Upendra: 18 ವಿಚಾರ ಕಳುಹಿಸಿದವರಿಗೆ ಉಪ್ಪಿ ಕಡೆಯಿಂದ ಸಿಕ್ಕ ಬಹುಮಾನವಿದು; ಪ್ರಶಸ್ತಿ ಪಡೆದ 18 ವಿಚಾರಗಳು ಇಲ್ಲಿವೆ ನೋಡಿ..
Oct 07, 2022 05:44 PM IST
18 ವಿಚಾರ ಕಳುಹಿಸಿದವರಿಗೆ ಉಪ್ಪಿ ಕಡೆಯಿಂದ ಸಿಕ್ಕ ಬಹುಮಾನವಿದು; ಪ್ರಶಸ್ತಿ ಪಡೆದ 18 ವಿಚಾರಗಳು ಇಲ್ಲಿವೆ ನೋಡಿ..
- ಸೆ. 18ರಂದು ಉಪೇಂದ್ರ ಮನೆಗೆ ಬಂದ ಸಾವಿರಾರು ಅಭಿಮಾನಿಗಳು 18 ಪದಗಳ 18 ವಿಚಾರಗಳ ಪತ್ರವನ್ನು ಪ್ರಜಾಕೀಯ ಬ್ಯಾಲೆಟ್ ಬಾಕ್ಸ್ನಲ್ಲಿ ಹಾಕಿದ್ದಾರೆ. ಅವುಗಳಲ್ಲಿ ಆಯ್ದ 18 ಅತ್ಯುತ್ತಮ ವಿಚಾರಗಳಿಗೆ ನಗದು ಬಹುಮಾನ ನೀಡಿದ್ದಾರೆ.
ಬೆಂಗಳೂರು: ಸ್ಯಾಂಡಲ್ವುಡ್ ನಟ, ನಿರ್ದೇಶಕ, ನಿರ್ಮಾಪಕ ಉಪೇಂದ್ರ ಕಳೆದ ತಿಂಗಳ 18ರಂದು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಚಿತ್ರತಂಡಗಳಿಂದ ಟೀಸರ್, ಪೋಸ್ಟರ್ಗಳು ಉಡುಗೊರೆ ರೂಪದಲ್ಲಿ ಪಡೆದುಕೊಂಡಿದ್ದಾರೆ. ಆದರೆ ಉಪೇಂದ್ರ ಅವರಿಗೆ ಮಾತ್ರ ಬೇರೆಯದೇ ಉಡುಗೊರೆ ಬೇಕಿತ್ತು. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿಯೇ ಡಿಮಾಂಡ್ ಮಾಡಿ ತರಿಸಿಕೊಂಡಿದ್ದರು. ಅಷ್ಟೇ ಅಲ್ಲ ಆ ಉಡುಗೊರೆಗಳಿಗೆ ಬಹುಮಾನವನ್ನೂ ನೀಡಿದ್ದಾರೆ.
ಸಿನಿಮಾದಲ್ಲಿನ ನಟನೆ ಜತೆಗೆ, ನಿರ್ದೇಶನದಲ್ಲಿಯೂ ಉಪೇಂದ್ರ ಬಿಜಿಯಾಗಿದ್ದಾರೆ. ಇದೆಲ್ಲದರ ಜತೆಗೆ ಪ್ರಜಾಕೀಯದಲ್ಲಿಯೂ ಮುಂದುವರಿಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಗಳನ್ನು ಹಂಚಿಕೊಳ್ಳುತ್ತ, ಪ್ರಜಾಕೀಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಹೀಗಿರುವಾಗಲೇ ಕಳೆದ ತಿಂಗಳ ಆರಂಭದಲ್ಲಿ ವಿಭಿನ್ನ ಕಾನ್ಸೆಪ್ಟ್ ಹಂಚಿಕೊಂಡಿದ್ದರು. ಸೆ. 18ರ ತಮ್ಮ ಬರ್ತ್ಡೇ ದಿನದಂದು ವಿಶೇಷ ಬರಹಗಳನ್ನು ಅಭಿಮಾನಿಗಳಿಂದ ಉಪ್ಪಿ ಆಹ್ವಾನಿಸಿದ್ದರು.
"ವಿಚಾರವಂತರಾಗೋಣಾ? ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ ಗಿಫ್ಟ್ ಎಲ್ಲಾ ಬಿಟ್ಟು... ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ" ಎಂದು ಉಪೇಂದ್ರ ಟ್ವಿಟ್ ಮಾಡಿದ್ದರು. ಅದರಂತೆ ಇದೀಗ ಬಹುಮಾನ ನೀಡಿದ್ದಾರೆ.
18 ಬರಹಗಳಿಗೆ ಬಹುಮಾನ..
ಸೆ. 18ರಂದು ಉಪೇಂದ್ರ ಮನೆಗೆ ಬಂದ ಸಾವಿರಾರು ಅಭಿಮಾನಿಗಳು 18 ಪದಗಳ 18 ವಿಚಾರಗಳ ಪತ್ರವನ್ನು ಪ್ರಜಾಕೀಯ ಬ್ಯಾಲೆಟ್ ಬಾಕ್ಸ್ನಲ್ಲಿ ಹಾಕಿದ್ದಾರೆ. ಅವುಗಳಲ್ಲಿ ಆಯ್ದ 18 ಸೂಕ್ತ ಅತ್ಯುತ್ತಮ ವಿಚಾರಗಳಿಗೆ ತಲಾ 1 ಸಾವಿರ ರೂಪಾಯಿಯನ್ನು ಡಿಜಿಟಲ್ ಪೇಮೆಂಟ್ ಮೂಲಕ ರವಾನಿಸಿದ್ದಾರೆ. ಹಾಗೆ ಬಹುಮಾನ ಪಡೆದವರ ವಿವರ ಮತ್ತು ಸುವಿಚಾರಗಳ ಮಾಹಿತಿ ಇಲ್ಲಿದೆ.
UI ಸಿನಿಮಾ ಶೂಟಿಂಗ್ನಲ್ಲಿ ಉಪೇಂದ್ರ ಬಿಜಿ..
ಬಹು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನದಲ್ಲಿ UI ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ಉಪೇಂದ್ರ ಅವರೇ ಮಾಡುತ್ತಿದ್ದಾರೆ. ಕಳೆದ ಜೂನ್ನಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ, ಡಾ. ಶಿವರಾಜ್ಕುಮಾರ್, ಪತ್ನಿ ಗೀತಾ, ಸುದೀಪ್, ಡಾಲಿ ಧನಂಜಯ್, ದುನಿಯಾ ವಿಜಯ್, ವಸಿಷ್ಠ ಸಿಂಹ ಹಾಗೂ ಇನ್ನಿತರರು ಭಾಗಿಯಾಗಿದ್ದರು. ಮುಹೂರ್ತ ಕಾರ್ಯಕ್ರಮದಲ್ಲಿ ಉಪೇಂದ್ರ ಕಾವಿ ವಸ್ತ್ರಧಾರಿಯಾಗಿ ನಾಮ ಹಾಕಿ ಕಾಣಿಸಿಕೊಂಡರೆ, ನಿರ್ಮಾಪಕರು ಹಾಗೂ ಚಿತ್ರತಂಡದ ಹಲವರು ಬಿಳಿ ಷರ್ಟ್, ಪಂಚೆ ಧರಿಸಿ ನಾಮ ಹಾಕಿದ್ದು ವಿಶೇಷವಾಗಿತ್ತು. ಇದೀಗ ಈ ಸಿನಿಮಾ, ಸದ್ಯ ಶೂಟಿಂಗ್ ಹಂತದಲ್ಲಿದೆ. ಬೆಂಗಳೂರಿನ ಹಲವೆಡೆ ಚಿತ್ರೀಕರಣ ನಡೆಯುತ್ತಿದ್ದು, ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.