕಾಶ್ಮೀರ ಪಂಡಿತರಿಗೆ ಸ್ಯಾಲರಿಯೇ ಆಗಿಲ್ಲವಂತೆ!
Feb 14, 2023 06:11 AM IST
Kashmiri Pandits: ಪಿಎಂ ಪ್ಯಾಕೇಜ್ ಪಡೆದ ಕಾಶ್ಮೀರ ಪಂಡಿತರಿಗೆ ಸ್ಯಾಲರಿಯೇ ಆಗಿಲ್ಲವಂತೆ! (Shilpa Thakur)
- PM package for kashmiri migrants: “ಶಿವರಾತ್ರಿ ಹಬ್ಬ ಹತ್ತಿರದಲ್ಲಿದೆ. ಕಳೆದ 284 ದಿನಗಳಿಂದ ನಮಗೆ ವೇತನ ಬಿಡುಗಡೆಯಾಗಿಲ್ಲ. ಬದುಕು ಕಷ್ಟವಾಗಿದೆ” ಎಂದು ಪಿಎಂ ಪ್ಯಾಕೇಜ್ ಪಡೆದಿರುವ ಕಾಶ್ಮೀರಿ ಪಂಡಿತರು ಮತ್ತು ಮೀಸಲು ವರ್ಗದ ನೌಕರರು ಪ್ರತಿಭಟನೆ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ: ಕಾಶ್ಮೀರದಿಂದ ಜಮ್ಮುವಿನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಬೇಡಿಕೆಯನ್ನು ನೂರಾರು ಕಾಶ್ಮೀರಿ ಪಂಡಿತರು ಇಟ್ಟಿದ್ದಾರೆ. ಕಾಶ್ಮೀರದ ಪಿಎಂ ಪ್ಯಾಕೇಜ್ ಉದ್ಯೋಗಿಗಳು ಮತ್ತು ಮೀಸಲು ವರ್ಗದ ನೌಕರರು ನಿನ್ನೆ ಪ್ರತಿಭಟನೆ ನಡೆಸಿದ್ದು, ಫೆಬ್ರವರಿ 18 ರ‘ಮಹಾ ಶಿವರಾತ್ರಿ’ ಹಬ್ಬವಿರುವುದರಿಂದ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ತಮ್ಮ ಸಹೋದ್ಯೋಗಿಗಳಾದ ರಾಹುಲ್ ಭಟ್ ಮತ್ತು ರಜಿನಿ ಬಾಲಾರನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಪಿಎಂ ಪ್ಯಾಕೇಜ್ ಪಡೆದ ಉದ್ಯೋಗಿಗಳು ಮತ್ತು ಜಮ್ಮು ಮೂಲದ ಮೀಸಲು ವರ್ಗದ ನೌಕರರು ಜಮ್ಮುವಿಗೆ ಪಲಾಯನ ಮಾಡಿದ್ದರು.
ಮೇ 12 ರಂದು ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಕಚೇರಿಯೊಳಗೆ ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅದೇ ತಿಂಗಳು (ಮೇ 31 ರಂದು) ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶಾಲಾ ಶಿಕ್ಷಕ ರಜಿನಿ ಬಾಲಾ ಅವರನ್ನು ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
"ಸರ್ಕಾರವು ನಮ್ಮನ್ನು ಜಮ್ಮುವಿಗೆ ಸ್ಥಳಾಂತರಿಸಬೇಕೆಂದು ಮತ್ತೆ ಕೇಳಿಕೊಳ್ಳುತ್ತಿದ್ದೇವೆ ಮತ್ತು ಮಹಾಶಿವರಾತ್ರಿ ಹಬ್ಬವಿರುವುದರಿಂದ ಇನ್ನೂ ಪಾವತಿಸದೆ ಇರುವ ನಮ್ಮ ಬಾಕಿ ಸಂಬಳವನ್ನು ಬಿಡುಗಡೆ ಮಾಡಬೇಕೆಂದು ನಾವು ಬಯಸುತ್ತೇವೆ" ಎಂದು ಉದ್ಯೋಗಿ ರಾಹುಲ್ ಕೌಲ್ ಹೇಳಿದ್ದಾರೆ.
ಕಳೆದ 284 ದಿನಗಳಿಂದ ವೇತನವಿಲ್ಲದೇ ನಮ್ಮ ಕುಟುಂಬಗಳು ಅಪಾರ ಸಂಕಷ್ಟಕ್ಕೆ ಸಿಲುಕಿವೆ ಎಂದು ಮತ್ತೊಬ್ಬ ಉದ್ಯೋಗಿ ಹೇಳಿದ್ದಾರೆ.
ಬೆರಳೆಣಿಕೆಯಷ್ಟು ಕಾಶ್ಮೀರಿ ಪಂಡಿತ ಉದ್ಯೋಗಿಗಳು ಮಾತ್ರ ಕಣಿವೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹೆಚ್ಚಿನವರು ಇನ್ನೂ ಜಮ್ಮುವಿನಲ್ಲಿದ್ದಾರೆ ಎಂದು ಅವರು ಹೇಳಿದರು. ಪ್ರತಿಭಟನೆಯ ಸಂದರ್ಭದಲ್ಲಿ ರಾಜಭವನದಲ್ಲಿ ನೌಕರರು ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವು "ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್" ಪರಿಚಯಿಸಿತ್ತು. ಈ ಯೋಜನೆಯಡಿ ಸುಮಾರು 3 ಸಾವಿರ ಕಾಶ್ಮೀರಿ ಪಂಡಿತರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಯಿತು. ವಲಸಿಗರಲ್ಲದ ಕಾಶ್ಮೀರಿ ಹಿಂದೂಗಳಿಗೂ ಈ ಯೋಜನೆ ವಿಸ್ತರಿಸಲಾಯಿತು.
"ಕೇಂದ್ರ ಸರಕಾರವು ಪ್ರಧಾನಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ನಡಿ 3 ಸಾವಿರ ಕಾಶ್ಮೀರಿ ವಲಸಿಗರಿಗೆ ಉದ್ಯೋಗ ನೀಡಿದೆ. ಆರು ಸಾವಿರ ವಲಸಿಗ ನೌಕರರಿಗಾಗಿ ಆರು ಸಾವಿರ ವಸತಿಗಳನ್ನು ನಿರ್ಮಿಸುವ ನಿರ್ಮಿಸುವ ಕಾಮಗಾರಿ ಆರಂಭಿಸಲಾಗಿದೆ" ಎಂದು ಕಳೆದ ವರ್ಷ ಫೆಬ್ರವರಿಯಲ್ಲಿ ಸರಕಾರವು ರಾಜ್ಯಸಭೆಯಲ್ಲಿ ಉತ್ತರ ನೀಡಿತ್ತು.
ಬಳಿಕ ಅಲ್ಲಿ ಸರಕಾರಿ ನೌಕರರ ಹತ್ಯೆಯಾಗಿತ್ತು. ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಪಂಡಿತ್ ಕುಟುಂಬಕ್ಕೆ ಸೇರಿದ ಶಿಕ್ಷಕಿ ರಜನಿ ಬಾಲಾ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಇದಕ್ಕೂ ಮುನ್ನ ಭಯೋತ್ಪಾದಕರು ರಾಹುಲ್ ಭಟ್ ಎಂಬ ಸರ್ಕಾರಿ ನೌಕರ ಮತ್ತು ಅಮ್ರೀನ್ ಭಟ್ ಎಂಬ ಕಿರುತೆರೆ ನಟಿಯನ್ನು ಕೊಂದಿದ್ದರು. ಈ ಮೂಲಕ ಅಲ್ಲಿ ಉದ್ಯೋಗದಲ್ಲಿರುವ ಕಾಶ್ಮೀರಿ ಪಂಡಿತರು ಮತ್ತು ವಲಸಿಗರಲ್ಲಿ ಭೀತಿ ಹುಟ್ಟಿಸಲು ಪ್ರಯತ್ನಿಸಿದ್ದರು.
ಪ್ರಧಾನಮಂತ್ರಿ ಪುನರ್ವಸತಿ ಪ್ಯಾಕೇಜ್ (ಪಿಎಂಆರ್ಪಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತರು ಕೇಂದ್ರ ಸರ್ಕಾರ ತಮಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಲು ಆರಂಭಿಸಿದ್ದರು. ಸಾಕಷ್ಟು ಜನರು ಜಮ್ಮುವಿಗೆ ಮತ್ತೆ ವಾಪಸ್ ಆಗಿದ್ದರು.