Karnataka Election 2023: ಮದುವೆಯಾಗದವರಿಗೆ ಮದುವೆ ಭಾಗ್ಯ ಘೋಷಿಸಿದ ಅರಭಾವಿ, ಗೋಕಾಕ್ ಕ್ಷೇತ್ರದ ಅಭ್ಯರ್ಥಿಗಳು; ಗಮನ ಸೆಳೆದ ಪ್ರಣಾಳಿಕೆ
May 04, 2023 07:21 PM IST
ಗುರುಪುತ್ರ ಕುಳ್ಳೂರ ಅವರ ಚುನಾವಣಾ ಪ್ರಣಾಳಿಕೆ (ಎಡಚಿತ್ರ)
- ಚುನಾವಣಾ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ಅಭ್ಯರ್ಥಿಗಳು ಹಾಗೂ ಪಕ್ಷಗಳು ಸಾಕಷ್ಟು ಕಸರತ್ತು ನಡೆಸುತ್ತವೆ. ಅವುಗಳಲ್ಲಿ ಪ್ರಣಾಳಿಕೆ ಕೂಡ ಒಂದು. ಬೆಳಗಾವಿಯ ಅರಭಾವಿ ಹಾಗೂ ಗೋಕಾಕ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳ ಪ್ರಣಾಳಿಕೆ ನೋಡಿದ್ರೆ ಮತ ಹಾಕದೇ ಇರಲು ಮನಸ್ಸು ಬರುವುದಿಲ್ಲ. ಅಂತದ್ದೇನಿದ್ದೆ ಅದರಲ್ಲಿ ಅಂತಿರಾ… ಈ ಸ್ಟೋರಿ ಓದಿ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಚುನಾವಣಾ ಕಾವು ಜೋರಾಗಿಯೇ ಇದೆ ಎನ್ನಬಹುದು. ಪ್ರಚಾರ ಕಾರ್ಯಗಳು ಕೂಡ ಬಿರುಸು ಪಡೆದುಕೊಂಡಿವೆ.
ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಈ ನಡುವೆ ವಿವಿಧ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮತದಾರರನ್ನು ಓಲೈಸುವ ಕೆಲಸ ಮಾಡುತ್ತಿವೆ. ಈಗಾಗಲೇ ಪ್ರಮುಖ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ.
ಈ ನಡುವೆ ಇಲ್ಲೊಂದು ಪ್ರಣಾಳಿಕೆ ಗಮನ ಸೆಳೆಯುವಂತಿದೆ. ಏನಪ್ಪಾ ಅಂತಹ ವಿಶೇಷ ಅಂತ ಕೇಳ್ತೀರಾ? ನಿಜಕ್ಕೂ ವಿಶೇಷ ಇದೆ.
ʼಮದುವೆ ಭಾಗ್ಯʼ
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಅರಭಾವಿ ಕ್ಷೇತ್ರದ ಅಭ್ಯರ್ಥಿ ಗುರುಪುತ್ರ ಕೆಂಪಣ್ಣಾ ಕುಳ್ಳೂರ ಮದುವೆಯಾಗದ ಹಾಗೂ ಹೆಣ್ಣು ಸಿಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾವನೆ ಇಟ್ಟಿದ್ದಾರೆ.
ಈ ಪ್ರಣಾಳಿಕೆಯು ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಯುವಕರನ್ನು ಸೆಳೆಯುವ ಗುರುಪುತ್ರ ಅವರ ಪ್ರಣಾಳಿಕೆಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಅದೇ ರೀತಿ ಗೋಕಾಕ ಕ್ಷೇತ್ರದ ಅಭ್ಯರ್ಥಿ ಪುಂಡಲಿಕ ಕುಳ್ಳೂರ ಕೂಡ ಮದುವೆಯಾಗದವರಿಗೆ ಮದುವೆ ಭಾಗ್ಯ ಕರುಣಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಗುರುಪುತ್ರ ಹಾಗೂ ಪುಂಡಲಿಕ ಅವರು ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಗುರುಪುತ್ರ ಅವರ ಪ್ರಣಾಳಿಕೆಯಲ್ಲಿ ಮೊದಲ ಅಂಶವೇ ಅರಭಾವಿ ಕ್ಷೇತ್ರದ ಮದುವೆಯಾಗದ, ಹೆಣ್ಣು ಸಿಗದ ಯುವಕರಿಗೆ ಮದುವೆ ಮಾಡಿಸುವುದು. ವಧು ವರರ ಮದುವೆ ಯೋಜನೆ 2023 ಗ್ಯಾರಂಟಿ 100% ಎಂಬ ಪ್ರಸ್ತಾವನೆ ಇದೆ.
ನಂತರದಲ್ಲಿ ಸ್ತ್ರೀಶಕ್ತಿ, ಸ್ವ ಸಹಾಯ ಸಂಘಗಳ ಸಾಲ ಮನ್ನ, ಪ್ರತಿ ಖಾತೆಗೆ 31,600ರೂ ಜಮೆ ಮಾಡಿಸುವುದು, ರೈತರಿಗೆ ಉಚಿತ ಬೋರ್ವೆಲ್, ನಿರುದ್ಯೋಗ ಯುವತಿಯರಿಗೆ ಉದ್ಯೋಗ ಕೊಡಿಸುವುದು, ವಸತಿ ರಹಿತರಿಗೆ 3 ಲಕ್ಷದಿಂದ 5ಲಕ್ಷದವರೆಗೆ ಮನೆ ಮಂಜೂರು ಮಾಡುವುದು, ರೈತರ ಸಾಲ ಮನ್ನಾ ಸೇರಿದಂತೆ ಇನ್ನೂ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಈ ಪ್ರಣಾಳಿಕೆಗೆ ಜನರು ಮೆಚ್ಚುಗೆ ಸೂಚಿಸಿದ್ದು ಪ್ರಣಾಳಿಕೆ ʼಅಂದ್ರೆ ಹೀಗರಬೇಕುʼ, ʼಹುಡ್ಕೊಂಡು ಹೋಗಿ ಮತ ಹಾಕಬೇಕು ಅನ್ನಿಸುತ್ತಿದೆʼ ಅಂತೆಲ್ಲಾ ಜನ ಅಂದ್ಕೋತಾ ಇದಾರೆ.
ಒಟ್ಟಾರೆ ಇತ್ತೀಚೆಗೆ ಪ್ರಣಾಳಿಕೆಗಳು ರಾಜ್ಯದಲ್ಲಿ ಸುದ್ದಿ ಮಾಡುತ್ತಿರುವುದು ಮಾತ್ರ ಸುಳ್ಳಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇದ ಮಾಡುವುದಾಗಿ ಪ್ರಸ್ತಾವನೆ ಇದ್ದು, ಇದಕ್ಕೆ ಸಂಬಂಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ ಕಾಂಗ್ರೆಸ್ ಪ್ರಣಾಳಿಕೆಯ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ
Karnataka Elections: 2018ರ ಚುನಾವಣೆಯಲ್ಲಿ ಗರಿಷ್ಠ ಮತಗಳ ಗೆಲುವು ದಾಖಲಿಸಿದ 5 ಅಭ್ಯರ್ಥಿಗಳು ಮತ್ತು ಅವರ ವಿವರ
Karnataka Elections: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗರಿಷ್ಠ ಮತಗಳ ಅಂತರದ ಗೆಲುವು ಗಮನಸೆಳೆದಿತ್ತು. ಈ ಪಟ್ಟಿಯಲ್ಲಿ ಟಾಪ್ 5 ಸ್ಥಾನಗಳಲ್ಲಿದ್ದ ವಿಜೇತರು ಗೆಲುವಿನ ಅಂತರ, ಸಮೀಪದ ಪ್ರತಿಸ್ಪರ್ಧಿ ಗಳಿಸಿದ ಮತ ಇತ್ಯಾದಿ ವಿವರಗಳು ಇಲ್ಲಿವೆ.
ಕರ್ನಾಟಕದಲ್ಲಿ ಚುನಾವಣಾ (Karnataka Assembly Election 2023) ಪ್ರಕ್ರಿಯೆ ಪ್ರಗತಿಯಲ್ಲಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಕಾವು ಏರುತ್ತಿದ್ದು, ಸ್ಟಾರ್ ಪ್ರಚಾರಕರ ಪ್ರಚಾರ ತೀವ್ರಗೊಂಡಿದೆ. ಪರಸ್ಪರ ಆರೋಪ, ಪ್ರತ್ಯಾರೋಪಗಳಿಂದ ವಾಕ್ಸಮರ ತಾರಕಕ್ಕೇರಿದೆ.