ಹಣ ಹೊಂದಿಸಲಾಗದೆ ಭಾಗ್ಯಾ, ಕುಸುಮಾ, ಧರ್ಮರಾಜ್ ಪರದಾಟ; ಇತ್ತ ಶ್ರೇಷ್ಠಾ ತಾಂಡವ್ ಚೆಲ್ಲಾಟ; ಭಾಗ್ಯಲಕ್ಷ್ಮೀ ಧಾರಾವಾಹಿ
Apr 30, 2024 08:30 AM IST
ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್ 29ರ ಎಪಿಸೋಡ್. ಹಣ ಹೊಂದಿಸಲಾಗದೆ ಭಾಗ್ಯಾ, ಕುಸುಮಾ, ಧರ್ಮರಾಜ್ ಪರದಾಟ ಇತ್ತ ಶ್ರೇಷ್ಠಾ ತಾಂಡವ್ ಚೆಲ್ಲಾಟ ಎನ್ನುವಂತಾಗಿದೆ ಪರಿಸ್ಥಿತಿ. ಧರ್ಮರಾಜ್ಗೆ ಪೆನ್ಶನ್ ಹಣ ಸಿಗುತ್ತಿಲ್ಲ. ಇತ್ತ ಭಾಗ್ಯಾಗೆ ಕೆಲಸವೂ ಇಲ್ಲವಾಗಿದೆ.
Bhagyalakshmi Serial: ಭಾಗ್ಯಾಗೆ ದಿನೇ ದಿನೆ ಅಗ್ನಿ ಪರೀಕ್ಷೆ ಹೆಚ್ಚಾಗುತ್ತಿದೆ. ತಾಂಡವ್ ಡಿವೋರ್ಸ್ ಕೇಳಲು ಶುರು ಮಾಡಿದಾಗಿನಿಂದ ಭಾಗ್ಯಾ ಒಂದಲ್ಲಾ ಒಂದು ಕಷ್ಟಕ್ಕೆ ಸಿಲುಕುತ್ತಿದ್ದಾಳೆ. ತಾಂಡವ್, ಮನೆಗೆ ಒಂದು ಪೈಸೆ ದುಡ್ಡು ಕೊಡುತ್ತಿಲ್ಲ. ಮನೆಯ ಖರ್ಚಿನಲ್ಲಿ ಅರ್ಧ ನೀನೇ ನೋಡಿಕೊಳ್ಳಬೇಕು ಎಂದು ಕಂಡಿಷನ್ ಮಾಡಿದ್ಧಾನೆ. ಹಣ ಹೊಂದಿಸಲಾಗದೆ ಭಾಗ್ಯಾ ಕಷ್ಟ ಪಡುತ್ತಿದ್ಧಾಳೆ.
ಅತ್ತೆ ಮಾವನಿಗೆ ತಿಳಿಯದಂತೆ ಭಾಗ್ಯಾ, ಹೋಟೆಲ್ವೊಂದರಲ್ಲಿ ಕಾಫಿ ಮಾಡುವ ಕೆಲಸ ಹುಡುಕಿದ್ದಾಳೆ. ಮನೆ ಇಎಂಐ ಕಟ್ಟಬೇಕು, ಮಕ್ಕಳನ್ನು ಬೆಳೆಸಬೇಕು, ಮನೆ ರೇಷನ್, ಲೈಟ್ ಬಿಲ್ ಎಲ್ಲದಕ್ಕೂ ಹಣ ಹೊಂದಿಸಬೇಕು. ಜೊತೆಗೆ ಅದೇ ಸಮಯಕ್ಕೆ ಶ್ರೇಷ್ಠಾ, ಮನೆಗೆ ಬಂದು ಲಕ್ಷ್ಮಿ ಮದುವೆ ಸಮಯದಲ್ಲಿ ತಾನು ಕೊಟ್ಟಿದ್ದ 2 ಲಕ್ಷ ರೂ. ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾಳೆ. ಇವೆಲ್ಲವನ್ನೂ ಹೇಗೆ ನಿಭಾಯಿಸಬೇಕು ಅನ್ನೋದು ಭಾಗ್ಯಾಗೆ ತಿಳಿಯುತ್ತಿಲ್ಲ. ಸೊಸೆಯ ಕಷ್ಟ ಅರ್ಥ ಮಾಡಿಕೊಂಡು ಪೆನ್ಶನ್ ಹಣದಿಂದ ಸಾಲ ತೀರಿಸೋಣ ಎಂದು ಬಂದರೆ ಧರ್ಮರಾಜ್ ಪೆನ್ಶನ್ ಅಕೌಂಟ್ ಬ್ಲಾಕ್ ಆಗಿದೆ. ಸಮಸ್ಯೆ ಬಗ್ಗೆ ಮ್ಯಾನೇಜರ್ ಎಷ್ಟೇ ವಿವರಿಸುತ್ತಿದ್ದರೂ ಕುಸುಮಾಗೆ ಅರ್ಥವಾಗುತ್ತಿಲ್ಲ.
ಕೆಲಸ ಕಳೆದುಕೊಂಡ ಭಾಗ್ಯಾ
ನಮ್ಮ ಹಣವನ್ನು ನಾವು ಕೇಳುತ್ತಿದ್ದೇವೆ, ಇವತ್ತು ದುಡ್ಡು ಇಲ್ಲದೆ ನಾನು ಹೊರಗೆ ಹೋಗುವುದೇ ಇಲ್ಲ. ನಮಗೆ ಬಹಳ ಕಷ್ಟ ಇದೆ. ಅಂತದ್ದರಲ್ಲಿ ನೀವು ಈ ರೀತಿ ಹೇಳಿದರೆ ಹೇಗೆ ಎಂದು ಕುಸುಮಾ ಪ್ರಶ್ನಿಸುತ್ತಾಳೆ. ಕೊನೆಗೂ ಧರ್ಮರಾಜ್, ಕುಸುಮಾಳನ್ನು ಸಮಾಧಾನ ಮಾಡಿ ಹೊರಗೆ ಕರೆ ತರುತ್ತಾರೆ. ಇತ್ತ ಭಾಗ್ಯಾ ಕೂಡಾ ಹೋಟೆಲ್ನಲ್ಲಿ ಸಿಕ್ಕಿದ್ದ ಕೆಲಸ ಕಳೆದುಕೊಳ್ಳುತ್ತಾಳೆ. ಹೋಟೆಲ್ನಲ್ಲಿ ಕೆಲಸ ಮಾಡುವವರು ಬರುವ ಸಮಯ ಇದೇನಾ? ನಮ್ಮ ತಂದೆಗೆ ಅರಳು ಮರಳು ನಿನ್ನಂಥವರನ್ನು ನಂಬಿ ಇಲ್ಲಿ ಕೆಲಸ ಕೊಟ್ಟಿದ್ಧಾರೆ. ಆದರೆ ನಾನು ಆ ರೀತಿ ಅಲ್ಲ, ನಿನಗೆ ನಮ್ಮ ಹೋಟೆಲ್ನಲ್ಲಿ ಕೆಲಸ ಇಲ್ಲ, ಇಲ್ಲಿಂದ ಹೋಗು ಎಂದು ಓನರ್ ಮಗಳು ಭಾಗ್ಯಾಗೆ ಜೋರು ಮಾಡುತ್ತಾಳೆ. ಭಾಗ್ಯಾ ಎಷ್ಟೇ ಮನವಿ ಮಾಡಿದರೂ ಕರಗದ ಆಕೆ ಭಾಗ್ಯಾಳ ಕೈ ಹಿಡಿದು ಹೋಟೆಲ ಹೊರಗೆ ದಬ್ಬುತ್ತಾಳೆ.
ಇದೇ ಬೇಸರದಲ್ಲಿ ಭಾಗ್ಯಾ ಮನೆಗೆ ಬರುತ್ತಾಳೆ. ಅಷ್ಟರಲ್ಲಿ ಕುಸುಮಾ ಕೂಡಾ ಮನೆಗೆ ಬರುತ್ತಾಳೆ. ಮನೆ ತುಂಬಾ ಲೈಟ್ ಉರಿಯುವುದನ್ನು ನೋಡುವ ಕುಸುಮಾ ಏಕೆ ಹೀಗೆ ಲೈಟ್ ಉರಿಸುತ್ತಿದ್ದೀರಿ. ನಿಮ್ಮಿಷ್ಟ ಬಂದ ಹಾಗೆ ಮಾಡಿ, ನಾವು ಕೋಟ್ಯಾಧೀಶ್ವರರು ಎಷ್ಟ ಕರೆಂಟ್ ಬಿಲ್ ಬಂದರೂ ಕಟ್ಟಬಹುದು. ಭಾಗ್ಯಾ ನಿನಗೆ ಮಕ್ಕಳನ್ನು ಶಿಸ್ತಿನಿಂದ ಬೆಳೆಸಲು ಗೊತ್ತಿಲ್ಲ ಎಂದು ರೇಗುತ್ತಾಳೆ. ಕುಸುಮಾ ಈ ರೀತಿ ರೇಗಾಡುವುದನ್ನು ನೋಡಿದ ಭಾಗ್ಯಾ, ಅತ್ತೆ ಹೀಗೇಕೆ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾಳೆ.
ಖುಷಿಯಿಂದ ಸುತ್ತಾಡುತ್ತಿರುವ ಶ್ರೇಷ್ಠಾ, ತಾಂಡವ್
ಒಂದೆಡೆ ಧರ್ಮರಾಜ್, ಕುಸುಮಾ ಹಾಗೂ ಭಾಗ್ಯಾ ಕಷ್ಟ ಪಡುತ್ತಿದ್ದರೆ ಮತ್ತೊಂದೆಡೆ ಭಾಗ್ಯಾ ಹಾಗೂ ತಾಂಡವ್ ಖುಷಿಯಿಂದ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಭಾಗ್ಯಾ ಕಷ್ಟ ಪಡುತ್ತಿರುವುದನ್ನು ನೋಡುತ್ತಿದ್ದರೆ ನನಗೆ ಬಹಳ ಖುಷಿಯಾಗುತ್ತಿದೆ. ಶ್ರೇಷ್ಠಾ, ನೀನು ಇದೇ ರೀತಿ ಭಾಗ್ಯಾಗೆ ಕಷ್ಟ ಕೊಡುತ್ತಿರು. ಹಣ ಹೊಂದಿಸಲಾಗದೆ ಅವಳು ನನ್ನ ಬಳಿ ಬಂದು ಡಿವೋರ್ಸ್ ಪೇಪರ್ಗೆ ಸಹಿ ಹಾಕಬೇಕು ಎನ್ನುತ್ತಾನೆ. ನೀನು ನನಗೆ ಸಿಗುವಂತಿದ್ದರೆ ಭಾಗ್ಯಾಗೆ ಇನ್ನಷ್ಟು ಹಿಂಸೆ ಕೊಡುತ್ತೇನೆ ಎಂದು ಶ್ರೇಷ್ಠಾ ಮನಸ್ಸಿನಲ್ಲೇ ನಿರ್ಧರಿಸುತ್ತಾಳೆ.
ತಾಂಡವ್ ಅಂದುಕೊಂಡಂತೆ ಭಾಗ್ಯಾ ಅವನ ಬಳಿ ಬಂದು ಹಣ ಕೇಳುತ್ತಾಳಾ?, ಕುಸುಮಾ ಹಾಗೂ ಧರ್ಮರಾಜ್ ಹಣ ಹೊಂದಿಸಲು ಮತ್ತೇನು ದಾರಿ ಹುಡುಕುತ್ತಾರೆ ಅನ್ನೋದು ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.