Sandalwood News: ವಾಮನ ಸಿನಿಮಾ ಮೂಲಕ ಮತ್ತೊಮ್ಮೆ ಮಾಸ್ ಎಂಟ್ರಿ ಕೊಟ್ಟ ಧನ್ವೀರ್ ಗೌಡ; ಚಿತ್ರದ ಮೊದಲ ಹಾಡು ರಿಲೀಸ್
Aug 01, 2023 05:51 PM IST
'ವಾಮನ' ಚಿತ್ರದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ
ವಾಮನ ಚಿತ್ರದಲ್ಲಿ ಒಳ್ಳೆ ಕಂಟೆಂಟ್ ಇದೆ. ಇಂದಿನಿಂದ ನಮ್ಮ ಸಿನಿಮಾ ಪ್ರಮೋಷನ್ ಶುರುವಾಗಿದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಸಿನಿಮಾ ಮೇಲಿರಲಿ ಎಂದು ನಟ ಧನ್ವೀರ್ ಮನವಿ ಮಾಡಿದರು.
ಧನ್ವೀರ್ ಗೌಡ ಅಭಿನಯದ ಬಹು ನಿರೀಕ್ಷಿತ 'ವಾಮನ' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾ.. ವಾಮನ ಎಂದು ಹಾಡುತ್ತಾ ಬಜಾರ್ ಹುಡುಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಚೇತನ್ ಈ ಹಾಡಿನ ಸಾಹಿತ್ಯ ಬರೆದಿದ್ದು ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಹಾಡಿದ್ದಾರೆ.
ಭೂಷಣ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಮೂಡಿ ಬಂದಿರುವ ನಾಯಕನ ಇಂಟ್ರೊಡಕ್ಷನ್ ಹಾಡಿಗೆ ಧನ್ವೀರ್ ಜಬರ್ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. 'ವಾಮನ' ಚಿತ್ರವನ್ನು ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಚೇತನ್ ಗೌಡ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಯುವ ನಿರ್ದೇಶಕ ಶಂಕರ್ ರಾಮನ್ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ನೆರವೇರಿತು.
ಶಂಕರ್ ರಾಮನ್ ನಿರ್ದೇಶನದ ಚಿತ್ರ
ಹಾಡು ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಶಂಕರ್ ರಾಮನ್, ''ಕಥೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು, ಬೇರೆ ಯಾರಿಗೂ ಅಲ್ಲ. ನಾಯಕ ಗುಣನ ಪಾತ್ರ ನೀರು ಇದ್ದ ಹಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ವಾಮನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರ ಕೂಡಾ ತಾಳುತ್ತಾನೆ. ನಮ್ಮ ಸಿನಿಮಾದಲ್ಲಿ ನಾಲ್ಕು ಸಾಹಸ ದೃಶ್ಯಗಳಿವೆ. ಮಾಸ್ ಆಡಿಯನ್ಸ್ ಬೇಕಿರುವುದು ನಮ್ಮ ವಾಮನ ಚಿತ್ರದಲ್ಲಿದೆ. ಅಷ್ಟೇ ಅಲ್ಲೇ ಕ್ಲಾಸ್ ಆಡಿಯನ್ಸ್ ಕೂಡಾ ನಮ್ಮ ಚಿತ್ರವನ್ನು ನೋಡಿ ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ'' ಎಂದರು.
ವಾಮನ ನನ್ನ 3ನೇ ಸಿನಿಮಾ. ಇಂದು ಟೈಟಲ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ರೀತಿ ಹಾಡನ್ನು ನನ್ನ ಹಿಂದಿನ ಸಿನಿಮಾಗಳಲ್ಲೇ ಮಾಡಬೇಕೆಂದು ಆಸೆ ಪಟ್ಟಿದ್ದು ಆದರೆ ನನ್ನ ಆಸೆ ಈಗ ನೆರವೇರುತ್ತಿದೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದೆ. ಇಂದಿನಿಂದ ನಮ್ಮ ಸಿನಿಮಾ ಪ್ರಮೋಷನ್ ಶುರುವಾಗಿದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಸಿನಿಮಾ ಮೇಲಿರಲಿ ಎಂದು ನಟ ಧನ್ವೀರ್ ಮನವಿ ಮಾಡಿದರು.
ನಾಯಕಿಯಾಗಿ ರೀಷ್ಮಾ ನಾಣಯ್ಯ
ನಾಯಕಿ ರೀಷ್ಮಾ ನಾಣಯ್ಯ ಮಾತಾನಾಡಿ, ''ವಾಮನ ಸಿನಿಮಾ ಮೊದಲ ಹಾಡು ರಿಲೀಸ್ ಆಗಿದೆ. ಇದೆಲ್ಲ ಕ್ರೆಡಿಟ್ ನಿರ್ದೇಶಕ ಶಂಕರ್ ರಾಮನ್, ಸಾಹಿತ್ಯ ಬರೆದ ಚೇತನ್ ಸರ್, ಶಶಾಂಕ್ ಶೇಷಗಿರಿ ಧ್ವನಿ, ಅಜನೀಶ್ ಲೋಕನಾಥ್ ಸಂಗೀತಕ್ಕೆ ಸಲ್ಲಬೇಕು. ಈ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಬಂದಿದೆ. ನನ್ನ ಪಾತ್ರದ ಹೆಸರು ನಂದಿನಿ, ಸಿಂಪಲ್ ಮುದ್ದಾದ ಪಾತ್ರ, ಎಲ್ಲರೂ ಸಿನಿಮಾ ನೋಡಿ'' ಎಂದರು.
ನಿರ್ಮಾಪಕ ಚೇತನ್ ಗೌಡ ಮಾತನಾಡಿ, ''ವಾಮನ ಸಿನಿಮಾದಲ್ಲಿ ನಮ್ಮ ಶ್ರಮ ಕಡಿಮೆ. ನಾನು ಶೂಟಿಂಗ್ ಸ್ಥಳಕ್ಕೆ ಹೋಗಿರುವುದು ಕೇವಲ 4 ದಿನಗಳು ಮಾತ್ರ. ಅವರ ಮನೆಯ ಸಿನಿಮಾ ಎನ್ನುವಂತೆ ಎಲ್ಲರೂ ಕೆಲಸ ಮಾಡಿದ್ದಾರೆ. ಒಳ್ಳೆ ಸಿನಿಮಾ ಮಾಡಬೇಕೆಂದು ಬಂದೆ, ಅದರಂತೆ ಒಳ್ಳೆಯ ಸಿನಿಮಾವೇ ತಯಾರಾಗಿದೆ. ಕನ್ನಡ ಚಿತ್ರರಂಗಕ್ಕೆ ನಮ್ಮದೊಂದು ಕೊಡುಗೆ ಇರಲಿ ಎಂದು ಈ ಸಿನಿಮಾ ಮಾಡಿದ್ದೇವೆ. ಎಲ್ಲರೂ ಕೈ ಹಿಡಿದು ಆಶೀರ್ವದಿಸಿ'' ಎಂದರು.