Ramanagar Crime: ನೌಕರಿ ಕಾಯಂಗೊಳಿಸುವ ಆಸೆ ತೋರಿಸಿ 35 ನೌಕರರಿಗೆ ರಾಮನಗರದಲ್ಲಿ ವಂಚನೆ, ಇಬ್ಬರ ವಿರುದ್ದ ಮೊಕದ್ದಮೆ
Jan 30, 2024 10:55 AM IST
ರಾಮನಗರದಲ್ಲಿ ಉದ್ಯೋಗದ ವಿಚಾರವಾಗಿ ಹಣ ಪಡೆದು ವಂಚಿಸಿದ ಪ್ರಕರಣ ದಾಖಲಾಗಿದೆ.
- ರಾಮನಗರದಲ್ಲಿ ಕೆಲಸ ಕಾಯಂಗೊಳಿಸುವುದಾಗಿ ಹಣ ಪಡೆದು ವಂಚಿಸಿದ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
- ವರದಿ:ಎಚ್.ಮಾರುತಿ ಬೆಂಗಳೂರು
ಬೆಂಗಳೂರು: ನೌಕರಿ ಕಾಯಂಗೊಳಿಸುವ ಆಸೆ ತೋರಿಸಿದ ಬ್ಬರು ದುಷ್ಕರ್ಮಿಗಳು, ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕ ನೌಕರರಿಂದ ಸುಮಾರು ರೂ. 26.25 ಲಕ್ಷ ಹಣ ವಸೂಲಿ ಮಾಡಿರುವ ಪ್ರಕರಣ ರಾಮನಗರದಲ್ಲಿ ನಡೆದಿದೆ.
ಇತ್ತ ಕೆಲಸವನ್ನು ಕಾಯಂ ಮಾಡಿಸದೆ, ಅತ್ತ ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.
ರಾಮನಗರದಲ್ಲಿ ನೀರು ಸರಬರಾಜು ನೌಕರರಾಗಿ ಕೆಲಸ ಮಾಡುತ್ತಿರುವ ಸುಮಾರು 35 ಮಂದಿ ಹಣ ನೀಡಿ ಮೋಸ ಹೋಗಿದ್ದಾರೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್ಡಿಬಿ)ಯಲ್ಲಿ ನೌಕರಿ ಕಾಯಂ ಆಗುತ್ತದೆ ಎಂದು ನಂಬಿ ಹಣ ನೀಡದ್ದಾರೆ.
ಇದನ್ನೂ ಓದಿರಿ: Mandya News: ಹನುಮ ಧ್ವಜ ವಿವಾದ: ಫೆಬ್ರವರಿ 9ಕ್ಕೆ ಮಂಡ್ಯ ಬಂದ್
ಏನಿದು ಪ್ರಕರಣ
ವಂಚನೆ ಕುರಿತು ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ವಸಂತಕುಮಾರ್ ಆರ್.ಸಿ ಸೇರಿದಂತೆ ಸುಮಾರು 35 ನೌಕರರು ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಬೆಂಗಳೂರಿನ ಜ್ಞಾನಭಾರತಿಯ ಲೋಕೇಶ್ ಎಂ.ಪಿ ಮತ್ತು ಮಂಡ್ಯದಲ್ಲಿ ನೀರಗಂಟಿಯಾಗಿ ಕೆಲಸ ಮಾಡುತ್ತಿರುವ ವೆಂಕಟೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
2021ರ ಮಾರ್ಚ್ ತಿಂಗಳಲ್ಲಿ ದೂರುದಾರರಿಗೆ ಬೆಂಗಳೂರಿನ ಲೋಕೇಶ್ ಅವರನ್ನು ಪರಿಚಯಿಸಿದ್ದ ಆರೋಪಿ ವೆಂಕಟೇಶ್, ಹೊರಗುತ್ತಿಗೆ ನೌಕರರ ಕಾಯಂ ಸೇರಿದಂತೆ ಯಾವುದೇ ಕೆಲಸವನ್ನು ಮಾಡಿಸಿ ಕೊಡುತ್ತಾರೆ ಎಂದು ನಂಬಿಸಿದ್ದರು.
ನಂತರ ದೂರುದಾರರ ನೇತೃತ್ವದಲ್ಲಿ ನೌಕರರು ಲೋಕೇಶ್ ನನ್ನು ಭೇಟಿ ಮಾಡಿದ್ದರು. ಆಗ, ಆತ ನೌಕರಿ ಕಾಯಂ ಜೊತೆಗೆ ಸೂಕ್ತ ವೇತನ ಕೊಡಿಸುವುದಾಗಿ ಲೋಕೇಶ್ ಭರವಸೆ ನೀಡಿದ್ದ. ಕೆಲಸ ಮಾಡಿಕೊಡಲು ಪ್ರತಿಯೊಬ್ಬರು ತಲಾ ರೂ. 60 ಸಾವಿರ ನೀಡಬೇಕು ಎಂದು ಷರತ್ತು ಹಾಕಿದ್ದ. ಅದರಂತೆ, ನೌಕರರು ಹಣ ಹೊಂದಿಸಿ ಕೊಟ್ಟಿದ್ದರು. ಇದಾದ ಒಂದು ತಿಂಗಳ ಬಳಿಕ ನೌಕರರನ್ನು ಮತ್ತೆ ಸಂಪರ್ಕಿಸಿದ್ದ ಲೋಕೇಶ್, ನಿಮ್ಮ ಕೆಲಸ ಕಾಯಂ ಆಗುವ ಹಂತದಲ್ಲಿದ್ದು ಹೆಚ್ಚುವರಿವಾಗಿ ಎಲ್ಲರೂ ತಲಾ 15 ಸಾವಿರ ರೂಪಾಯಿ ನೀಡಬೇಕು ಎಂದು ಸುಳ್ಳು ಹೇಳಿದ್ದ.
ಈತನ ಮಾತು ನಂಬಿದ ನೌಕರರು ಮತ್ತೆ ಹಣ ಸಂಗ್ರಹಿಸಿ ರೂ. 5.25 ಲಕ್ಷ ಕೊಟ್ಟಿದ್ದರು. ಕೆಲಸ ಕಾಯಂ ಹೆಸರಿನಲ್ಲಿ ಆತ ಒಟ್ಟು 26.25 ಲಕ್ಷ ರೂಪಾಯಿ ಪಡೆದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ
ಹಣ ಕೊಟ್ಟರೂ ಕೆಲಸ ಕಾಯಂ ಆಗದಿರುವ ಬಗ್ಗೆ ನೌಕರರು, ಲೋಕೇಶ್ ನನ್ನು ಮೇಲಿಂದ ಮೇಲೆ ವಿಚಾರಿಸುತ್ತಿದ್ದರು. ಆಗ ಆತ, ನಿಮ್ಮ ಕೆಲಸವನ್ನೇ ಮಾಡುತ್ತಿದ್ದೇನೆ. ಸ್ವಲ್ಪ ತಡವಾಗಲಿದೆ, ಕಾಯಬೇಕು ಎಂದು ನೆಪ ಹೇಳುತ್ತಲೇ ಬರುತ್ತಿದ್ದ. ಮೊಬೈಲ್ ಕರೆ ಮಾಡಿದಾಗ ಮತ್ತು ಖುದ್ದು ಭೇಟಿ ಮಾಡಿದಾಗಲೆಲ್ಲಾ, ಕೆಲವೇ ದಿನಗಳಲ್ಲಿ ಆಗಲಿದೆ ಎಂದು ಹಾರಿಕೆ ಉತ್ತರ ಕೊಡುತ್ತಾ ನುಣುಚಿಕೊಳ್ಳುತ್ತಿದ್ದ ಎಂದು ದೂರುದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನೌಕರಿ ಕಾಯಂ ಮಾಡಿಸುವುದಾಗಿ ಹೇಳಿ ಹೊರಗುತ್ತಿಗೆ ನೌಕರರಿಂದ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಲಾಗುತ್ತಿದೆ ಎಂದು ರಾಮನಗರ ಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಎಟಿಎಂನಲ್ಲಿ ರೈತರೊಬ್ಬರನ್ನು ವಂಚಿಸಿದ ಭೂಪ
ಎಟಿಎಂವೊಂದರಲ್ಲಿ ಹಣ ತೆಗೆದುಕೊಳ್ಳಲು ಹೋಗಿದ್ದ ರೈತರೊಬ್ಬರನ್ನು ವಂಚಿಸಿ ಅವರದ್ದೇ ಎಟಿಎಂ ಕಾರ್ಡ್ ನಿಂದ ಚಿನ್ನ ಖರೀದಿಸಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.
ಇಲ್ಲಿಗೆ ಸಮೀಪದ ಭಟ್ರೇನಹಳ್ಳಿ ರಾಜಣ್ಣ ಎಂಬ ರೈತರು ಪಟ್ಟಣದ ಹಳೆ ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಹೋಗಿದ್ದರು.
ಆದರೆ ಅವರಿಗೆ ಹಣ ಡ್ರಾ ಮಾಡಲು ಬರುತ್ತಿರಲಿಲ್ಲ. ಆಗ ಅವರು ಅಲ್ಲಿಯೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬರ ಕೈಗೆ ಎಟಿಎಂ ಕಾರ್ಡ್ ಕೊಟ್ಟು ಹಣವನ್ನು ತೆಗೆದು ಕೊಡುವಂತೆ ಕೇಳಿಕೊಂಡಿದ್ದಾರೆ.ರಾಜಣ್ಣ ಹೇಳಿದಂತೆ ಹತ್ತು ಸಾವಿರ ಹಣ ಡ್ರಾ ಮಾಡಿಕೊಟ್ಟ ಆತ ಬೇರೆ ಎಟಿಎಂ ಕಾರ್ಡ್ ಕೊಟ್ಟು ಪರಾರಿಯಾಗಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ರಾಜಣ್ಣ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಪೊಲೀಸರ ಸೂಚನೆ ಮೇರೆಗೆ ಕೆನರಾ ಬ್ಯಾಂಕಿಗೆ ಹೋಗಿ ಎಟಿಎಂ ಕಾರ್ಡ್ ಲಾಕ್ ಮಾಡಿಸುವಷ್ಟರಲ್ಲಿ ಚಿನ್ನಾಭರಣ ಅಂಗಡಿಯೊಂದರಲ್ಲಿ ಆರೋಪಿಯು ಎಟಿಎಂ ಕಾರ್ಡ್ ಬಳಸಿ ರೂಪಾಯಿ 40,500 ಮೌಲ್ಯದ ಚಿನ್ನವನ್ನು ಖರೀದಿಸಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಶೋಧ ನಡೆಸಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)