Aaradhya Rai Bachchan: ಯೂಟ್ಯೂಬರ್ಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆರಾಧ್ಯಗೆ ಜಯ; ವಿಡಿಯೋಗಳನ್ನು ತೆಗೆಯುವಂತೆ ಕೋರ್ಟ್ ಸೂಚನೆ
ನಟ ಅಭಿಷೇಕ್ ಬಚ್ಚನ್ ಕೂಡಾ ಅನೇಕ ಬಾರಿ ನಕಲಿ ಯೂಟ್ಯೂಬ್ಗಳ ವಿರುದ್ಧ ಕಿಡಿ ಕಾರಿದ್ದರು. 2021ರಲ್ಲಿ ತೆರೆ ಕಂಡ ಬಾಬ್ ಬಿಸ್ವಾಸ್ ಸಿನಿಮಾ ಪ್ರಚಾರದ ವೇಳೆ ಕೂಡಾ ಅಭಿಷೇಕ್ ಬಚ್ಚನ್ ಯೂಟ್ಯೂಬ್ ಚಾನೆಲ್ಗಳು ಹಾಗೂ ಟ್ರೋಲರ್ಗಳ ವಿರುದ್ದ ಕೋಪದಿಂದ ಮಾತನಾಡಿದ್ದರು.
ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ರೈ ಬಚ್ಚನ್ಗೆ ಗೆಲುವು ದೊರೆತಿದೆ. ಆರಾಧ್ಯ ಆರೋಗ್ಯ ಕುರಿತು ಸುಳ್ಳು ಮಾಹಿತಿ ಪ್ರಕಟಿಸದಂತೆ ಹೈ ಕೋರ್ಟ್ ಯೂಟ್ಯೂಬ್ ಚಾನೆಲ್ಗಳಿಗೆ ಎಚ್ಚರಿಸಿದೆ.
ಆರಾಧ್ಯ ದಾಖಲಿಸಿದ್ದ ಕೇಸ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಹರಿ ಶಂಕರ್, ಯಾವುದೇ ಮಗುವಿನ ಬಗ್ಗೆ ತಪ್ಪು ಮಾಹಿತಿ ಹರಡುವುದು ಅಸ್ವಸ್ಥ ವಿಕೃತತೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಆರಾಧ್ಯ ಬಗ್ಗೆ ಪ್ರಸಾರ ಮಾಡಲಾದ ಅಂತಹ ವಿಡಿಯೋಗಳನ್ನು ತೆಗೆದುಹಾಕುವಂತೆ ಗೂಗಲ್ಗೆ ಸೂಚಿಸಲಾಗಿದೆ. ಪ್ರತಿಯೊಂದು ಮಗುವಿನ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಕೋರ್ಟ್ ಸೂಚಿಸಿದೆ. ಆರಾಧ್ಯ ಜೊತೆಗೆ ತಂದೆ ಅಭಿಷೇಕ್ ಬಚ್ಚನ್ ಕೋರ್ಟ್ಗೆ ತೆರಳಿದ್ದರು. ಯೂಟ್ಯೂಬ್ ಚಾನೆಲ್ಗಳಿಂದ ಆರಾಧ್ಯ ವಿಡಿಯೋಗಳನ್ನು ತೆಗೆಯಲು ಸೂಚಿಸುತ್ತಿದ್ದಂತೆ ಐಶ್ವರ್ಯ-ಅಭಿಷೇಕ್ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಯಾವುದೇ ಸೆಲೆಬ್ರಿಟಿಗಳ ವಿರುದ್ಧ, ಯಾವುದೇ ವ್ಯಕ್ತಿಗಳ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ ಮಾಡುವ ಯೂಟ್ಯೂಬ್ಗಳಿಗೆ ಇದೊಂದು ಪಾಠ ಎಂದು ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
ಆರಾಧ್ಯ ಬಚ್ಚನ್, ನಡೆಯುವ ರೀತಿ ಹಾಗೂ ಮಾತನಾಡುವ ಶೈಲಿಯನ್ನು ಕೆಲವೊಂದು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟಾರ್ಗೆಟ್ ಮಾಡಿ ಟ್ರೋಲ್ ಮಾಡಲಾಗಿತ್ತು. ಆರಾಧ್ಯ ಆರೋಗ್ಯ ಸರಿ ಇಲ್ಲ ಎಂದು ಕೆಲವು ಚಾನೆಲ್ಗಳು ಸುಳ್ಳು ಮಾಹಿತಿ ಪ್ರಕಟಿಸಿದ್ದವು. ಐಶ್ವರ್ಯ ಯಾವಾಗಲೂ ಮಗಳು ಆರಾಧ್ಯಳನ್ನು ಎಲ್ಲಿ ಹೋದರೂ ಜೊತೆಗೆ ಕರೆದೊಯ್ಯುತ್ತಾರೆ. ಮಗಳ ಸ್ಕೂಲ್, ವಿದ್ಯಾಭ್ಯಾಸದ ಕಥೆ ಏನು? ತಾಯಿಯ ಜೊತೆ ಹೋಗುವಾಗಲೆಲ್ಲಾ ಆರಾಧ್ಯ ಅಮ್ಮನ ಕೈ ಹಿಡಿದಿರುತ್ತಾಳೆ, ಆಕೆ ಇನ್ನು ಪುಟ್ಟ ಮಗುನಾ? ಎಂದೆಲ್ಲಾ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದರು. ಆಗ ಐಶ್ವರ್ಯ ರೈ ಪ್ರತಿಕ್ರಿಯಿಸಿ ಇದು ನಮ್ಮ ವೈಯಕ್ತಿಕ ವಿಚಾರ. ತಂದೆ-ತಾಯಿಗೆ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ವಿಚಾರ ಗೊತ್ತಿರುತ್ತದೆ, ನಮಗೂ ಜವಾಬ್ದಾರಿ ಇದೆ ಎಂದಿದ್ದರು.
ನಟ ಅಭಿಷೇಕ್ ಬಚ್ಚನ್ ಕೂಡಾ ಅನೇಕ ಬಾರಿ ನಕಲಿ ಯೂಟ್ಯೂಬ್ಗಳ ವಿರುದ್ಧ ಕಿಡಿ ಕಾರಿದ್ದರು. 2021ರಲ್ಲಿ ತೆರೆ ಕಂಡ ಬಾಬ್ ಬಿಸ್ವಾಸ್ ಸಿನಿಮಾ ಪ್ರಚಾರದ ವೇಳೆ ಕೂಡಾ ಅಭಿಷೇಕ್ ಬಚ್ಚನ್ ಯೂಟ್ಯೂಬ್ ಚಾನೆಲ್ಗಳು ಹಾಗೂ ಟ್ರೋಲರ್ಗಳ ವಿರುದ್ದ ಕೋಪದಿಂದ ಮಾತನಾಡಿದ್ದರು. ತನ್ನ ಬಗ್ಗೆ ಹೀಗೆಲ್ಲಾ ಸುಳ್ಳು ವರದಿ ಪ್ರಕಟವಾಗುವುದನ್ನು ನೋಡಿ ಆರಾಧ್ಯಗೆ ಬಹಳ ನೋವಾಗಿದೆ. ಅಷ್ಟು ಪುಟ್ಟ ಮಗುವಿಗೆ ಇದೆನ್ನೆಲ್ಲಾ ಸಹಿಸುವ ಶಕ್ತಿ ಇಲ್ಲ. ನೀವು ಏನಾದರೂ ಮಾತನಾಡುವ ಹಾಗಿದ್ದರೆ ನನ್ನ ಬಳಿ ನೇರವಾಗಿ ಮಾತನಾಡಿ. ಯಾರಿಗೂ ಪ್ರಯೋಜನಕ್ಕೆ ಬಾರದ ಈ ಸುಳ್ಳು ಮಾಹಿತಿಯನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಇಷ್ಟಾದರೂ ಕೆಲವರು ತಮ್ಮ ಚಾಳಿ ಮುಂದುವರೆಸಿದರು. ಇದರಿಂದ ಬೇಸತ್ತ ಅಮಿತಾಬ್ ಬಚ್ಚನ್ ಕುಟುಂಬ ಆರಾಧ್ಯ ಕಡೆಯಿಂದಲೇ ಯೂಟ್ಯೂಬರ್ಗಳಿಗೆ ಬುದ್ಧಿ ಕಲಿಸಲು ಮುಂದಾಗಿತ್ತು.
ಏಪ್ರಿಲ್ 20 ರಂದು ಐಶ್ವರ್ಯ ರೈ ಹಾಗು ಅಭಿಷೇಕ್ ಬಚ್ಚನ್ 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಐಶ್ವರ್ಯ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಪೊನ್ನಿಯಿನ್ ಸೆಲ್ವನ್ ಭಾಗ 2 ಏಪ್ರಿಲ್ 28ರಂದು ತೆರೆ ಕಾಣುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸಿದ್ದಾರೆ. ಅಭಿಷೇಕ್ ಬಚ್ಚನ್, ಘೂಮರ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.