ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Amartya Sen: ಮುಸ್ಲಿಮರನ್ನು ಹೊರಗಿಡುವ ಬಿಜೆಪಿ ರಾಜಕಾರಣ ಸ್ವೀಕಾರ್ಹವಲ್ಲದ ಅನಾಗರಿಕತನ: ಅಮರ್ತ್ಯ ಸೇನ್‌ ಅಭಿಮತ

Amartya Sen: ಮುಸ್ಲಿಮರನ್ನು ಹೊರಗಿಡುವ ಬಿಜೆಪಿ ರಾಜಕಾರಣ ಸ್ವೀಕಾರ್ಹವಲ್ಲದ ಅನಾಗರಿಕತನ: ಅಮರ್ತ್ಯ ಸೇನ್‌ ಅಭಿಮತ

ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಸ್ಲಿಮರನ್ನು ಹೊರಗಿಡುವ ಬಿಜೆಪಿಯ ಸಿದ್ಧಾಂತವು, ಸ್ವೀಕಾರ್ಹವಲ್ಲದ ಅನಾಗರಿಕತನ ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮರ್ತ್ಯ ಸೇನ್‌ ಅವರು ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಅಮರ್ತ್ಯ ಸೇನ್‌ (ಸಂಗ್ರಹ ಚಿತ್ರ)
ಅಮರ್ತ್ಯ ಸೇನ್‌ (ಸಂಗ್ರಹ ಚಿತ್ರ) (PTI)

ನವದೆಹಲಿ: ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಸ್ಲಿಮರನ್ನು ಹೊರಗಿಡುವ ಬಿಜೆಪಿಯ ಸಿದ್ಧಾಂತವು, ಸ್ವೀಕಾರ್ಹವಲ್ಲದ ಅನಾಗರಿಕತನ ಎಂದು ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮರ್ತ್ಯ ಸೇನ್‌ ಅವರು ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಅದರಲ್ಲೂ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೋಮುವಾದಿ ಹಾಗೂ ಬಹುಸಂಖ್ಯಾತವಾದಿ ನೀತಿ, ಭಾರತವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಅಮರ್ತ್ಯ ಸೇನ್‌ ಹರಿಹಾಯ್ದಿದ್ದಾರೆ.

ಮೋದಿ ಸರ್ಕಾರದ ಕುರಿತಾದ ತಮ್ಮ ಹಿಂದಿನ ನಿಲುವನ್ನು ಪುನರುಚ್ಚರಿಸಿದ ಅಮರ್ತ್ಯ ಸೇನ್‌, "ಇದು ವಿಶ್ವದ ಅತ್ಯಂತ ಭಯಾನಕ ಸರ್ಕಾರ" ಎಂದು ಹೇಳಿರುವುದು ಗಮನ ಸೆಳೆದಿದೆ.

ಮೋದಿ ಸರ್ಕಾರ ಮತ್ತು ಬಿಜೆಪಿ ಅಲ್ಪಸಂಖ್ಯಾತ ಸಮುದಾಯದ ಬಗೆಗಿನ ಜನರ ನಿರೂಪಣೆಯನ್ನು ಬದಲಾಯಿಸುತ್ತಿದೆ. ಅದರಲ್ಲೂ ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಹೆಚ್ಚಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದು ಸ್ವೀಕಾರ್ಹವಲ್ಲದ ಅನಾಗರಿಕತನ ಎಂದು ಅಮರ್ತ್ಯ ಸೇನ್‌ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಸರ್ಕಾರ ಅಂಗೀಕರಿಸಿರುವ ಪೌರತ್ವ (ತಿದ್ದುಪಡಿ) ಕಾಯ್ದೆ, ಭಾರತದಲ್ಲಿ ನಿರಾಶ್ರಿತರಾಗಿರುವ ಮುಸ್ಲಿಮರಿಗೆ ಪೌರತ್ವವನ್ನು ನಿರಾಕರಿಸುತ್ತದೆ. ಅಲ್ಲದೇ ಬಿಜೆಪಿಯ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಮುಸ್ಲಿಮರನ್ನು "ಬಾಬರ್ ಕಿ ಔಲಾದ್"(ಬಾಬರ್‌ ವಂಶಜರು) ಎಂದು ಉಲ್ಲೇಖಿಸುತ್ತಾರೆ. ಅಲ್ಲದೇ "ಅಬ್ಬಾ ಜಾನ್" ಎಂದು ಉಲ್ಲೇಖಿಸಿ ಮುಸ್ಲಿಮರನ್ನು ನಿಂದಿಸಲಾಗುತ್ತಿದೆ. ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗುವಂತೆ ಬೆದರಿಕೆಯೊಡ್ಡಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಸನ್ನಿವೇಶವನ್ನು ನಿರ್ಮಾಣ ಮಾಡಿದೆ ಎಂದು ಅಮರ್ತ್ಯ ಸೇನ್‌ ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರೀಯತಾವಾದವು ತುಂಬಾ ವಿಕೃತವಾಗಿದೆ. ಭಾರತವು ವಿಭಿನ್ನವಾದ ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದಿದ್ದು, ವಿಭಿನ್ನ ಸಾಮಾಜಿಕ, ರಾಜಕೀಯ, ಆರ್ಥಿಕ ಕಾಳಜಿಗಳನ್ನು ಇದ್ದಕ್ಕಿಂದ್ದಂತೆ ಬದಲಾಯಿಸುವುದು ಅಪಾಯಕಾರಿಯಾಗಿದೆ. ಹಿಂದೂಗಳನ್ನು ಮಾತ್ರ ಭಾರತೀಯರು ಎಂದು ಪರಿಗಣಿಸುವುದು ಮತ್ತು ಇತರರನ್ನು ಪರಕೀಯರು ಎಂದು ಪರಿಗಣಿಸುವುದು ತಪ್ಪು ಎಂದು ಅಮರ್ತ್ಯ ಸೇನ್‌ ನುಡಿದಿದ್ದಾರೆ.

ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಧರ್ಮಗಳ ನಡುವೆ ಐಕ್ಯತೆಯನ್ನು ಮೂಡಿಸಿದ್ದರು. ಆದರೆ ಈಗ ಭಾರತದ ಬಹುತ್ವದ ಸ್ವರೂಪವನ್ನು ಕಡೆಗಣಿಸಲಾಗುತ್ತಿದೆ. ಬಹುತ್ವ ಸಿದ್ಧಾಂತದ ಮೇಲೆ ದಾಳಿ ಮಾಡಲಾಗುತ್ತಿದೆ. ದೇಶದಲ್ಲಿ ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುವಂತಹ ಸನ್ನಿವೇಶವನ್ನು ಸೃಷ್ಟಿಸಲಾಗಿದೆ ಎಂದು ಅಮರ್ತ್ಯ ಸೇನ್‌ ಅಸಮಾಧಾನ ಹೊರಹಾಕಿದರು.

ಭಾರತವು ಶತಶತಮಾನಗಳಿಂದ ಕೂಡಿ ಬಾಳುವ ಪದ್ದತಿಯನ್ನು ಅನುಸರಿಸುತ್ತಿದೆ. ಕ್ರಿಶ್ಚಿಯನ್ನರು, ಯಹೂದಿಗಳು, ಮುಸ್ಲಿಮರು ಹೀಗೆ ಆಶ್ರಯ ಬಯಸಿ ಬಂದ ಎಲ್ಲರನ್ನೂ ಭಾರತ ಅಪ್ಪಿಕೊಂಡಿದೆ. ಆ ಸಮುದಾಯಗಳೂ ಕೂಡ ಭಾರತೀಯ ಸಂಸ್ಕೃತಿಯೊಂದಿಗೆ ಬೆರೆತು ಸೌಹಾರ್ದಯುತ ಜೀವನ ನಡೆಸುತ್ತಿವೆ. ಆದರೆ ಬಿಜೆಪಿ ಈ ಸೌಹಾರ್ದತೆ ಮೇಲೆ ದೊಡ್ಡ ದಾಳಿ ನಡೆಸುತ್ತಿದೆ ಎಂದು ಅಮರ್ತ್ಯ ಸೇನ್‌ ಕಿಡಿಕಾರಿದ್ದಾರೆ.

ಮುಸ್ಲಿಮರನ್ನು ಹೊರಗಿಡಬಹುದೆಂಬ ಭಾವನೆ, ಅವರು ದೇಶದ ಸ್ವರೂಪದ ರಾಜಕೀಯ ತಿಳುವಳಿಕೆಯ ಭಾಗವಾಗಬಾರದು, ಅವರು ಭಾರತವನ್ನು ರೂಪಿಸುವ ಸಮಾಜದ ಸಂಸ್ಕೃತಿ ಮತ್ತು ರಾಜಕೀಯದ ಭಾಗವಾಗಬಾರದು ಎಂಬ ಚಿಂತನೆಯನ್ನು ಒಳಗೊಂಡಿದೆ. ಈ ಚಿಂತನೆ ಮುಂದೊಂದು ದಿನ ಸಂಪೂರ್ಣವಾಗಿ ಪರಕೀಯಗೊಳಿಸಬಹುದು ಎಂದು ಅಮರ್ತ್ಯ ಸೇನ್‌ ಎಚ್ಚರಿಸಿದ್ದಾರೆ.

ಹಿಂದೂ-ಮುಸ್ಲಿಂ ಸಂಬಂಧವು ಭಾರತೀಯ ಇತಿಹಾಸದ ಅತ್ಯಂತ ಪ್ರಮುಖ ಭಾಗವಾಗಿದೆ. ಪ್ರತಿಯೊಂದೂ ಕ್ಷೇತ್ರದಲ್ಲೂ ಈ ಎರಡೂ ಸಮುದಾಯಗಳ ನಡುವೆ ಬಾಂಧವ್ಯ ಬೆಸೆದುಕೊಂಡಿದೆ. ರಾಷ್ಟ್ರವು ಸಮಾಜದ ವಿವಿಧ ಭಾಗಗಳ ಸಂಯೋಜಿತ ಶಕ್ತಿಗಳ ಮೇಲೆ ಅವಲಂಬಿತವಾಗಿದೆ. ಇದನ್ನು ಬದಲಿಸುವುದು ಖಂಡಿತವಾಗಿಯೂ ದೇಶಕ್ಕೆ ಒಳ್ಳೆಯದಲ್ಲ ಎಂಬುದು ನನ್ನ ಭಾವನೆ ಎಂದು ಅಮರ್ತ್ಯ ಸೇನ್‌ ಹೇಳಿದ್ದಾರೆ.

IPL_Entry_Point

ವಿಭಾಗ