February 02 Kannada News Updates: ನಮೀಬಿಯಾಕ್ಕೆ ಭಾರತದ ಹೈಕಮಿಷನರ್ ಆಗಿ ಎಂ ಸುಬ್ಬರಾಯುಡು ನೇಮಕ
Feb 02, 2023 09:41 PM IST
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಫೆ.25ರಂದು ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಉಪ ಚುನಾವಣೆ
ಅವಧಿ ಮುಗಿದ, ಮುಗಿಯುವ ಮತ್ತು ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯಿತಿಯ 135 ಸ್ಥಾನಗಳಿಗೆ ಫೆ.25ರಂದು ಉಪಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ.
ಸಿದ್ಧರಾಮಯ್ಯ ಆಡಳಿತದ ಅವಧಿಯ 10 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ದೂರು
2013-2018 ರವರೆಗಿನ ಸಿದ್ಧರಾಮಯ್ಯ ಆಡಳಿತದ ಅವಧಿಯಲ್ಲಿ ನಡೆದಿರುವ 10 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಒಟ್ಟು 3,728 ಪುಟಗಳ ಸಂಪೂರ್ಣ ದಾಖಲೆಗಳ ಸಹಿತವಾಗಿ 10 ಪ್ರತ್ಯೇಕ ದೂರುಗಳನ್ನು ಲೋಕಾಯುಕ್ತದಲ್ಲಿ ದಾಖಲಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್. ಆರ್ ರಮೇಶ್ ತಿಳಿಸಿದರು.
ನಾಳೆ ಬಜೆಟ್ ಕುರಿತು ಬಿಜೆಪಿ ಸಂಸದರಿಗೆ ವಿವರಣೆ ನೀಡಲಿರುವ ನಿರ್ಮಲಾ ಸೀತಾರಾಮನ್
ನಿನ್ನೆಯಷ್ಟೇ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಾಳೆ ಬಿಜೆಪಿಯ ಎಲ್ಲಾ ಲೋಕಸಬಾ ಹಾಗೂ ರಾಜ್ಯಸಭಾ ಸಂಸದರಿಗೆ ಬಜೆಟ್ ಕುರಿತು ವಿವರಣೆ ನೀಡಲಿದ್ದಾರೆ. ನಾಳೆ ಬೆಳಗ್ಗೆ ಸಂಸತ್ ಲೈಬ್ರರಿ ಕಟ್ಟಡದಲ್ಲಿರುವ ಬಾಲಯೋಗಿ ಆಡಿಟೋರಿಯಂನಲ್ಲಿ ಸಭೆ ನಡೆಸಿ ವಿವರಣೆ ನೀಡಲಿದ್ದಾರೆ.
ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ನೆರವು ನೀಡಿರುವುದಕ್ಕೆ ಕಾಂಗ್ರೆಸ್ ನಿರಾಶೆಗೊಂಡಿದೆ: ಸಿಎಂ ಕಿಡಿ!
ಭದ್ರಾ ಮೇಲ್ಡಂಡೆ ಯೋಜನೆಗೆ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಿರುವುದು, ಪ್ರತಿಪಕ್ಷ ಕಾಂಗ್ರೆಸ್ಗೆ ನಿರಾಶೆಯನ್ನುಂಟು ಮಾಡಿದೆ. ಹೀಗಾಗಿಯೇ ಅವರು ಅಭಿವೃದ್ಧಿ ವಿಚಾರವಾಗಿಯೂ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸಿಎಂ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಯುಎಸ್ ವಲಸೆ ಉಪಸಮಿತಿಯ ಸದಸ್ಯೆಯಾಗಿ ಪ್ರಮೀಳಾ ಜಯಪಾಲ್ ನೇಮಕ
ಭಾರತೀಯ-ಅಮೆರಿಕನ್ ಪ್ರಮೀಳಾ ಜಯಪಾಲ್ ಅವರು, ಯುಎಸ್ ವಲಸೆ ಉಪಸಮಿತಿಯ ಶ್ರೇಯಾಂಕದ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.
ಬಜೆಟ್ ಅಧಿವೇಶನ: ಸರ್ಕಾರದ ಕಾರ್ಯತಂತ್ರ ಚರ್ಚಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಅನುರಾಗ್ ಠಾಕೂರ್, ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ, ಕಿರಣ್ ರಿಜಿಜು ಅವರೊಂದಿಗೆ ಸಂಸತ್ತಿನಲ್ಲಿ ಸರ್ಕಾರದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.
ಲಖನೌ ಜೈಲಿನಿಂದ ಬಿಡುಗಡೆಗೊಂಡ ಕೇರಳ ಪತ್ರಕರ್ತ ಸಿದ್ದಿಕಿ ಕಪ್ಪನ್
ಯುಪಿ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್, ಜಾಮೀನು ಪಡೆದ ನಂತರ ಲಖನೌ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ
ಅಮೆರಿಕಕ್ಕೆ ಬರುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ಬೇಸಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಆಹ್ವಾನವನ್ನು ತಾತ್ವಿಕವಾಗಿ ಸ್ವೀಕರಿಸಲಾಗಿದೆ ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ.
ಸಮೃದ್ಧ ಮತ್ತು ಅಂತರ್ಗತ ಭಾರತದ ನಿರ್ಮಾಣದ ಗುರಿ: ಬಜೆಟ್ ಹೊಗಳಿದ ಗಡ್ಕರಿ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ 2023ಕ್ಕೆ ಮೆಚ್ಚುಗೆ ಸೂಚಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇದು ಸಮೃದ್ಧ ಮತ್ತು ಅಂತರ್ಗತ ಭಾರತದ ನಿರ್ಮಾಣದ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ಟಿಕೆಟ್ ಹಂಚಿಕೆ: ಕುತೂಹಲ ಕೆರಳಿಸಿದ ಕೈ ನಾಯಕರ ರಹಸ್ಯ ಸಭೆ!
ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಹಸ್ಯ ಸಭೆ ನಡೆಸಿದ್ದಾರೆ.
ಮಯನ್ಮಾರ್ನಲ್ಲಿ ಮುಂದುವರೆದ ತುರ್ತು ಪರಿಸ್ಥಿತಿ: ಹೆಚ್ಚಾದ ಮಿಲಿಟರಿ ಹಿಡಿತ!
ಮಯನ್ಮಾರ್ನಲ್ಲಿ ತುರ್ತು ಪರಿಸ್ಥಿತಿಯನ್ನು ಮುಂದುವರೆಸಲಾಗಿದ್ದು, ಇದು ಚುನಾವಣೆಯನ್ನು ವಿಳಂಬಗೊಳಿಸುವ ಮಿಲಿಟರಿ ಆಡಳಿತಗಾರರ ಪ್ರಯತ್ನ ಎಂದು ಬಣ್ಣಿಸಲಾಗಿದೆ.
ಜನರ ಬದುಕು ಮತ್ತಷ್ಟು ಭಾರ: ಕೇಂದ್ರ ಬಜೆಟ್ ಟೀಕಿಸಿದ ಕರ್ನಾಟಕ ಕಾಂಗ್ರೆಸ್
ಬಜೆಟ್ನಲ್ಲಿ ಕೊಟ್ಟಿದ್ದು ಹೊಸ ಹೊಸ ಪದಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಸಾಮಾಜಿಕ ನ್ಯಾಯ ದುರ್ಭಿನು ಹಾಕಿ ಹುಡುಕಿದರೂ ಸಿಗುವುದಿಲ್ಲ. LPG ಸಬ್ಸಿಡಿಯನ್ನುಶೇ. 75ರಷ್ಟು ಕಡಿತಗೊಳಿಸಿ, ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಯ ನಿರೀಕ್ಷೆಗೆ ಮಣ್ಣೆರಚಿದೆ. ಬದುಕು ಭಾರವಾಗಿರುವ ಜನರಿಗೆ ಸರ್ಕಾರ ಏನನ್ನೂ ಕೊಟ್ಟಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಕೇಂದ್ರ ಬಜೆಟ್ನ್ನು ಟೀಕಿಸಿದೆ.