Modi in Mysuru: ಮೈಸೂರಲ್ಲಿ ಕಾಂಗ್ರೆಸ್ ವಿರುದ್ದ ಮೋದಿ ಟೀಕಾಪ್ರಹಾರ, ಕರ್ನಾಟಕದ ಬೇಡಿಕೆಗಳಿಗೆ ಉತ್ತರಿಸದ ಪ್ರಧಾನಿ
Apr 14, 2024 08:51 PM IST
ಮೈಸೂರಿನಲ್ಲಿ ನಡೆದ ಸಮಾವೇಶದಲ್ಲ ಎಚ್ ಡಿಕುಮಾರಸ್ವಾಮಿ. ಯದುವೀರ್ ಒಡೆಯರ್, ಪ್ರಜ್ವಲ್ ರೇವಣ್ಣ ಅವರ ಜತೆಗೆ ಪ್ರಧಾನಿ ಮೋದಿ,
- ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್ನ ಜಂಟಿ ಸಮಾವೇಶದಲ್ಲಿ ಮಾತನಾಡಿದರು. ಕಾಂಗ್ರೆಸ್ ವಿರುದ್ದವೂ ಟೀಕಾ ಪ್ರಹಾರ ನಡೆಸಿದರು.
ಮೈಸೂರು: ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರವನ್ನು ಮುಂದುವರೆಸಿರುವ ಪ್ರಧಾನಿ ನರೇಂದ್ರಮೋದಿ ಅವರು ತುಕಡೆ ತುಕಡೆ ಗ್ಯಾಂಗ್ ನಂತೆ ಕಾಂಗ್ರೆಸ್ ಈಗಲೂ ಯೋಚಿಸುತ್ತಿದೆ. ದೇಶ ಕಟ್ಟುವ ಬದಲು ಒಡೆಯುವ ತನ್ನ ಎಂದಿನ ಶೈಲಿಯ ರಾಜಕಾರಣದಲ್ಲೇ ನಿರತವಾಗಿದೆ ಎಂದು ಆರೋಪಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಭಾನುವಾರ ನಡೆದ ಮೈಸೂರು- ಕೊಡಗು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಲೋಕಸಭೆ ಚುನಾವಣೆಯ ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಸಮಯವನ್ನು ಕಾಂಗ್ರೆಸ್ ಪಕ್ಷದ ನೀತಿಗಳು, ಆ ಪಕ್ಷದ ಈಗಿನ ನಡವಳಿಕೆ, ದೇಶದ ಕುರಿತು ಕಾಂಗ್ರೆಸ್ಗೆ ಇರುವ ನಿಲುವುಗಳ ಕುರಿತಾಗಿಯೇ ಇತ್ತು.
ಕಾಂಗ್ರೆಸ್ ದೇಶವನ್ನು ಆರು ದಶಕಕ್ಕೂ ಮಿಗಿಲಾಗಿ ಆಳಿದೆ. ಆದರೆ ಕಾಂಗ್ರೆಸ್ ಈಗಲೂ ದೇಶದ ಸಮಸ್ಯೆಗಳಿಗೆ ಪರಿಹಾರ ನೀಡುವ ರಾಜಕೀಯ ಮಾಡುತ್ತಿಲ್ಲ. ಬದಲಿಗೆ ಸಮಸ್ಯೆಗಳ ಬೀಜವನ್ನೇ ಬಿತ್ತುವ ಕೆಲಸ ಮಾಡುತ್ತಿದೆ. ಈ ರೀತಿ ಮಾಡುವ ಮೂಲಕ ಕಾಂಗ್ರೆಸ್ ದೇಶದ ಜನರಿಗೆ ಈಗಲೂ ದ್ರೋಹ ಎಸಗುತ್ತಿದೆ. ಕಾಂಗ್ರೆಸ್ ಪಕ್ಷ ಹೀಗೆ ನಡೆದುಕೊಂಡರೆ ದೇಶದ ಅಭಿವೃದ್ದಿ ಎನ್ನುವುದು ಸಾಧ್ಯವೇ? ಎಂದು ಪ್ರಶ್ನಿಸಿದರು.
ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿದರೂ ಕಾಂಗ್ರೆಸ್ ಜನರಿಗೆ ಬೇಕಾದ ಕೆಲಸ ಮಾಡಲಿಲ್ಲ. ಈ ಕಾರಣದಿಂದಲೇ ಅವರಿಗೆ ಅಧಿಕಾರ ಸಿಕ್ಕಿಲ್ಲ. ಎನ್ಡಿಎ ಹತ್ತು ವರ್ಷದಲ್ಲಿ ದಶಕಗಳಿಂದ ಆಗದ ಕೆಲಸ ಮಾಡಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದೆ. ಮತ್ತೆ ಎನ್ಡಿಎ ಅಧಿಕಾರಕ್ಕೆ ಬಂದರೆ ಭಾರತವನ್ನು ಮತ್ತಷ್ಟು ಮುನ್ನಡೆಸುವ ಕೆಲಸ ಮಾಡಲಿದೆ ಎಂದು ಹೇಳಿದರು.
ಕಾಂಗ್ರೆಸ್ ನೀತಿಗಳೂ ಈಗಲೂ ದೇಶ ಒಡೆಯುವ ರೀತಿಯಲ್ಲಿಯೇ ಇದೆ. ಅಂದರೆ ತುಕ್ಡೇ ತುಕ್ಡೇ ಗ್ಯಾಂಗ್ ರೀತಿಯಲ್ಲಿಯೇ ಕೆಲಸ ಮಾಡುತ್ತಿದೆ. ಈ ಕಾರಣದಿಂದಲೇ ಕಾಂಗ್ರೆಸ್ ಜನರ ಮೇಲಿನ ವಿಶ್ವಾಸ ಕಳೆದುಕೊಂಡಿದೆ. ಈಗಲೂ ಸನಾತನ ವ್ಯವಸ್ಥೆಯನ್ನೇ ನಾಶ ಮಾಡುವ ಮೂಲಕ ಹಿಂದೂ ಶಕ್ತಿ ತೊಡೆದು ಹಾಕುವ ಯೋಚನೆಯನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆಪಾದಿಸಿದರು.
ಭಾರತದಲ್ಲಿ ರಾಮಮಂದಿರ ನಿರ್ಮಾಣದ ಬೇಡಿಕೆ ಐದು ಶತಮಾನಗಳಾದ್ದಾಗಿತ್ತು. ಅದನ್ನು ಹಿಂದೆ ಯಾರೂ ಮಾಡಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದು ಸಾಧ್ಯವಾಗಿದೆ. ರಾಮಮಂದಿರ ಕಾರ್ಯಕ್ರಮಕ್ಕೂ ಕಾಂಗ್ರೆಸ್ ಬಾರದೇ ಹಿಂದೂ ಧರ್ಮಕ್ಕೆ ಅವಮಾನ ಮಾಡಿತು. ಈಗ ಭಾರತ್ ಮಾತಾ ಕೀ ಜೈ ಎನ್ನಲು ಮುಖಂಡರು ನಾಯಕರ ಅನುಮತಿ ಕೇಳುವ ಪರಿಸ್ಥಿತಿ ಬಂದಿದೆ. ಈ ಪಕ್ಷದಿಂದ ಇನ್ನನು ನಿರೀಕ್ಷಿಸಲು ಸಾಧ್ಯ ಎಂದು ಕಟಕಿಯಾಡಿದರು ಮೋದಿ.
ಮುಂದಿನ ಐದು ವರ್ಷವೂ ಭಾರತದ ಪಾಲಿಗೆ ಸವಾಲುಗಳ ಅವಧಿಯೇ. ಭಾರತ ಈಗ ಹಲವಾರು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿದೆ. ಅದನ್ನು ಇನ್ನಷ್ಟು ಸುಸ್ಥಿರಗೊಳಿಸಲು ಮುಂದಿನ ಅವಧಿ ಪ್ರಮುಖವಾಗಿದೆ. ಈಗಾಗಲೇ ಉಚಿತವಾಗಿ ರೇಷನ್, 75 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡುತ್ತಿದ್ದೆ. ಬಡವರಿಗೆ ಮನೆ ನಿರ್ಮಿಸುವ ಕೆಲಸ ಆಗುತ್ತಿದೆ. ಚಂದ್ರಯಾನ, ಮಾಹಿತಿ ತಂತ್ರಜ್ಞಾನದಂತ ಕ್ಷೇತ್ರಗಳಲ್ಲಿ ಭಾರತ ಸಾಧನೆ ಹೆಮ್ಮೆ ಪಡುವಂತಿದ್ದು, ಈ ಎಲ್ಲಾ ವಲಯಗಳಲ್ಲೂ ಭಾರತದ ಸಾಧನೆ ಮುಂದುವರಿಯಲಿದೆ ಎಂದು ಹೇಳಿದರು,
ಕರ್ನಾಟಕದಲ್ಲೂ ಕಳೆದ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಏಟಿಎಂ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕೋಟ್ಯಂತರ ರೂಪಾಯಿ ಕರ್ನಾಟಕದಿಂದಲೇ ಈಗಲೂ ಸರಬರಾಜು ಆಗುತ್ತಿದೆ ಎಂದು ಮೋದಿ ಟೀಕಿಸಿದರು.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಮಿತಿ ಮೀರಿದೆ. ದೇಶದ ಐಟಿ ಹಬ್ ಎಂದು ಕರೆಯಿಸಿಕೊಳ್ಳುವ ಬೆಂಗಳೂರಿನಲ್ಲಿ ನಿತ್ಯ ಟ್ಯಾಂಕರ್ನಲ್ಲಿ ನೀರು ಕೊಡುವ ಸ್ಥಿತಿಯಿದೆ. ನೀರು ಹಂಚಿಕೆಯಲ್ಲೂ ವ್ಯಾಪಾರ ನಡೆಯುತ್ತಿದ್ದು ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಆಡಳಿತ ನಡೆಸುವುದು ಎಂದರೆ ಹೀಗೇನಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ತವರು ಜಿಲ್ಲೆಯಾದ ಮೈಸೂರಿನಲ್ಲಿ ಕನ್ನಡದಲ್ಲಿಯೇ ಚಾಮುಂಡೇಶ್ವರಿ ತಾಯಿಗೆ ನಮಸ್ಕಾರ, ತಾಯಿ ಆಶಿರ್ವಾದ ನಮಗೆ ಸಿಕ್ಕಿದೆ ಎಂದು ಭಾಷಣ ಆರಂಭಿಸಿದ ಮೋದಿ, ಭಾರತದ ಸಾಧನೆಯ ಪಟ್ಟಿಯನ್ನು ಜನರ ಮುಂದಿಟ್ಟಿರು. ಆದರೆ ತೆರಿಗೆ ಹಂಚಿಕೆ. ಬರ ಅನುದಾನ ವಿಚಾರವಾಗಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಕೇಳುತ್ತಿರುವ ಮಾಹಿತಿ, ಬೇಡಿಕೆಗಳ ಕುರಿತು ಪ್ರಧಾನಿ ಮಾತನಾಡಲಿಲ್ಲ