Pratap Simha: ಭದ್ರತಾ ಲೋಪವೆಸಗಿದ ಆರೋಪಿಗಳಿಗೆ ವಿಸಿಟರ್ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಯಾರು, ಸ್ಫೀಕರ್ಗೆ ಅವರು ಕೊಟ್ಟ ವಿವರಣೆ ಏನು
Dec 14, 2023 02:26 PM IST
ಭದ್ರತಾ ಲೋಪ ಎಸಗಿದ ಕೃತ್ಯದ ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಅವರು ಲೋಕಸಭೆ ಪ್ರವೇಶಿಸಲು ಸಂಸದ ಪ್ರತಾಪ್ ಸಿಂಹ ಅವರ ವಿಸಿಟರ್ ಪಾಸ್ ಬಳಸಿಕೊಂಡಿದ್ದರು.
ಸಂಸತ್ನಲ್ಲಿ ಭದ್ರತಾ ಲೋಪ ಎಸಗಿದ ಆರೋಪಿಗಳಿಗೆ ವಿಸಿಟರ್ ಪಾಸ್ ನೀಡಿದ್ದ ಕಾರಣ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ದೇಶದ ಗಮನಸೆಳೆದಿದ್ದು, ಅವರ ಬಗ್ಗೆ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿದ್ಯಮಾನದ ಕುರಿತು ಸ್ಪೀಕರ್ಗೆ ವಿವರಣೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರ ಕುರಿತು ಗಮನಿಸಬಹುದಾದ 5 ಮುಖ್ಯ ಅಂಶಗಳು.
ಲೋಕಸಭೆ ಕಲಾಪದ ವೇಳೆ ನಿನ್ನೆ (ಡಿ.13) ಭದ್ರತಾ ಲೋಪವಾಗಿತ್ತು. ಈ ಕೃತ್ಯವೆಸಗಿದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅವರು ಲೋಕಸಭೆ ಪಬ್ಲಿಕ್ ಗ್ಯಾಲರಿಗೆ ಪ್ರವೇಶ ಪಡೆಯಲು ಮೈಸೂರು - ಕೊಡಗು ಸಂಸದ, ಬಿಜೆಪಿಯ ಪ್ರತಾಪ ಸಿಂಹ (BJP MP Pratap Simha) ಅವರ ವಿಸಿಟರ್ ಪಾಸ್ ಅನ್ನು ಬಳಸಿಕೊಂಡಿದ್ದರು.
ಇದೇ ಕಾರಣಕ್ಕೆ ಕರ್ನಾಟಕದ ಬಿಜೆಪಿ ಸಂಸದ ಪ್ರತಾಪ್ ಸಿಂಹ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಪ್ರತಾಪ್ ಸಿಂಹ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ನಡುವೆ, ಕರ್ನಾಟಕದಲ್ಲಿ ಈ ವಿದ್ಯಮಾನ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ನಾಯಕರು ಪ್ರತಾಪ್ ಸಿಂಹ ಅವರ ವರ್ತನೆ ಬೇಜವಾಬ್ದಾರಿಯದ್ದು ಎಂದು ಟೀಕಿಸಿದ್ದು, ಇದೇ ವರ್ತನೆ ಕಾಂಗ್ರೆಸ್ ಸಂಸದರೊಬ್ಬರಿಂದ ವ್ಯಕ್ತವಾಗಿದ್ದರೆ ದೇಶದ್ರೋಹಿ ಹಣೆಪಟ್ಟಿ ಕಟ್ಟುತ್ತಿರಲಿಲ್ಲವೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರನ್ನು ಪ್ರಶ್ನಿಸಿದ ಘಟನೆಯೂ ನಡೆದಿತ್ತು.
ಲೋಕಸಭೆಯಲ್ಲಿ ಭದ್ರತಾ ಲೋಪದ ಘಟನೆ ನಿನ್ನೆ (ಡಿ.13) ಮಧ್ಯಾಹ್ನ ನಡೆದಿದ್ದು, ಪ್ರತಾಪ್ ಸಿಂಹ ಹೆಸರು ಮುನ್ನೆಲೆಗೆ ಬಂದಿತ್ತು. ನಿನ್ನೆ ಸಂಜೆಯ ಹೊತ್ತಿಗೆ ಸಂಸದ ಪ್ರತಾಪ್ ಸಿಂಹ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಈ ಕುರಿತು ವಿವರಣೆ ನೀಡಿದ್ದಾಗಿ ವರದಿಗಳು ಹೇಳಿವೆ.
ಲೋಕಸಭೆಗೆ ಒಳನುಸುಳಿದವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮನೋರಂಜನ್ ಎಂಬಾತ ತನ್ನ ಪಿಎ ಜತೆಗೆ ನಿರಂತರ ಸಂಪರ್ಕದಲ್ಲಿದ್ದ. ಆತ ತನ್ನ ಸ್ನೇಹಿತನಿಗೂ ಸೇರಿ ಎರಡು ಪಾಸ್ ಅನ್ನು ನಿರಂತರ ಒತ್ತಡ ಹೇರಿ ಪಡೆದುಕೊಂಡಿದ್ದ. ಮನೋರಂಜನ್ ತಂದೆ ತನಗೆ ಪರಿಚಿತರಾಗಿದ್ದು, ಅವರು ತಮ್ಮ ಕ್ಷೇತ್ರದ ಪ್ರಜೆ. ಅವರ ಹೆಸರು ಹೇಳಿ ಪರಿಚಯ ಮಾಡಿಕೊಂಡು ಪಾಸ್ ಪಡೆಯಲಾಗಿದೆ ಎಂದು ಪ್ರತಾಪ್ ಸಿಂಹ ಅವರು ಸ್ಪೀಕರ್ ಅವರಿಗೆ ವಿವರಿಸಿದ್ದಾಗಿ ವರದಿ ಹೇಳಿದೆ.
ಆದಾಗ್ಯೂ, ಪ್ರತಾಪ್ ಸಿಂಹ ಇದುವರೆಗೆ ಈ ವಿದ್ಯಮಾನದ ಕುರಿತು ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಆದರೆ, ಸಂಸತ್ತಿಗೆ ಭೇಟಿ ನೀಡಿದ ವಿದ್ಯಾವರ್ಧಕ ಕಾಲೇಜಿನ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳ ಜತೆಗೆ ಇರುವ ಫೋಟೋ ಟ್ವೀಟ್ ಮಾಡಿದ್ದಾರೆ.
ಪ್ರತಾಪ್ ಸಿಂಹ ಯಾರು, ಅವರ ಕಿರುಪರಿಚಯದ 5 ಅಂಶಗಳು
1. ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ, 2014 ರಿಂದ ಸಂಸದರಾಗಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಜೇತರಾದವರು.
2. ಪ್ರತಾಪ್ ಸಿಂಹ ಅವರು ರಾಜಕೀಯ ಪ್ರವೇಶ ಮಾಡುವ ಮೊದಲು 13 ವರ್ಷ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. 22 ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿದ್ದಾಗಲೇ ಬೆತ್ತಲೆ ಜಗತ್ತು, ಬೆತ್ತಲೆ ಪ್ರಪಂಚ ಹೆಸರಿನ ಅಂಕಣಕಾರರಾಗಿ, ಪ್ರಖರ ಹಿಂದುತ್ವವಾದಿಯಾಗಿ ಗುರುತಿಸಿಕೊಂಡವರು.
3. ಪ್ರತಾಪ್ ಸಿಂಹ ಅವರು 2015ರಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿ ನಿಯೋಜಿತರಾದರು.
4. ಮೈಸೂರು- ಕೊಡಗು ಕ್ಷೇತ್ರದ ಸಂಸದರಾಗಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಗಮನಸೆಳೆದವರು. ಇದಲ್ಲದೆ, ಕರ್ನಾಟಕ ಸರ್ಕಾರದ ಕೆಲವು ಆಚರಣೆಗಳ ವಿರುದ್ಧ ವಿಶೇಷವಾಗಿ ಟಿಪ್ಪು ಜಯಂತಿ ಆಚರಣೆ ಮಾಡುವ ನಿರ್ಧಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿ ಗಮನಸೆಳೆದಿದ್ದರು.
5. ಈ ವರ್ಷ ಆರಂಭದಲ್ಲಿ ಮೈಸೂರಿನಲ್ಲಿ ಎಸ್ ಎ ರಾಮದಾಸ್ ಶಾಸಕರಾಗಿದ್ದ ಕ್ಷೇತ್ರದಲ್ಲಿ ಗುಂಬಜ್ ಆಕಾರದ ಬಸ್ ನಿಲ್ದಾಣ ನಿರ್ಮಾಣವಾಗುತ್ತಿರುವುದನ್ನು ಕಂಡು ಅದನ್ನು ಕೆಡಹುವಂತೆ ಆಗ್ರಹಿಸಿದ್ದರು. ಕಾಮಗಾರಿ ಮುಂದುವರಿಸಿದರೆ ಜೆಸಿಬಿ ತಂದು ಒಡೆದುಹಾಕುವುದಾಗಿ ಎಚ್ಚರಿಸಿದ್ದರು. ಬಳಿಕ ಗುಂಬಜ್ ಆಕಾರವನ್ನು ತೆಗೆದು ಸಾಮಾನ್ಯ ಬಸ್ ನಿಲ್ದಾಣವನ್ನು ಸ್ಥಳೀಯಾಡಳಿತ ನಿರ್ಮಿಸಿತ್ತು.