Bangalore crime: ಬೆಂಗಳೂರಲ್ಲಿ ತಡರಾತ್ರಿ ಮನೆಗೆ ನುಗ್ಗಿ ರೌಡಿ ಹತ್ಯೆ ಮಾಡಿದ ದುಷ್ಕರ್ಮಿಗಳು
Jan 25, 2024 10:15 AM IST
ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ರೌಡಿ ಶೀಟರ್ ಹತ್ಯೆ ಮಾಡಲಾಗಿದೆ.
- ಬೆಂಗಳೂರಿನ ವಿವೇಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ರೌಡಿಶೀಟರ್ ಒಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಳೆ ದ್ವೇಷದಿಂದಲೇ ಕೊಲೆ ನಡೆದಿದೆ ಎನ್ನುವುದು ಪೊಲೀಸರ ಶಂಕೆ. (ವರದಿ: ಎಚ್.ಮಾರುತಿ,ಬೆಂಗಳೂರು)
ಬೆಂಗಳೂರಿನ ಮಾಯಾ ಬಜಾರ್ನಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು, ರೌಡಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮಾಯಾ ಬಜಾರ್ ನಿವಾಸಿ 30 ವರ್ಷದ ಸತೀಶ್ ಕೊಲೆಯಾದ ರೌಡಿಶೀಟರ್. ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕಪಕ್ಕದ ಮನೆಗಳು ಹಾಗೂ ಪ್ರಮುಖ ಜಂಕ್ಷನ್ನಲ್ಲಿ ಅಳವಡಿಸಿರುವ ಸಿಸಿ ಟಿ.ವಿ. ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದ್ದು, ಮಹತ್ವದ ಸುಳಿವು ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಊಟ ಮಾಡಿ ಮನೆಯ ಹಾಲ್ನಲ್ಲಿ ಸತೀಶ್ ಮಲಗಿದ್ದರು. ಇವರ ಪತ್ನಿ ಹಾಗೂ ಮಕ್ಕಳು ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ತಡರಾತ್ರಿ 2.30ರ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಸತೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಹೊಟ್ಟೆ, ಕೈಕಾಲು ಸೇರಿದಂತೆ ದೇಹದ ಇತರೆ ಭಾಗಗಳ ಮೇಲೆ ಹಲ್ಲೆ ನಡೆಸಿದ ಪರಿಣಾಮ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಚೀರಾಟ ಕೇಳಿ ಪತ್ನಿ ಹಾಗೂ ಮಕ್ಕಳು ಎಚ್ಚರಗೊಂಡು ನೋಡಿದಾಗ ಸತೀಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ಸತೀಶ್ ವಿರುದ್ಧ ಕೊಲೆ ಯತ್ನ, ಡಕಾಯಿತಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು. ಈತನ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿ ತೆರೆಯಲಾಗಿತ್ತು. ಇತ್ತೀಚೆಗೆ ಸತೀಶ್ ಹಾಗೂ ಮತ್ತೊಂದು ಗುಂಪಿನ ನಡುವೆ ಗಲಾಟೆ ನಡೆದಿದ್ದು, ಎದುರಾಳಿಗಳು ಸತೀಶ್ ಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದೇ ದ್ವೇಷಕ್ಕೆ ಮನೆಗೆ ನುಗ್ಗಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಇಬ್ಬರು ರೌಡಿಶೀಟರ್ ಗಳ ಬಂಧನ
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ವಾರೆಂಟ್ ಮತ್ತು ಪ್ರೊಕ್ಲಮೇಷನ್ ಜಾರಿಯಾಗಿದ್ದ ಇಬ್ಬರು ರೌಡಿಶೀಟರ್ ಹಾಗೂ ಒಬ್ಬ ಸಹಚರನನ್ನು ಬಂಧಿಸುವಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯು ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ವಾರೆಂಟ್ ಮತ್ತು ಉದ್ಘೋಷಣೆ (ಪ್ರೊಕ್ಲಮೇಷನ್) ಜಾರಿಗೊಳಿಸಲಾಗಿತ್ತು. ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ರೌಡಿಶೀಟರ್ಗಳು ಮತ್ತು ಒಬ್ಬ ರೌಡಿಶೀಟರ್ನ ಸಹಚರನನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದಾರೆ.
ಬಂಧಿತ ರೌಡಿಶೀಟರ್ಗಳ ಪೈಕಿ ಒಬ್ಬಾತನ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದು, 5 ಪ್ರಕರಣಗಳಲ್ಲಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿತ್ತು. ಇದೇ ಪೊಲೀಸ್ ಠಾಣೆಯ ಮತ್ತೊಬ್ಬ ರೌಡಿಶೀಟರ್ನ ವಿರುದ್ಧ ಮಾನ್ಯ ನ್ಯಾಯಾಲಯವು ಉದ್ಘೋಷಣೆ ಜಾರಿಗೊಳಿಸಿತ್ತು. ಈ ಇಬ್ಬರು ರೌಡಿ ಶೀಟರ್ಗಳನ್ನು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ ಪ್ರಕರಣ ದಾಖಲಿಸಲಾಗಿದೆ.
ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಉದ್ಘೋಷಣೆ ಜಾರಿಗೊಳಿಸಲಾಗಿದ್ದ ಕುಖ್ಯಾತ ರೌಡಿಶೀಟರ್ ಒಬ್ಬನ ಸಹಚರನನ್ನು ಜ.24 ರಂದು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದ್ದು, ಈತನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ ಕ್ರಮ ಕೈಗೊಳ್ಳಲಾಗಿದೆ.
ವಾಟರ್ ಟ್ಯಾಂಕರ್ ಡಿಕ್ಕಿ, ಮಹಿಳೆ ಸಾವು
ಸೈಕಲ್ನಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ವಾಟರ್ ಟ್ಯಾಂಕರ್ ವಾಹನವೊಂದು ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೇಪಾಳ ಮೂಲದ 30 ವರ್ಷದ ಜಾನಕಿ ಮೃತಪಟ್ಟ ದುರ್ದೈವಿ. ಈಕೆಯ ಪತಿ ಸೆಕ್ಯೂರಿಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ದಂಪತಿ, ಓ ಫಾರಂ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ 6.30ರ ಸುಮಾರಿಗೆ ಹೌಸ್ ಕೀಪಿಂಗ್ ಕೆಲಸಕ್ಕೆ ತೆರಳುತ್ತಿದ್ದರು. ವೈಟ್ಫೀಲ್ಡ್ ಮುಖ್ಯರಸ್ತೆಯ ಪ್ರೆಸ್ಟೀಜ್ ವೈಟ್ ಮಿಡೋಸ್ ಅಪಾರ್ಟ್ಮೆಂಟ್ನ ಎದುರು, ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.