Drought fund: ಮುಂಗಾರು 2023 ಬರ ಪರಿಹಾರ ವಿತರಣೆಗೆ ಕ್ಷಣಗಣನೆ, ಹಣ ಬಂದಿದೆಯೇ ಎಂದು ಹೀಗೆ ಪರೀಕ್ಷಿಸಿ
May 06, 2024 07:02 PM IST
ಕರ್ನಾಟಕದ ರೈತರಿಗೆ ಕಳೆದ ವರ್ಷ ಬರ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.
- ಸುಪ್ರೀಂಕೋರ್ಟ್ ಸೂಚನೆ ನಂತರ ಬರ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು. ಕರ್ನಾಟಕದ ರೈತರ ಖಾತೆಗಳಿಗೆ ಒಂದೆರಡು ದಿನಗಳಲ್ಲಿ ವರ್ಗವಾಗಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವರ್ಷ ಮುಂಗಾರು ವೇಳೆ ಉಂಟಾದ ಬರದ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು. ಅದನ್ನು ವಿತರಣೆ ಮಾಡಲು ಕರ್ನಾಟಕ ಸರ್ಕಾರವೂ ಮುಂದಾಗಿದೆ. ಕೇಂದ್ರ ಸರ್ಕಾರದಿಂದ ನೆರವು ಬರುವ ಮುನ್ನವೇ ರಾಜ್ಯ ಸರ್ಕಾರವೇ ಮೊದಲ ಕಂತಿನ ಪರಿಹಾರದ ಮೊತ್ತವನ್ನು ರೈತರಿಗೆ ಬಿಡುಗಡೆ ಮಾಡಿತ್ತು. ಈಗ ಎರಡನೇ ಹಂತದ ಪರಿಹಾರ ಬಿಡುಗಡೆಯಾಗಲಿದೆ. ಈ ಕುರಿತು ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಸಚಿವರಾದ ಕೃಷ್ಣಬೈರೇಗೌಡ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು ಬರ ಪರಿಹಾರದ ಮೊತ್ತವನ್ನು ಶೀಘ್ರದಲ್ಲೇ ನೇರವಾಗಿ ರೈತರ ಖಾತೆಗಳಿಗೆ ವರ್ಗ ಮಾಡಲಿದೆ ಎಂದು ತಿಳಿಸಿದ್ದಾರೆ.
2024 ಮೇ 06 ರಂತೆ ಒಟ್ಟು 27,38,911 ರೈತರಿಗೆ ಅರ್ಹತೆಯನುಸಾರ ಒಟ್ಟು ರೂ.2,425.13 ಕೋಟಿಗಳನ್ನು ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮುಖಾಂತರ ನೇರ ವರ್ಗಾವಣೆ ಮಾಡಲು ಕಳೆದ ವಾರಂತ್ಯೆವೇ ಕ್ರಮವಹಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮದ ನಂತರ ಆರ್.ಬಿ.ಐ ನಿಂದ ರೈತರ ಖಾತೆಗೆ ಹಣ ವರ್ಗಾಯಿಸಲು 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳಲಿದೆ. ಇದೇ ಸೋಮವಾರದಿಂದ ಅನ್ವಯವಾಗುವಂತೆ ರೈತರ ಖಾತೆಗೆ ನೇರವಾಗಿ ಜಮಾವಾಗಲಿದೆ. ಎಲ್ಲಾ ರೈತರ ಖಾತೆಗಳಿಗೆ ಮುಂದಿನ 2-3 ದಿನಗಳೊಳಗಾಗಿ ಬರಪರಿಹಾರ ಮೊತ್ತವು ಜಮೆಯಾಗಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಎಸ್ಡಿಆರ್ಎಫ್( SDRF) ಮಾರ್ಗಸೂಚಿಗಳ ಪ್ರಕಾರ ಎನ್ಡಿಆರ್ಎಫ್( NDRF) ಅನುದಾನ ನಿರೀಕ್ಷಿಸಿ ಮೊದಲ ಹಂತದ ಪರಿಹಾರವಾಗಿ 33,58,999 ರೈತರಿಗೆ ಒಟ್ಟು ರೂ.636.45 ಕೋಟಿಗಳನ್ನು ಈಗಾಗಲೇ ಫೆಬ್ರವರಿ ಹಾಗೂ ಮಾರ್ಚ್ ಮಾಹೆಗಳಲ್ಲಿ ಪಾವತಿಸಲಾಗಿದೆ. ಈ ಪೈಕಿ 4,43,691 ಅತೀ ಕಡಿಮೆ ಜಮೀನು ಇರುವ ರೈತರಿಗೆ ಎಸ್ಡಿಆರ್ಎಫ್ ಮಾರ್ಗಸೂಚಿಗಳನ್ವಯ ಸಂಪೂರ್ಣ ಪರಿಹಾರ ಪಾವತಿಸಲಾಗಿದೆ. ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಎನ್ಡಿಆರ್ಎಫ್ ರಡಿ ಬರ ಪರಿಹಾರ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯ ಸೂಚನೆ ಮೇಲೆ ಏ.26 ರಂದು ರೂ.3,454.22 ಕೋಟಿಗಳನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಕೇಂದ್ರದಿಂದ ಹಣ ಬಿಡುಗಡೆ ಅಗುತ್ತಿದಂತೆಯೇ ಅರ್ಹ ರೈತರಿಗೆ ಪರಿಹಾರ ಪಾವತಿಸಲು ತಕ್ಷಣ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
27 ಮತ್ತು 28ನೇ ಏಪ್ರಿಲ್, ಎರಡು ದಿನಗಳು ರಜಾದಿನಗಳು, ನಂತರ 29 ಮತ್ತು 30 ಏಪ್ರಿಲ್, ಎರಡು ದಿನಗಳಂದು ಬಾಕಿ ಉಳಿದ ಬೆಳೆ ಹಾನಿ ಪರಿಹಾರ ನೀಡಲು ಎಲ್ಲಾ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಯಿತು. ಮೇ 1 ರಂದು ಪುನಃ ಕಾರ್ಮಿಕ ದಿನಾಚರಣೆ ನಿಮಿತ್ತ ಸರ್ಕಾರಿ ರಜಾ ದಿನವಾಗಿರುತ್ತದೆ. ಮೊದಲ ಹಂತದ ಬೆಳೆ ಹಾನಿ ಪರಿಹಾರ ನೀಡಿ ಇನ್ನುಳಿದ ಬಾಕಿ ಮೊತ್ತಕ್ಕೆ ಎಸ್ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆಯನುಸಾರ ಎಲ್ಲಾ ಅರ್ಹ ರೈತರಿಗೆ ಪಾವತಿ ಮಾಡಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತರಿಗೆ ರೂ. 3,454.22 ಕೋಟಿಗಳನ್ನು ಬಿಡುಗಡೆಗೊಳಿಸಲು ಆದೇಶ ಹೊರಡಿಸಲಾಗಿದೆ.
ಇಲ್ಲಿಯವರೆಗೆ ಒಟ್ಟು 31,82,602 ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರ ಪಾವತಿಸಲಾಗಿದೆ. ಇನ್ನೂ 2 ಲಕ್ಷ ರೈತರಿಗೆ ಬರಪರಿಹಾರ ಮೊತ್ತವನ್ನು ಪಾವತಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ರಾಜ್ಯದ 224 ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರವೇ ರೈತರಿಗೆ ಬರ ಪರಿಹಾರ ಪಾವತಿಸಿದ್ದು, ಇದೀಗ ಎನ್ಡಿಆರ್ಎಫ್ ಪರಿಹಾರ ಹಣ ಲಭ್ಯವಾಗಿದ್ದು ಆ ಹಣವನ್ನೂ ನಿಯಮದಂತೆ ಶೀಘ್ರವಾಗಿ ರೈತರ ಖಾತೆಗೆ ವರ್ಗಾಯಿಸಲು ಕ್ರಮವಹಿಸಲಾಗಿದೆ. ಅಲ್ಲದೆ ರಾಜ್ಯದ ಬಾಕಿ ಪರಿಹಾರ ಹಣ ಪಡೆಯಲೂ ಕೇಂದ್ರದ ಜೊತೆಗಿನ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ಧಾರೆ.
ಹಣ ಪರಿಶೀಲೀಸಲು ಹೀಗೆ ಮಾಡಿ
- ಬರ ಪರಿಹಾರಕ್ಕೆ ನೀಡಿದ ಅರ್ಜಿ ಇದ್ದರೆ ತೆಗೆದಿಟ್ಟುಕೊಳ್ಳಿ
- ಬರ ಪರಿಹಾರಕ್ಕೆ ನೀಡಿದ ಬ್ಯಾಂಕ್ ಖಾತೆ ವಿವರ ಪರಿಶೀಲಿಸಿ
- ಬ್ಯಾಂಕ್ ಖಾತೆಯ ಪಾಸ್ ಬುಕ್ ಕೂಡ ತೆಗೆದಿಟ್ಟುಕೊಳ್ಳಿ
- ಬುಧವಾರ ಇಲ್ಲವೇ ಗುರುವಾರದಂದು ಬ್ಯಾಂಕ್ಗೆ ಹೋಗಿ
- ನಿಮ್ಮ ಪಾಸ್ ಬುಕ್ ನೀಡಿದರೆ ಹಣ ಬಂದಿರುವುದು ಖಚಿತವಾಗಲಿದೆ
- ನಿಮ್ಮ ಮೊಬೈಲ್ ಎಸ್ಎಂಎಸ್ ಕೂಡ ಪರಿಶೀಲಿಸಿಕೊಳ್ಳಿ
- ಬ್ಯಾಂಕ್ ಗೆ ಜಮೆಯಾಗಿರುವ ಮೊತ್ತದ ವಿವರವೂ ಅದರಲ್ಲಿ ತಿಳಿಯಲಿದೆ.
- ಬೇರೆಯವರಿಗೆ ಪರಿಹಾರದ ಮೊತ್ತ ಬಂದಿದೆಯಾ ವಿಚಾರಿಸಿಕೊಳ್ಳಿ.
- ನಿಮಗೆ ಬಂದಿಲ್ಲವೆಂದರೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ.
- ಬ್ಯಾಂಕ್ ವಿವರ ನೀಡಿರುವುದು ತಪ್ಪಾಗಿದ್ದರೂ ವಿಳಂಬವಾಗಲಿದೆ.
-ಬ್ಯಾಂಕ್ ವಿವರ ಸರಿಪಡಿಸಿದರೆ ಖಾತೆ ಪರಿಹಾರದ ಮೊತ್ತ ಜಮೆಯಾಗಲಿದೆ.
ವಿಭಾಗ