Kashi Yatra 2022: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ರೈಲು ಉದ್ಘಾಟನೆಗೆ ಕ್ಷಣಗಣನೆ
Kashi Yatra 2022: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ರೈಲು ಯಾತ್ರೆಯ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ರೈಲು ಬೆಂಗಳೂರಿನಲ್ಲಿದ್ದು, ಮುಜುರಾಯಿ ಸಚಿವೆ ಶಶಿಕಲಾ ಅ ಜೊಲ್ಲೆ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿದರು.
ಬೆಂಗಳೂರು: ಬಹುನಿರೀಕ್ಷೆಯ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ರೈಲು ಯಾತ್ರೆಗೆ ನಾಳೆ ಚಾಲನೆ ಸಿಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ. ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಎಲ್ಲ ಸಿದ್ದತೆಗಳೂ ಪೂರ್ಣಗೊಂಡಿದೆ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಅ ಜೊಲ್ಲೆ ತಿಳಿಸಿದರು.
ಅವರು ಇಂದು ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಸಿದ್ದತೆಗಳನ್ನು ಪರಿಶೀಲನೆ ನಡೆಸಿದರು.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿಯ ಯೋಜನೆ ಇದಾಗಿದ್ದು ಪ್ರಧಾನ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಇದು ಪ್ರಾರಂಭವಾಗುತ್ತಿದೆ. ನಮ್ಮ ರಾಜ್ಯದ ಜನರು ಇದರ ಉಪಯೋಗ ಹೆಚ್ಚಾಗಿ ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಶಿ ಯಾತ್ರಾ ಪ್ಯಾಕೇಜ್ನ ಮುಖ್ಯಾಂಶ
ಪ್ರವಾಸದ ಹೆಸರು - ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್
ಪ್ರವಾಸದ ಅವಧಿ (ಬೆಂಗಳೂರಿನಿಂದ)- 07 ರಾತ್ರಿಗಳು/08 ದಿನಗಳು
ನಿರ್ಗಮನ ದಿನಾಂಕ - ನವೆಂಬರ್ 11 ಮತ್ತು 23
ಪ್ರವಾಸ ಮಾರ್ಗ- ಬೆಂಗಳೂರು - ವಾರಣಾಸಿ - ಅಯೋಧ್ಯೆ - ಪ್ರಯಾಗರಾಜ್ - ಬೆಂಗಳೂರು
ರೈಲು ಹತ್ತಲು ಮತ್ತು ಇಳಿಯಲು ಅವಕಾಶ ಎಲ್ಲೆಲ್ಲಿ?: ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಬಾಗ
ಸಂದರ್ಶಿಸುವ ಯಾತ್ರಾಸ್ಥಳಗಳು ಯಾವುವು?
ವಾರಾಣಸಿ: ತುಳಸಿ ಮಾನಸ ದೇವಸ್ಥಾನ, ಸಂಕಷ್ಟ ಮೋಚನ್ ಹನುಮಾನ್ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಆರತಿ.
ಅಯೋಧ್ಯೆ: ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್.
ಪ್ರಯಾಗರಾಜ್: ಗಂಗಾ-ಯಮುನಾ ಸಂಗಮ, ಹನುಮಾನ್ ದೇವಸ್ಥಾನ.
ಕಾಶಿ ಯಾತ್ರೆ ಎಷ್ಟು ದಿನ? ಹೀಗಿರಲಿದೆ ಯಾತ್ರೆ
ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆಯ ರೈಲು ಬೆಂಗಳೂರಿನಿಂದ ಅಪರಾಹ್ನ 1 ಗಂಟೆಗೆ ಹೊರಡಲಿದೆ. ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಬಾಗ ನಿಲ್ದಾಣಗಳಲ್ಲಿ ಪ್ರವಾಸಿಗರಿಗೆ ರೈಲು ಏರಲು ಅವಕಾಶವಿದೆ. ಮೂರನೇ ದಿನ ವಾರಾಣಸಿ ತಲುಪುತ್ತದೆ. ನಾಲ್ಕನೇ ದಿನ ಪೂರ್ತಿ ವಾರಾಣಸಿಯಲ್ಲಿ ಸುತ್ತಾಟ. ಬಳಿಕ ಐದನೇ ದಿನ ಮುಂಜಾನೆ ಅಯೋಧ್ಯೆಗೆ ಪ್ರಯಾಣ. ಸರಯೂ ಆರತಿ ನೋಡಿಕೊಂಡು ರಾತ್ರಿ ಪ್ರಯಾಗರಾಜ್ ಕಡೆಗೆ ಪ್ರಯಾಣ. ಆರನೇ ದಿನ ಬೆಳಗ್ಗೆ ಪ್ರಯಾಗರಾಜ್ಗೆ ರೈಲು ತಲುಪಲಿದೆ. ಮಧ್ಯಾಹ್ನ ತನಕ ಪ್ರಯಾಗರಾಜ್ನಲ್ಲಿ ಸುತ್ತಾಟ. ಬಳಿಕ ರೈಲು ಹತ್ತಿ ಬೆಂಗಳೂರಿಗೆ ವಾಪಸ್ ಪ್ರಯಾಣ. ಎಂಟನೇ ದಿನ ಅಪರಾಹ್ನ 1.30ಕ್ಕೆ ರೈಲು ಬೆಂಗಳೂರಿಗೆ ತಲುಪಲಿದೆ.
ಕಾಶಿ ಯಾತ್ರಾ ಪ್ಯಾಕೇಜ್ ಸೇವೆಯಲ್ಲಿ ಏನೇನು ಒಳಗೊಂಡಿವೆ? ಮತ್ತು ಏನಿರಲ್ಲ?
ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆಯ ಪ್ಯಾಕೇಜ್ ಪ್ರವಾಸದಲ್ಲಿ ಯಾತ್ರಿಕರಿಗೆ 3AC ವರ್ಗದ ಕೋಚ್ ಸೌಲಭ್ಯ ಇರಲಿದೆ. ಉಳಿದಂತೆ, ಹೋಟೆಲ್, ಊಟ, ಉಪಾಹಾರ ಇತ್ಯಾದಿಗಳು ಇರಲಿವೆ. ಸೈಟ್ ಸೀಯಿಂಗ್ಗೆ ಹೋಗುವಾಗ ಸಾಮಾನ್ಯ ಬಸ್ಗಳಲ್ಲಿ ಪ್ರಯಾಣವಿರಲಿದೆ. ಆದರೆ, ದೋಣಿ ವಿಹಾರ, ಸಾಹಸ ಕ್ರೀಡೆ ಮತ್ತು ಇತರೆ ಸೇವೆಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾದೀತು.