Siddaramaiah on Sudhakar: ಸಚಿವ ಸುಧಾಕರ್ ಒಬ್ಬ ಪೆದ್ದ; ಸಿಎಜಿ ರಿಪೋರ್ಟ್ ಓದೋಕೆ, ಅರ್ಥ ಮಾಡಿಕೊಳ್ಳೋಕೆ ಬರೋದಿಲ್ಲ: ಸಿದ್ದರಾಮಯ್ಯ ಕಿಡಿ
ನಿನ್ನೆ ಮೊನ್ನೆ ಬಿಜೆಪಿಗೆ ಹೋದ ಈ ಮನುಷ್ಯ ಅರ್ಜೆಂಟಾಗಿ ಆರ್ ಎಸ್ಎಸ್ ನವರ ಪ್ರೀತಿ ಗಳಿಸಲು ಆರ್ ಎಸ್ಎಸ್ ನವರಿಗಿಂತ, ಮೂಲ ಬಿಜೆಪಿಯವರಿಗಿಂತ ಭಯಾನಕ ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಡಿದ್ದಾರೆ ಎನ್ನಲಾದ 35 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪಕ್ಕೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಸಚಿವ ಸುಧಾಕರ್ ಒಬ್ಬ ಪೆದ್ದ. ಸಿಎಜಿ ರಿಪೋರ್ಟ್ ಓದೋಕೆ, ಅರ್ಥ ಮಾಡಿಕೊಳ್ಳೋಕೆ ಬರೋದಿಲ್ಲ ಎಂದು ಕಿಡಿ ಕಾರಿದ್ದಾರೆ.
ನಿನ್ನೆ ಮೊನ್ನೆ ಬಿಜೆಪಿಗೆ ಹೋದ ಈ ಮನುಷ್ಯ ಅರ್ಜೆಂಟಾಗಿ ಆರ್ ಎಸ್ಎಸ್ ನವರ ಪ್ರೀತಿ ಗಳಿಸಲು ಆರ್ ಎಸ್ಎಸ್ ನವರಿಗಿಂತ, ಮೂಲ ಬಿಜೆಪಿಯವರಿಗಿಂತ ಭಯಾನಕ ಸುಳ್ಳು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ವಿರುದ್ಧ ಮಾಡಿರುವ 35 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪಕ್ಕೆ ಸಮಗ್ರ ದಾಖಲೆಗಳ ಸಮೇತ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸಚಿವ ಸುಧಾಕರ್ ಆರೋಪಕ್ಕೂ ಸಿಎಜಿ ವರದಿಯಲ್ಲಿ ಇರುವುದಕ್ಕೂ ಒಂದಕ್ಕೊಂದು ಸಂಬಧವೇ ಇಲ್ಲ ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಎಜಿಯವರು ಪ್ರತಿ ವರ್ಷ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ವರದಿಯನ್ನು ಸಿದ್ಧಪಡಿಸಿ ಕೊಡುತ್ತಾರೆ. 2016-17 ಸಾಲಿನ ವರದಿಯನ್ನು 2018 ರಲ್ಲಿ ಕೊಟ್ಟಿದ್ದಾರೆ. ಅದರಲ್ಲಿ ಪುಟ ಸಂಖ್ಯೆ XV ರಲ್ಲಿ ಹೀಗೆ ಹೇಳಿದ್ದಾರೆ. “Non reconciliation of expenditure was to the extent of 19 percent of total expenditure” ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಆಧರಿಸಿ “2016-17ನೆ ಸಾಲಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ 1,86,052 ಕೋಟಿ ರೂಗಳಲ್ಲಿ 19 ಪರ್ಸೆಂಟ್ (35 ಸಾವಿರ ಕೋಟಿ) ತಾಳೆಯಾಗುತ್ತಿಲ್ಲವೆಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸರ್ಕಾರ ನಡೆಸಿರುವ ಅವ್ಯವಹಾರ, ಭ್ರಷ್ಟಾಚಾರಗಳನ್ನು ದೃಢೀಕರಿಸಿದಂತಾಗುತ್ತದೆ ಎಂದು ಪೆದ್ದ ಸುಧಾಕರ್ ಆರೋಪಿಸಿದ್ದಾರೆ.
ಸುಧಾಕರ್ ಎಂಬಿಬಿಎಸ್ ಡಾಕ್ಟರ್ ಅಂತ ಅಂದುಕೊಂಡಿದ್ದೀನಿ ನಾನು. ಅವರಿಗೆ ಎಜಿ ರಿಪೋರ್ಟ್ ಅರ್ಥ ಆಗಲ್ಲ. ರಿಕನ್ಸಿಲಿಯೇಷನ್ ರಿಪೋರ್ಟ್ ಅಂತ ಎಜಿ ರಿಪೋರ್ಟ್ ಗೆ ಕರೆಯುತ್ತಾರೆ. ಅನುದಾನ ಖರ್ಚು ತಾಳೆ ಆಗ್ತಿದಾವಾ ಇಲ್ವಾ ನೋಡೋದು ಎಜಿ ರಿಪೋರ್ಟ್. ರೀಕನ್ಸಿಲಿಯೇಷನ್ ರಿಪೋರ್ಟ್ ನಲ್ಲಿ ಎಲ್ಲ ಕಾಲದಲ್ಲೂ ಕೂಡ ಕೆಲವು ಪರ್ಸೆಂಟೇಜ್ ತಾಳೆ ಆಗೋದಿಲ್ಲ.
2008-09 ರಲ್ಲಿ ತಾಳೆಯಾಗದ ಅನುದಾನ 49 ಪರ್ಸೆಂಟ್ ಇತ್ತು. ಯಾವ ಸರ್ಕಾರ ಇತ್ತು ಗೊತ್ತೇನಪ್ಪಾ ಸುಧಾಕರ? 2015-16 ರಲ್ಲಿ 16 ಪರ್ಸೆಂಟ್ ಮಾತ್ರ ತಾಳೆಯಾಗದ ಅನುದಾನ ಆಗಿತ್ತು. ಆಗ ನಮ್ಮ ಸರ್ಕಾರ ಇತ್ತು. ಈ ಮೂರ್ಖರಿಗೆ ಇದು ಅರ್ಥ ಆಗಬೇಕಾ ಬೇಡವಾ? ಬಿಜೆಪಿಯಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದರೆ ಅತಿ ದೊಡ್ಡ ಲೀಡರ್ ಆಗಬಹುದು ಎನ್ನುವುದು ಸುಧಾಕರ್ ಗೆ ಬಹಳ ಬೇಗ ಅರ್ಥ ಆಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಾನು ಎಜಿಯವರಿಂದ ಮಾಹಿತಿ ತರಿಸಿಕೊಂಡು ಮತ್ತೆ ಓದಿದೆ. ಈ ರಿಕನ್ಸಿಲೆಷನ್ ವಿಚಾರದಲ್ಲಿ ನಮ್ಮ ಸರ್ಕಾರವೆ ಸಾಕಷ್ಟು ಸುಧಾರಣೆಗಳನ್ನು ಸಾಧಿಸಿದೆ ಎಂದು ವರದಿ ಹೇಳುತ್ತಿದೆ. ಇದರ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ಶೇ.50 ರಷ್ಟು ರಿಕನ್ಸಿಲೆಷನ್ ಆಗುತ್ತಿರಲಿಲ್ಲ. ಆದರೆ ನಾವು ತೆಗೆದುಕೊಂಡ ಕ್ರಮಗಳಿಂದ ಈ ಪ್ರಮಾಣ ಶೇ.16.18 ರಷ್ಟು ಮಾತ್ರ ಬಾಕಿ ಉಳಿಯುತ್ತಿತ್ತು. ಮೆಚ್ಚುಗೆ ಸೂಚಿಸಬೇಕಾದ್ದಕ್ಕೆ ಭ್ರಷ್ಟಾಚಾರ ಅಂತ ಕರೆದಿದೆ ಈ ಪೆದ್ದು.
ಭಷ್ಟಾಚಾರ ಎಂದರೆ ಯಾವುದು ಗೊತ್ತಾ ಸುಧಾಕರ್? ಕೋವಿಡ್ ಸಮಯದಲ್ಲಿ ಹೆಣಗಳ ವಿಚಾರದಲ್ಲೂ ಲಂಚ ಹೊಡೆಯುವುದು ಭ್ರಷ್ಟಾಚಾರ. 2020-21ರಲ್ಲೆ ಸುಮಾರು 3000 ಕೋಟಿ ರೂಗಳಷ್ಟು ಕೊರೊನಾ ಭ್ರಷ್ಟಾಚಾರ ನಡೆದಿದೆಯೆಂದು ಆಗಿನ ಪಬ್ಲಿಕ್ ಅಕೌಂಟ್ಸ್ ಕಮಿಟಿಯ ಅಧ್ಯಕ್ಷರಾದ ಎಚ್ ಕೆ ಪಾಟೀಲರು ಸ್ಪೀಕರ್ ಗೆ ವರದಿ ಕೊಟ್ಟಿದ್ದಾರೆ. ಇದು ಭ್ರಷ್ಟಾಚಾರ.
ಆದರೆ ಈ ಸ್ಪೀಕರ್ ಮಹಾಶಯರು ಎಚ್.ಕೆ.ಪಾಟೀಲರು ಕೊಟ್ಟ ವರದಿಯನ್ನು ಸದನದಲ್ಲಿ ಮಂಡಿಸದೆ ತಾನು ವಿಧಾನಸಭಾಧ್ಯಕ್ಷ್ಷ ಎನ್ನುವುದನ್ನು ಮರೆತು ಆರ್ ಎಸ್ಎಸ್ ನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.