Siddaramaiah Oath: ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ ಕಾರ್ಯಕ್ರಮದ ಸ್ಥಳ, ಸಮಯ; ಶಿಷ್ಟಾಚಾರಗಳು, ವಿಧಿವಿಧಾನಗಳು ಹೀಗಿರಲಿ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ (ಮೇ 20) ಪ್ರಮಾಣವಚನ ಸ್ವೀಕರಿಸಲಿರುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ನಾಳೆ ವಿವಿಧ ರಾಜ್ಯಗಳ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಬೆಂಗಳೂರು: ಯಾವುದೇ ಹೊಸ ಸರ್ಕಾರ ಬಂದಾಗ ಅಥವಾ ಬದಲಾವಣೆಯಾದಾಗ ಮುಖ್ಯಮಂತ್ರಿ (Chief Minister) ಹಾಗೂ ಸಚಿವ ಸಂಪುಟದ ಪದಗ್ರಹಣ ಸಾಮಾನ್ಯ. ಅದಕ್ಕೆ ತನ್ನದೇ ಆದ ಶಿಷ್ಟಾಚಾರ (Protocol) ಹಾಗೂ ವಿಧಿ ವಿಧಾನಗಳು ಇರುತ್ತವೆ. ಇಡೀ ಕಾರ್ಯಕ್ರಮ ಹೇಗಿರಬಹುದು ಎನ್ನುವ ಮಾಹಿತಿ ಇಲ್ಲಿದೆ.
ರಾಜ್ಯಪಾಲರ ಕಚೇರಿಯ (Raja Bhavan) ಸೂಚನೆಯಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ( ಡಿಪಿಎಆರ್) ಅಧಿಕಾರಿಗಳು ಇಡೀ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ.
ಪದಗ್ರಹಣ ಪ್ರಕ್ರಿಯೆಯ ಹಿಂದೆ ಸಚಿವಾಲಯದ ಅಧಿಕಾರಿಗಳು ಕೆಲಸ ಮಾಡಿದರೂ ಹೆಚ್ಚು ಮಾನ್ಯತೆ ಇರುವುದು ರಾಜ್ಯಪಾಲರಿಗೆ. ಏಕೆಂದರೆ ಮುಖ್ಯಮಂತ್ರಿಯಾದಿಯಾಗಿ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸುವವರು ರಾಜ್ಯಪಾಲರೇ.
ಮುಖ್ಯಮಂತ್ರಿ ಸೇರಿದಂತೆ ಸಂಪುಟಕ್ಕೆ ಸೇರುವ ಪಟ್ಟಿ ಆಧರಿಸಿ ಎಲ್ಲರಿಗೂ ರಾಜ್ಯಪಾಲರ ಕಚೇರಿಯಿಂದಲೇ ಸಂದೇಶ ರವಾನೆಯಾಗುತ್ತವೆ. ಅವರೆಲ್ಲರೂ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲ ಸಾಲಿನಲ್ಲಿಯೇ ಆಸೀನರಾಗುತ್ತಾರೆ. ರಾಜ್ಯಪಾಲರ ಆಗಮನದ ನಂತರ ರಾಷ್ಟ್ರಗೀತೆ ನುಡಿಸಲಾಗುತ್ತದೆ.
ರಾಜ್ಯಪಾಲರ ಕಚೇರಿ ಸಿಬ್ಬಂದಿ ಒಬ್ಬಬ್ಬರನ್ನೇ ಕರೆದಾಗ ರಾಜ್ಯಪಾಲರು ಗೌಪ್ಯತೆ ವಿಧಿ ಬೋಧಿಸುತ್ತದ್ದಂತೆಯೇ ಪ್ರಚಾರ ವಚನ ಸ್ವೀಕಾರ ನಡೆಯಲಿದೆ. ಕೆಲವರು ಮನೆ ದೇವರ ಹೆಸರಿನಲ್ಲಿ, ಮತ್ತೆ ಕೆಲವರು ತಮ್ಮ ಕುಟುಂಬದವರು, ಗುರುಗಳ ಹೆಸರಿನಲ್ಲಿ, ಸತ್ಯದ ಪ್ರಮಾಣ ಸ್ವೀಕರಿಸುತ್ತಾರೆ. ಆನಂತರ ಕಡತಕ್ಕೆ ಸಹಿ ಹಾಕಿ ರಾಜ್ಯಪಾಲರಿಂದ ಅಭಿನಂದನೆ ಸ್ವೀಕರಿಸುತ್ತಾರೆ. ಕೊನೆಗೆ ಗುಂಪು ಛಾಯಾಚಿತ್ರ ಇರುತ್ತದೆ. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಇಡೀ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗುತ್ತದೆ.
ಕಾರ್ಯಕ್ರಮಕ್ಕೆಂದು ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಅಧಿಕಾರಿಗಳು, ರಾಜಕೀಯ ನೇತಾರರು ಹಾಗೂ ಆಯಾ ಪಕ್ಷದ ವರಿಷ್ಠರನ್ನು ಆಹ್ವಾನಿಸಲಾಗುತ್ತದೆ. ಇದರಲ್ಲಿ ಝಡ್ ಪ್ಲಸ್ ಭದ್ರತೆಗೆ ಒಳಪಡುವ ನೇತಾರರು ಇರುತ್ತಾರೆ. ಈ ಅತಿ ಗಣ್ಯರಿಗೂ ಶಿಷ್ಟಾಚಾರದ ಪ್ರಕಾರವೇ ಮುಂಭಾಗದಲ್ಲಿ ಆಸನ ವ್ಯವಸ್ಥೆ ಇರಲಿದೆ. ಇದರೊಟ್ಟಿಗೆ ಪ್ರಮಾಣ ವಚನ ಸ್ವೀಕರಿಸುವ ಗಣ್ಯರ ಕುಟುಂಬದವರಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಇರಲಿದೆ.
ಸಾಮಾನ್ಯವಾಗಿ ರಾಜಭವನದ ಗಾಜಿನ ಮನೆಯ ಆವರಣದಲ್ಲಿ ಸಂಪುಟದ ಚಟುವಟಿಕೆಗಳು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. 2013ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆದಾಗಲೂ ಕಂಠೀರವ ಕ್ರೀಡಾಂಗಣದಲ್ಲಿಯೇ ಪ್ರಮಾಣ ವಚನ ಒಬ್ಬರೇ ಸ್ವೀಕರಿಸಿದ್ದರು. ನಂತರ ವಿಸ್ತರಣೆ ರಾಜಭವನದಲ್ಲೇ ನಡೆದಿತ್ತು.
ಈ ಬಾರಿಯೂ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ಅತ್ಯುತ್ಸಾಹದ ನಡುವೆಯೇ ಪದಗ್ರಹಣಕ್ಕೆ ಮುಂದಾಗಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಶನಿವಾರ ಮಧ್ಯಾಹ್ನ 12.30ಕ್ಕೆ ಆಯೋಜನೆಗೊಂಡಿದೆ.
ನೆರೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಜಮ್ಮುಕಾಶ್ಮೀರದ ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ, ಸಿಪಿಎಂನ ಸೀತಾರಾಮ್ ಯೆಚೂರಿ, ಸಿಪಿಐನ ಡಿ ರಾಜಾ ಸೇರಿದಂತೆ ಹಲವು ಪಕ್ಷಗಳು ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10 ರಂದು ಚುನಾವಣಾ ನಡೆದು ಮೇ 13ಕ್ಕೆ ಫಲಿತಾಂಶ ಪ್ರಕಟವಾಗಿತ್ತು. 133 ಮ್ಯಾಜಿಕ್ ಸಂಖ್ಯೆಯಾಗಿತ್ತು. ಕಾಂಗ್ರೆಸ್ 135 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ., ಬಿಜೆಪಿ 66, ಜೆಡಿಎಸ್ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ.