Singer Dead on Stage: ವೇದಿಕೆ ಮೇಲೆ ಹಾಡುವಾಗಲೇ ಹೃದಯಾಘಾತದಿಂದ ನಿಧನರಾದ ಖ್ಯಾತ ಗಾಯಕ
Oct 06, 2022 08:01 AM IST
ಒಡಿಶಾ ಗಾಯಕ ಮುರಳಿ ಮೊಹಪಾತ್ರ
- ಕಾರ್ಯಕ್ರಮದಲ್ಲಿ ಕೆಲ ಹೊತ್ತು ಮುರಳಿ ಮೊಹಪಾತ್ರ ಚೇರ್ ಮೇಲೆ ಕುಳಿತು ಹಾಡುತ್ತಿದ್ದರು. ಅದರೆ ಸ್ವಲ್ಪ ಸಮಯದ ಬಳಿಕ ಅವರು ಕುಸಿದುಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಮುರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರು ನಿಧನರಾಗಿದ್ದರು. ಮುರಳಿ ಅವರಿಗೆ 59 ವರ್ಷ ವಯಸ್ಸಾಗಿತ್ತು. ಮುರಳಿ ಮೊಹಪಾತ್ರ, ಒಡಿಶಾದಲ್ಲಿ ಕೋಕಾ ಭಾಯ್ ಎಂದೇ ಹೆಸರಾಗಿದ್ದರು.
ವೇದಿಕೆ ಮೇಲೆ ಹಾಡುವಾಗಲೇ ಗಾಯಕರೊಬ್ಬರು ಹೃದಯಾಘಾತದಿಂದ ಕುಸಿದುಬಿದ್ದು ನಿಧನರಾಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಖ್ಯಾತ ಗಾಯಕ ಮುರಳಿ ಮೊಹಪಾತ್ರ ಇತ್ತೀಚೆಗೆ ನವರಾತ್ರಿ ಅಂಗವಾಗಿ ಏರ್ಪಡಿಸಿದ್ದ ದುರ್ಗಾ ಪೂಜೆಯ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಒಡಿಶಾದ ಕೋರತ್ಪುರ್ ಜಿಲ್ಲೆಯ ಜೇಯ್ಪುರ್ ಎಂಬಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಮುರಳಿ ಮೊಹಪಾತ್ರ ಚೇರ್ ಮೇಲೆ ಕುಳಿತು ಹಾಡುತ್ತಿದ್ದರು. ಅದರೆ ಸ್ವಲ್ಪ ಸಮಯದ ಬಳಿಕ ಅವರು ಕುಸಿದುಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಮುರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರು ನಿಧನರಾಗಿದ್ದರು. ಮುರಳಿ ಅವರಿಗೆ 59 ವರ್ಷ ವಯಸ್ಸಾಗಿತ್ತು. ಮುರಳಿ ಮೊಹಪಾತ್ರ, ಒಡಿಶಾದಲ್ಲಿ ಕೋಕಾ ಭಾಯ್ ಎಂದೇ ಹೆಸರಾಗಿದ್ದರು.
ಮುರಳಿ ಮೊಹಪಾತ್ರ, ಹೀಗೆ ವೇದಿಕೆಯಲ್ಲೇ ನಿಧನರಾದ ವಿಚಾರ ಕೇಳಿ ಅಭಿಮಾನಿಗಳಿಗೆ ಆಘಾತವಾಗಿದೆ. ಒಡಿಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡಾ ಮುರಳಿ ಮೊಹಪಾತ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮುರಳಿ ಮೊಹಪಾತ್ರ ಅವರ ಹಾಡುಗಳನ್ನು ನಾನೂ ಕೇಳಿದ್ದೇನೆ, ಅವರ ಗಾಯನ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ನವೀನ್ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ.
ಹಾಡುವಾಗಲೇ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಕೆಕೆ
ಇದೇ ವರ್ಷ ಇದೇ ವರ್ಷ ಜೂನ್ನಲ್ಲಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಹಾಡುವಾಗಲೇ ಅಸ್ವಸ್ಥರಾಗಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಹೋಟೆಲ್ ರೂಮ್ನಲ್ಲಿ ಕುಸಿದುಬಿದ್ದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.
ಪಶ್ಚಿಮ ಬಂಗಾಳದ ಕೊಲ್ಕತ್ತಾದ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕೆಕೆ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಗಾಯಕ ಕೃಷ್ಣ ಕುಮಾರ್ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ತಮ್ಮ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಆದರೆ ನಂತರ ಅವರು ಅಸ್ವಸ್ಥರಾದಂತೆ ಕಂಡುಬಂದರು. ಕಾರ್ಯಕ್ರಮ ಮುಗಿದ ನಂತರ ಹೋಟೆಲ್ ರೂಮ್ ತೆರಳಿದ ಕೆಕೆ, ಅಲ್ಲೇ ಕುಸಿದು ಬಿದ್ದಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯದಲ್ಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು.
ಕಬಡ್ಡಿ ಆಡುವಾಗಲೇ ಕುಸಿದು ಬಿದ್ದ ಆಟಗಾರ
ಜುಲೈ ತಿಂಗಳಲ್ಲಿ ತಮಿಳುನಾಡಿನಲ್ಲಿ ಕಬಡ್ಡಿ ಆಡುವಾಗಲೇ ವಿಮಲ್ ರಾಜ್ ಎಂಬ ಆಟಗಾರರೊಬ್ಬರು ಕಬಡ್ಡಿ ಕೋರ್ಟ್ನಲ್ಲೇ ನಿಧನರಾಗಿದ್ದರು. ತಮಿಳುನಾಡಿನ ಕಡಲೂರು ಜಿಲ್ಲೆಯ ಕಂಡಂಪುಲಿಯೂರ್ಗೆ ಸೇರಿದ ವಿಮಲ್ ರಾಜ್, ಸೇಲಂನ ಖಾಸಗಿ ಕಾಲೇಜೊಂದರಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಎರಡನೇ ವರ್ಷದ ಬಿಎಸ್ಸಿ ಓದುತ್ತಿದ್ದರು. ಜುಲೈನಲ್ಲಿ ಮಣ್ಣದಿಕುಪ್ಪಮ್ನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅವರು ಭಾಗವಹಿಸಿದ್ದರು.
ಎದುರಾಳಿ ತಂಡದ ಆಟಗಾರರೊಬ್ಬರು ವಿಮಲ್ ರಾಜ್ ಅವರನ್ನು ಹಿಡಿಯಲು ಯತ್ನಿಸುವ ಭರದಲ್ಲಿ ಅವರ ಎದೆ ಮೇಲೆ ಮಂಡಿ ಊರಿದ್ದಾರೆ. ಸಾವರಿಸಿಕೊಂಡು ಮೇಲೆ ಏಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೆ, ವಿಮಲ್ ರಾಜ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಕೂಡಲೇ ಸಮೀಪದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಆದರೆ ಅಷ್ಟರಲ್ಲೇ ವಿಮಲ್ ರಾಜ್ ಸಾವನ್ನಪ್ಪಿದ್ದರು.
ವಿಭಾಗ