ಕನ್ನಡ ಸುದ್ದಿ  /  Sports  /  Shreyas Iyer Doubtful For Odi Series Against Australia

Shreyas Iyer: ಬೆನ್ನುನೋವು ಉಲ್ಬಣ; ಆಸೀಸ್ ವಿರುದ್ಧದ ಏಕದಿನ ಸರಣಿಗೆ ಅಯ್ಯರ್ ಅನುಮಾನ

ಆಸೀಸ್‌ ವಿರುದ್ಧದ ಏಕದಿನ ಸರಣಿಯು ಇದೇ ತಿಂಗಳ 17ರಿಂದ ಆರಂಭವಾಗಲಿದೆ. ಮೊದಲ ಏಕದಿನವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್

ಭಾರತ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಶ್ರೇಯಸ್ ಅಯ್ಯರ್, ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮತ್ತೆ ಮತ್ತೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರು ಆಸೀಸ್‌ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಸದ್ಯ ಅವರ ಆರೋಗ್ಯದ ಬಗ್ಗೆ ಬಿಸಿಸಿಐ ಕಾಳಜಿ ವಹಿಸುತ್ತಿದೆ. ಹೀಗಾಗಿ ಅವರು ಮಾರ್ಚ್ 17ರಿಂದ ಆರಂಭವಾಗುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವುದು ಅನುಮಾನ.

ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಅಯ್ಯರ್ ಬ್ಯಾಟಿಂಗ್ ಮಾಡಲಿಲ್ಲ. ಅವರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಅಲ್ಲಿ ಅವರನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಆರೋಗ್ಯ ತಪಾಸಣೆಗಾಗಿ, ಅಯ್ಯರ್ ಪಂದ್ಯ ಮುಗಿಯುವ ಮೊದಲೇ ಅಹಮದಾಬಾದ್‌ನಿಂದ ಬೆಂಗಳೂರಿಗೆ ಹಾರಿದ್ದರು.

ಸುದ್ದಿಸಂಸ್ಥೆ ESPNCricinfo ಪ್ರಕಾರ, ಅಯ್ಯರ್ ಕನಿಷ್ಠ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಳ್ಳುವುದು ಖಚಿತ. ನಾಲ್ಕನೇ ಟೆಸ್ಟ್‌ನಲ್ಲಿ ಸುಮಾರು ಎರಡು ದಿನಗಳನ್ನು ಮೈದಾನದಲ್ಲೇ ಕಳೆದ ನಂತರ ಅವರು, ತಮ್ಮ ಬೆನ್ನಿನ ಕೆಳಭಾಗದಲ್ಲಿ ಊತದ ಬಗ್ಗೆ ತಂಡದ ಆರೋಗ್ಯ ಸಿಬ್ಬಂದಿಯ ಗಮನಕ್ಕೆ ತಂದಿದ್ದರು.

ಬೆನ್ನು ನೋವಿನಿಂದಾಗಿ ನಾಲ್ಕನೇ ಟೆಸ್ಟ್‌ನಲ್ಲಿ ಅಯ್ಯರ್‌ ಬ್ಯಾಟಿಂಗ್‌ ಮಾಡಿರಲಿಲ್ಲ. ಹೀಗಾಗಿ ಭಾರತದ ಒಂಬತು ವಿಕೆಟ್‌ಗಳು ಪತನವಾಗುತ್ತಿದ್ದಂತೆಯೇ ತಂಡದ ಇನ್ನಿಂಗ್ಸ್‌ ಮುಕ್ತಾಯವಾಯ್ತು. ಆದರೂ, ಭಾರತ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಅಹಮದಾಬಾದ್‌ನಲ್ಲಿ ಭಾರತವು 2-1 ಅಂತರದಿಂದ ಸರಣಿ ಗೆದ್ದ ನಂತರ ಅಯ್ಯರ್‌ ಕುರಿತು ಮಾತನಾಡಿದ ನಾಯಕ ರೋಹಿತ್, “ಪಾಪದ ಹುಡುಗ, ಇದು ದುರದೃಷ್ಟಕರ”, ಎಂದು ಹೇಳಿದ್ದಾರೆ.

“ಅವರು ಬ್ಯಾಟಿಂಗ್ ಮಾಡಲು ಎರಡನೇ ದಿನ ಪೂರ್ತಿ ಕಾಯಬೇಕಾಯಿತು. ದಿನದ ಅಂತ್ಯದ ವೇಳೆಗೆ ಬೆನ್ನಿನ ಸಮಸ್ಯೆ ಮರುಕಳಿಸಿತು. ಹೀಗಾಗಿ ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ಕಳುಹಿಸಲಾಗಿತ್ತು.‌ ಈ ಬಗ್ಗೆ ನನಗೆ ನಿಖರವಾದ ಮಾಹಿತಿ ಇಲ್ಲ. ಸ್ಕ್ಯಾನ್ ವರದಿ ಏನು ಹೇಳಿದೆ ಎಂಬುದು ತಿಳಿದಿಲ್ಲ. ಅವರ ಆರೋಗ್ಯ ಉತ್ತಮವಾಗಿರುವಂತೆ ತೋರುತ್ತಿಲ್ಲ” ಎಂದು ನಾಯಕ ಹೇಳಿದ್ದಾರೆ.

ಈ ಬಗ್ಗೆ “ತಜ್ಞರ ಅಭಿಪ್ರಾಯವನ್ನು ಪಡೆಯಲಾಗುವುದು” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬಾಂಗ್ಲಾದೇಶ ಪ್ರವಾಸದ ನಂತರ ಡಿಸೆಂಬರ್‌ನಲ್ಲಿ ಅವರ ಬೆನ್ನುನೋವು ಮರುಕಳಿಸಿತು. ಆಗ, ಅಯ್ಯರ್‌ಗೆ ಬೆನ್ನಿನ ಕೆಳಭಾಗದಲ್ಲಿ ಊತವಿತ್ತು. ಅದಕ್ಕಾಗಿ ಅವರನ್ನು NCAಗೆ ಕಳುಹಿಸಲಾಯ್ತು. ಅವರ ಪುನರ್ವಸತಿ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಹೀಗಾಗಿ ಅವರು ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಏಕದಿನ ಸರಣಿ ಮತ್ತು ಮೊದಲ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡರು.

ಅವರ ಅನುಪಸ್ಥಿತಿಯಿಂದಾಗಿ ಆಸೀಸ್‌ ವಿರುದ್ಧದ ಏಕದಿನ ತಂಡದಲ್ಲಿ ಮಧ್ಯಪ್ರದೇಶದ ಬ್ಯಾಟರ್ ರಜತ್ ಪಾಟಿದಾರ್‌ಗೆ ಸ್ಥಾನ ಸಿಗಬಹುದು. ಮತ್ತೊಂದೆಡೆ ಸಂಜು ಸ್ಯಾಮ್ಸನ್‌ ಕೂಡಾ ಈ ಸ್ಥಾನ ತುಂಬುವ ಸಾಧ್ಯತೆ ಇದೆ. ಬೆಂಗಳೂರಿನ ಎನ್‌ಸಿಎಯಲ್ಲಿ ಎರಡು ವಾರಗಳ ಕಾಲ ದೈಹಿಕ ಕಂಡೀಷನಿಂಗ್ ನಂತರ ಪಾಟಿದಾರ್ ತಮ್ಮ ಫಿಟ್‌ನೆಸ್ ಟೆಸ್ಟ್ ಪೂರ್ಣಗೊಳಿಸಿದ್ದಾರೆ.

ಆಸೀಸ್‌ ವಿರುದ್ಧದ ಏಕದಿನ ಸರಣಿಯು ಇದೇ ತಿಂಗಳ 17ರಿಂದ ಆರಂಭವಾಗಲಿದೆ. ಮೊದಲ ಏಕದಿನವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.