March 23 Kannada News Updates: ನಾಳೆ ಕರ್ನಾಟಕಕ್ಕೆ ಅಮಿತ್ ಶಾ, ಕಾಶಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
Mar 23, 2023 09:48 PM IST
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆನ್ಲೈನ್ ರಮ್ಮಿ, ಜೂಜಾಟಗಳಿಗೆ ನಿಷೇಧ, ಮಸೂದೆಗೆ ತಮಿಳುನಾಡಿನ ವಿಧಾನಸಭೆಯಲ್ಲಿ ಅಂಗೀಕಾರ
ಆನ್ಲೈನ್ ರಮ್ಮಿ ಇತ್ಯಾದಿ ಜೂಜಾಟಗಳಿಗೆ ನಿಷೇಧ ಹೇರುವ ಮಸೂದೆಗೆ ಮತ್ತೊಮ್ಮೆ ತಮಿಳುನಾಡಿನ ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ ದೊರಕಿದೆ. ಈ ಮಸೂದೆ ಅಂಗೀಕಾರಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಈ ಮಸೂದೆಯನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಸರಕಾರಕ್ಕೆ ವಾಪಸ್ ಕಳುಹಿಸಿದ್ದರು. ಇದೀಗ ಮತ್ತೆ ಸರಕಾರವು ಆನ್ಲೈನ್ ಜೂಜಾಟವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
“ನಾನು ಈ ಸದನದಲ್ಲಿ ಭಾರವಾದ ಹೃದಯದಿಂದ ನಿಂತಿದ್ದೇನೆ. ಆನ್ಲೈನ್ ಜೂಜಾಟದಲ್ಲಿ ಹಣ ಕಳೆದುಕೊಂಡು 41 ಜನರು ಮೃತಪಟ್ಟಿದ್ದಾರೆ" ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ವಿಧಾನಸಭೆಗೆ ತಿಳಿಸಿದರು.
ಕುಡಿತ ಬಿಡು ಎಂದದ್ದಕ್ಕೆ ಹೆತ್ತತಾಯಿಯನ್ನೇ ಕೊಂದ ಮಗ
ತನ್ನ ತಾಯಿಯನ್ನು ಕೊಲೆ ಮಾಡಿರುವ ಆರೋಪದಡಿ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 9ರಂದು ಮಗನೇ ತಾಯಿಯನ್ನು ಕೊಂದ ಘಟನೆ ವರದಿಯಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ವಿಶ್ವಾಸ್ ಅಶೋಕ್ ಶಿಂಧೆ ಎಂದು ಗುರುತಿಸಲಾಗಿದೆ. ಆತನು ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ನ ಕಸ ತುಂಬುವ ಕೆಲಸ ಮಾಡುತ್ತಿದ್ದ. ಹತ್ಯೆಗೀಡಾದ ಈತನ ತಾಯಿಯನ್ನು ಪ್ರಯಾಗ್ಬಾಯಿ ಅಶೋಕ್ ಶಿಂಧೆ (58) ಎಂದು ಗುರುತಿಸಲಾಗಿದೆ.
ನಾಳೆ ಕರ್ನಾಟಕಕ್ಕೆ ಅಮಿತ್ ಶಾ ಭೇಟಿ
ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಆದಾಯ ತೆರಿಗೆ ಇಲಾಖೆಯಿಂದ ವಿನೂತನ ಆಪ್ ಬಿಡುಗಡೆ
ತೆರಿಗೆಪಾವತಿದಾರರು ಇನ್ಮುಂದೆ ಟಿಡಿಎಸ್/ಟಿಸಿಎಸ್, ಬಡ್ಡಿ, ಲಾಭಾಂಶಗಳು, ಷೇರು ವಹಿವಾಟುಗಳು, ತೆರಿಗೆ ಪಾವತಿಗಳು, ಆದಾಯ ತೆರಿಗೆ ಮರುಪಾವತಿಗಳು ಮತ್ತು ಇತರ ಮಾಹಿತಿ (GST ಡೇಟಾ, ವಿದೇಶಿ ರವಾನೆಗಳು ಸೇರಿದಂತೆ ಹಲವು ಮಾಹಿತಿಗಳನ್ನು ತಮ್ಮ ಮೊಬೈಲ್ನಲ್ಲಿಯೇ ನೋಡಬಹುದು. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯು AIS for Taxpayer ಎಂಬ ಹೊಸ ಆಪ್ ಬಿಡುಗಡೆ ಮಾಡಿದೆ.
ನಾಳೆ ಕಾಶಿಯಲ್ಲಿ ಪ್ರಧಾನಿ ಮೋದಿ, ಭಾರತದ ಮೊದಲ ಸಾರ್ವಜನಿಕ ಸಾರಿಗೆ ರೋಪ್ವೇಗೆ ಶಂಕುಸ್ಥಾಪನೆ
ನಾಳೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಲೋಕಸಭೆ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದು, ಅಲ್ಲಿ 645 ಕೋಟಿ ರೂ. ವೆಚ್ಚದ ಪ್ರಯಾಣಿಕ ರೋಪ್ವೇಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಆರ್ಡರ್ ಮಾಡಿದ್ದು ಐಫೋನ್, ಬಂದದ್ದು ನಿರ್ಮಾ ಡಿಟರ್ಜೆಂಟ್
ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ನಿಂದ ಐಫೋನ್ ಅನ್ನು ಆರ್ಡರ್ ಮಾಡಿದಾಗ ಕಂಪನಿಯು ‘ನಿರ್ಮಾ’ ಡಿಟರ್ಜೆಂಟ್ ಸೋಪು ಕಳುಹಿಸಿದ್ದಾರೆ ಎಂದು ಕರ್ನಾಟಕದ ಕೊಪ್ಪಳದ ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ವಿದ್ಯಾರ್ಥಿಗೆ ಆಗಿರುವ ವಂಚನೆಗೆ ಕೊಪ್ಪಳದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಪರಿಹಾರ ನೀಡುವಂತೆ ಫ್ಲಿಪ್ಕಾರ್ಟ್ಗೆ ಆದೇಶ ನೀಡಿದೆ.
ಅದಾನಿ ವಿವಾದ: ಜೆಪಿಸಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಅದಾನಿ ಗ್ರೂಪ್ ವಿಚಾರವಾಗಿ ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸಂಸದರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ನಮಗಿದೆ. ಸತ್ಯವನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಈ ಸರ್ವಾಧಿಕಾರಿ ಸರಕಾರಕ್ಕೆ ಚರ್ಚೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮೋದಿ ಉಪನಾಮ ಟೀಕೆ: ರಾಹುಲ್ ಗಾಂಧಿ ದೋಷಿ ಎಂದು ಕೋಟ್ ತೀರ್ಪು
'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸಂಬಂಧ ಸೂರತ್ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದೆ.
ರಾಹುಲ್ ಗಾಂಧಿ ವಿರುದ್ಧದ ಕೇಸ್ ಸಂಬಂಧ ಆದೇಶ ನೀಡಲಿರುವ ಸೂರತ್ ಕೋರ್ಟ್
'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸಂಬಂಧ ಇಂದು ಗುಜರಾತ್ನ ಸೂರತ್ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸುವ ಸಾಧ್ಯತೆಯಿದೆ.
ಮಾಜಿ ಸಚಿವ ಅಂಜನಮೂರ್ತಿ ನಿಧನ
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಂಜನಮೂರ್ತಿ (78) ಇಂದು ಮುಂಜಾನೆ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾರ್ಚ್ 26 ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, 2022ರ ಡಿಸೆಂಬರ್ ತಿಂಗಳಲ್ಲಿಯೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್, ಎರಡನೇ ಪಟ್ಟಿಯನ್ನು ಮಾರ್ಚ್ 26 ರಂದು ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಬಿಡುಗಡೆ ಮಾಡಲಿದೆ.
ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆ
ತೀವ್ರಗಾಮಿ ಸಿಖ್ ಬೋಧಕ ಮತ್ತು ಖಲಿಸ್ತಾನ್ ಪರ ಸಂಘಟನೆಯಾದ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತ್ಪಾಲ್ ಸಿಂಗ್ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿರುವ ಪಂಜಾಬ್ ಪೊಲೀಸರ ಕ್ರಮ ಖಂಡಿಸಿ ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್ ಕಚೇರಿ ಮುಂದೆ ಜಮಾಯಿಸಿ ಖಲಿಸ್ತಾನಿ ಧ್ವಜವನ್ನು ಬೀಸುತ್ತಾ ಪ್ರತಿಭಟನೆ ನಡೆಸಿದ್ದಾರೆ.
ಶಾರದಾದೇವಿ ದೇಗುಲ ಉದ್ಘಾಟಿಸಿದ ಅಮಿತ್ ಶಾ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತೆ ಶಾರದಾ ದೇವಿ ದೇಗುಲವನ್ನು ಉದ್ಘಾಟಿಸಿದ್ಧಾರೆ.
ದೆಹಲಿಯಲ್ಲಿ ಮತ್ತೆ ಭೂಕಂಪ
ಮಂಗಳವಾರ ರಾತ್ರಿಯಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಮಿ ಕಂಪಿಸಿತ್ತು. 24 ಗಂಟೆಯೊಳಗೆ ಮತ್ತೊಮ್ಮೆ ಲಘು ಭೂಕಂಪನ ಸಂಭವಿಸಿದೆ. ಬುಧವಾರ ಸಂಜೆ 4.42 ರ ಸುಮಾರಿಗೆ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ODI:ಸರಣಿ ಕಳೆದುಕೊಂಡ ಭಾರತ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಮುಗ್ಗರಿಸಿದೆ. ಸರಣಿ ಗೆಲುವಿಗೆ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಭಾರತ, ಅಂತಿಮವಾಗಿ ಆಸೀಸ್ ಆಟಕ್ಕೆ ತಲೆಬಾಗಿ 1-2 ಅಂತರದಿಂದ ಸರಣಿ ಕಳೆದುಕೊಂಡಿದೆ.