Confused Congress: ಸಿಸೋಡಿಯಾ ಬಂಧನ; ಹೊಡೆತದ ಆಘಾತಕ್ಕೆ ಸಿಲುಕಿದ ಆಪ್; ಸಿಕ್ಕಾಪಟ್ಟೆ ಗಲಿಬಿಲಿಗೆ ಒಳಗಾಗಿರುವ ಕಾಂಗ್ರೆಸ್ ನಾಯಕರು
Confused Congress: ದೆಹಲಿಯಲ್ಲಿ ಮನೀಶ್ ಸಿಸೋಡಿಯಾ ಅವರ ಬಂಧನದ ನಂತರ ಕಾಂಗ್ರೆಸ್ನಲ್ಲಿ ಗೊಂದಲ ಉಂಟಾಗಿದೆ. ಸಿಬಿಐನ ಕ್ರಮವನ್ನು ವಿರೋಧಿಸುತ್ತಲೇ ಹಲವು ನಾಯಕರು ಮೋದಿ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡಿದ್ದಾರೆ. ಆದರೆ, ಹಲವು ಕಾಂಗ್ರೆಸ್ ನಾಯಕರು ಕೇಂದ್ರೀಯ ಏಜೆನ್ಸಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ!
ಅಬಕಾರಿ ನೀತಿ ಹಗರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಂಬರ್ 2 ಸ್ಥಾನದಲ್ಲಿದ್ದ ನಾಯಕ ಮನೀಶ್ ಸಿಸೋಡಿಯಾ ಬಂಧನ ರಾಜಕೀಯ ಸಂಚಲನ ಮೂಡಿಸಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಆಮ್ ಆದ್ಮಿ ಪಕ್ಷ (ಎಎಪಿ) ಮೇಲಿನ ದಾಳಿ ತೀವ್ರಗೊಳಿಸಿದೆ. ಈ ನಡುವೆ, ಸಮಾಜವಾದಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ, ಭಾರತ್ ರಾಷ್ಟ್ರ ಸಮಿತಿಯಂತಹ ಹಲವು ಪಕ್ಷಗಳು ಸಿಸೋಡಿಯಾ ಅವರನ್ನು ಸಮರ್ಥಿಸುತ್ತಲೇ ಮೋದಿ ಸರ್ಕಾರವನ್ನು ವಿರೋಧಿಸಿವೆ. ಕೇಂದ್ರ ಸರ್ಕಾರ ಆಮ್ ಆದ್ಮಿ ಪಕ್ಷದ ಸರ್ಕಾರದ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿವೆ.
ಮತ್ತೊಂದೆಡೆ, ದೆಹಲಿ ಮತ್ತು ಪಂಜಾಬ್ನ ಚುನಾವಣೆಗಳಲ್ಲಿ ಎಎಪಿ ವಿರುದ್ಧ ಸೋತು ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಈ ವಿಷಯದಲ್ಲಿ ತೀವ್ರ ಗೊಂದಲಕ್ಕೊಳಗಾಗಿದೆ. ಪಕ್ಷದ ವಿವಿಧ ನಾಯಕರು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದನ್ನು ಭ್ರಷ್ಟಾಚಾರದ ವಿರುದ್ಧ ಸರಿಯಾದ ಕ್ರಮ ಎಂದು ಕರೆದರೆ, ಕೆಲವರು ಸಿಸೋಡಿಯಾ ಅವರನ್ನು ಬಲಿಪಶು ಎಂದು ವ್ಯಾಖ್ಯಾನಿಸಿರುವುದು ಗಮನಸೆಳೆದಿದೆ.
ರಾಜಸ್ಥಾನ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಆಮ್ ಆದ್ಮಿ ಪಾರ್ಟಿ ನಾಯಕರ ಬಂಧನವನ್ನು ವಿರೋಧಿಸಿದ್ದು, ಇದು ಕೇಂದ್ರ ತನಿಖಾ ಸಂಸ್ಥೆಗಳ "ಭಯೋತ್ಪಾದನೆ". ದೇಶದಲ್ಲಿ "ಹಲವು ಸಿಸೋಡಿಯಾಗಳನ್ನು" ಬಂಧಿಸಲಾಗಿದೆ ಎಂದು ಟೀಕಿಸಿದ್ದರು.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಕೇಂದ್ರೀಯ ಏಜೆನ್ಸಿಗಳ ಕ್ರಮವನ್ನು ಸಮರ್ಥಿಸಿಕೊಳ್ಳುವಂತೆ ಮಾತನಾಡುತ್ತ, ಈ ಏಜೆನ್ಸಿಗಳು ಕಾಂಗ್ರೆಸ್ ನಾಯಕರನ್ನು ಬೇಟೆಯಾಡುವಾಗ ಆಮ್ ಆದ್ಮಿ ಪಾರ್ಟಿ ನಾಯಕರು ಕಣ್ಣು,ಕಿವಿ, ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರಲ್ಲವೇ? ಎಂದು ಪ್ರಶ್ನಿಸಿದರು. ಆದರೆ ಕಾಂಗ್ರೆಸ್ ನಾಯಕರು ಅವರಂತೆ ಅಲ್ಲ. ಈ ಸಂಸ್ಥೆಗಳು ಬಿಜೆಪಿ ನಾಯಕರ ಬಗ್ಗೆ ತನಿಖೆ ನಡೆಸುವುದಿಲ್ಲ, ವಿರೋಧ ಪಕ್ಷದ ನಾಯಕರ ಬಗ್ಗೆ ಮಾತ್ರ ತನಿಖೆ ನಡೆಸುತ್ತವೆ ಎಂದು ಟೀಕಿಸಿದರು.
ಬಂಧನವನ್ನು ವಿರೋಧಿಸುತ್ತಿರುವವರ ಪಟ್ಟಿಯಲ್ಲಿ ಶಶಿ ತರೂರ್ ಮತ್ತು ಅಭಿಷೇಕ್ ಮನುಸಿಂಘ್ವಿ ಅವರಂತಹ ನಾಯಕರೂ ಸೇರಿದ್ದಾರೆ. ಸಿಂಘ್ವಿ ಅವರು ಕೋರ್ಟಿನಲ್ಲಿ ಸಿಸೋಡಿಯಾ ಪರವಾಗಿ ವಕಾಲತ್ತು ಕೂಡ ಮಾಡುತ್ತಿದ್ದಾರೆ.
ಮತ್ತೊಂದೆಡೆ, ಬಂಧನವು ಸರಿಯಾಗಿದೆ ಎಂದು ಹೇಳುವ ಮೂಲಕ ಅನೇಕ ಕಾಂಗ್ರೆಸ್ ನಾಯಕರು ಎಎಪಿಯ ಮೇಲೆ ಹರಿಹಾಯ್ದಿದ್ದಾರೆ. ಒಂದು ಕಾಲದಲ್ಲಿ ಕೇಜ್ರಿವಾಲ್ ಅವರ ಮಿತ್ರರಾಗಿದ್ದ ಅಲ್ಕಾ ಲಾಂಬಾ ಅವರು ಎಎಪಿ ಸರ್ಕಾರವನ್ನು ಭ್ರಷ್ಟ ಎಂದು ಕರೆದರು.
"ಕೇಜ್ರಿವಾಲ್ ಬಹಳ ಹಿಂದಿನಿಂದಲೂ ಸಿಸೋಡಿಯಾವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದರು, ಆದರೆ ಅವರು ಸಿಸೋಡಿಯಾ ಅವರನ್ನು ಭ್ರಷ್ಟಾಚಾರದಲ್ಲಿ ಸಿಲುಕಿಸಿ ಅವರನ್ನು ದೂರ ಮಾಡಲು ಬಯಸಿದ್ದರು. ಅಷ್ಟೇ ಅಲ್ಲ, ಆಮ್ ಆದ್ಮಿ ಪಕ್ಷವು ತನ್ನ ವಿಶೇಷ ವ್ಯಕ್ತಿಯ (ದರೋಡೆಕೋರ) ಪರವಾಗಿ ಲಕ್ಷಾಂತರ ಶುಲ್ಕವನ್ನು ಪಾವತಿಸುವ ಮೂಲಕ ದೇಶದ ಅತ್ಯಂತ ದುಬಾರಿ ವಕೀಲರನ್ನು ನೇಮಕ ಮಾಡಿತ್ತು. ಆದರೆ ಸುಪ್ರೀಂ ಕೋರ್ಟ್ ಸಿಬಿಐ ಮೂಲಕ ಬಚಾವ್ ಮಾಡುವ ಕೆಲಸಕ್ಕೆ ಬ್ರೇಕ್ ಹಾಕಿತು ಎಂದು ಲಾಂಬಾ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕ ಅಜಯ್ ಮಾಕನ್ ಈ ಕುರಿತು ಪ್ರತಿಕ್ರಿಯಿಸಿದ್ದು, ಸಿಸೋಡಿಯಾ ಬಂಧನವನ್ನು ಸಮರ್ಥಿಸಿಕೊಂಡು, ತಮ್ಮ ಪಕ್ಷದ ನಾಯಕರಿಗೆ ಗೊಂದಲಕ್ಕೆ ಬೀಳದಂತೆ ಸಲಹೆ ನೀಡಿದ್ದಾರೆ.
ಮನೀಷ್ ಸಿಸೋಡಿಯಾ ಬಗ್ಗೆ ಸಹಾನುಭೂತಿ ಹೊಂದಿರುವ ಜನರು ಇದು ಭ್ರಷ್ಟಾಚಾರದ ವಿಷಯ ಎಂಬುದನ್ನು ತಿಳಿದುಕೊಳ್ಳಬೇಕು. ಈ ವಿಷಯವನ್ನು ಅದೇ ರೀತಿಯಲ್ಲಿ ನೋಡಬೇಕು. ನೀವು ಅವರ ಪರವಾಗಿ ಮಾತನಾಡಿ ಏನು ಬಿಂಬಿಸುತ್ತೀರಿ. ಅನ್ಯಾಯ ನಡೆದಿದೆ. ಅವರೇ ಸಮಿತಿ ರಚಿಸಿದ್ದು, ಮದ್ಯ ನೀತಿಯಲ್ಲಿ ಏನೇನು ಬದಲಾವಣೆ ಮಾಡಬೇಕು ಎಂಬುದನ್ನು ಸಮಿತಿಯೇ ಹೇಳಲಿ ಎಂದರು. ಆದರೆ, ನೀವು 100 ಕೋಟಿ ಲಂಚ ತೆಗೆದುಕೊಂಡಿದ್ದೀರಿ ಎಂದು ಅವರು ಹೇಳಿದರು. ಆಮ್ ಆದ್ಮಿ ಪಾರ್ಟಿಯು ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುವ ಕೆಲಸವನ್ನೇ ಮಾಡುತ್ತಿದೆ. ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮಾಕನ್ ಹೇಳಿದರು.