ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shakunis Dice: ಗಾಂಧಾರಿ ಸಹೋದರನಿಗೆ ತಿಳಿದಿತ್ತು ತಾಂತ್ರಿಕ ವಿದ್ಯೆ; ಮಹಾಭಾರತದ ಶಕುನಿಯ ಮಾಂತ್ರಿಕ ದಾಳದ ರಹಸ್ಯವಿದು

Shakunis Dice: ಗಾಂಧಾರಿ ಸಹೋದರನಿಗೆ ತಿಳಿದಿತ್ತು ತಾಂತ್ರಿಕ ವಿದ್ಯೆ; ಮಹಾಭಾರತದ ಶಕುನಿಯ ಮಾಂತ್ರಿಕ ದಾಳದ ರಹಸ್ಯವಿದು

Mahabharata Story: ಪ್ರತಿ ಬಾರಿ ಮಹಾಭಾರತದ ಕಥೆಗಳನ್ನು ಕೇಳುವಾಗ ಹಲವು ಸಂಗತಿಗಳು ವಿಸ್ಮಯ ಎನ್ನಿಸುತ್ತವೆ. ಅವುಗಳಲ್ಲಿ ಶಕುನಿಯ ದಾಳವೂ ಒಂದು. ಶಕುನಿಯ ದಾಳಗಳಲ್ಲಿ ವಿಶೇಷ ಮಾಂತ್ರಿಕ ಶಕ್ತಿ ಇತ್ತು. ಆ ದಾಳಗಳು ಅವನ ಸೂಚನೆಯನ್ನು ಪಾಲಿಸುತ್ತಿದ್ದವು ಎಂದೆಲ್ಲಾ ಕೇಳಿದ್ದೇವೆ. ಮಹಾಭಾರತದ ಶಕುನಿಯ ಮಾಂತ್ರಿಕ ದಾಳದ ರಹಸ್ಯದ ಕಥೆ ತಿಳಿಯಲು ಮುಂದೆ ಓದಿ. (ಬರಹ: ಅರ್ಚನಾ ವಿ. ಭಟ್‌)

ಮಹಾಭಾರತದ ಶಕುನಿಯ ಮಾಂತ್ರಿಕ ದಾಳದ ರಹಸ್ಯವಿದು
ಮಹಾಭಾರತದ ಶಕುನಿಯ ಮಾಂತ್ರಿಕ ದಾಳದ ರಹಸ್ಯವಿದು (PC: Quora)

ಹಿಂದೂ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದ ಕಥೆ ಯಾರಿಗೆ ಗೊತ್ತಿಲ್ಲ. ಕಥೆ ಕೇಳಿದ ಪ್ರತಿಯೊಬ್ಬರಿಗೂ ಅದರಲ್ಲಿ ಬರುವ ಪ್ರತಿ ಪಾತ್ರಗಳು ಅವರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವಂತಹ ಮಹಾನ್‌ ಕಾವ್ಯವದು. ಮಹಾಭಾರತ ಕಥೆಯಲ್ಲಿ ಕೃಷ್ಣ, ಅರ್ಜುನ, ಪಾಂಡವರು, ಕೌರವರು, ದ್ರಾಪದಿ, ಗಾಂಧಾರಿ, ದೃತರಾಷ್ಟ್ರ, ಸಂಜಯ, ಕರ್ಣ ಮುಂತಾದವರ ಹಾಗೆ ಶಕುನಿಗೂ ಸ್ಥಾನವಿದೆ. ತನ್ನ ನಡೆ–ನುಡಿ, ಕುತಂತ್ರಗಳಿಂದಲೇ ಹೆಸರು ಗಳಿಸಿದವನು ಗಾಂಧಾರಿಯ ಸಹೋದರ. ಶಕುನಿ ಎಂದಾಕ್ಷಣ ಕಪ್ಪು ಬಟ್ಟೆ ಧರಿಸಿ, ಒಂದು ಕಾಲನ್ನು ಎಳೆಯುವ, ಕೈಯಲ್ಲಿ ಸದಾ ದಾಳಗಳನ್ನು ಹಿಡಿದಿರುವ ವ್ಯಕ್ತಿಯ ಚಿತ್ರಣ ನಮ್ಮ ಕಣ್ಣೆದುರಿಗೆ ಬರುತ್ತದೆ. ಪ್ರತಿಸಲ ಮಹಾಭಾರತ ಕಥೆಗಳನ್ನು ಕೇಳುವಾಗ ಅನೇಕ ಸಂಗತಿಗಳು ರಹಸ್ಯದಂತೆ ತೋರುತ್ತದೆ. ಅವುಗಳಲ್ಲಿ ಶಕುನಿಯ ದಾಳವೂ ಒಂದು. ಶಕುನಿಯ ದಾಳಗಳಲ್ಲಿ ಮಾಂತ್ರಿಕ ಶಕ್ತಿ ಇತ್ತು. ಆ ದಾಳಗಳು ಶಕುನಿಯ ಮಾತನ್ನು ಮಾತ್ರ ಕೇಳುತ್ತಿದ್ದವು. ಅವನು ಏನು ಸೂಚನೆಗಳನ್ನು ನೀಡುತ್ತಿದ್ದನೋ ಅದನ್ನು ಅನುಸರಿಸುತ್ತಿದ್ದವು. ಮಹಾಭಾರತದಲ್ಲಿ ಶಕುನಿಯ ಮಾಂತ್ರಿಕ ದಾಳದ ರಹಸ್ಯದ ಕಥೆ ಹೀಗಿದೆ.

ಶಕುನಿಯ ದ್ವೇಷಕ್ಕೆ ಕಾರಣವಿದು

ಶಕುನಿಯ ದಾಳದಲ್ಲಿ ಮಾಂತ್ರಿಕ ಶಕ್ತಿ ಅಡಗಿತ್ತು ಎಂದು ಮಹಾಭಾರತದ ಕಥೆ ಹೇಳುತ್ತದೆ. ಗಾಂಧಾರ ದೇಶದ ರಾಜಕುಮಾರನಾದ ಶಕುನಿಗೆ ತನ್ನ ತಂಗಿ ಗಾಂಧಾರಿಯು ಅಂಧನಾಗಿದ್ದ ಧೃತರಾಷ್ಟ್ರನನ್ನು ಮದುವೆಯಾಗುತ್ತಿದ್ದಾಳೆಂದು ತಿಳಿದಾಗ, ಅವನು ಆ ಮದುವೆಯನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನಪಡುತ್ತಾನೆ. ಆದರೂ ಆ ಮದುವೆಯನ್ನು ನಿಲ್ಲಿಸಲಾಗಲಿಲ್ಲ. ಧೃತರಾಷ್ಟ್ರನನ್ನು ಮದುವೆಯಾದ ಗಾಂಧಾರಿ ಹಸ್ತಿನಾಪುರಕ್ಕೆ ಬರುತ್ತಾಳೆ. ಗಂಡನಿಗೆ ಕಣ್ಣು ಕಾಣಿಸುವುದಿಲ್ಲ ಎಂದು ತಿಳಿದ ಗಾಂಧಾರಿ ತನ್ನ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾಳೆ. ಇದನ್ನು ಸಹಿಸದ ಶಕುನಿ, ತನ್ನ ಪ್ರಿಯ ಸಹೋದರಿಗೆ ಮಾಡಿದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಹಸ್ತಿನಾಪುರಕ್ಕೆ ಬರುತ್ತಾನೆ. ಪಾಂಡವರ ವಿರುದ್ಧ ತನ್ನ ಸೋದರಳಿಯರಿಗೆ ಅಂದರೆ ಗಾಂಧಾರಿ ಮತ್ತು ಧೃತರಾಷ್ಟ್ರನ 100 ಪುತ್ರರ ಮನಸ್ಸಿನಲ್ಲಿ ಪಾಂಡವರ ವಿರುದ್ಧ ವಿಷದ ಬೀಜ ಬಿತ್ತುತ್ತಾನೆ. ಹಾಗೆ ಬಿತ್ತಿದ ವಿಷ ಬೀಜವೇ ಮುಂದೆ ದ್ವೇಷ, ಅಸೂಯೆಯ ಹೆಮ್ಮರವಾಗಿ ಬೆಳೆದು, ಕೌರವರು ಮತ್ತು ಪಾಂಡವರು ಸಹೋದರರಾಗಿದ್ದರೂ ಕೂಡಾ ತಮ್ಮತಮ್ಮಲ್ಲೇ ಹೋರಾಡುವಂತಾಗುತ್ತದೆ.

ಶಕುನಿಯ ಮಾಂತ್ರಿಕ ದಾಳದ ರಹಸ್ಯವೇನು?

ಶಕುನಿಯು ತಂತ್ರ ವಿದ್ಯೆಯಲ್ಲಿ ಪರಿಣಿತನಾಗಿದ್ದನು. ತನ್ನ ಮಾತು ಕೇಳುವ, ಸೂಚನೆ ಪಾಲಿಸುವ ಮತ್ತು ಅವನ ಹಾವಭಾವದಿಂದ ನಿಯಂತ್ರಿಸಲ್ಪಡುವಂತಹ ದಾಳಗಳನ್ನು ಅವನು ರಚಿಸಿದ್ದನು. ಆ ಮಾಂತ್ರಿಕ ದಾಳಗಳನ್ನು ತಯಾರಿಸುವಾಗ, ದುಷ್ಟ ಶಕ್ತಿಗಳ ಪ್ರಭಾವ ಅದರಲ್ಲಿರಲೆಂದು ಶಕುನಿಯು ಮಾನವನ ಬೆರಳುಗಳನ್ನು ಬಳಸಿದನು ಎಂದು ಹೇಳಲಾಗುತ್ತದೆ. ಹಾಗಾಗಿ ಆ ದಾಳಗಳು ಶಕುನಿಯ ಸೂಚನೆಗಳನ್ನು ಪಾಲಿಸುತ್ತಿದ್ದವು. ಈ ಕಾರಣಕ್ಕಾಗಿಯೇ ಹಸ್ತಿನಾಪುರದಲ್ಲಿ ಪಾಂಡವರು ಮತ್ತು ಕೌರವರ ಮಧ್ಯೆ ನಡೆದ ದ್ಯೂತದಲ್ಲಿ ಶಕುನಿಯು ಅದೇ ದಾಳಗಳನ್ನು ಬಳಸಿದನು. ಅವನ ಸೂಚನೆಯನ್ನು ಪಾಲಿಸುತ್ತಿದ್ದ ದಾಳಗಳು ಪಗಡೆಯಾಟದಲ್ಲಿ ಕೌರವರಿಗೆ ನೆರವಾದವು. ಆಟದಲ್ಲಿ ಕೌರವರು ದಾಳವನ್ನು ಎಸೆದಾಗ ಶಕುನಿ ಯಾವ ಸಂಖ್ಯೆಯನ್ನು ಹೇಳುತ್ತಿದ್ದನೋ ಅದೇ ಸಂಖ್ಯೆ ಕೌರವರ ಪರವಾಗಿ ಹೊರಹೊಮ್ಮುತ್ತಿತ್ತು. ಕೌರವರಿಂದ ಪಾಂಡವರು ಸೋಲಲ್ಪಟ್ಟರು. ಶಕುನಿಯ ಮಾಂತ್ರಿಕ ದಾಳ ಪಾಂಡವರ ವನವಾಸಕ್ಕೆ ಕಾರಣವಾಯಿತು. ಅದೇ ಮುಂದೆ ಮಹಾಭಾರತ ಯುದ್ಧಕ್ಕೆ ನಾಂದಿಯಾಯಿತು.