ಕನ್ನಡ ಸುದ್ದಿ  /  Nation And-world  /  Ayodhya News Ram Navami 2024 Celebrations At Ayodhya Ram Mandir Ram Lalla Surya Tilak Live Telecast Dd Live Uks

ಅಯೋಧ್ಯೆಯಲ್ಲಿ ರಾಮನವಮಿ; ಮಧ್ಯಾಹ್ನ 12ಕ್ಕೆ ಬಾಲರಾಮನ ಹಣೆಗೆ ಸೂರ್ಯತಿಲಕ, ಸಂಭ್ರಮದ ನೇರ ಪ್ರಸಾರ ವಿಡಿಯೋ ಲಿಂಕ್‌ ಇಲ್ಲಿದೆ ನೋಡಿ

ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ, ಸಡಗರ ಮುಗಿಲುಮುಟ್ಟಿದೆ. ಭಕ್ತಿಭಾವ ತುಂಬಿದ್ದು, ಇಂದು ಮಧ್ಯಾಹ್ನ 12ಕ್ಕೆ ಬಾಲರಾಮನ ಹಣೆಗೆ ಸೂರ್ಯತಿಲಕ ಬೀಳುವುದನ್ನು ಕಣ್ತುಂಬಿಕೊಳ್ಳಲು ರಾಮಭಕ್ತರು ಕಾತರರಾಗಿದ್ದಾರೆ. ಈ ಸಂಭ್ರಮದ ನೇರ ಪ್ರಸಾರ ವಿಡಿಯೋವನ್ನು ಇಲ್ಲಿ ನೋಡಬಹುದು.

ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ ಸಂಭ್ರಮ ಶುರುವಾಗಿದೆ. ಮಧ್ಯಾಹ್ನ 12ಕ್ಕೆ ಬಾಲರಾಮನ ಹಣೆಗೆ ಸೂರ್ಯತಿಲಕ ಬೀಳಲಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ ಸಂಭ್ರಮ ಶುರುವಾಗಿದೆ. ಮಧ್ಯಾಹ್ನ 12ಕ್ಕೆ ಬಾಲರಾಮನ ಹಣೆಗೆ ಸೂರ್ಯತಿಲಕ ಬೀಳಲಿದೆ.

ಅಯೋಧ್ಯೆ: ಶ್ರೀರಾಮಜನ್ಮಭೂಮಿಯ ರಾಮಮಂದಿರದಲ್ಲಿ ಇಂದು ರಾಮನವಮಿ ಉತ್ಸವದ ಸಂಭ್ರಮ. ಮುಂಜಾನೆ 3 ಗಂಟೆಗೆ ದೇವರ ಗರ್ಭಗುಡಿ ತೆರೆದಿದ್ದು, 5 ಗಂಟೆಗೆ ಮುಂಜಾನೆ ಆರತಿಯೂ ನೆರವೇರಿದೆ. ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿಯ ತಿಲಕ ವೀಕ್ಷಣೆಗೆ ಎಲ್ಲರೂ ಕಾತರರಾಗಿದ್ದಾರೆ. ಮಧ್ಯಾಹ್ನ 12 ಗಂಟೆಗೆ 4 ರಿಂದ 6 ನಿಮಿಷಗಳ ಕಾಲ ರಾಮಲಲಾನ ಹಣೆಯ ಮೇಲೆ ಸೂರ್ಯತಿಲಕ ಕಂಗೊಳಿಸಲಿದೆ.

ಅಯೋಧ್ಯೆ ರಾಮ ಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭದ ನಂತರ ಇದೇ ಮೊದಲ ಸಲ ರಾಮನವಮಿ ಆಚರಣೆಯಾಗುತ್ತಿದೆ. ಕಳೆದ 500 ವರ್ಷಗಳ ಅವಧಿಯಲ್ಲಿ ರಾಮಮಂದಿರದಲ್ಲಿ ರಾಮನವಮಿ ಆಚರಣೆ ಕೂಡ ಮೊದಲ ಸಲ ನಡೆಯುತ್ತಿರುವ ಕಾರಣ, ಉತ್ತರ ಪ್ರದೇಶ ಸರ್ಕಾರ ಅಗತ್ಯ ವ್ಯವಸ್ಥೆ ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಭಕ್ತ ಜನಸಾಗರ ಅಯೋಧ್ಯೆಯಲ್ಲಿದ್ದು, ಇಂದು (ಏಪ್ರಿಲ್ 17) ಬ್ರಾಹ್ಮಿ ಮುಹೂರ್ತದಲ್ಲಿ (ನಸುಕಿನ 3.30ಕ್ಕೆ) ಬಾಲರಾಮನ ಗರ್ಭಗುಡಿ ಬಾಗಿಲು ತೆರೆದಿದೆ. ಇಂದು 19 ಗಂಟೆ ದೇವರ ದರ್ಶನ ಇರಲಿದೆ. ನೈವೇದ್ಯ ಸಂದರ್ಭದಲ್ಲಿ 5 ನಿಮಿಷ ಕಾಲ ಗರ್ಭಗುಡಿಯ ಪರದೆ ಮುಚ್ಚಲಿದೆ.

ಮುಂಜಾನೆ ಮಂಗಳ ಆರತಿಯಿಂದ ಆರಂಭಗೊಂಡು ರಾತ್ರಿ 11 ಗಂಟೆಯವರೆಗೆ ಬಾಲರಾಮನ ದರ್ಶನದ ಅವಧಿಯನ್ನು 19 ಗಂಟೆಗಳವರೆಗೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವಿಸ್ತರಿಸಿದೆ. ನಾಲ್ಕು ಸಲ ನೈವೇದ್ಯಗಳ ಸಮಯದಲ್ಲಿ ಕೇವಲ 5 ನಿಮಿಷಗಳ ಕಾಲ ಗರ್ಭಗುಡಿಯ ಪರದೆ ಮುಚ್ಚುವುದಾಗಿ ಟ್ರಸ್ಟ್ ತಿಳಿಸಿದೆ. ವಿಐಪಿ ದರ್ಶನ ರದ್ದುಗೊಳಿಸಿರುವ ಕಾರಣ, ಗಣ್ಯ ಅತಿಥಿಗಳು ಏಪ್ರಿಲ್ 19 ರ ನಂತರ ಮಾತ್ರ ದರ್ಶನಕ್ಕೆ ಭೇಟಿ ನೀಡಬೇಕೆಂದು ಟ್ರಸ್ಟ್‌ ವಿನಂತಿಸಿದೆ.

ಮಂಗಳವಾರ ತಡರಾತ್ರಿಯಿಂದಲೇ ಚೈತ್ರ ರಾಮ ನವಮಿ ಆಚರಣೆ ಶುರು

ಅಯೋಧ್ಯೆ ರಾಮಮಂದಿರದಲ್ಲಿ ರಾಮನವಮಿ ಆಚರಣೆಗಾಗಿ ಸಾಕಷ್ಟು ಮುಂಚಿತವಾಗಿ ಸಿದ್ಧತೆಗಳು ನಡೆದಿದ್ದವು. ಇದರ ಅಂತಿಮ ಹಂತದ ತಯಾರಿಯ ತಪಾಸಣೆಯನ್ನೂ ಮಂಗಳವಾರ ಅಧಿಕಾರಿಗಳು ಮಾಡಿದ್ದರು. ಮಂಗಳವಾರದಿಂದಲೇ ವಿಐಪಿ ದರ್ಶನ ರದ್ದಾಗಿದೆ. ಎಲ್ಲರೂ ಒಂದಾಗಿ ರಾಮದರ್ಶನ ಮಾಡುವಂತೆ ರಾಮಮಂದಿರದ ಆಡಳಿತ ಮಂಡಳಿ ಮನವಿ ಮಾಡಿದೆ.

ಅಯೋಧ್ಯೆಯಲ್ಲಿ ಮಂಗಳವಾರ ರಾತ್ರಿಯಿಂದ ಆರಂಭವಾದ ಚೈತ್ರರಾಮ ನವಮಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ವಿಶೇಷ ಗಮನ ಹರಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಬಿಸಿಲ ತಾಪದಿಂದ ರಕ್ಷಿಸಲು ಬಣ್ಣಬಣ್ಣದ ಟಾರ್ಪಲ್, ಭಕ್ತರಿಗೆ ತಂಗಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.

ನಸುಕಿನಲ್ಲೇ ರಾಮಮಂದಿರಕ್ಕೆ ಭಕ್ತರ ಆಗಮನ

ಈ ಸಲ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದು, ಜನಸಂದಣಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ, ಪೊಲೀಸ್ ಪಡೆ, ಮಹಾನಗರ ಪಾಲಿಕೆಯ ಪ್ರತ್ಯೇಕ ತಂಡಗಳು ಕರ್ತವ್ಯ ನಿರ್ವಹಿಸುತ್ತಿವೆ. ಸರಯೂ ನದಿಯಲ್ಲಿ ಸ್ನಾನ ಮಾಡುವ ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ, ಎನ್‌ಡಿಆರ್‌ಎಫ್‌, ಎಸ್‌ಡಿಎಆರ್‌ಎಫ್‌ ತಂಡಗಳೂ ಸ್ಥಳದಲ್ಲಿವೆ.

ನಸುಕಿನಲ್ಲೇ ಸರಯೂ ನದಿಯಲ್ಲಿ ಮುಳುಗೆದ್ದು, ಶುಭ್ರ ಉಡುಪು ಧರಿಸಿ ಸಾಗುತ್ತಿರುವ ದೃಶ್ಯವೂ ಕಂಡುಬಂತು. ಬುಧವಾರ ನಸುಕಿನಲ್ಲೇ ಬಾಲರಾಮನ ದರ್ಶನಕ್ಕೆ ಭಕ್ತರು ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ರಾಮ ಮಂದಿರದಲ್ಲಿ ನಡೆಯುವ ರಾಮನವಮಿ ಆಚರಣೆಯ ನೇರ ಪ್ರಸಾರ

ರಾಮ ಭಕ್ತರ ಅನುಕೂಲಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪರವಾಗಿ ಪ್ರಸಾರ ಭಾರತಿ ಈ ಉಪಕ್ರಮವನ್ನು ಕೈಗೊಂಡಿದೆ. ಇದೇ ನೇರ ಪ್ರಸಾರವನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಎಲ್ಲರೂ ತಮ್ಮ ತಮ್ಮ ಮನೆಯಿಂದಲೂ ನೋಡಬಹುದು.

IPL_Entry_Point