Lok Sabha Election 2024: ಎತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ತುಮಕೂರು ಕೈ ಅಭ್ಯರ್ಥಿ ಎಸ್ಪಿ ಮುದ್ದಹನುಮೇಗೌಡ
Apr 04, 2024 08:17 PM IST
ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ
- ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ವಿಭಿನ್ನವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಯಾರೆಲ್ಲಾ ನಾಯಕರು ಸಾಥ್ ನೀಡಿದ್ರು ಅನ್ನೋದರ ಮಾಹಿತಿ ಇಲ್ಲಿದೆ.
ತುಮಕೂರು: ಇಂಡಿಯಾ ಮೈತ್ರಿಕೂಟದ ತುಮಕೂರು ಲೋಕಸಭಾ ಕ್ಷೇತ್ರದ (Lok Sabha Election 2024) ಅಭ್ಯರ್ಥಿ ಕಾಂಗ್ರೆಸ್ನ ಎಸ್.ಪಿ.ಮುದ್ದಹನುಮೇಗೌಡ (Muddahanumegowda) ತಮ್ಮ ಬೆಂಬಲಿಗರು, ಪಕ್ಷದ ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಇಂದು (ಏಪ್ರಿಲ್ 4, ಗುರುವಾರ) ಕೊನೆಯ ದಿನವಾಗಿತ್ತು. ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ವಿಶೇಷವಾಗಿ ವಾಹನ ಸಿದ್ಧಗೊಂಡಿದ್ದರೂ ಕೊನೆಯ ಗಳಿಗೆಯಲ್ಲಿ ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದರು. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಎಸ್, ಆರ್.ಶ್ರೀನಿವಾಸ್ ಸೇರಿದಂತೆ ಹಲವರು ಅಭ್ಯರ್ಥಿ ಎಸ್.ಪಿ.ಮುದ್ದ ಹನುಮೇಗೌಡ ಅವರಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಗೃಹ ಸಚಿವ ಡಾ.ಜಿಪರಮೇಶ್ವರ್ ಮಾತನಾಡಿ, ಸಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಪಿಐ ಮೂಲಕ ವಿರೋಧ ಪಕ್ಷಗಳನ್ನು ಧಮನ ಮಾಡಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಬಿಜೆಪಿಯನ್ನು ಸೋಲಿಸುವ ಮೂಲಕ ಅಪಾಯದಲ್ಲಿರುವ ಪ್ರಜಾ ಪ್ರಭುತ್ರವ ರಕ್ಷಿಸಬೇಕಾಗಿದೆ ಎಂದು ಹೇಳಿದರು.
ಪದೇ ಪದೇ ಸಂವಿಧಾನ ಬದಲಾವಣೆಯ ವಿಚಾರಗಳನ್ನು ಬಿಜೆಪಿ ಸಂಸದರು ಮಾತನಾಡುತ್ತಿದ್ದರು ಮೌನ ವಹಿಸಿ ಅವರ ಮಾತುಗಳಿಗೆ ಕುಮ್ಮಕ್ಕು ನೀಡುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ, ಹಾಗಾಗಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವೆನಿಸಿಕೊಂಡಿರುವ ಭಾರತದ ಸಂವಿಧಾನ ಉಳಿಸಿಕೊಳ್ಳಲು ನಾವೆಲ್ಲರೂ ಬಿಜೆಪಿ ಸೋಲಿಸುವುದು ಅನಿವಾರ್ಯವಾಗಿದೆ ಎಂದರು.
ಬಿಜೆಪಿ ಸಂಸದರ ವಿರುದ್ಧ ಕೈ ನಾಯಕರ ಆಕ್ರೋಶ
ಎಲ್ಲಿಂದಲೋ ಬಂದ ವಿ.ಸೋಮಣ್ಣ ಅವರಿಗೆ ಮತ ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ, ಹಾಲಿ ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ರಾಜ್ಯದಿಂದ ಆರಿಸಿ ಹೋದ 26 ಬಿಜೆಪಿ ಸಂಸದರು ಒಂದು ದಿನವೂ ರಾಜ್ಯದ ನೆಲ,ಜಲ, ಭಾಷೆಯ ವಿಚಾರದಲ್ಲಿ ಧ್ವನಿ ಎತ್ತಿ ಮಾತನಾಡಲಿಲ್ಲ, ಅವರ ಹಾದಿಯಲ್ಲಿಯೇ ಇರುವ ವಿ.ಸೋಮಣ್ಣ ಅವರಿಂದ ಏನನ್ನಾದರೂ ನಿರೀಕ್ಷೆ ಮಾಡಲು ಸಾಧ್ಯವೆ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಹತ್ತು ವರ್ಷಗಳ ಕಾಲ ಡಿಸಿಸಿ ಅಧ್ಯಕ್ಷರಾಗಿ, ಮೂರು ಬಾರಿ ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿರುವ ಎಸ್.ಪಿ.ಮುದ್ದಹನುಮೇಗೌಡರು ಸರಳ ಸಜ್ಜನಿಕೆಗೆ ಹೆಸರಾದವರು. ಅವರನ್ನು ಈ ಬಾರಿ ಗೆಲ್ಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಬಿಜೆಪಿ- ಜೆಡಿಎಸ್ದು ಅಪವಿತ್ರ ಮೈತ್ರಿ, ಈ ಹಿಂದೆ ಎರಡು ಪಕ್ಷಗಳ ನಾಯಕರು ಪರಸ್ವರರ ಕುರಿತು ಯಾವ ರೀತಿ ಮಾತನಾಡಿಕೊಂಡಿದ್ದಾರೆ ಎಂಬುದನ್ನು ಒಮ್ಮೆ ಅವಲೋಕಿಸಿದರೆ ಇದು ಸ್ವಾರ್ಥ ಕುಟುಂಬ ರಾಜಕಾರಣಕ್ಕೆ ಎಂದಿದ್ದಾರೆ.
ದೇವೇಗೌಡರು ತಮ್ಮ ಕುಟುಂಬದಲ್ಲಿಯೇ ಅಧಿಕಾರ ಉಳಿಯಬೇಕೆಂಬ ಕಾರಣಕ್ಕೆ ಮಾಡಿಕೊಂಡ ಒಪ್ಪಂದ ಇದಾಗಿದೆ. ಮಗ, ಮೊಮ್ಮಗ, ಅಳಿಯನಿಗಾಗಿ ದೇವೇಗೌಡರು ಈ ಇಳಿವಯಸ್ಸಿನಲ್ಲಿ ಸುತ್ತುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತದೆ, ಅಧಿಕಾರದ ಆಸೆಗೆ ಅವರ ಮಕ್ಕಳು, ಮೊಮ್ಮಕ್ಕಳು ಸಾಯವ ಕಾಲದಲ್ಲಿಯೂ ಅವರಿಗೆ ನೆಮ್ಮದಿ ಕೊಡಲಿಲ್ಲವಲ್ಲ ಎಂದು ಅನುಕಂಪ ಮೂಡುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, 2014 ರಿಂದ 2019ರ ವರೆಗೆ ಐದು ವರ್ಷಗಳ ಕಾಲ ಸಂಸದನಾಗಿ ಈ ಜಿಲ್ಲೆ, ರಾಜ್ಯದ ಹಲವಾರು ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಾಸ್ತಾಪಿಸುವ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದೇನೆ, ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ ನೆಲ, ಜಲ, ಭಾಷೆ, ಕೈಗಾರಿಕೆ, ರೈತರ ಸಮಸ್ಯೆ, ಕೊಬ್ಬರಿ ಸಮಸ್ಯೆ ಕುರಿತು ಅಧಿವೇಶನದಲ್ಲಿ ಚರ್ಚಿಸಿ, ಪರಿಹಾರ ದೊರಕಿಸುವ ಪ್ರಯತ್ನ ನಡೆಸಿದ್ದು, ಮುಂದೆ ಜನತೆ ಅವಕಾಶ ಮಾಡಿಕೊಟ್ಟರೆ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪಾರ್ಲಿಮೆಂಟಿನ ಒಳ, ಹೊರಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.