ಕನ್ನಡ ಸುದ್ದಿ  /  ಮನರಂಜನೆ  /  Pinki Elli: ವಿದೇಶಿ ಸಿನಿಮೋತ್ಸವಗಳಲ್ಲಿ ಮಿಂಚಿದ್ದ ನೈಜ ಘಟನೆ ಆಧರಿತ ಪಿಂಕಿ ಎಲ್ಲಿ ಚಿತ್ರವೀಗ ಬೆಳ್ಳಿತೆರೆಗೆ

Pinki Elli: ವಿದೇಶಿ ಸಿನಿಮೋತ್ಸವಗಳಲ್ಲಿ ಮಿಂಚಿದ್ದ ನೈಜ ಘಟನೆ ಆಧರಿತ ಪಿಂಕಿ ಎಲ್ಲಿ ಚಿತ್ರವೀಗ ಬೆಳ್ಳಿತೆರೆಗೆ

ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನೇ ಆಧರಿಸಿ ಸಿದ್ಧವಾದ ಸಿನಿಮಾ ಪಿಂಕಿ ಎಲ್ಲಿ. ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಬಾಚಿದ ಈ ಚಿತ್ರವೀಗ ಚಿತ್ರಮಂದಿರಕ್ಕೆ ಆಗಮಿಸಲು ಸಜ್ಜಾಗಿದೆ. ಜೂನ್‌ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ.

ವಿದೇಶಿ ಸಿನಿಮೋತ್ಸವಗಳಲ್ಲಿ ಮಿಂಚಿದ್ದ  ನೈಜ ಘಟನೆ ಆಧರಿತ ಪಿಂಕಿ ಎಲ್ಲಿ ಚಿತ್ರವೀಗ ಬೆಳ್ಳಿತೆರೆಗೆ
ವಿದೇಶಿ ಸಿನಿಮೋತ್ಸವಗಳಲ್ಲಿ ಮಿಂಚಿದ್ದ ನೈಜ ಘಟನೆ ಆಧರಿತ ಪಿಂಕಿ ಎಲ್ಲಿ ಚಿತ್ರವೀಗ ಬೆಳ್ಳಿತೆರೆಗೆ

Pinki Elli: ಪುಟಾಣಿ ಮಗಳಿಂದಲೇ ಜೀವನ ಸಾಗಿಸುತ್ತಿದ್ದ ತಾಯಿಗೆ ಒಂದು ದಿನ ಅದೇ ಮಗು ಕಣ್ಮರೆ ಆದರೆ ಏನಾಗಬಹುದು? ಹಾಗೆ ಕಳೆದಯ ಹೋದ ಪಿಂಕಿ ಸಿಗ್ತಾಳಾ? ಹೀಗೆ ನೈಜತೆಯ ಸೊಗಡಿನಲ್ಲಿಯೇ ಸಾಗುತ್ತದೆ ಪಿಂಕಿ ಎಲ್ಲಿ ಸಿನಿಮಾ. ಕಳೆದ ಎರಡು ವರ್ಷದ ಹಿಂದೆಯೇ ಈ ಸಿನಿಮಾ ಸಿದ್ಧವಾಗಿದ್ದರೂ, ಬೆಳ್ಳಿತೆರೆಮೇಲೆ ಈ ಸಿನಿಮಾ ಇನ್ನೂ ಅಪ್ಪಳಿಸಿಲ್ಲ. ಹಾಗಂತ ಸಿನಿಮಾ ಸಿದ್ಧಪಡಿಸಿ ಸುಮ್ಮನೆ ಇಟ್ಟುಕೊಂಡಿರಲಿಲ್ಲ ಈ ತಂಡ. ಹಲವು ಸಿನಿಮೋತ್ಸವಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿಯನ್ನೂ ಬಾಚಿಕೊಂಡಿದೆ ಪಿಂಕಿ ಎಲ್ಲಿ ಸಿನಿಮಾ.

ವಿದೇಶದ ಹಲವು ಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದ ಪಿಂಕಿ ಎಲ್ಲಿ ಸಿನಿಮಾ, 2021ರಲ್ಲಿ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಅತ್ಯುತ್ತಮ ಚಿತ್ರಕಥೆ ವಿಭಾಗ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ಪ್ರಶಸ್ತಿ ಲಭಿಸಿತ್ತು. ಈಗ ಇದೇ ಸಿನಿಮಾವನ್ನು ಪ್ರೇಕ್ಷಕ ಪ್ರಭುವಿನ ಮುಂದಿರಿಸಲು ಚಿತ್ರತಂಡ ನಿರ್ಧರಿಸಿದೆ ಅದರಂತೆ, ಜೂನ್‌ 2ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಅತ್ತೆಯ ಬರ್ತ್‌ಡೇ ಆಚರಿಸಿದ ಅಳಿಯ ವಸಿಷ್ಠ ಸಿಂಹ; ಖುಷಿ, ನಗುವಿನ ಅಲೆಯಲ್ಲಿ ತೇಲಿದ ಹರಿಪ್ರಿಯಾ

ಈ ಸಿನಿಮಾ ಬಿಡುಗಡೆಯ ವಿಚಾರವನ್ನು ತಿಳಿಸಲು ಮುಂದೆ ಬಂದ ನಿರ್ದೇಶಕ ಪೃಥ್ವಿ ಕೋಣನೂರು, "ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಕಥೆಯಿದು. ಬೆಂಗಳೂರಿನಲ್ಲಿ ನಡೆದ ನೈಜಘಟನೆಯೂ ಹೌದು. ಮಗುವೊಂದು ಕಾಣೆಯಾಗಿರುತ್ತದೆ. ಆದರೆ ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಕಥೆಯ ಒಂದೆಳೆ ಕೇಳಿ ಮೆಚ್ಚಿಕೊಂಡ ನಿರ್ಮಾಪಕ ಕೃಷ್ಣೇಗೌಡ ಅವರು ನಿರ್ಮಾಣಕ್ಕೆ ಮುಂದಾದರು" ಎನ್ನುತ್ತಾರೆ.

ಸ್ಲಂ ನಿವಾಸಿಗಳ ನೈಜ ನಟನೆ

ಈ ಚಿತ್ರದಲ್ಲಿ ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಂತಾದವರು ನಟಿಸಿದ್ದಾರೆ‌. ಸ್ಲಂ ನಿವಾಸಿಗಳಾದ ಗುಂಜಲಮ್ಮ ಹಾಗೂ ಸಂಗಮ್ಮ ಇಬ್ಬರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಗೊತ್ತಿಲ್ಲದ್ದಿದ್ದರೂ ಸಹಜ ಅಭಿನಯ ಒದಗಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಸೇರಿ ಹಲವು ವಿದೇಶಿ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದೆ. ಜೂನ್ 2ರಂದು ಬಿಡುಗಡೆ ಆಗಲಿದೆ ಎಂದರು ನಿರ್ದೇಶಕ ಪೃಥ್ವಿ ಕೋಣನೂರು.

ಇದನ್ನೂ ಓದಿ: ಸೋಷಿಯಲ್‌ ಮೀಡಿಯಾದಲ್ಲಿ ಪತಿ ಫೋಟೋ ಹಾಕಲು ಮಹಾಲಕ್ಷ್ಮೀ ಹಿಂದೇಟು; ಪತ್ನಿಯ ವರ್ತನೆಗೆ ರವೀಂದ್ರ ಚಂದ್ರಶೇಖರನ್‌ ಕಳವಳ

ಚಿತ್ರದ ನಾಯಕಿ ಮಾತನಾಡಿ, "ನಿರ್ದೇಶಕರು ಕಥೆ ಹೇಳುವ ರೀತಿಯೇ ವಿಭಿನ್ನ. ನನಗೂ ಅವರು ಕಥೆ ಹೇಳುವ ರೀತಿ ಆಶ್ಚರ್ಯವಾಯಿತು. ಈ ಚಿತ್ರದಲ್ಲಿ ಮಗುವನ್ನು ಕಳೆದುಕೊಂಡಿರುವ ತಾಯಿಯ ಪಾತ್ರ ನನ್ನದು ಎಂದರು ನಟಿ ಅಕ್ಷತಾ ಪಾಂಡವಪುರ. ಚಿತ್ರದಲ್ಲಿ ನಟಿಸಿರುವ ದೀಪಕ್ ಸುಬ್ರಹ್ಮಣ್ಯ, ಗುಂಜಲಮ್ಮ, ಸಂಗಮ್ಮ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಕೃಷ್ಣೇಗೌಡ, "ನಾನು ಕಥೆ ಕೇಳಲಿಲ್ಲ. ನಿರ್ದೇಶಕರು ಮಗು ಕಳೆದು ಹೋಗಿರುವ ಸುತ್ತಲ್ಲಿನ ಕಥೆ ಎಂದು ಕಥೆಯ ಒಂದೆಳೆ ಹೇಳಿದರು. ನಾನು ಆಗಲೇ ಚೆನ್ನಾಗಿದೆ. ನೀವು ಕೆಲಸ ಶುರು ಮಾಡಿಕೊಳ್ಳಿ ಎಂದು ಹೇಳಿದೆ. ಬೆಂಗಳೂರಿನಲ್ಲಿ ಮಗುವಿನ ಭವಿಷ್ಯಕ್ಕಾಗಿ ತಂದೆ -ತಾಯಿ ಮಗುವನ್ನು ನೋಡಿಕೊಳ್ಳಲು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಆ ಮಗುವೆ ಇನ್ನೊಬ್ಬರ ಭವಿಷ್ಯಕ್ಕೆ ದಾರಿಯಾಗಿರುತ್ತದೆ. ಇಂತಹ ಅಪರೂಪದ ಕಥೆ ಈ ಚಿತ್ರದಲ್ಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ" ಎಂದರು.

ಸಪ್ತಗಿರಿ ಕ್ರಿಯೇಷನ್ಸ್‌ ಅಡಿಯಲ್ಲಿ ನಿರ್ಮಾಣವಾಗಿರುವ ಪಿಂಕಿ ಎಲ್ಲಿ ಸಿನಿಮಾಕ್ಕೆ ಅರ್ಜುನ್‌ ರಾಜಾ ಛಾಯಾಗ್ರಹಣ, ಶಿವಕುಮಾರ ಸ್ವಾಮಿ ಸಂಕಲನ ಈ ಚಿತ್ರಕ್ಕಿದೆ.

IPL_Entry_Point