T20 World Cup 2022: 'ಭಾರತ ಎಡವಟ್ಟು ಮಾಡಿತು, ಅವರಿಗೆ ತಲೆ ಇದ್ರೆ ಬೂಮ್ರಾ ಸ್ಥಾನಕ್ಕೆ ಈ ಬೌಲರ್ ಸೂಕ್ತ'
Sep 30, 2022 05:14 PM IST
ಜಸ್ಪ್ರೀತ್ ಬೂಮ್ರಾ
- ಟಿ20 ವಿಶ್ವಕಪ್ಗೆ ಭಾರತವು ಬೂಮ್ರಾ ಬದಲಿಗೆ ಸೂಕ್ತ ಆಟಗಾರನನ್ನು ಹೊಂದಿದೆ ಎಂದು ಪಾಕಿಸ್ತಾನದ ಮಾಜಿ ಬೌಲರ್ ಆಕಿಬ್ ಜಾವೇದ್ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಿಂದ ವೇಗಿ ಜಸ್ಪ್ರೀತ್ ಬೂಮ್ರಾ ಭಾಗಶಃ ಹೊರಬಿದ್ದಿದ್ದಾರೆ. ಬೆನ್ನುನೋವಿನ ಕಾರಣದಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಉಳಿದೆರಡು ಪಂದ್ಯಗಳಿಂದ ಭಾರತದ ಅನುಭವಿ ವೇಗಿ ಹೊರಗುಳಿದಿದ್ದಾರೆ. ಟಿ20 ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಇದು ಎರಡನೇ ಗಾಯದ ಹೊಡೆತ. ಬುಮ್ರಾ ಮತ್ತು ರವೀಂದ್ರ ಜಡೇಜಾ ಇಬ್ಬರೂ, ತಮ್ಮ ಗಾಯಗಳಿಂದಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿಯಲಿದ್ದಾರೆ.
ಬೂಮ್ರಾ ಸ್ಥಾನಕ್ಕೆ ಸೂಕ್ತ ಬದಲಿ ಆಟಗಾರನ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಹಿರಿಯರ ಆಯ್ಕೆ ಸಮಿತಿಯು ಭಾರತದ ವಿಶ್ವಕಪ್ ತಂಡಕ್ಕೆ ಸೂಕ್ತ ಆಟಗಾರನನ್ನು ಆಯ್ಕೆ ಮಾಡಲಿದೆ. ಈ ನಡುವೆ ಜಾಗತಿಕ ಮಟ್ಟದಲ್ಲಿ ಈ ಸ್ಥಾನಕ್ಕೆ ಸೂಕ್ತ ಆಟಗಾರ ಯಾರು ಎಂಬ ಚರ್ಚೆ ನಡೆಯುತ್ತಿದೆ.
ಟಿ20 ವಿಶ್ವಕಪ್ಗೆ ಭಾರತವು ಬೂಮ್ರಾ ಬದಲಿಗೆ ಸೂಕ್ತ ಆಟಗಾರರನ್ನು ಹೊಂದಿದೆ ಎಂದು ಪಾಕಿಸ್ತಾನದ ಮಾಜಿ ಬೌಲರ್ ಆಕಿಬ್ ಜಾವೇದ್ ಹೇಳಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ 150+ ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಕ್ರಿಕೆಟ್ ಲೋಕದಲ್ಲಿ ಅಚ್ಚರಿ ಮೂಡಿಸಿದ್ದ ವೇಗಿ ಉಮ್ರಾನ್ ಮಲಿಕ್, ಈ ಸ್ಥಾನಕ್ಕೆ ಸೂಕ್ತ ಎಂದು ಜಾವೇದ್ ಹೇಳುತ್ತಾರೆ.
“ಕಳೆದ ಐಪಿಎಲ್ ಮುಗಿದ ಬಳಿಕ, ಭಾರತವು ತಪ್ಪು ಮಾಡಿದೆ ಎಂದು ನಾನು ಭಾವಿಸುತ್ತೇನೆ. ಉಮ್ರಾನ್ ಮಲಿಕ್ ಆಕ್ರಮಣಕಾರಿ ಆಟಗಾರ. ಅಲ್ಲದೆ ಅವರು ವೇಗದ ಬೌಲರ್. ಸ್ಪಿನ್ನರ್ ಅಥವಾ ಬ್ಯಾಟ್ಸ್ಮನ್ಗಳನ್ನು ತಂಡಕ್ಕೆ ಕರೆತರುವ ಮೊದಲು ಎರಡು ಸೀಸನ್ಗಳವರೆಗೆ ಅವರ ಆಟವನ್ನು ಪರೀಕ್ಷಿಸಬಹುದು. ಆದರೆ ವೇಗದ ಬೌಲರ್ಗಳ ವಿಷಯಕ್ಕೆ ಬಂದಾಗ, ನೀವು ಭಯಪಡಬೇಕಾಗಿಲ್ಲ. ಅವರನ್ನು ತಕ್ಷಣವೇ ತಂಡಕ್ಕೆ ಕರೆತರಬೇಕು” ಎಂದು ಜಾವೇದ್ ವಾಹಿನಿಯೊಂದಕ್ಕೆ ಹೇಳಿದ್ದಾರೆ.
ಅತಿ ವೇಗದ ಬೌಲರ್ಗಳು ಟಿ20 ಪಂದ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಭಾರತವು ಉಮ್ರಾನ್ ಮಲಿಕ್ ಅನ್ನು ಆಯ್ಕೆ ಮಾಡುವ ಅಗತ್ಯವಿದೆ. ಈಗ ಅವರು ಭಾರತ 'ಎ' ತಂಡದ ಪರ ಆಡುತ್ತಿದ್ದಾರೆ. ಅವರು ಹಿರಿಯರ ತಂಡದೊಂದಿಗೆ ಆಡಬೇಕು. ಆಸ್ಟ್ರೇಲಿಯಾದಲ್ಲಿ ಚೆಂಡು ಸೀಮ್ ಅಥವಾ ಸ್ವಿಂಗ್ ಆಗುವುದಿಲ್ಲ. ಅಲ್ಲಿ ಶುಷ್ಕ ಪರಿಸ್ಥಿತಿಗಳಿವೆ. ಇಲ್ಲಿ ಅವರ ಬೌಲಿಂಗ್ ಯಶಸ್ವಿಯಾಗಲಿದೆ ಎಂದು ಜಾವೇದ್ ಹೇಳಿದ್ದಾರೆ.
ಇನ್ನೊಂದೆಡೆ, ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್, ಬೂಮ್ರಾ ಸ್ಥಾನಕ್ಕೆ ದೀಪಕ್ ಚಹಾರ್ ಸೂಕ್ತ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದಾರೆ. “ಬುಮ್ರಾ ಫಿಟ್ ಆಗದಿದ್ದರೆ, ನೀವು ದೀಪಕ್ ಚಹಾರ್ ಅವರನ್ನು ತಂಡಕ್ಕೆ ಕರೆತರಬೇಕು. ಅವರು ಸ್ಟ್ಯಾಂಡ್ಬೈ ಲಿಸ್ಟ್ನಲ್ಲಿದ್ದಾರೆ. ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಒತ್ತಡವನ್ನು ನಿಭಾಯಿಸುವ ಆಟಗಾರರ ಅಗತ್ಯವಿದೆ. ಹೀಗಾಗಿ, ಅರ್ಷದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ಅವರಿಗೆ ಅವಕಾಶಗಳು ಸಿಕ್ಕಿರುವುದು ಒಳ್ಳೆಯದು” ಎಂದು ಕರೀಮ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿರುವುದರಿಂದ ಅವರ ಬದಲಾಗಿ ಮೊಹಮ್ಮದ್ ಸಿರಾಜ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಆದರೆ, ವಿಶ್ವಕಪ್ ತಂಡಕ್ಕೆ ಆಐಕೆಯ ಬಗ್ಗೆ ಇನ್ನೂ ಸ್ಪಷ್ಟ ಪಾಹಿತಿ ನೀಡಿಲ್ಲ.
ವಿಭಾಗ