Marana Yuddham: ಮಾಲಾಶ್ರೀ ನಟನೆಯ ಮಾರಕಾಸ್ತ್ರ ಮಾರಣಾಯುದ್ಧಂ ಆಯ್ತು; ಪೌರ ಕಾರ್ಮಿಕರಿಗೆ ಉಚಿತ ವೀಕ್ಷಣೆಗೆ ಅವಕಾಶ
Apr 24, 2024 08:43 PM IST
ಮಾಲಾಶ್ರೀ ನಟನೆಯ ಮಾರಣಾಯುದ್ಧಂ ಸಿನಿಮಾದ ಮಾಹಿತಿ
- ಸ್ಯಾಂಡಲ್ವುಡ್ನ ಆಕ್ಷನ್ ಕ್ವೀನ್ ಮಾಲಾಶ್ರೀ ನಟನೆಯ ಮಾರಕಾಸ್ತ್ರ ಸಿನಿಮಾ ಈಗಾಗಲೇ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಮಾರಣಾಯುದ್ಧಂ ಸಿನಿಮಾ ಏಪ್ರಿಲ್ 26ರಂದು ಬಿಡುಗಡೆಯಾಗುತ್ತಿದೆ.
ಸ್ಯಾಂಡಲ್ವುಡ್ನ ಆಕ್ಷನ್ ಕ್ವೀನ್ ಖ್ಯಾತಿಯ ಮಾಲಾಶ್ರೀ ನಟನೆಯ ಮಾರಕಾಸ್ತ್ರ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಕೋಮಲ ನಟರಾಜ್ ನಿರ್ಮಾಣದ ಮಾರಕಾಸ್ತ್ರಕ್ಕೆ ಗುರುಮೂರ್ತಿ ಸುನಾಮಿ ಆಕ್ಷನ್ ಕಟ್ ಹೇಳಿದ್ದರು. ಕನ್ನಡಿಗರ ಮನಗೆದ್ದ ಈ ಸಿನಿಮಾ ಈಗಾಗಲೇ ತೆಲುಗಿನಲ್ಲಿ ನಿರ್ಮಾಣವಾಗಿದೆ. ಮಾರಣಾಯುಧಂ ಹೆಸರಿನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗಿದೆ. ಇದೀಗ ಮಾರಣಾಯುದ್ಧಂ ಸಿನಿಮಾ ಏಪ್ರಿಲ್ 26ರಂದು ಅಂದರೆ ನಾಳೆ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದ ಕುರಿತು ಚಿತ್ರತಂಡ ಒಂದಿಷ್ಟು ವಿವರವನ್ನು ಹಂಚಿಕೊಂಡಿದೆ.
ನಮ್ಮ "ಮಾರಕಾಸ್ತ್ರ" ಚಿತ್ರವನ್ನು ಕಳೆದವರ್ಷ ಬಿಡುಗಡೆ ಮಾಡಿದ್ದೆವು. ಆ ಸಮಯದಲ್ಲಿ ಭಾರತ - ಪಾಕ್ ಮ್ಯಾಚ್, ಹಬ್ಬ ಬಂದವು. ಈ ಕಾರಣಕ್ಕೆ ಥಿಯೇಟರ್ನಲ್ಲಿ ಹೆಚ್ಚು ಜನ ನಮ್ಮ ಸಿನಿಮಾ ನೋಡಲು ಆಗಲಿಲ್ಲ. ಆದರೆ ಚಿತ್ರ ನೋಡಿದ ತೆಲುಗು ವಿತರಕರಾದ ವೆಂಕಟೇಶ್ ರಾವ್ ಅವರು ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಿ ಎಂದು ತಿಳಿಸಿದರು. "ಮಾರಕಾಸ್ತ್ರ" ಈಗ "ಮಾರಣಾಯುಧಂ" ಎಂಬ ಹೆಸರಿನಿಂದ ಇದೇ ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ. ಶನಿವಾರ( 27) ದಂದು ಪೌರ ಕಾರ್ಮಿಕರು ಸೇರಿದಂತೆ ಅನೇಕ ಶ್ರಮಿಕ ವರ್ಗದವರಿಗೆ ಒಂದು ಉಚಿತ ಪ್ರದರ್ಶನದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ನಟರಾಜ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ "ಮಾರಕಾಸ್ತ್ರ" ಚಿತ್ರವನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ಸಿನಿಮಾದ ಅವಧಿ ಸ್ವಲ್ಪ ಹೆಚ್ಚಿದೆ ಎಂದಿದ್ದರು ಈಗ 26 ನಿಮಿಷ ಕಡಿಮೆ ಮಾಡಿದ್ದೇವೆ. ಮಾಲಾಶ್ರೀ, ಆನಂದ್ ಆರ್ಯ, ಹರ್ಷಿಕಾ ಪೂಣಚ್ಛ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ನಿರ್ದೇಶಕ ಗುರುಮೂರ್ತಿ ಸುನಾಮಿ ಮಾಹಿತಿ ನೀಡಿದ್ದಾರೆ.
ನಾನು ಆರಂಭದಲ್ಲಿ "ಮಾರಕಾಸ್ತ್ರ" ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ. ಆನಂತರ ನಿರ್ದೇಶಕರು ಈ ಸಿನಿಮಾದ ಕಥೆ ಹೇಳಿದ ರೀತಿ ಇಷ್ಟವಾಯಿತು. ಅದರಲ್ಲೂ ನಿರ್ದೇಶಕರಿಗೆ ಕಾಲಿನ ಸಮಸ್ಯೆಯಿದೆ. ಅಂತಹುದರಲ್ಲೂ ಅವರಿಗಿರುವ ಸಿನಿಮಾ ಪ್ರೀತಿ ಕಂಡು ಖುಷಿಯಾಯಿತು. ತೆಲುಗಿನ ಜನರು ನನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಇದೇ ಶುಕ್ರವಾರ ಕರ್ನಾಟಕದಲ್ಲೂ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರ ನೋಡಿ ಎಂದು ನಟಿ ಮಾಲಾಶ್ರೀ ಹೇಳಿದ್ದಾರೆ.
ಚಿತ್ರದ ವಿತರಕ ಯಾದವ್, ಕಾರ್ಯಕಾರಿ ನಿರ್ಮಾಪಕ ವೆಂಕಟೇಶ್ ರಾವ್ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು. ನಾಯಕ ಆನಂದ್ ಆರ್ಯ, ರವಿಚೇತನ್ , ಶಶಿಧರ್, ಮಂಜುನಾಥ್, ಮಂಜುಳಾ ರೆಡ್ಡಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಾಲಾಶ್ರೀ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಂದ ದೂರ ಇದ್ದರು. 2017ರಲ್ಲಿ ಉಪ್ಪು ಹುಳಿ ಖಾರ ಚಿತ್ರದಲ್ಲಿ ನಟಿಸಿದ ಬಳಿಕ ಬೇರಾವ ಚಿತ್ರದಲ್ಲಿಯೂ ನಟಿಸಿರಲಿಲ್ಲ. ಇದಾದ ಬಳಿಕ ಮಾರಕಾಸ್ತ್ರ ಚಿತ್ರದಲ್ಲಿ ನಟಿಸುವ ಮೂಲಕ ಆರು ವರ್ಷಗಳ ಬಳಿಕ ಸ್ಯಾಂಡಲ್ವುಡ್ಗೆ ಆಗಮಿಸಿದ್ದರು.