ಅಯೋಧ್ಯೆಯ ಮಣ್ಣಿನ ಕಣ ಕಣದಲ್ಲಿ ರಾಮನನ್ನು ಜೀವಂತವಾಗಿ ಇಟ್ಟವರು ಇವರು; ಲೇಖಕಿ ಅಕ್ಷತಾ ಬಜಪೆ ಅಯೋಧ್ಯಾ ನೆನಪು
Dec 30, 2023 06:22 PM IST
ಅಯೋಧ್ಯೆಯಲ್ಲಿ ಇಂದು (ಡಿ.30) ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಮತ್ತು ಅಯೋಧ್ಯಾವಾಸಿಗಳ ಸ್ಪಂದನೆ..
ದೇಶದ ಗಮನ ಅಯೋಧ್ಯೆಯ ಕಡೆಗೆ ಕೇಂದ್ರೀಕೃತವಾಗುವ ಹೊತ್ತು. ಇಂದು (ಡಿ.30) ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೋಡ್ ಶೋ, ನೂತನ ವಿಮಾನ ನಿಲ್ದಾಣ ಸೇರಿ ಹಲವು ಯೋಜನೆಗಳ ಲೋಕಾರ್ಪಣೆ ಗಮನಸೆಳೆದಿದೆ. ಈ ವಿದ್ಯಮಾನವು ಅಯೋಧ್ಯೆ ಈ ಹಿಂದೆ ಭೇಟಿ ನೀಡಿದವರ ನೆನಪುಗಳ ಮೆರವಣಿಗೆಗೆ ಕಾರಣವಾಗಿದೆ. ಲೇಖಕಿ ಅಕ್ಷತಾ ಬಜಪೆ ತಮ್ಮ ನೆನಪುಗಳನ್ನು ಹಂಚಿಕೊಂಡಿರುವುದು ಹೀಗೆ..
ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಗೆ ದಿನಗಣನೆ ಶುರುವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವಿಮಾನ ನಿಲ್ದಾಣ, ನವೀಕೃತ ರೈಲ್ವೆ ನಿಲ್ದಾಣ ಸೇರಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಇದರ ಜತೆಗೆ ಆಕರ್ಷಕ ರೋಡ್ ಶೋ ಮಾಡಿದ್ದು, ಜನರ ಗಮನಸೆಳೆದಿದೆ.
ಈ ಎಲ್ಲ ವಿದ್ಯಮಾನಗಳು ಅಯೋಧ್ಯೆಗೆ ಹೋಗಿ ಬಂದವರಲ್ಲಿ ತಮ್ಮ ಅಯೋಧ್ಯಾ ಪ್ರವಾಸದ ನೆನಪುಗಳನ್ನು ಕೆದಕತೊಡಗಿದೆ. ಹೀಗೆ ಹಲವರು ತಮ್ಮ ಅಯೋಧ್ಯಾ ಅನುಭವಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ಪೈಕಿ ಲೇಖಕಿ ಅಕ್ಷತಾ ಬಜಪೆ ಅವರು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿರುವ ಅನುಭವ ಹೀಗಿದೆ -
ಅಯೋಧ್ಯೆಯ ಮೋದಿಜೀ ಶೋ ನೋಡುತ್ತಿದ್ದಂತೆ ಕಣ್ತುಂಬಿ ಬಂತು...
ಸಾವಿರ ವರುಷಗಳ ಹಿಂದಿನವರೆಗೆ ಭರತ ಭೂಮಿಯ ಮುಕುಟಮಣಿಯಾಗಿದ್ದ ಅಯೋಧ್ಯೆ, ವಿದೇಶೀ ಆಕ್ರಮಣಕಾರರ ಕೈಗೆ ಸಿಲುಕಿ ನಲುಗಿತು.
ವಿದೇಶೀ ಆಕ್ರಮಣಕಾರರ ಕಾಲದಲ್ಲಿ ಅನೇಕ ದೌರ್ಜನ್ಯಗಳನ್ನು ಕಂಡ ಅಯೋಧ್ಯೆಯ ಪ್ರಜೆಗಳು, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹೀಗೆ ಎಲ್ಲ ವಿಷಯಗಳಲ್ಲಿ ಕೈ ಸೋಲುವಂತೆ ಮಾಡಿತು.
ಆದರೆ ಅಯೋಧ್ಯೆಯ ಜನ ಸೋಲೊಪ್ಪಲಿಲ್ಲ, ತಮಗೆ ಜೀವನವನ್ನೇ ಮುಡುಪಾಗಿಟ್ಟುಕೊಂಡು ತಮ್ಮ ಮನೆಮನಗಳಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡರು.
ಇಂದಿಗೂ ಅಯೋಧ್ಯೆಯ ಜನ ಇಂಗ್ಲೀಷ್ ಭಾಷೆ, ಸಂಸ್ಕೃತಿಗಳ ಮೋಹಕ್ಕೆ ಒಳಗಾಗದೆ ಅಂಗಳದಲ್ಲಿ ಅಂಬೆಕಾಲಿಡುವ ಮುಗುವೂ ರಾಮನ ಪರಂಪರೆಯನ್ನು ಪ್ರತಿನಿಧಿಸುತ್ತದೆ.
2 ವರುಷಗಳ ಹಿಂದೆ ನಾನು ಅಯೋಧ್ಯೆಗೆ ಹೋಗಿದ್ದಾಗ ಆಟೋ ಓಡಿಸುವ 17-18 ವರುಷದ ಹುಡುಗ ನನ್ನ ಲಗೇಜ್ ಇಳಿಸಿದ್ದಕ್ಕೆ ನಾನು ಥಾಂಕ್ಯೂ ಅಂದೆ, ಆತ ನನ್ನ ಕಡೆ ತಿರುಗಿ, "ಅರೆ ದೀದಿ ರಾಮ್ ಕೆ ನಗರೀ ಆಯೇ ಹೋ, ಯಹಾ ತೋ ಅಂಗ್ರೇಜೀ ಮತ್ ಬೋಲೋ, ರಾಮ್ ರಾಮ್ ಬೋಲೋ.."( ಅಕ್ಕಾ, ರಾಮನೂರಿಗೆ ಬಂದಿದ್ದೀರಿ, ಕನಿಷ್ಠ ಇಲ್ಲಿ ಇಂಗ್ಲೀಷ್ ಬೇಡ, ರಾಮ್ ರಾಮ್ ಅನ್ನಿ) ಅಂದುಬಿಟ್ಟ.
ಅಭ್ಯಾಸ ಬಲದಿಂದ ಥಾಂಕ್ಯೂ ಅಂದಿದ್ದ ನನಗೆ ಪಶ್ಚಾತ್ತಾಪ ಆದರೂ, ಅವನ ಕಣ್ಣುಗಳಲ್ಲಿ ಕಂಡ ರಾಮನ ಬಗೆಗಿನ ಪ್ರೀತಿಯನ್ನು ಕಂಡು ಹೃದಯ ತುಂಬಿ ಬಂತು. ಎರಡೂ ಕೈ ಜೋಡಿಸಿ 'ರಾಮ್ ರಾಮ್' ಅಂದೆ.
ಅಪ್ಪಟ ದೇಸೀ ಬದುಕಿನ ದರ್ಶನ ಮಾಡಿಸುವ ಅಯೋಧ್ಯೆಯ ಜನ ಪವಿತ್ರಾತ್ಮರು. ದೇಸಿ ಭಾಷೆಯ ಮೇಲಿನ ಪ್ರೀತಿ, ನೆಲದ ಸಂಸ್ಕೃತಿಯಲ್ಲಿ ಬಾಳ್ವೆ ನಡೆಸುವ ರೀತಿ, ಬದುಕಿನ ಸಾವಿರ ಸವಾಲುಗಳ ಮಧ್ಯೆ, ರಾಮನನ್ನು ಅಯೋಧ್ಯೆಯ ಮಣ್ಣಿನ ಕಣ ಕಣದಲ್ಲಿ ಜೀವಂತವಾಗಿ ಇಟ್ಟ ಶ್ರೇಯಸ್ಸು ಅಯೋಧ್ಯಾವಾಸಿಗಳದ್ದು.
ಅಯೋಧ್ಯೆಯ ಜನರ ತ್ಯಾಗ, ಒಂದು ದಿನ ರಾಮ ಮತ್ತೆ ವಿರಾಜಮಾನನಾಗುತ್ತಾನೆ ಅನ್ನೋ ಕೊನೆಯಿಲ್ಲದ ವಿಶ್ವಾಸ, ಅವರ ಶತಮಾನಗಳ ಸುಧೀರ್ಘ ತಪಸ್ಸು ಇವುಗಳಿಗೆ ನಾವು ಖಂಡಿತಾ ತಲೆ ಬಾಗಬೇಕು.
ಬಹುಶಃ ನಮ್ಮ ನಗರಗಳಂತೆ ಅಯೋಧ್ಯೆ ಕಮರ್ಷಿಯಲ್ ಆಗಿದ್ದರೆ ಅಯೋಧ್ಯೆಯ ಮರುನಿರ್ಮಾಣ ಬಹಳ ಕಷ್ಟವಿತ್ತು. ರಾಮ ನಡೆದಾಡಿದ ಪ್ರತೀ ಗುರುತನ್ನು ಜತನದಿಂದ ಕಾಯ್ದುಕೊಂಡು, ಅಯೋಧ್ಯವಾಸಿಗಳು 24*7 ಎನ್ನುವಂತೆ ರಾಮನಾಮ ಜಪದಲ್ಲಿ ತಲ್ಲೀನರಾದವರು.
ಇಂದಿಗೂ ಅಲ್ಲಿನ ಮನೆ, ಬೀದಿ, ಧರ್ಮಶಾಲಾ, ಮಂದಿರ ಎಲ್ಲ ಕಡಯಲ್ಲಿ ಧ್ವನಿಸುವ ರಾಮನ ಭಜನೆ, ಕೀರ್ತನೆ, ರಾಮ ಕುರಿತಾದ ಕಥಾ ಪ್ರದರ್ಶನ ನಿತ್ಯ ನಿರಂತರ, ಹೌದು ಅಲ್ಲಿ ಎಲ್ಲವೂ ರಾಮಮಯ.
ಇಂದಿಗೂ ಬೀದಿಗೆ 3-4 ಸಂಖ್ಯೆಯಲ್ಲಿ ನಡೆಯುವ ರಾಮನ ನಾಟಕಗಳನ್ನು ನಿತ್ಯ ಅಲ್ಲಿನ ಜನ ನೋಡಲು ಬರುತ್ತಾರೆ. ವೇದಿಕೆ ಗೆ ರಾಮನ ಪಾತ್ರಧಾರಿ ಬರುತ್ತಿದ್ದಂತೆ ಎದ್ದುನಿಂತು, ಅಡ್ಡ ಬಿದ್ದು ನಮಸ್ಕರಿಸುತ್ತಾರೆ. ರಾಮನ ಪಟ್ಟಾಭಿಷೇಕ ಆಗುವ ತನಕ ನಿರಂತರ ರಾಮನ ಭಜನೆ, ರಾಮನಿಗೆ ಜೈಕಾರ ಹಾಕುತ್ತಾರೆ. ಆನಂದ ಭಾಷ್ಪ ಸುರಿಸುತ್ತಾರೆ. ನಿಂತಕೊಂಡೇ ಹೃದಯದರಸನಿಗೆ ಗೌರವ ಸೂಚಿಸುತ್ತಾರೆ. ರಾಮ ಕಥಾನಕದ ಪ್ರತೀ ಪಾತ್ರಧಾರಿಯೂ ವೃತದಲ್ಲೇ ಇರುತ್ತಾನೆ. ಅವರಿಗದು ನಿತ್ಯ ಮಹೋತ್ಸವ.
ಇಂದು ಅಯೋಧ್ಯೆ ಮರಳಿ ಗತ ವೈಭವದತ್ತ ಸಾಗುತ್ತಿದೆ. ದೇಶದ ರಾಜ, ಅಯೋಧ್ಯಾವಾಸಿಗಳನ್ನು ರೋಡ್ ಶೋ ಮೂಲಕ ಸಂಧಿಸುತ್ತಿರುವುದು ಬಹಳ ಅರ್ಹವಾದದ್ದೇ.
ಇಂದು ಅಯೋಧ್ಯೆ ಕಾಣುತ್ತಿರುವ ಅಭಿವೃದ್ಧಿಯ ಹಿಂದೆ ಶತಮಾನಗಳ ನಿರೀಕ್ಷೆ, ತಪಸ್ಸಿದೆ. ಇಂದಿನ ಅಭಿವೃದ್ಧಿ ನಮ್ಮಂತಹ ಯಾತ್ರಿಗಳು, ಪ್ರವಾಸಿಗರಿಗಿಂತ ಅಯೋಧ್ಯಾ ವಾಸಿಗಳಿಗೆ ದೇಶದ ಆಡಳಿತ ನೀಡಬೇಕಾಗಿದ್ದ ಗಿಫ್ಟ್ ಅದು. ಈ ಬಾರಿ ಶ್ರೀ ರಾಮನ ಜೊತೆಗೆ ಅಯೋಧ್ಯಾವಾಸಿಗಳಿಗೂ ಜೈ ಅನ್ನಲೇಬೇಕು.
-ಅಕ್ಷತಾ ಬಜಪೆ