Davanagere News: ಮಹಾರಾಷ್ಟ್ರದ ಬೆಳವಣಿಗೆ ಉದಾಹರಣೆ ನೀಡಿ ಕಾಂಗ್ರೆಸ್ ಸರ್ಕಾರದ ಪತನ ಕುರಿತು ಸೂಚ್ಯವಾಗಿ ಹೇಳಿದ ಮಾಜಿ ಸಿಎಂ ಬೊಮ್ಮಾಯಿ
Jul 06, 2023 04:46 PM IST
ದಾವಣಗೆರೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಜನ್ಮದಿನಾಚರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ.
- Karnataka Politics: ದಾವಣಗೆರೆಯಲ್ಲಿ ಸಂಸದ ಡಾ. ಜಿ.ಎಂ.ಸಿದ್ದೇಶ್ವರ್ ಜನ್ಮದಿನಾಚರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆಂದು ಹೇಳಲು ಆಗುವುದಿಲ್ಲ. ಮತ್ತೆ ಯಾವುದನ್ನೂ ಅಲ್ಲ ಗೆಳೆಯುವುದಕ್ಕೂ ಸಾಧ್ಯವಿಲ್ಲ.
ದಾವಣಗೆರೆ: ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು. ಹೀಗೆ ಆಗುತ್ತದೆಂದು ಅನ್ನುವುದಕ್ಕೆ ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಬೆಳವಣಿಗೆ ಉದಾಹರಣೆ ನೀಡಿ ಹೇಳಿಕೆ ಕೊಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ಪತನದ ಕುರಿತಂತೆ ಸುಳಿವು ನೀಡಿದ್ದಾರೆ.
ದಾವಣಗೆರೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಜನ್ಮದಿನಾಚರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆಂದು ಹೇಳಲು ಆಗುವುದಿಲ್ಲ. ಮತ್ತೆ ಯಾವುದನ್ನೂ ಅಲ್ಲ ಗೆಳೆಯುವುದಕ್ಕೂ ಸಾಧ್ಯವಿಲ್ಲ. ಹಿಂದಿನಿಂದಲೂ ಇಂತಹದ್ದು ನಡೆದುಕೊಂಡು ಬಂದಿದೆ. ಈಗ ಮಹಾರಾಷ್ಟ್ರದಲ್ಲಿ ಆಗುತ್ತಿರುವುದೇ ನಿದರ್ಶನವಾಗಿದೆ ಎಂದು ಸೂಚ್ಯವಾಗಿ ಹೇಳಿದರು.
ಚುನಾವಣೆಗೆ ಪೂರ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಭರವಸೆ ನೀಡಿದ್ದೇ ಒಂದು ಅಧಿಕಾರಕ್ಕೆ ಬಂದ ತರುವಾಯದಲ್ಲಿ ಮಾಡುತ್ತಿರುವುದು ಇನ್ನೊಂದು. ಕಾಂಗ್ರೆಸ್ ರಾಜ್ಯದ ಜನರಿಗೆ ನೀಡಿರುವುದು ಗ್ಯಾರಂಟಿಯಲ್ಲ ಐದು ದೋಖಾಗಳನ್ನು, ಎಂದು ಹರಿಹಾಯ್ದ ಅವರು, ನಾವು ಈ ಬಗ್ಗೆ ಸದನದ ಒಳಗೂ ಹೊರಗೂ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ವಿಪಕ್ಷ ನಾಯಕನ ಆಯ್ಕೆ ವಿಚಾರದ ಬಗ್ಗೆ ನಮ್ಮ ಪ್ರಮುಖ ನಾಯಕರ ಜೊತೆಗೆ ಚರ್ಚೆ ನಡೆದಿದೆ. ಇವತ್ತು ಅಥವಾ ನಾಳೆ ಪ್ರತಿಪಕ್ಷ ನಾಯಕನ ಆಯ್ಕೆ ಆಗುತ್ತದೆ. ಬಿಜೆಪಿ ರಾಷ್ಟ್ರೀಯ ನಾಯಕರು ಬೇರೆ ಬೇರೆ ರಾಜ್ಯಗಳ ವಿಚಾರದಲ್ಲಿ ವಿಳಂಬವಾಗಿದೆ ಅಷ್ಟೇ ಎಂದರು.
ಭ್ರಷ್ಟಾಚಾರ ಆರೋಪ ತನಿಖೆ ನಡೆಸಲಿ
ಕಾಂಗ್ರೆಸ್ ಸರ್ಕಾರವು 40 ಪರ್ಸೆಂಟೇಜ್ ಆರೋಪದ ತನಿಖೆ ನಡೆಸುವ ಜೊತೆಗೆ 2013ರಿಂದ ಈವರೆಗಿನ ಎಲ್ಲಾ ಪ್ರಕರಣಗಳ ಬಗ್ಗೆಯೂ ತನಿಖೆ ಮಾಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈಗಾಗಲೇ ಲೋಕಾಯುಕ್ತದಲ್ಲೂ ಕೆಲವು ಪ್ರಕರಣಗಳ ತನಿಖೆ ನಡೆದಿದೆ. ಅವುಗಳ ಜೊತೆಗೆ 2013 ರಿಂದ ಇಲ್ಲಿವರೆಗಿನ ಎಲ್ಲಾ ಪ್ರಕರಣಗಳ ತನಿಖೆಯನ್ನೂ ಮಾಡಿಸಲಿ ಎಂದರು.
ಬಿಟ್ ಕಾಯಿನ್ ಮರು ತನಿಖೆ ವಿಚಾರವೊಂದೇ ಅಲ್ಲ, ಎಲ್ಲಾ ಪ್ರಕರಣಗಳ ತನಿಖೆ ಆಗಲಿ. ಯಾವುದೇ ಒಂದು ಪ್ರಕರಣವನ್ನು ಮುಂದಿಟ್ಟುಕೊಂಡು, ತನಿಖೆ ಮಾಡಿಸಬಾರದು. ರಾಜ್ಯದಲ್ಲಿ 2013 ರಿಂದ 2023ರವರೆಗೆ ಯಾವ್ಯಾವ ಕಮೀಷನ್ ಮುಂದೆ ಆಪಾದನೆಗಳಿವೆಯೋ ಅದೆಲ್ಲಾ ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು. ಆ ಎಲ್ಲಾ ಪ್ರಕರಣಗಳನ್ನೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ ಎಂದು ಅವರು ಆಗ್ರಹಿಸಿದರು.