Karnataka vs Namibia: ನಮೀಬಿಯಾ ಅಂತಾರಾಷ್ಟ್ರೀಯ ತಂಡದ ವಿರುದ್ಧ ಸರಣಿ ಆಡಲಿದೆ ಕರ್ನಾಟಕ; ವೇಳಾಪಟ್ಟಿ ಹೀಗಿದೆ
Jun 01, 2023 07:00 AM IST
ಕರ್ನಾಟಕ ತಂಡ
- Karnataka tour of Namibia: ನಮೀಬಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ ಏಕದಿನ ಸರಣಿ ಆಡಲು ಕರ್ನಾಟಕ ಕ್ರಿಕೆಟ್ ತಂಡ ಪ್ರವಾಸ ಕೈಗೊಂಡಿದೆ. ಜೂನ್ 2ರಂದು ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವು ವಿಂಡ್ಹೋಕ್ನಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು (Karnataka cricket team) ನಮೀಬಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧದ ಏಕದಿನ ಸರಣಿಗಾಗಿ ಸಜ್ಜಾಗಿದೆ. ಐದು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು, ರಾಜ್ಯ ಕ್ರಿಕೆಟ್ ತಂಡವು ಕಳೆದ ಮಂಗಳವಾರ(ಮೇ 30) ರಂದು ನಮೀಬಿಯಾಗೆ ಪ್ರಯಾಣ(Karnataka tour of Namibia) ಬೆಳೆಸಿದೆ.
ಕರ್ನಾಟಕ ರಾಜ್ಯ ತಂಡವು ದೇಶೀಯ ತಂಡವಾಗಿದ್ದು, ನಮೀಬಿಯಾ ಅಂತಾರಾಷ್ಟ್ರೀಯ ತಂಡವಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ತಂಡದ ವಿರುದ್ಧ ಕರ್ನಾಟಕ ತಂಡ ಆಡುತ್ತಿರುವುದು ವಿಶೇಷ. ಜೂನ್ 2ರಂದು ಸರಣಿ ಆರಂಭವಾಗಲಿದೆ. ಒಟ್ಟು ಐದು ಪಂದ್ಯಗಳ ಸರಣಿ ಇದಾಗಿದ್ದು, ಪಂದ್ಯಗಳು ನಮೀಬಿಯಾದ ರಾಜಧಾನಿ ವಿಂಡ್ಹೋಕ್ನಲ್ಲಿ ನಡೆಯಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ 1992ರಿಂದ ಸದಸ್ಯ ರಾಷ್ಟ್ರವಾಗಿರುವ ನಮೀಬಿಯಾ, ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳ ವಿರುದ್ಧ ಆಡಿದೆ. ಇದೇ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ನಮೀಬಿಯಾ ವಿಫಲವಾಯಿತು. ಈ ವರ್ಷದ ಮಾರ್ಚ್ನಲ್ಲಿ ನಡೆದ ಕ್ವಾಲಿಫೈಯರ್ನಲ್ಲಿ ಮೂರನೇ ಸ್ಥಾನ ಗಳಿಸಿತ್ತು.
ಕರ್ನಾಟಕ ತಂಡವು ಅಂತಾರಾಷ್ಟ್ರೀಯ ತಂಡದೊಂದಿಗೆ ಆಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ಯುಎಸ್ಎ ವಿರುದ್ಧ ಸೀಮಿತ ಓವರ್ಗಳ ಸರಣಿಯಲ್ಲಿ ಕರ್ನಾಟಕ ಗೆದ್ದಿತ್ತು. ಅದಾದ ಬಳಿಕ ರಾಜ್ಯ ತಂಡವು ಇದು ಎರಡನೇ ಬಾರಿಗೆ ಅಂತಾರಾಷ್ಟ್ರೀಯ ತಂಡವೊಂದರ ವಿರುದ್ಧ ಕಣಕ್ಕಿಳಿಯುತ್ತಿದೆ.
ಪಂದ್ಯಗಳು ಯಾವಾಗ?
ಏಕದಿನ ಸರಣಿಯು ಒಟ್ಟು ಐದು ಪಂದ್ಯಗಳನ್ನು ಒಳಗೊಂಡಿದೆ. ಜೂನ್ 2ರಂದು ಮೊದಲ ಪಂದ್ಯ ನಡೆದರೆ, ಎರಡನೇ ಪಂದ್ಯ 4ರಂದು ನಡೆಯಲಿದೆ. ಜೂನ್ 7, 9 ಮತ್ತು 11ರಂದು ಕ್ರಮವಾಗಿ ಮೂರು, ನಾಲ್ಕು ಹಾಗೂ ಕೊನೆಯ ಏಕದಿನ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳು ಮಧ್ಯಾಹ್ನ 1.00 ಗಂಟೆಗೆ ಆರಂಭವಾಗಲಿವೆ. ಅಲ್ಲದೆ ಎಲ್ಲಾ ಐದು ಪಂದ್ಯಗಳು ವಿಂಡ್ಹೋಕ್ ನಗರದಲ್ಲಿ ನಡೆಯಲಿವೆ.
ಕರ್ನಾಟಕ ತಂಡದಲ್ಲಿ ಬಹುತೇಕ ಯುವ ಆಟಗಾರರೇ ತುಂಬಿದ್ದಾರೆ. ತಂಡವನ್ನು ಆರಂಭಿಕ ಆಟಗಾರ ಆರ್ ಸಮರ್ಥ್ ಮುನ್ನಡೆಸುವ ಸಾಧ್ಯತೆಯಿದೆ. ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದ ವಿಜಯ್ ವೈಶಾಖ್ ಕೂಡಾ ತಂಡದಲ್ಲಿದ್ದಾರೆ. ತಂಡದ ಕೋಚ್ ಆಗಿ ಪಿವಿ ಶಶಿಕಾಂತ್ ಅವರು ತಂಡದೊಂದಿಗೆ ನಮೀಬಿಯಾಗೆ ಪ್ರಯಾಣಿಸಿದ್ದಾರೆ.
ಕರ್ನಾಟಕ ತಂಡ ಹೀಗಿದೆ
ಸಮರ್ಥ್ ಆರ್, ವಿಶಾಲ್ ಓನಟ್, ನಿಕಿನ್ ಜೋಸ್, ಕೆವಿ ಸಿದ್ಧಾರ್ಥ್, ಕಿಶನ್ ಬಿದರೆ, ಕೃತಿಕ್ ಕೃಷ್ಣ, ಶುಭಾಂಗ್ ಹೆಗ್ಡೆ, ವೈಶಾಕ್ ವಿಜಯ್ಕುಮಾರ್, ವಿದ್ವತ್ ಕಾವೇರಪ್ಪ, ಅನೀಶ್ವರ್ ಗೌತಮ್, ಲೋಚನ್ ಅಪ್ಪಣ್ಣ, ಚೇತನ್ ಎಲ್ಆರ್, ಆದಿತ್ಯ ಗೋಯಲ್, ರಿಷಿ ಬೊಪ್ಪಣ್ಣ.
2019ರ ವಿಶ್ವಕಪ್ ತಂಡದಿಂದ ರಾಯುಡು ಅವರನ್ನು ಡ್ರಾಪ್ ಮಾಡಿರುವುದು ದೊಡ್ಡ ಪ್ರಮಾದ ಎಂದು ಕುಂಬ್ಳೆ ಹೇಳಿದ್ದಾರೆ. ವಿಶ್ವಕಪ್ ನಡೆದು ವರ್ಷಗಳು ಕಳೆದಿವೆ. ಆದರೆ, ರಾಯುಡುಗೆ ಅವಕಾಶಗಳೇ ಸಿಗಲಿಲ್ಲ. ರಾಯುಡುಗೆ ಇಂಗ್ಲೆಂಡ್ ವಿಮಾನವೇರುವ ಅವಕಾಶ ನೀಡದಿರುವುದು ದೊಡ್ಡ 'ಪ್ರಮಾದ' ಎಂದು ಭಾರತದ ದಿಗ್ಗಜ ಬೌಲರ್ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ