Bengaluru News: 9 ತಿಂಗಳಲ್ಲಿ 12615 ಸೈಬರ್ ವಂಚನೆ ಪ್ರಕರಣದಲ್ಲಿ ಜನ ಕಳೆದುಕೊಂಡ 470 ಕೋಟಿ ರೂ ವಾಪಸ್ ಸಿಕ್ತಾ, ಪೊಲೀಸರು ಹೇಳಿದ್ದಿಷ್ಟು
Oct 10, 2023 09:54 PM IST
ಬೆಂಗಳೂರು ಮಹಾನಗರದಲ್ಲಿ 9 ತಿಂಗಳಲ್ಲಿ 12615 ಸೈಬರ್ ವಂಚನೆ ಪ್ರಕರಣದಲ್ಲಿ ಜನ ಕಳೆದುಕೊಂಡದ್ದು 470 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಮಹಾನಗರದಲ್ಲಿ ಕಳೆದ 9 ತಿಂಗಳಲ್ಲಿ 12,615 ಆನ್ಲೈನ್ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಜನ ಕಳೆದುಕೊಂಡ ಹಣದ ಮೊತ್ತ 470 ಕೋಟಿ ರೂಪಾಯಿ. ಇದರ ಪೈಕಿ ಎಷ್ಟು ಹಣ ವಸೂಲಿಯಾಗಿದೆ, ಸಂತ್ರಸ್ತರಿಗೆ ಎಷ್ಟು ವಾಪಸ್ ಸಿಕ್ಕಿದೆ ಎಂಬಿತ್ಯಾದಿ ವಿವರ ನೀಡಿದ್ದಾರೆ ಎಚ್.ಮಾರುತಿ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ, 2023ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದ ತನಕ ದಾಖಲಾದ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ 12615. ಜನ ಕಳೆದುಕೊಂಡ ಹಣದ ಮೊತ್ತ 470 ಕೋಟಿ ರೂಪಾಯಿ ಆಸುಪಾಸು.
ಇಷ್ಟು ದೊಡ್ಡ ಸಂಖ್ಯೆಯ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರಿಗೆ ಆ ಹಣ ವಾಪಸ್ ಸಿಕ್ಕಿದೆಯೇ, ಸಿಗುವ ಸಾಧ್ಯತೆ ಎಷ್ಟು ಎಂಬಿತ್ಯಾದಿ ಸಂದೇಹಗಳು ಸಹಜ. ಪೊಲೀಸರು ನೀಡಿದ ಅಂಕಿ ಅಂಶಗಳು ವರದಿಯನ್ನು ಒಮ್ಮೆ ಗಮನಿಸಿದರೆ ಹಲವು ಸಂದೇಹಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.
9 ತಿಂಗಳಲ್ಲಿ 12615 ಸೈಬರ್ ವಂಚನೆ, 470 ಕೋಟಿ ರೂಪಾಯಿ ಕಳೆದುಕೊಂಡ ಜನ
ಬೆಂಗಳೂರಿನಲ್ಲಿ ಈ ವರ್ಷ ಜನವರಿಯಿಂದ ಸೆಪ್ಟೆಂಬರ್ ಅಂತ್ಯದ ತನಕ ದಾಖಲಾದ 18 ವಿವಿಧ ವರ್ಗದ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ 12615. ಜನ ಈ ವಂಚನೆಯ ಮೂಲಕ ಕಳೆದುಕೊಂಡ ಹಣದ ಮೊತ್ತ 470,53,92,258 ರೂಪಾಯಿ.
ಈ ಮೊತ್ತದ ಪೈಕಿ 201,83,28,534 ರೂಪಾಯಿ ವಿವಿಧ ಬ್ಯಾಂಕ್ಗಳಲ್ಲಿ ಪ್ರೀಜ್ ಮಾಡಲಾಗಿದೆ. 28,40,38,422 ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 27,68,72,273 ರೂಪಾಯಿಯನ್ನು ಪಿರ್ಯಾದುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2023 ಜನವರಿ - ಸೆಪ್ಟೆಂಬರ್ ಅಂತ್ಯದ ತನಕ ದಾಖಲಾದ ವಿವಿಧ ಸೈಬರ್ ವಂಚನೆಗಳ ಅಂಕಿ-ಅಂಶ
- ಆನ್ಲೈನ್ ಉದ್ಯೋಗ ವಂಚನೆ ಪ್ರಕರಣ 3346 - ನಷ್ಟ 204,75,73,321 ರೂಪಾಯಿ. ಈ ಪೈಕಿ 73,71,52,567 ರೂಪಾಯಿ ಪ್ರೀಜ್ ಮಾಡಲಾಗಿದೆ. 7,34,90,991 ರೂಪಾಯಿ ವಶಪಡಿಸಿಕೊಂಡು 7,67,98,872 ರೂಪಾಯಿ ದೂರುದಾರರಿಗೆ ಹಿಂತಿರುಗಿಸಲಾಗಿದೆ.
- ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣ 3102. ನಷ್ಟ ಪ್ರಮಾಣ 60,86,29,250 ರೂಪಾಯಿ. ಈ ಪೈಕಿ 25,15,38,168 ರೂಪಾಯಿ ಪ್ರೀಜ್ ಮಾಡಲಾಗಿದೆ. 3,38,25,252 ರೂಪಾಯಿ ವಶಪಡಿಸಿದ್ದು, 3,55,70,898 ರೂಪಾಯಿ ದೂರುದಾರರಿಗೆ ಹಿಂತಿರುಗಿಸಲಾಗಿದೆ.
- ಆನ್ ಲೈನ್ ವ್ಯಾಪಾರ ಅವಕಾಶ ವಂಚನೆ ಪ್ರಕರಣ 1133. ನಷ್ಟ 60,53,87,250 ರೂಪಾಯಿ. ಈ ಪೈಕಿ 9,69,11,726 ರೂಪಾಯಿ ಪ್ರೀಜ್ ಮಾಡಲಾಗಿರುತ್ತದೆ. 13,37,08,306 ರೂಪಾಯಿ ವಶಪಡಿಸಿದ್ದು, 11,82,08,075 ರೂಪಾಯಿ ದೂರುದಾರರಿಗೆ ಹಿಂತಿರುಗಿಸಲಾಗಿದೆ.
- ಐ ಫೋನ್,ಗಿಫ್ಟ್, ಓ ಎಲ್ ಎಕ್ಸ್ ಮತ್ತು ಸಾಲದ ಸಂಬಂಧದ ವಂಚನೆ ಪ್ರಕರಣ 1132. ನಷ್ಟ 22,40,84,839 ರೂಪಾಯಿ. ಈ ಪೈಕಿ, 6,39,09,912 ರೂಪಾಯಿ ಪ್ರೀಜ್ ಮಾಡಲಾಗಿರುತ್ತದೆ. 1,09,71,379 ರೂಪಾಯಿ ಮೊತ್ತವನ್ನು ವಶಪಡಿಸಿಕೊಂಡು 9,37,526 ರೂಪಾಯಿ ದೂರುದಾರರಿಗೆ ಹಿಂತಿರುಗಿಸಲಾಗಿದೆ.
- ಸಾಮಾಜಿಕ ಜಾಲತಾಣ ಸಂಬಂಧ 511, ಲೋನ್ ಆಪ್(277), ಲೈಂಗಿಕ ಪ್ರಕರಣ (84), ಬಿಟ್ ಕಾಯಿನ್(195) , ಕಾರ್ಡ್ ಸ್ಕಿಮ್ಮಿಂಗ್(158) ,ಡೇಟಾ ಕಳವು(83) , ಆಮದು ರಫ್ತು(54), ವಿವಾಹ(49), ಲಾಟರಿ(26) ಮತ್ತು ಆನ್ ಲೈನ್ ಗೇಮಿಂಗ್ ಸಂಬಂಧ 7 ಪ್ರಕರಣಗಳು ದಾಖಲಾಗಿವೆ.
ಹೀಗೆ ಒಟ್ಟು 12,615 ಪ್ರಕರಣಗಳು ದಾಖಲಾಗಿದ್ದು, 4,70,53,92,258 ರೂಪಾಯಿ ನಷ್ಟವಾಗಿದೆ. 201,83,28,534 ರೂಪಾಯಿ ಪ್ರೀಜ್ ಮಾಡಲಾಗಿರುತ್ತದೆ. 28,40,38,422 ರೂಪಾಯಿ ವಶಪಡಿಸಿಕೊಂಡು 27,68,72,273 ರೂಪಾಯಿ ದೂರುದಾರರಿಗೆ ಹಿಂತಿರುಗಿಸಲಾಗಿದೆ.
ಜೈನ ಮಂದಿರದಲ್ಲಿ ಕಳವು; 4 ಅಂತಾರಾಜ್ಯ ಆರೋಪಿಗಳ ಬಂಧನ; 20ಲಕ್ಷ ರೂಪಾಯಿ ಮೌಲ್ಯದ 14 ಕೆ.ಜಿ. ಬೆಳ್ಳಿ ಆಭರಣ ವಶ
ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿನಗರದಲ್ಲಿರುವ ಆದಿನಾಥ ಜೈನ ಮಂದಿರದಲ್ಲಿ ಇದೇ ವರ್ಷದ ಸೆಪ್ಟಂಬರ್ 9ರಂದು ರಾತ್ರಿ ಕಳ್ಳರು ಬೆಳ್ಳಿ ಆಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಗಳು ಮತ್ತು ಮಾಲು ಪತ್ತೆ ಮಾಡಲು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ರಾಜಸ್ತಾನ ರಾಜ್ಯದ ಪಾಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯ, ಒಟವಾಟೋ ಕಿ ಪಾಲಿ ಎಂಬ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಕಳವು ಮಾಡಿಕೊಂಡು ಹೋಗಿದ್ದ 14 ಕೆ.ಜಿ. ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 19,75,000 ರೂಪಾಯಿ ಆಗಿರುತ್ತದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.
ಸದರಿ ಆರೋಪಿ ಮತ್ತು ಮಾಲು ಪತ್ತೆ ಕಾರ್ಯದ ಬಗ್ಗೆ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್.ಟಿ, ಐ.ಪಿ.ಎಸ್ ಮತ್ತು ಕಬ್ಬನ್ಪಾರ್ಕ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಾಲಕೃಷ್ಣ, ಸಿ ರವರ ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿ ಕೆ.ಬಿ ರವರ ನೇತೃತ್ವದಲ್ಲಿ ಮತ್ತು ಅಧಿಕಾರಿ, ಸಿಬ್ಬಂದಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಎಚ್ಟಿ ಕನ್ನಡ' ವಾಟ್ಸಾಪ್ ಚಾನೆಲ್
“ತಾಜಾ ಸುದ್ದಿ, ಜ್ಯೋತಿಷ್ಯ, ಮನರಂಜನೆ, ಕ್ರೀಡೆ ಸೇರಿದಂತೆ ನಿಮ್ಮಿಷ್ಟದ ವಿಷಯಗಳ ತ್ವರಿತ ಅಪ್ಡೇಟ್ ಪಡೆಯಲು 'ಎಚ್ಟಿ ಕನ್ನಡ' ವಾಟ್ಸಾಪ್ ಚಾನೆಲ್ 🚀 ಫಾಲೊ ಮಾಡಿ. ಮರೆಯದಿರಿ, ಇದು ಪಕ್ಕಾ ಲೋಕಲ್” ಕ್ಲಿಕ್ ಮಾಡಿ.