ಕನ್ನಡ ಸುದ್ದಿ  /  Entertainment  /  Actor Pratham Fire On Darshan Fans

Pratham about Darshan Fans: ನಿಮ್ಮ ಸಣ್ಣತನದಿಂದ ನಮ್ಮಿಬ್ಬರ ಸಂಬಂಧ ಹಳಸುವಂತೆ ಮಾಡಬೇಡಿ ಎಂದ ಪ್ರಥಮ್‌.. ವಿಡಿಯೋ

ನನಗೆ ದರ್ಶನ್‌ ಸರ್‌ ಬಗ್ಗೆ ಬಹಳ ಗೌರವ ಇದೆ. ನನ್ನ ಎಂಎಲ್‌ಎ ಸಿನಿಮಾ ಆಡಿಯೋ ಲಾಂಚ್‌ ಮಾಡಿದ್ದೇ ದರ್ಶನ್‌. ಆದರೆ ನಿಮ್ಮ ಕಮೆಂಟ್‌ಗಳಿಂದ ನಮ್ಮ ಸಂಬಂಧ ಹಳಸುವಂತೆ ಮಾಡಬೇಡಿ. ನೀವು ದಡ್ಡತನದಿಂದ ಮಾಡುವ ಕೆಲಸಕ್ಕೆ ನನ್ನನ್ನು ಏಕೆ ಹೊಣೆಯನ್ನಾಗಿ ಮಾಡುತ್ತೀರಿ.

ನಾನು ದರ್ಶನ್‌ ವಿರೋಧಿ ಅಲ್ಲ ಎಂದ ಪ್ರಥಮ್
ನಾನು ದರ್ಶನ್‌ ವಿರೋಧಿ ಅಲ್ಲ ಎಂದ ಪ್ರಥಮ್ (PC: Olle Hudga Pratham)

ನಟ ಪ್ರಥಮ್‌‌, ಸಿನಿಮಾಗಳಿಗಿಂತ ಹೆಚ್ಚಾಗಿ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ದರ್ಶನ್‌ ಹುಟ್ಟುಹಬ್ಬಕ್ಕೆ ಶುಭ ಕೋರಿ ಹಾಕಿದ್ದ ಪೋಸ್ಟ್‌ ದರ್ಶನ್‌ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.

ಪ್ರಥಮ್‌ ಪೋಸ್ಟ್‌ ನೋಡಿದ ದರ್ಶನ್‌ ಅಭಿಮಾನಿಗಳು ಆತನ ವಿರುದ್ಧ ಗರಂ ಆಗಿದ್ದರು. ನೀವು ದರ್ಶನ್‌ಗೆ ಬುದ್ಧಿ ಹೇಳುವಷ್ಟು ದೊಡ್ಡವರಲ್ಲ ಎಂದು ಅವರಿಗೇ ಬುದ್ಧಿ ಹೇಳಿದ್ದರು. ಇದೇ ವಿಚಾರಕ್ಕೆ ಈಗ ಪ್ರಥಮ್‌ ಒಂದು ವಿಡಿಯೋ ಮಾಡಿ ನಾನು ದರ್ಶನ್‌ ವಿರೋಧಿಯಲ್ಲ ಎಂದಿದ್ಧಾರೆ.

''ನಾನು ದರ್ಶನ್‌ ವಿರೋಧಿ ಎಂದೇ ಬಿಂಬಿಸಲಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು 'ಜೈ ಚಾಲೆಂಜಿಂಗ್‌ ಸ್ಟಾರ್‌ ಪ್ರಥಮ್‌' ಎಂದು ಕಮೆಂಟ್‌ ಹಾಕುತ್ತಿದ್ಧಾರೆ. ಇನ್ನ ಕೆಲವರು 'ಜೈ ಪವರ್‌ ಸ್ಟಾರ್‌ ಪ್ರಥಮ್‌' ಎನ್ನುತ್ತಿದ್ದಾರೆ. ಆದರೆ ಇದು ನಿಮ್ಮ ಸಣ್ಣತನ, ದಯವಿಟ್ಟು ಹೀಗೆಲ್ಲಾ ಮಾಡಬೇಡಿ. ಎಂದಿಗೂ ದರ್ಶನ್‌ ಅವರೇ ಚಾಲೆಂಜಿಂಗ್‌ ಸ್ಟಾರ್‌, ಪುನೀತ್‌ ಅವರೇ ಪವರ್‌ ಸ್ಟಾರ್.‌ ಇದೆಲ್ಲಾ ಹೇಗೆ ಶುರು ಆಯ್ತು ನನಗೆ ಗೊತ್ತಿಲ್ಲ. ನಾನು ಎಂದಿಗಾದರೂ ದರ್ಶನ್‌ ಸರ್‌ ವಿರೋಧಿ ಎಂದು ಹೇಳಿದ್ದೀನಾ? ಇದೆಲ್ಲಾ ನಿಮ್ಮ ಊಹೆ. ನನ್ನ ಹೇಳಿಕೆಗೆ ಮಾತ್ರ ನಾನು ಜವಾಬ್ದಾರಿಯುತನಾಗಿರುತ್ತೇನೆ. ನಿಮ್ಮ ಕಲ್ಪನೆಗಳಿಗೆ ನಾನು ಜವಾಬ್ದಾರಿಯಲ್ಲ. ನೀವು ಹೀಗೆ ಮಾಡುವುದರಿಂದ ಇಬ್ಬರೂ ಕಲಾವಿದರನ್ನು ಅವಮಾನಿಸುತ್ತಿದ್ದೀರಿ.''

''ನಾನು ನನ್ನದೇ ಕೆಲಸದಲ್ಲಿ ಬ್ಯುಸಿ ಇದ್ದೇನೆ. ಸ್ನೇಹಿತರು ಈ ವಿಚಾರವಾಗಿ ನನಗೆ ತಿಳಿಸಿದಾಗ ನನಗೆ ಬಹಳ ಬೇಸರವಾಯ್ತು. ನನಗೆ ದರ್ಶನ್‌ ಸರ್‌ ಬಗ್ಗೆ ಬಹಳ ಗೌರವ ಇದೆ. ನನ್ನ ಎಂಎಲ್‌ಎ ಸಿನಿಮಾ ಆಡಿಯೋ ಲಾಂಚ್‌ ಮಾಡಿದ್ದೇ ದರ್ಶನ್‌. ಆದರೆ ನಿಮ್ಮ ಕಮೆಂಟ್‌ಗಳಿಂದ ನಮ್ಮ ಸಂಬಂಧ ಹಳಸುವಂತೆ ಮಾಡಬೇಡಿ. ನೀವು ದಡ್ಡತನದಿಂದ ಮಾಡುವ ಕೆಲಸಕ್ಕೆ ನನ್ನನ್ನು ಏಕೆ ಹೊಣೆಯನ್ನಾಗಿ ಮಾಡುತ್ತೀರಿ. 'ನಟ ಭಯಂಕರ' ಚಿತ್ರದ ಪೋಸ್ಟರ್‌ ಲಾಂಚ್‌ಗೆ ದರ್ಶನ್‌ ಅವರಿಗಿಂತ ದೊಡ್ಡ ಸ್ಟಾರ್‌ ಕರೆ ತರುತ್ತೇನೆ ಎಂದು ಹೇಳಿದ್ದೆ. ಆದರೆ ನಾನು ಅವರ ತಾಯಿ ಮೀನಾ ತೂಗುದೀಪ್‌ ಅವರನ್ನು ಕರೆ ತಂದೆ. ನೀವು ಅದನ್ನು ಟ್ರೋಲ್‌ ಮಾಡಿದರೇ ಹೊರತು ಮಗನಿಗಿಂತ ತಾಯಿ ಸ್ಟಾರ್‌ ಅನ್ನೋದನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ'' ಎಂದು ಪ್ರಥಮ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಮೀಡಿಯಾ ಜೊತೆ ಸಂಬಂಧ ಉತ್ತಮವಾಗಿರಲಿ ಎಂದಿದ್ದ ಪ್ರಥಮ್‌

ದರ್ಶನ್‌ ಹುಟ್ಟುಹಬ್ಬದಂದು ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಪ್ರಥಮ್‌, ''ಹುಟ್ಟುಹಬ್ಬದ ಶುಭಾಶಯಗಳು ದರ್ಶನ್‌ ಸರ್‌, ಎರಡು ಮಾತು ಹೇಳ್ತೀನಿ, ದಯವಿಟ್ಟು ಸ್ವೀಕರಿಸಿ, 1. ಅಂಬರೀಶ್ ಅವರ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡ ಮಾಸ್‌ ಹೀರೋ ನೀವು, ಭಗವಂತ ನಿಮಗೆ ಎಲ್ಲಾ ಕೊಟ್ಟಿದ್ದಾನೆ, ಎಷ್ಟು ಅಭಿಮಾನಿಗಳು ಇದಾರೆ ನೋಡಿ, ಇಷ್ಟಿದ್ದ ಮೇಲೆ ನೀವು ಕೂಲ್‌ ಆಗಿರಿ, ಆರಾಮ್‌ ಆಗಿರಿ. 2. ನಿಮ್ಮ ಹಾಗೂ ಮಾಧ್ಯಮದ ನಡುವಿನ ಮುನಿಸು ನಿಲ್ಲಲ್ಲಿ. ನೀವು- ಮೀಡಿಯಾ ಒಂದಾಗಲೇ ಅನ್ನೋದೇ ಪ್ರಾಮಾಣಿಕ ಆಸೆ, ಇಂದು ಅಂಬರೀಶ್ ಸರ್ ಇದ್ದಿದ್ರೆ ನಿಮ್ಮ ಹಾಗೂ ಮಾಧ್ಯಮದ ನಡುವಿನ ಬಿರುಕು ಬೆಳೆಯೋಕೆ ಬಿಡುತ್ತಿರಲಿಲ್ಲ. ನಿಮ್ಮ ಹಿತ ಬಯಸುವವರು ಪ್ರಾಮಾಣಿಕವಾಗಿ ಸಂಧಾನ ಮಾಡಿ, ನೀವು ಮಾಧ್ಯಮ ಒಂದಾಗಲಿ ಅದೇ ನಿಮ್ಮ ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ ಆಗಲಿ ಎಂಬುದೇ ನನ್ನಾಸೆ'' ಎಂದು ಬರೆದುಕೊಂಡಿದ್ದರು.

ಪ್ರಥಮ್‌ ಅವರ ಈ ಪೋಸ್ಟ್‌ ದರ್ಶನ್‌ ಅಭಿಮಾನಿಗಳನ್ನು ಕೆರಳಿಸಿತ್ತು. ಪ್ರಥಮ್‌ ಇದಕ್ಕೂ ಮುನ್ನ ಅನೇಕ ಬಾರಿ ಹಿಂದು ಮುಂದು ಯೋಚಿಸದೆ ಮಾತನಾಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ದರ್ಶನ್‌ಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ನೆಪದಲ್ಲಿ ಅವರಿಗೆ ಅಗೌರವ ಸೂಚಿಸುತ್ತಿದ್ದಾರೆ ಎಂದು ದಚ್ಚು ಅಭಿಮಾನಿಗಳು ಕೋಪ ವ್ಯಕ್ತಪಡಿಸಿದ್ದರು. ''ನೀವು ಅವರಿಗೆ ಸಲಹೆ ಕೊಡುವಷ್ಟು ದೊಡ್ಡವರಲ್ಲ ಪ್ರಥಮ್ , ಸರಿ ತಪ್ಪು ಯಾವುದು ಅಂತ ದರ್ಶನ್‌ ಅವರಿಗೆ ಚನ್ನಾಗಿ ಗೊತ್ತಿದೆ ಎಂದು ಒಬ್ಬರು ಅಭಿಮಾನಿ ಕಮೆಂಟ್‌ ಮಾಡಿದ್ದರು. ಮತ್ತೊಬ್ಬರು, ಪ್ರಥಮ್ ಅವರೇ, ನೀವು ಇಲ್ಲಿ ಕೆಲವೊಂದು ವಿಚಾರದ ಬಗ್ಗೆ ಗೊತ್ತಿಲ್ಲದೆ ಮಾತನಾಡಲು ಬರಬೇಡಿ, ತಿಳಿಯದೆ ಒಳ್ಳೆಯವರಾಗಲು ಟಿಆರ್‌ಪಿ ಬೇಕು ಅ೦ದರೆ ಹೇಳಿ, ಎಂದು ಕಮೆಂಟ್‌ ಮಾಡಿದ್ದರು. ಬಹುತೇಕ ಎಲ್ಲರೂ ಪ್ರಥಮ್‌ ಪೋಸ್ಟ್‌ ವಿರುದ್ಧ ಕಮೆಂಟ್‌ ಮಾಡಿದ್ದರು. ಆದರೆ ಪ್ರಥಮ್‌ ಮಾತ್ರ ತನ್ನ ವಿರುದ್ಧ ಕಮೆಂಟ್‌ ಮಾಡಿದವರಿಗೆ ರಿಪ್ಲೇ ಮಾಡಿ ಮತ್ತೆ ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದರು.

IPL_Entry_Point